Wednesday 21 May 2014

ಕಾಂಗ್ರೆಸ್ ಸೋಲಿಗೆ 'ಯಾರೋ'ಕಾರಣರಲ್ಲ..!!

ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್‌ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಈ ವಾರದ ಬರಹ.... 

ಜನತೆಯ ಕಣ್ಣುಗಳಲ್ಲಿ ಕೇವಲ ನಿರೀಕ್ಷೆಗಳು ತುಂಬಿವೆ!.

ನರೇಂದ್ರ ಮೋದಿ ಎಂಬ ಒಬ್ಬ ವ್ಯಕ್ತಿ ರಾಜಕಾರಣದ ದಿಕ್ಕನ್ನು ಈ ರೀತಿ ಬದಲಿಸಬಹುದು ಎಂಬ ಕಲ್ಪನೆಯೇ ಇರದೇ, ಇಂದು ಕಾಂಗ್ರೆಸ್ ಧೂಳೀಪಟಕ್ಕೆ ಕಾರಣವಾದದ್ದು, ಓರ್ವ ನಾಯಕ ಸಮರ್ಥನಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ.ಹಾಗೆಂದು ಎಲ್ಲವನ್ನೂ ಹೀಗೇ ಎಂದು ತೀರ್ಮಾನಿಸಲು ಇದು ಸಮಯವಲ್ಲ. ಜನರ ಅಪಾರ ನಿರೀಕ್ಷೆಗಳಿಗೆ ಮೋದಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಲೇ ಬೇಕು.

ಈ ಸಲ ಮೋದಿಯವರ ಆಯ್ಕೆಯ ಹಿನ್ನೆಲೆಯಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಬಹುದು. ಆದರೆ ಅಷ್ಟೇ ಹೊಸ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಮೋದಿ ಅಲೆ ಒಪ್ಪಲೇ ಬೇಕಾದ ಸತ್ಯ. ಹಾಗೆಂದು ಸೋತು ಸುಣ್ಣವಾದ ನಾಯಕರ ಬಹು ದೊಡ್ಡ ಪಡೆಯೇ ಇದೆ.ಜಿಲ್ಲಿ ಮುಖ್ಯವಾಗಿ ಕಾಣುವ ಸೋಲು ಕಾಂಗ್ರೆಸ್‌ನದ್ದು. ಕೇಂದ್ರದಲ್ಲಿ ಯುಪಿಎ ಎಂಬ ಕಾಂಗ್ರೆಸ್ ನೇತ್ರತ್ವದ ಸರಕಾರವಿದ್ದೂ, ಅದರ ಮಂತ್ರಿಮಂಡಳದ ಸುಮಾರು ಅರ್ಧದಷ್ಟೂ ನಾಯಕರು ಗೆದ್ದಿಲ್ಲವೆಂದರೆ ಆಲೋಚಿಸಬೇಕು. ಉತ್ತರ ಪ್ರದೇಶದಂತಹ ಒಂದೇ ರಾಜ್ಯದಲ್ಲಿ ಗೆದ್ದಷ್ಟೂ ನಾಯಕರನ್ನು ಗೆಲ್ಲಿಸುವಲ್ಲಿ ಇಡೀ ದೇಶದ ಕಾಂಗ್ರೆಸ್ ಸೋತಿದೆ. ಬಹುಶ: ಇಷ್ಟು ಹೀನಾಯ ಸೋಲನ್ನು ಕಾಂಗ್ರೆಸ್ ನಿರೀಕ್ಷಿಸರಲೇ ಇಲ್ಲ. ಅಲ್ಲಿ ಕೊರತೆಯಾಗಿದ್ದು ಏನು ಎಂದುಕೊಂಡರೆ, ಅನೇಕ ಪ್ರಶ್ನೆಗಳು ಮತ್ತೆ ಹುಟ್ಟಿಕೊಳ್ಳುತ್ತವೆ.

ಒಂದು ಸಣ್ಣ ಉದಾಹರಣೆ. ಮಂಗಳೂರಿನಲ್ಲಿ ಮೋದಿ ಮತ್ತು ರಾಹುಲ್ ಇಬ್ಬರೂ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ರಾಹುಲ್ ಚುನಾವಣಾ ಭಾಷಣದ ಮರುದಿನ ಪತ್ರಿಕೆಗಳಲ್ಲಿ ಎರಡೂ ಸಭೆಗಳ ಛಾಯಾಚಿತ್ರಗಳನ್ನು ಪ್ರಕಟಿಸಿ, ಕೆಲವು ಮಾಧ್ಯಮಗಳು ಎರಡರಲ್ಲೂ ಸೇರಿದ್ದ ಜನರನ್ನು ಅಂದಾಜಿಸಿದ್ದುವು. ರಾಹುಲ್ ಸಭೆಗೆ ಜನರೇ ಇರಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಮರುದಿನ ಕಾಂಗ್ರೆಸ್ ನಾಯಕರು, ಇದೆಲ್ಲವೂ ಮಾಧ್ಯಮ ಸೃಷ್ಟಿ, ಜನ ಸಾಗರವೇ ರಾಹುಲ್ ರ್‍ಯಾಲಿಯಲ್ಲಿತ್ತು ಎಂಬ ಸಮಜಾಯಿಷಿ ನೀಡಿದ್ದರು. ಇಲ್ಲಿ ವಾಸ್ತವದಲ್ಲಿ ರಾಹುಲ್ ರ್‍ಯಾಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಕಾಂಗ್ರೆಸ್ಸಿಗರು ಯಾವ ಮನ:ಸ್ಥಿತಿಯಲ್ಲಿದ್ದರು ಎಂದರೆ   ಕಣ್ಣೆದುರಿಗಿರುವ ಸತ್ಯವನ್ನೂ ಒಪ್ಪಿಕೊಳ್ಳಲು ಅವರಿಗೆ ಆಗುತ್ತಿರಲ್ಲ.
ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್‌ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. ಬದಲಿಗೆ ಈ ಸೋಲಿಗೆ ಅವರು ಹೊಣೆ ಮಾಡಿದ್ದು ಪರೋಕ್ಷವಾಗಿ ಮನಮೋಹನ್ ಸಿಂಗ್ ಅವರನ್ನು!!. ಕಾಂಗ್ರೆಸ್‌ಮಟ್ಟಿನ ದುರಂತ ನೋಡಿ. ಈ ನೆಹರೂ ಕುಟುಂಬಕ್ಕೆ ನಿಷ್ಠರಾದಷ್ಟು ಅವರು ಎಂದಿಗೂ ದೇಶದ ಜನತೆಗೋ, ಪ್ರಜಾಪ್ರಭುತ್ವ ವ್ಯವಸ್ಥೆಗೋ ನಿಷ್ಠರಾಗಲೇ ಇಲ್ಲ. ಮನ ಮೋಹನ್ ಹೇಗೆ ಆಡಳಿತ ನಡೆಸಿದ್ದರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಅವರು ಕೇವಲ ಸೋನಿಯಾ ಕ್ರಪಾಪೋಷಿತ ಪ್ರಧಾನಿಯಾಗಿದ್ದರು ಎಂಬುದು, ಎಲ್ಲಿಯ ತನಕ ಅವರ ಕೈಗಳನ್ನು ಕಟ್ಟಿಹಾಕಲಾಗಿತ್ತು ಎಂದರೆ ಅವರ ನಿರ್ಧಾರಗಳನ್ನು ರಾಹುಲ್ ಗಾಂಧಿ ಸಹಾ ಪ್ರಶ್ನಿಸುತ್ತಿದ್ದರು ಮತ್ತು ಇಡೀ ಸರಕಾರವೇ ಅವರ ಹಿಂದಿದ್ದರೂ, ರಾಹುಲ್ ಹೇಳಿ ಮನಮೋಹನರು ನಿರ್ಧಾರಗಳನ್ನು ಬದಲಿಸುತ್ತಿದ್ದರು ಎಂಬುದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ!. ಹೀಗಿದ್ದೂ ಮನಮೋಹನರನ್ನು ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಕಾಂಗ್ರಸಿಗರು ಮುಗಿಬೀಳುತ್ತಿದ್ದಾರೆ. ಕಾಂಗ್ರೆಸಿಗರು ತಿಳಿದಿರಲೇ ಬೇಕಾದ ಸತ್ಯ ಮತ್ತೊಂದಿದೆ. ಅದು ಮನ ಮೋಹನರಲ್ಲದೇ ಬೇರಾವೇ 'ಸ್ವಂತಿಕೆ' ಇದ್ದ ವ್ಯಕ್ತಿ ಪ್ರಧಾನಿ ಪಟ್ಟದಲ್ಲಿದ್ದಿದ್ದರೆ, ಎರಡು ಅವಧಿಗೆ ಪ್ರಧಾನಿಯಾಗುವುದು ಕಷ್ಟವಿತ್ತು! ಒಂದೊಮ್ಮೆ ಇದ್ದಿದ್ದರೂ, ಸೋನಿಯಾ-ರಾಹುಲ್ ಕೇವಲ ಪಕ್ಷಚಟುವಟಿಕೆಗೆ ಮಾತ್ರ ಸೀಮಿತವಾಗಿರುತ್ತಿದ್ದರು.!!. ಇಂತಹ ಪ್ರಾಥಮಿಕ ಹಂತದ ತಪ್ಪುಗಳೇ ಇಂದು ಕಾಂಗ್ರೆಸ್‌ಗೆ ಈ ಹೀನಾಯ ಸ್ಥಿತಿ ಒದಗಿಸಿದೆ.
ಕಾಂಗ್ರೆಸ್‌ನ ಇನ್ನೊಂದು ಸಂಸ್ಕೃತಿಯ ಬಗ್ಗೆ ಇಲ್ಲಿ ಹೇಳಲೇ ಬೇಕು. ಮೊನ್ನೆ ಫಲಿತಾಂಶ ಪ್ರಕಟವಾಗುತ್ತಲೇ ಮತ್ತೆ ಓರ್ವ  ಕಾಂಗ್ರೆಸ್ ನಾಯಕ, ಶಾಸಕ ಅದೇ ಹಳೆಯ ಮಾತನ್ನು ಎಸೆದುಬಿಟ್ಟರು. ಈ ಸಲದ ಚುನಾವಣೆಯನ್ನು ನಾವು ಸತ್ಯದಿಂದ ಎದುರಿಸಿದರೆ, ಭಾಜಪ ಹಣ-ಹೆಂಡ ಹಂಚಿ ಚುನಾವಣೆ ಗೆದ್ದಿದೆ!!. ಈ ಶಾಸಕ ಮಹಾಶಯ ಇನ್ನೂ ಜನರನ್ನೇ ಜರೆಯುವುದನ್ನು ಬಿಟ್ಟಿಲ್ಲ!. ಅಂದರೆ ಮತದಾನ ಮಾಡಿದ, ಅಥವಾ ಕಾಂಗ್ರೆಸ್ ವಿರೋಧಿಗಳಿಗೆ ಮತದಾನ ಮಾಡಿದ ಮತದಾರರೆಲ್ಲರೂ ಹಣ ಪಡೆದು, ಹೆಂಡ ಕುಡಿದು ಮತದಾನ ಮಾಡಿದ್ದರು ಎಂಬುದು ಇವರ ಮಾತಿನ ಅರ್ಥ. ದೇಶದಲ್ಲಿ ಇಂದು ಯುಪಿಎ ಗೆದ್ದ ೫೯ಕ್ಷೇತ್ರದ ಮತದಾರರನ್ನು ಬಿಟ್ಟು, ಉಳಿದ ಕ್ಷೇತ್ರದಲ್ಲೆಲ್ಲಾ ಈ ಅವ್ಯವಾಹಾರ ನಡೆದಿದೆ ಎಂಬುದು ಅವರ ಮಾತಿನ ಮರ್ಮವಾದರೆ, ಮತ್ತು ಇಂದಿಗೂ ಪ್ರಜಾಪ್ರಭುತ್ವ ಭಾgತದಲ್ಲಿ ಹೆಂಡ-ಹಣದಿಂದಲೇ ನಾಯಕರು ಗೆಲ್ಲುತ್ತಿದ್ದಾರೆ ಎಂಬುದಾದರೆ, ಕಳೆದ ಚುನಾವಣೆಯಲ್ಲಿ ಇವರು ಗೆದ್ದದ್ದು...??? 

ದುರಂತವೆಂದರೆ ಇಂತಹ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ!. ಆದರೆ ಜನ ಮಾತ್ರ ಇದರ ಗಂಭೀರತೆಯನ್ನು ಅಂತಹ ನಾಯಕರಿಗೆ ತೋರಿಸಲು, ಮತ್ತೊಂದು ಚುನಾವಣೆಯ ತನಕವೂ ಕಾದು ಕೂತಿರುತ್ತಾರೆ. ಈ ಸಲವೂ ಆಗಿದ್ದು ಅದೇ. ಮತ್ತು ಇದು ಪಕ್ಷಾತೀತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಮುಖ್ಯವಾಗಿ ರಾಜಕಾರಣಿಗಳು ಅರಿತುಕೊಳ್ಳಲೇ ಬೇಕಾದ ಮತ್ತೊಂದು ಸತ್ಯವೆಂದರೆ ಇಂದು ಸಾರ್ವಜನಿಕರ ನೆನಪಿನ ಶಕ್ತಿ 'ದೀರ್ಘ'ಕಾಲದ್ದು!
ಸೋನಿಯಾ-ರಾಹುಲ್ ಪರ್ವದ ಬಗ್ಗೆ ಯೋಚಿಲೇ ಬೇಕು. ಅವರ ರಾಜೀನಾಮೆ ಪ್ರಹಸನ ಮತ್ತು ಅವರೇ ಮುಂದೆಯೂ ಪಕ್ಷದ ಚುಕ್ಕಾಣಿ ಹಿಡಿಯುವಲ್ಲಿ ಯಾರಿಗೂ ಯಾವುದೇ ಅನುಮಾನಗಳಿರಲಿಲ್ಲ. ಅದೇ ಆಗಿದೆ. ಅಂದರೆ ಇಂದು ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಎಂದರೆ, ಯಾರೇ ಪ್ರಧಾನಿಯಾಗಲಿ, ಯಾರೇ ಚುನಾವಣೆಗೆ ಗೆಲ್ಲಲಿ, ತಮ್ಮ ಸ್ವಂತಿಕೆಯನ್ನು ಈ ನೆಹರೂ ಕುಟುಂಬಕ್ಕೆ ಒಪ್ಪಿಸಿಯೇ ಇರಬೇಕಾಗುತ್ತದೆ ಎಂಬುದು. ಇದಕ್ಕೆ ತಾಜಾ ಉದಾಹರಣೆಯೂ ಮತ್ತೊಂದಿದೆ. ಲೋಕಸಭಾ ಚುನಾವಣೆಯ ಸೋಲಿನ ನಂತರ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲು ಮಾಡಿದ್ದು ತಮ್ಮ ಪಟ್ಟ ಗಟ್ಟಿಮಾಡಿಕೊಳ್ಳುವ ಪ್ರಯತ್ನ. ಎಲ್ಲರಿಗೂ ತಿಳಿದಿರುವ ಸತ್ಯ ಎಂದರೆ, ಕಾಂಗ್ರೆಸ್ ಏನಾದರೂ ದೇಶದಲ್ಲಿ ಈ ರೀತಿಯ ಹೀನಾಯ ಸೋಲನ್ನು ಅಪ್ಪಿಕೊಳ್ಳದೇ, ಸಾಧಾರಣ ಸಾಧನೆಯನ್ನಾದರೂ ಮಾಡಿ, ಕರ್ನಾಟಕದಲ್ಲಿ ಈ ಸಾಧನೆ ಆಗಿದ್ದಿದ್ದರೆ, ಸಿದ್ಧರಾಮಯ್ಯ ಈಗಾಗಲೇ ಪದತ್ಯಾಗ ಮಾಡಿಯಾಗಿರಬೇಕಿತ್ತು. ಅವರ ಅದ್ರಷ್ಟ, ಒಂಭತ್ತಾದರೂ ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದತು. ದೆಹಲಿಗೆ ಓಡಿದ ಸಿದ್ದರಾಮಯ್ಯ ಮಾಡಿದ ಮೊದಲ ಕೆಲಸ, ತನ್ನ ಪಟ್ಟದ ಗಟ್ಟಿತನದ ಖಾತ್ರಿ. ಅದು ಸಿಕ್ಕ ನಂತರವೇ ಅವರು ಮರಳಿ ಬೆಂಗಳೂರಿಗೆ ಬಂದು ನಿರಾಳವಾದರು. ಹೈಕಮಾಂಡ್ ಇರಬೇಕು ನಿಜ. ಆದರೆ ಎಲ್ಲಿಯ ತನದ ಅದು ಸೋನಿಯಾ ಮಯವಾಗಿದೆ ಎಂದರೆ, ಕರ್ನಾಟಕ ಜನತೆ, ತನ್ನದೇ ಸರಕಾರದ ಶಾಸಕ-ಸಚಿವರು, ಬಹುಮತ...ಇತ್ಯಾದಿಗಳೆಲ್ಲವೂ ಸೋನಿಯಾ ತೀರ್ಮಾನದ ನಂತರ ಬರುತ್ತವೆ ಎಂಬುದನ್ನು ಕಾಂಗ್ರೆಸ್ ಇತ್ತೀಚೆಗೆ ಹೆಜ್ಜೆ ಹೆಜ್ಜೆಗೂ ಜನತೆಗೆ 'ಮನವರಿಕೆ'ಮಾಡಿಕೊಟ್ಟಿದೆ!.

ಇಲ್ಲಿ ಒಟ್ಟಾರೆಯಾಗಿ ಪರಿಸ್ಥಿತಿಯನ್ನು ಗಮನಿಸಿದರೆ, ಮೋದಿ ಅಲೆ ಎಷ್ಟು ಕೆಲಸ ಮಾಡಿದೆಯೋ, ಅಷ್ಟೇ ಪೂರಕ ವಾತಾವರಣವನ್ನು ಕಾಂಗ್ರೆಸ್ ಸೋಲಿಗೆ ಒದಗಿಸಿದ್ದು, ಕಾಂಗ್ರೆಸ್ ವಿರೋಧಿ ಅಲೆ!!. ಕಾಂಗ್ರೆಸ್ ಪ್ರತೀ ಹೆಜ್ಜೆಯಲ್ಲೂ ಹೈಕಮಾಂಡ್ ಜಪ ಮಾಡುತ್ತಲೇ ಕೆಲಸ ಮಾಡಿತೇ ಹೊರತು, ಒಮ್ಮೆಯೂ ಅದು ಜನರ ನಡುವೆ ಬೆರೆಯಲೇ ಇಲ್ಲ. ಏರುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸೋಲು, ತನ್ನದೇ ಅಂಗಪಕ್ಷಗಳ ನಾಯಕರ ಭ್ರಷ್ಟಾವಾರವನ್ನೂ ಸಹಿಸಿಕೊಂಡಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ತನ್ನದೇ ತೀರ್ಮಾನಗಳಿಗೆ ಬದ್ಧವಾಗಿ, ಜನರ ನಾಡಿಮಿಡಿತಕ್ಕೆ ಕನಿಷ್ಠ ಆದ್ಯತೆಯನ್ನೂ  ನೀಡದ್ದು...ಹೀಗೆ ಪಟ್ಟಿ ಉದ್ದವಾಗಿದೆ.
ಕಾಂಗ್ರೆಸ್ ಪಾಲಿಗೆ ಮತ್ತೊಂದು ಆಘಾತ ನೀಡಿದ್ದು, ಪಕ್ಷದೊಳಗಿನ ನಾಯಕರ ಭಿನ್ನಮತ. ಉಡುಪಿ ಮತ್ತು ಮಂಡ್ಯ ಕ್ಷೇತ್ರಗಳು ತಕ್ಷಣಕ್ಕೆ ಹೊಳೆಯುವ ಉದಾಹರಣೆಗಳು ಎನ್ನಲಾಗುತ್ತದೆ!. ಎರಡೂ ಕಡೆ ಪಕ್ಷದೊಳಗೇ ಒಂದು ಗೊಂದಲವಿತ್ತು. ಇದು ಒಳಗೊಳಗೇ ಗುಸು ಗುಸು ಆಗಿ, ಕೊನೆಯ ಕ್ಷಣದ ವರೆಗೂ ಗೊಂದಲವಿತ್ತು ಎಂಬ ಹೇಳಿಕೆಯೂ ಕೇಳಿಬರುತ್ತದೆ!. ಇದೆಲ್ಲವೂ ಮೋದಿ ಅಲೆಗೆ ಪೂರಕಾಗಿ ಮತ್ತೆ ಮತ್ತೆ ಶಕ್ತಿ ನೀಡಿದುವು.

ಈ ಎಲ್ಲಾ ಅಂಶಗಳೊಂದಿಗೆ ಕಾಂಗ್ರೆಸ್ ನಾಯಕರು ತಮ್ಮೊಳಗೆ ತಾವೇ ನಮ್ಮನ್ನು ಹಿಡಿದಿಡುವವರು ಯಾರೂ ಇಲ್ಲವೆಂಬಂತೆ ಉದ್ದಟತನವನ್ನು ತೋರಿದ್ದರು. ಉದಾಹರಣೆಗೆ ಮಂಗಳೂರಿನಲ್ಲಿ ಜನಾರ್ದನ ಪೂಜಾರಿಯವರು ಹೋದೆಡೆಯಲ್ಲೆಲ್ಲಾ ನನ್ನ ವಿರೋಧಿ ಮೋದಿ, ನಳಿನ್ ಕುಮಾರ್ ಕಟೀಲ್ ಅಲ್ಲ ಎಂದೇ ಹೇಳುತ್ತಿದ್ದರು. ಆ ಕ್ಷಣಕ್ಕೆ ಅವರ ಮನದಲ್ಲಿದ್ದುದು ಏನೇ ಯೋಜನೆಯಾಗಿದ್ದರೂ, ಬುದ್ದಿವಂತ ಮತದಾರ ಇವರ ಮಾತುಗಳನ್ನು ಕೇಳಿ ಒಳಗೊಳಗೇ ನಕ್ಕಿದ್ದ!. ಮತ್ತು ಮೋದಿ ವಿರೋಧಿ ಅಲೆಯ ಸೃಷ್ಟಿಗೂ ಕಾಂಗ್ರೆಸ್ ಹಿಡಿದ ಮಾರ್ಗ, ಸರ್ವ ಸಮ್ಮತವಾಗಿರಲಿಲ್ಲ. ಅದಕ್ಕೆ ಪೂರಕವೆಂಬಂತೆ ಇವರ ರಣತಂತ್ರ ಸಾಗಿದ್ದು. ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕರು ತಮ್ಮ ಸಾಧನೆಯನ್ನು ಹೇಳಿಕೊಳ್ಳಲು ಎಂದೂ ಧೈರ್ಯ ತೋರಲಿಲ್ಲ. ಕೇವಲ ಮೋದಿ ವಿರೋಧಿ ಹೇಳಿಕೆಗಳಲ್ಲಿಯೇ ಕಾಲ ಕಳೆದರು. ಇದೇ ರೋಗ ಕಾಂಗ್ರೆಸ್ಸಿಗರಿಗೆ ದೇಶ ವ್ಯಾಪಿಯಾಗಿ ಆವರಿಸಕೊಂಡದ್ದು ಎದ್ದು ಕಾಣುತ್ತಿತ್ತು. ಉದಾಹರಣೆಗೆ ಮೋದಿಯವರನ್ನು ಹಳಿಯುವಲ್ಲಿ ನರಹಂತಕ ಎಂಬಂತ ಕೆಳದರ್ಜೆಯ ಪದಪ್ರಯೋಗವನ್ನು ಒಂದು ರಾಜ್ಯದ ಮುಖ್ಯಮಂತ್ರಿಯೇ ಮಾಡಿದ್ದನ್ನು ನಾವೂ ಕೇಳಿದ್ದೇವೆ.

ಹೀಗೆ ಎಲ್ಲಾ ಅಂಶಗಳೂ ಮೋದಿ ಪಡೆಗೆ ನೆರವಾಗುತ್ತಲೇ ಹೋದುವು. ಕಾಂಗ್ರೆಸ್ ಸಾಧನೆಯನ್ನೂ ಸೇರಿ ಎಲ್ಲಾ ರಂಗಗಳಲ್ಲಿಯೂ ಸೋಲೊಪ್ಪಿಕೊಳ್ಳುತ್ತಲೇ, ಅಧೀರತೆಯಿಂದಲೇ ಈ ಚುನಾವಣೆಯನ್ನು ಎದುರಿಸಿದ್ದು ಮೇಲ್ನೋಟಕ್ಕೇ ಕಂಡು ಬರುತ್ತಿತ್ತು. ಪರಿಣಾಮವಾಗಿ ಬುದ್ದಿವಂತ ಮತದಾರ ತನ್ನ ಚಾಣಾಕ್ಷತೆಯನ್ನು ತೋರಿಸಿದ್ದಾನೆ. ಮೋದಿ ಪ್ರಧಾನಿಯಾಗುತ್ತಿದ್ದಾರೆ.

ಇಲ್ಲಿ ಕರ್ನಾಟಕದ ಮಟ್ಟಿಗೆ ಹೇಳಲೇ ಬೇಕಾದ ಮತ್ತೂ ಒಂದು ಅಂಶವಿದೆ. ಕೇವಲ ಒಂದೇ ವರ್ಷದ ಕೆಳಗೆ ಇದ್ದ ಕಾಂಗ್ರಸ್ ಅಲೆಯಲ್ಲಿ ಹೆಚ್ಚೆಂದರೆ ಎಷ್ಟು ಬದಲಾವಣೆ ಬರಬಹುದು ಎಂಬ ಅತೀ ಆತ್ಮವಿಶ್ವಾಸ ಕಾಂಗ್ರೆಸಿಗರನ್ನು ಆಳುತ್ತಿತ್ತು. ಇಂದು ಮತದಾರ ಎಷ್ಟು ಪ್ರಬುದ್ಧನಾಗಿದ್ದಾನೆ ಎಂದರೆ ಕೇವಲ ಒಂದೇ ತಿಂಗಳಲ್ಲಿ ಆತ ತನ್ನ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬಲ್ಲ!!. ಇದೇ ಆತ್ಮವಿಶ್ವಾಸದಿಂದ ಆತ ಪ್ರತೀ ಬಾರಿಯೂ ಯೋಚಿಸಿ ಮತ ನೀಡುತ್ತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬರುತ್ತಿದೆ. ಇದಕ್ಕೂ ಉದಾಹರಣೆ ಎಂದರೆ, ಭಾಜಪಕ್ಕೆ ಹರಿವಾಣದಲ್ಲಿಟ್ಟು ಕೊಟ್ಟ ಅಧಿಕಾರಕ್ಕೆ, ಅವರು ಕರ್ನಾಟಕದ ಜನತೆಗೆ ನೀಡಿದ ದ್ರೋಹಕ್ಕೆ ಪಾಠ ನೀಡಲು ಅವನು ವರ್ಷದ ಕೆಳಗೆ ಕಾಂಗ್ರೆಸ್ ಆಯ್ಕೆ ಮಾಡಿದ್ದ!. ಇದರ ಒಳ ಮರ್ಮ ಅರಿಯದೇ ಕಾಂಗ್ರೆಸ್ ಇನ್ನೂ ಅದೇ ವಿಜಯ ಗುಂಗಿನಲ್ಲಿ ತೇಲಿದ್ದೇ, ಈ ಫಲಿತಾಂಶಕ್ಕೆ ಮತ್ತೂ ಒಂದು ಕಾರಣ.

ಒಟ್ಟಾರೆಯಾಗಿ ಕಾಂಗ್ರೆಸ್ ಹೀನಾಯವಾದ ಸೋಲು ಕಂಡಿದೆ. ತನ್ನ ಎಂದಿನ ಪರಂಪರೆಯನ್ನು ಕಾಯ್ದುಕೊಂಡಿರುವ ಅದು ಮತ್ತೆ ರಾಹುಲ್-ಸೋನಿಯಾ ರಕ್ಷಣೆಯೊಂದನ್ನೇ ಅಜೆಂಡಾವಾಗಿರಿಸಿಕೊಂಡು, ಅದೇ ತಪ್ಪನ್ನು ಪುನರಪಿ ಮಾಡುತ್ತಿದೆ. ಯಾಕೆ, ಶತಮಾನದ ಇತಿಹಾಸದ ಕಾಂಗ್ರೆಸ್‌ಗೆ ಈ ಇಬ್ಬರು ವಿಫಲ ನಾಯಕರನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲವೇ???

ಎಲ್ಲಕ್ಕೂ ಪೂರಕವೆಂಬಂತೆ ಮೊಬೈಲ್‌ನಲ್ಲಿ ಬಂದ ಎಸ್‌ಎಂಎಸ್ ಒಂದು ಹೀಗಿದೆ:- ಮನ ಮೋಹನ್ ಸಿಂಗ್ ಅವರ ಪತ್ನಿ, ಚುನಾವಣಾ ಪಲಿತಾಂಶ ಪ್ರಕಟವಾಗುತ್ತಲೇ ಸೋನಿಯಾ ಮನೆಗೆ ಹೋದರಂತೆ! ಯಾಕೆಗೊತ್ತೇ? ಅವರ ಬಳಿ ಇದ್ದ ತಮ್ಮ ರಿಮೋಟ್ ವಾಪಾಸು ಪಡೆಯಲು!!!.


Wednesday 14 May 2014

ಪರೀಕ್ಷಾ ಫಲಿತಾಂಶದ ಸುತ್ತ...

ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. ಜನಪ್ರತಿನಿಧಿಯಲ್ಲಿ ನನ್ನ ಈ ವಾರದ ಲೇಖನ 

ಇದೀಗ ಎಲ್ಲೆಡೆಯಲ್ಲಿಯೂ ಪಲಿತಾಂಶದ ಕಾಲ. ನಾನು ಹೇಳುತ್ತಿರುವುದು ಶೈಕ್ಷಣಿಕ ಫಲಿತಾಂಶಗಳ ಬಗ್ಗೆ. ಮೊನ್ನೆ ಎಸ್ ಎಸ್ ಎಲ್ ಸಿ ಫಲಿತಾಂಶದ ದಿನ ನನ್ನ ತೀರಾ ಹತ್ತಿರದ ಸಂಬಂಧಿ ಹುಡುಗಿಯೋರ್ವಳ ಫಲಿತಾಂಶವನ್ನು ನಾನೇ ನೋಡುತ್ತಿದ್ದೆ. ಅವಳಿಗೆ ಒಟ್ಟೂ 66 ಶೇಕಡಾ ಅಂಕಗಳು ಬಂದಿದ್ದುವು. ಅದನ್ನು ನಾನು ಸಂತಸದಿಂದಲೇ ಆಕೆಗೆ ಹೇಳಿದರೆ, ಅವಳು ತಾನು ಅನುತ್ತೀರ್ಣಳೇ ಆಗಿರುವ ಹಾಗೆ ಗೋಳೋ ಎಂದು ಅಳಲಾರಂಭಿಸಿದಳು. ಇದೇನೂ ಅಚ್ಚರಿಯ ವಿಷಯವಾಗಿರಲಿಲ್ಲ. ಇದಕ್ಕೆ ಕಾರಣ, 'ಕನಿಷ್ಟ' 90 ಕ್ಕಿಂತ ಹೆಚ್ಚು ಅಂಕ ಪಡೆಯಲಾಗದ ಬಗ್ಗೆ ಅವಳಿಗೆ ದು:ಖವಾಗುತ್ತಿತ್ತು. ಅದಕ್ಕೆ ಸರಿಯಾಗಿ ಅಲ್ಲಿ ಸೇರಿದ್ದ ಕೆಲವರೂ, 66.....ಛೇ, ಕಡಿಮೆ ಆಯ್ತಲ್ಲ ಎಂಬ ಒಗ್ಗರಣೆ...

ನೀವೂ ಪತ್ರಿಕೆಗಳಲ್ಲಿ ಓದಿರಬಹುದು. ಓರ್ವ ಹುಡುಗಿ, ತನ್ನ ಸಂಬಂಧಿಯೋರ್ವ ವಿನೋದಕ್ಕಾಗಿ, 'ನೀನು ಫೇಲ್'ಎಂದದ್ದನ್ನು ಕೇಳಿ, ಹಿಂದೆ ಮುಂದೆ ಯೋಚಿಸದೇ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಾಸ್ತವವಾಗಿ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಕೇವಲ ಒಂದು ಕ್ಷಣದ ದೌರ್ಬಲ್ಯಕ್ಕೆ ಬುದ್ದಿ ಕೊಟ್ಟ ಪರಿಣಾಮ ಇದು.

ಇದೆಲ್ಲಾ ಯಾಕೆ?? ಒತ್ತಡ! ವಿದ್ಯಾರ್ಥಿಯ ಮೇಲೆ ಬೀಳುವ ಬಹುಮುಖಿ ಒತ್ತಡ. ಶಿಕ್ಷಣವನ್ನು ಕೇವಲ ಜೀವನದ ಒಂದು ಅವಿಭಾಜ್ಯ ಅಂಗವೇ ಹೊರತು, ಅದರಲ್ಲಿನ ಅಪಯಶದಿಂದ ಜೀವನವೇ ಮುಗಿದು ಹೋಗಲಿಲ್ಲ ಎಂಬುದನ್ನು ಮಕ್ಕಳ ಮನಸ್ಸಿಗೆ ದ್ರಢಪಡಿಸಲು ನಾವು ಇಂದು ಸೋಲುತ್ತಿದ್ದೇವೆ. ಬೇರಯವರೊಡನೆ ಹೋಲಿಕೆ, ಇಂತಿಷ್ಟೇ ಅಂಕ ತೆಗೆಯಬೇಕು ಎಂಬ ಒತ್ತಾಸೆ, ಇದಿಲ್ಲವಾದರೆ ಮತ್ತೆ ಬದುಕೇ ಶೂನ್ಯ ಎಂಬ ಹುಂಬತನ ಇದಕ್ಕೆಲ್ಲಾ ಕಾರಣ. ಒಂದು ರೀತಿಯಲ್ಲಿ ಇದನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಮೊನ್ನೆ ಟಿ೨೦ ಪಂದ್ಯದ ಫೈನಲ್‌ನಲ್ಲಿ ಯುವರಾಜ್ ಸಿಂಗ್‌ರ ಒಂದು ಕೆಟ್ಟ ಆಟ, ಇಡೀ ಕ್ರಿಕೆಟ್ ಜಗತ್ತಿನ ಟೀಕೆಗೆ ಕಾರಣವಾಯಿತು. ಯುವರಾಜ್ ಈ ಹಿಂದೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದನ್ನೂ, ಮುಂದೆಯೂ ಆ ಸಾಧನೆಯ ಸಾಧ್ಯತೆಯನ್ನು ಎಲ್ಲರೂ ಮರೆತರು. ಪರಿಣಾಮವಾಗಿ ಈ ಕ್ರಿಕೆಟಿಗನ ಮನೆಯ ಮೇಲೆ ದಾಳಿ ಆಯಿತು. ಎಲ್ಲಿ ನೋಡಿದರೂ ಯುವರಾಜನನ್ನು ಓರ್ವ ಖಳನಾಯಕನಂತೆ ಚಿತ್ರಿಸಲಾಯಿತು. ಹಿಂದಿನ ಮತ್ತು ಮುಂದಿನ ಅವರ ಎಲ್ಲಾ ಸಾಧನೆಗಳ ಬಗ್ಗೆ ಹೆಮ್ಮೆ ಬಿಡಿ, ಸಾಧಾರಣ ನೆನಪೂ ಇಲ್ಲವಾಯಿತು. ಯುವರಾಜ್ ಎಂಬ ಕ್ರಿಕೆಟಿಗನ ಕ್ರೆಕೆಟ್ ಜೀವನ ಕೇವಲ ಶೂನ್ಯ ಸಂಪಾದನೆ ಎಂಬಂತೆ ಚಿತ್ರಿಸಲಾಯಿತು.

ಈ ಶಿಕ್ಷಣದ ವಿಷಯದಲ್ಲಿಯೂ ಹಾಗೆಯೇ ಆಗುತ್ತಿದೆ. ಮಗು ಶಾಲೆಗೆ ಹೋದಾಗಿನಿಂದ ಅದರ ಮೇಲೆ ಎಲ್ಲಕ್ಕೂ ನಿಯಂತ್ರಣ ಆರಂಭವಾಗುತ್ತದೆ. ಎಲ್ಲಕ್ಕೂ ಬೇರೆ ಮಕ್ಕಳ ಜೊತೆ ಹೋಲಿಕೆ. ಪ್ರತೀ ಬಾರಿ ಈಗಿನ ಂ + ನಿರೀಕ್ಷೆ. ಪರೀಕ್ಷೆ ಬಂತೆಂದರೆ ಅದಕ್ಕೆ ಎಲ್ಲಿಲ್ಲದ ಒತ್ತಡ...ಪರಿಣಾಮ ಪರೀಕ್ಷೆಯ ಭಯ, ಶಿಕ್ಷಕರ ಭಯ, ಪೋಷಕರ ಭಯ, ಸ್ನೇಹಿತರ ಭಯ, ಸಂಬಂಧಿಗಳ ಭಯ, ಅಕ್ಕ ಪಕ್ಕದವರ ಭಯ ಮತ್ತು ಒಟ್ಟಾರೆಯಾಗಿ ಮಗುವಿನ ಬದುಕು ಕೇವಲ ಭಯಾನಕವಾಗಿರುತ್ತದೆ. ಇಂದು ಶಿಕ್ಷಣ ಒಂದು ಮುಗಿದರೆ ಸಾಕಪ್ಪಾ ಎಂದುಕೊಂಡು ಮಗು ನರ್ಸರಿಯಿಂದಲೇ ಭಯ-ಭಯ-ಭಯದಲ್ಲಿ ಬದುಕಲಾರಂಭಿಸುತ್ತದೆ.

ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. 

ಇಲ್ಲಿ ಮುಖ್ಯವಾಗಿ ಕಾರಣರಾಗುವುದು ಖಂಡಿತಕೂ ಪೋಷಕರು ಎಂಬುದು ನನ್ನ ಭಾವನೆ. ಅವರಲ್ಲವಾದರೆ ಪರಿಸರವೂ!. ನಾನು ಮೇಲೆ ಹೇಳಿದ ೬೬ಶೇಕಡಾ ಪಡೆದು ಉತ್ತೀರ್ಣಳಾದ ಹುಡುಗಿಯನ್ನೇ ಉದಾಹರಣೆಯಾಗಿ ಕೊಡಬಹುದು. ಒಂದು ಸಮಾರಂಭದ ನಡುವೆ ಆಕೆಯ ಫಲಿತಾಂಶ ಬಹಿರಂಗವಾದಾಗ, ಎಲ್ಲರೂ ಕೇಳಿದವರು ಅನೇಕ ಪ್ರತಿಕ್ರಿಯೆಗಳನ್ನು ನೀಡಿದರು. ಆ ಹುಡುಗಿಯ ತಾಯಿ ಮತ್ತು ತಂದೆ, ತಮಗಂತೂ ಖೂಷಿಯಾಗಿದೆ, ನೀನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಸಾಕು ಬಿಡು ಎಂದು ಅಳುತ್ತಿರುವ ಮಗಳನ್ನು ಅಪ್ಪಿ ಸಮಾಧಾನಿಸುತ್ತಿದ್ದರು. ಆಗ ನೆರೆದ ಕೆಲವರು, ತಾಯಿಯನ್ನುದ್ದೇಶಿಸಿ, ನೀನೇ ಆಕೆಯನ್ನು ಹಾಳು ಮಾಡಿದ್ದು. ಕೇವಲ ೬೬ಶೇಕಡಾ ಪಡೆದಿದ್ದಾಳೆ, ನಿನ್ನ ಈ ಪ್ರೀತಿ ಬೇರೆ ಎಂದು ಆಕೆಗೇ ಪ್ರತ್ಯಕ್ಷ-ಪರೋಕ್ಷವಾಗಿ ಗದರಿಸುತ್ತಿದ್ದರು!!. ಇಂದು ಮತ್ತೂ ಒಂದು ಗಮನಿಸಬೇಕಾದ ಯೋಚನೆ ಎಂದರೆ, ನಮ್ಮ ಮಕ್ಕಳ ಬಗ್ಗೆ ಬೇರೆಯವರ ಕಾಳಜಿ ಮಿತಿ ಮೀರಿರುತ್ತದೆ!!. ಇದು ದುರಂತದ ಮತ್ತೊಂದು ಹಾದಿ. 

ಕೇವಲ ಶೇಕಡಾವಾರು ಅಂಕ, ಶಿಕ್ಷಣ ಎಂದರೆ ಪಿಯುಸಿಯಲ್ಲಿ ಸೈನ್ಸ್, ಅದು ಮುಗಿಯುತ್ತಲೇ ಸಿಇಟಿ, ಮುಂದುವರಿದು ಇಂಜಿನಿಯರ್ ಅಥವಾ ಮೆಡಿಕಲ್ ಎಂಬ ಹುಚ್ಚು ಪೋಷಕರನ್ನು ಆವರಿಸಿಕೊಂಡಿದೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂಬ ಒಂದು ರೀತಿಯ ಕುರುಡುತನ ಅವರಲ್ಲಿ ಮನೆ ಮಾಡಿದೆ. ಇದನ್ನೇ ಬಾಲ್ಯದಿಂದಲೂ ಮಗುವಿನ ಮೇಲೆ ಹೇರಿ, ಅದನ್ನು ಇನ್ನಿಲ್ಲದಂತೆ ಹೈರಾಣಾಗಿಸುವ ಯತ್ನ ಈ ಎಲ್ಲದಕ್ಕೂ ಮೂಲ ಕಾರಣ. ಒಂದು ರೀತಿಯಲ್ಲಿ ಈ ರೀತಿಯಲ್ಲಿ ಮಾನಸಿಕ ಆಘಾತಕ್ಕೆ ಒಳಗಾಗುವ ಮಕ್ಕಳ ಆತ್ಮಹತ್ಯೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮದೇ ವ್ಯವಸ್ಥೆಯ ವ್ಯವಸ್ಥಿತ ಕೊಲೆ ಎಂಬುದು ನನ್ನ ಭಾವನೆ.

ಇದಲ್ಲದೇ ಉಜ್ವಲವಾದ ಭವಿಷ್ಯ ಬೇರೆಯದೇ ಇದೆ. ನಾವು ಇನ್ನೊಂದು ದ್ರಷ್ಠಿಕೋನದಿಂದಲೂ ನೋಡಬೇಕು. ಎಲ್ಲರೂ ಈ ಪ್ರಪಂಚದಲ್ಲಿ ಒಂದೇ ರಂಗದಲ್ಲಿ ನಿಷ್ಣಾತರಾಗಿರುವುದಿಲ್ಲ. ಪ್ರತಿಯೊಬ್ಬನಿಗೂ ಅವನದ್ದೇ ಆದ ಪ್ರತಿಭೇ ಇರುತ್ತದೆ. ಇಂದು ವೃತ್ತಿಪರ ಕೋರ್ಸ್‌ಗಳೇ ಅಲ್ಲದೇ, ಸಾಂಸ್ಕೃತಿಕವಾಗಿ ಅಥವಾ ಸಮಾಜದ ಇತರ ರಂಗಗಳಲ್ಲಿಯೂ ಬದುಕು ಕೊಡುವ ಅನೇಕ ದಾರಿಗಳಿವೆ. ಒಬ್ಬ ಇಂಜಿನಿಯರ್ ಆಗಿಯೋ, ವೈದ್ಯನಾಗಿಯೋ ದುಡಿದಷ್ಟೇ, ಬೇರೆ ರಂಗಗಳಲ್ಲಿಯೂ ದುಡಿಮೆಗೆ ಅವಕಾಶಗಳಿರುತ್ತವೆ. ಇದನ್ನು ಆರಂಭದಿಂದಲೇ ನಾವು ಮಕ್ಕಳಲ್ಲಿ ಮನನ ಮಾಡುತ್ತಾ ಹೋದರೆ ಅವರೂ ಮಾನಸಿಕವಾಗಿ ಗಟ್ಟಿಯಾಗುತ್ತಾರೆ. ಇಂದಿನ ತುರ್ತು ಅಗತ್ಯಗಳಲ್ಲಿ ಇದು ಮುಖ್ಯ.
ನಮ್ಮ ಶಿಕ್ಷಣ ಕಾಲದಲ್ಲಿ, ಕೇವಲ ಪಾಸಾಗಿದ್ದಕ್ಕೆ ಊರಿಡೀ ಸಿಹಿ ಹಂಚಿದ ಪ್ರಸಂಗ ನೆನಪಾಗುತ್ತದೆ. ಅಂದು ಶಿಕ್ಷಣವೇ ಕಷ್ಟದ ಪರಿಸ್ಥಿತಿ. ಅಂತಾದ್ದರಲ್ಲಿ ಪಾಸಾಗುವುದೂ ಒಂದು ಸಾಧನೆ. ಸೆಕೆಂಡ್ ಕ್ಲಾಸ್ ಬಂದರೆ ಪೋಷಕರಿಗೆ ಮಹದಾನಂದ. ಫಸ್ಟ್ ಕ್ಲಾಸ್ ಬಂದರೆ ಊರಿಡೀ ಹಬ್ಬ.

ಇನ್ನು ಇಲ್ಲಿ ಮಕ್ಕಳ ತಪ್ಪೂ ಇಲ್ಲವೆನ್ನಲಾಗದು. ಇಂದಿನ ಮುಂದುವರಿದ ತಾಂತ್ರಿಕತೆ ಮಕ್ಕಳಲ್ಲೂ ಆ ಪರಿಯ ಬದಲಾವಣೆ ತಂದಿದೆ. ಒಂದು ವಿದ್ಯಾರ್ಥಿ ಹೇಳುತ್ತಿದ್ದ, ಛೆ. ನನಗೆ ಕೇವಲ ೮೦ಶೇಕಡಾ ಅಂಕಗಳು ಮಾತ್ರ ಬಂದಿವೆ. ೯೦ಕ್ಕಿಂತ ಹೆಚ್ಚು ಬಂದಿದ್ದರೆ ಫೇಸ್ ಬುಕ್ ನಲ್ಲಿ ಹಾಕಿ ಎಷ್ಟು ಲೈಕ್ ಬರುತ್ತಿತ್ತು ನೋಡುತ್ತಿದ್ದೆ ಎಂದು!!. ಫೇಸ್ ಬುಕ್ ತೆರೆದು ನೋಡಿದರೆ, ಕೆಲವು ಮಕ್ಕಳು ತಮ್ಮ ಅಂಕ ಪಟ್ಟಿಯನ್ನೇ ಲಗತ್ತಿಸಿ ಹೆಮ್ಮೆ ಪಡುತ್ತಿದ್ದರು. ಓರ್ವ ಹುಡುಗಿಯ ಒಂದು ಪೋಸ್ಟಿಂಗ್ ಹೀಗಿದೆ:- 'ನನ್ನ ತಂದೆ ಹೇಳುತ್ತಿದ್ದರು, ಮಗಳೇ, ನೀನು ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ತೆಗೆದ ಬಗ್ಗೆ ನನಗೆ ಬೇಸರವಿಲ್ಲ. ನಿನ್ನ ಪರೀಕ್ಷೆಯ ಮೊದಲ ದಿನ ನಾನು ಖಾಯಿಲೆ ಬಿದ್ದಾಗ, ನೀನು ತಾಯಿಯಂತೆ ನನ್ನನ್ನು ನೋಡಿಕೊಂಡೆ. ಹಾಗಾಗಿ ಆ ಒಂದು ವಿಷಯದಲ್ಲಿ ನಿನಗೆ ಕಡಿಮೆ ಅಂಕ ಬರಲು ನಾನೂ ಒಂದು ಕಾರಣ. ಅದಕ್ಕೆ ಚಿಂತಿಸಬೇಡ ಎಂದು ತಂದೆ ಹೇಳುತ್ತಿದ್ದರು, ಅಪ್ಪಾ, ಐ ಲವ್ ಯೂ.....ಅಂದ ಹಾಗೆ ನನಗೆ ಕನ್ನಡದಲ್ಲಿ ೧೨೫ರಲದಲಿ ೧೨೪ಅಂಕಗಳು ಬಂದಿದ್ದುವು!....ಇದು ನಮ್ಮ ನಿರೀಕ್ಷೆಯ ಮಟ್ಟವನ್ನು ಸೂಚಿಸುತ್ತದೆ. ಬಹುಶ: ಆ ಮಗುವೇನಾದರೂ ೧೦೦ ಅಂಕಗಳನ್ನು ತೆಗೆದಿದ್ದರೆ ಪರಿಣಾಮ ಎಷ್ಟು ಭೀಕರವೆಂಬುದನ್ನು ನೀವೇ ಯೋಚಿಸಿ. 

ಮತ್ತೊಬ್ಬ ತಂದೆ ಮಗಳ ಪೂರ್ತಿ ಅಂಕ ಪಟ್ಟಿಯನ್ನೇ ಲಗತ್ತಿಸಿ, ಫೇಸ್ ಬುಕ್ ನಲ್ಲಿ ಹಾಕಿದ್ದರು. ನಾನು ಒಂದು ಕೆಲಸದ  ಪ್ರಯುಕ್ತ ಇಡೀ ವರ್ಷ ಬ್ಯುಸಿಯಾಗಿದ್ದೆ. ಆದರೂ ನನ್ನ ಮಗಳು ಪಿಯುಸಿಯಲ್ಲಿ 94ಶೇಕಡಾ ಅಂಕಗಳನ್ನು ಪಡೆದು ನನ್ನನ್ನು ಹೆಮ್ಮೆ ಪಡುವ ಹಾಗೆ ಮಾಡಿದ್ದಳು...ಇಂತಹ ನೂರಾರು ಪೋಸ್ಟಿಂಗ್‌ಗಳನ್ನು ನೀವು ನೋಡಬಹುದು. ಇಂದು ಫೇಸ್ ಬುಕ್ ಇಲ್ಲದ ಫೇಸ್ ಗಳೇ ಇಲ್ಲ. ಇಂತಾದ್ದರಲ್ಲಿ, ತನ್ನ ಅಂಕ ಕಡಿಮೆಯಾದರೆ ಫೇಸ್ ಬುಕ್‌ನಲ್ಲಿ ಹಾಕಲು ಆಗದಲ್ಲ ಎಂಬ ನೋವೂ ಮಕ್ಕಳನ್ನು ಇಂದು ದುರ್ಬಲರಾಗಿಸುತ್ತಿವೆ ಎಂದರೆ ನಿಮಗೆ ಅಚ್ಚರಿ ಆದೀತು. ಇದು ವಿಚಿತ್ರವಾದರೂ ಸತ್ಯ.

ಹೀಗೆ ಮಕ್ಕಳಲ್ಲಿ ಎಲ್ಲಾ ವಿಧದಲ್ಲಿಯೂ ನಾವು ನಾವು ಕೇವಲ ಒತ್ತಡ ಸೃಷ್ಟಿ ಮಾಡುತ್ತಿರುವುದರ ಪರಿಣಾಮ ಇಂದು ಭೀಕರ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೋಷಕರಾದ ನಮ್ಮ ಜವಾಬ್ದಾರಿಯ ಬಗ್ಗೆ ಮೊದಲು ನಾವು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಇದನ್ನು ಅರಿತುಕೊಂಡು ಮಕ್ಕಳ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಮ್ಮ ಕಾಣಿಕೆ ದೊಡ್ಡದಿದೆ ಎಂಬುದು, ಪ್ರಜ್ಞಾವಂತರಾದ ನಮಗೆ ತಿಳಿದಿರಬೇಕು. 


Thursday 8 May 2014

ಶಬರಾಯರೆಂಬ ಸ್ನೇಹದ ಕಣಜ......

ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನುಭವ....ಜನ ಪ್ರತಿನಿಧಿಯ ಪ್ರದಕ್ಷಿಣೆಯ ನನ್ನ ಈ ವಾರದ ಬರಹ..... 


ಸುಮ ಕೃಷ್ಣ ಪ್ರಶಸ್ತಿ ಪ್ರದಾನದ ಹೊತ್ತು.... 
 ಒಂದು ಮಾತಿದೆ. ಯಾವುದೇ ಒಂದು ಪ್ರಶಸ್ತಿ, ಮಾನ-ಸಂಮಾನಕ್ಕೆ ಯೋಗ್ಯ ಬೆಲೆ ಅಥವಾ ಗೌರವ ಸಿಗುವುದು, ಅದನ್ನು ಪಡೆದ ವ್ಯಕ್ತಿಯ ಆತ್ಮೀಯತೆ, ಆಪ್ತತೆ ಮತ್ತು ಸಾರ್ಥಕ್ಯ ಭಾವ ಆ ಪ್ರಶಸ್ತಿಯೆಡೆಗೆ ಇದ್ದಾಗ ಮಾತ್ರ.

ಅಪರೂಪದ ಜೋಡಿ.... 
ಇಂದು ಅಂತಾದ್ದೊಂದು ಸಮಾಧಾನದಿಂದ ಈ ಬರಹ ಬರೆಯಲು ಕುಳಿತಿದ್ದೇನೆ. ಸಾರ್ವಜನಿಕ ರಂಗದಲ್ಲಿ, ಮುಖ್ಯವಾಗಿ ಸಾಹಿತ್ಯರಂಗದಲ್ಲಿ ನಮ್ಮ ಇತಿ ಮಿತಿಯಲ್ಲಿ ಅಷ್ಟಿಷ್ಟು ಕೆಲಸ ಮಾಡಲಾರಂಭಿಸದಾಗಿನಿಂದ, ಸಾಧಕರನ್ನು ಗುರುತಿಸಿ ಗೌರವಿಸುವ ಅಭ್ಯಾಸ ಮಾಡಿಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಅನೇಕ ಅನುಭವಗಳೂ ಆಗಿವೆ. ಅನೇಕ ಸಂದರ್ಭಗಳಲ್ಲಿ ಇಂತಹ ಸಂಮಾನಕ್ಕೆ ವ್ಯಕ್ತಿಗಳನ್ನು 'ಸಾಧಕ'ರು ಎಂದು ಗುರುತಿಸಿ, ಆಯ್ಕೆ ಮಾಡಿಕೊಂಡ ನಂತರ, ನಮ್ಮ ಆಯ್ಕೆ ತಪ್ಪಲಿಲ್ಲವಷ್ಟೇ ಎಂದು ಕೊಂಡದ್ದೂ ಇದೆ. ಆಯ್ಕೆಯ ತನಕದ ಮನೋಭಾವ, ಅನೇಕರಿಗೆ ಆಯ್ಕೆಯ ನಂತರ ಇರುವುದೇ ಇಲ್ಲ ಎಂಬುದನ್ನೂ ಗಮನಿಸಿದ್ದೇನೆ. ಇದು ಎಲ್ಲರಿಗೂ ಅನ್ವಯವಾಗದಾದರೂ, ಕೆಲವು ಸಂದರ್ಭಗಳು ಈ ರೀತಿಯ ಅನಿಸಿಕೆಗೆ ಕಾರಣವಾಗಿದ್ದೂ ಇದೆ.

ಆದರೆ ಇತ್ತೀಚೆಗೆ ನಾವು ಕೊಡ ಮಾಡಿದ ಸುಮಕೃಷ್ಣ ಪ್ರಶಸ್ತಿಯ ಪ್ರದಾನದ ಬಗ್ಗೆ ಒಂದೆರಡು ಮಾತಾಡಲೇ ಬೇಕು. ಅದಕ್ಕೆ ನಾವು ಬಹಳ ಯೊಚಮತ್ತು ಅನೇಕ ಸುತ್ತಿನ ವಿಚಾರ ವಿನಿಮಯದ ನಂತರ ಆಯ್ಕೆ ಮಾಡಿದ ಹೆಸರು ನಾರಾಯಣ ಶಬರಾಯರು. ವಯಕ್ತಿಕವಾಗಿ ನನಗೂ, ಶಬರಾಯರಿಗೂ ಪರಿಚಯವೇ ಇರಲಿಲ್ಲ. ಸ್ನೇಹಿತ ಕರುಣಾಕರ ಬಳ್ಕೂರು ಅವರಿಂದ ಶಬರಾಯರ ಮೊಬೈಲ್ ನಂಬರ್ ತೆಗೆದುಕೊಂಡು ಅವರಿಗೆ ಫೋನಾಯಿಸಿದಾಗಲೇ, ಮೊದಲ ಮಾತಿನಿಂದಲೇ ಅವರ ನಡುವೆ ಯಾವುದೋ ಆತ್ಮೀಯತೆ ಬೆಳೆದಾಗಲೇ, ಈ ಪ್ರಶಸ್ತಿಗೆ ಗೌರವ ಸಂದ ಅನುಭವ

ಅದಿರಲಿ, ಪ್ರಶಸ್ತಿಯ ಬಗ್ಗೆ ಹೇಳಿದಾಗ, ಇನ್ನಿಲ್ಲವಾದ ಮಾವ-ಅತ್ತೆಯ ಬಗ್ಗೆ ಹೇಳಿದಾಗ, ಅವರ ನೆನಪಿನಾಳದ ಮಾತುಗಳನ್ನು ಕೇಳುವುದೇ ಒಂದು ವಿಶಿಷ್ಠ ಅನುಭವ. ಕೊನೆಗೂ ಪ್ರಶಸ್ತಿಯ ವಿಷಯ ಅವರಲ್ಲಿ ಹೇಳಿದಾಗ ಅವರು ಹೇಳಿದ ಮೊದಲ ಮಾತು, ಪ್ರಶಸ್ತಿ ಸ್ವೀಕಾರಕ್ಕೆ ತೊಂದರೆ ಇಲ್ಲ, ಆದರೆ ಪ್ರಶಸ್ತಿಯ ಮೊತ್ತ ಬೇಡ ಬಿಡಿ ಎಂಬ ನೈಜ ಕಾಳಜಿ.

ಸುಮ-ಕೃಷ್ಣರಿಗೆ ನಮನ 
ಇದೆಲ್ಲವೂ ಒಂದು ಹಂತದ ಅನುಭವ. ಅವರಿಗೆ ಅವರ ಒಂದು ಬಯೋಡಾಟಾವನ್ನು ಕಳುಹಿಸಿ ಎಂಬ ವಿನಂತಿ ಮುಂದಿಟ್ಟೆ. ಆಯ್ತು ಬಿಡಿ ಎಂದವರು ನಾಪತ್ತೆ. ಫೇಸ್ ಬುಕ್‌ನಲ್ಲಿ ಅವರ ಮಗಳು ಗಾರ್ಗಿಯೊಂದಿಗಿನ ಚಾಟ್‌ನಲ್ಲಿ ಒಮ್ಮೆ ಇದೇ ವಿನಂತಿ ಮುಂದಿಟ್ಟೆ, ಆಕೆಯೂ ಅಪ್ಪನಿಗೆ ಹೇಳುತ್ತೇನೆ ಎಂದವಳು ಮತ್ತೆ ನಾಪತ್ತೆ. ಕೊನೆಗೆ ಅಭಿನಂದನಾ ಭಾಷಣವನ್ನು ಮಾಡಲು, ಉದಯಕುಮಾರ್ ಶೆಟ್ಟಿಯವರನ್ನು ಕೇಳಿಕೊಂಡಾಗ, ಅವರೂ ಶಬರಾಯರಿಗೆ ಅಭಿನಂದನಾ ಮಾತಾಡುವುದೇ ಒಂದು ವಿಶೆಷ ಅವಕಾಶ ಎಂಬಂತೆ ಒಪ್ಪಿಕೊಂಡ ಹಿನ್ನೆಯಲ್ಲಿ, ಅವರಲ್ಲಿಯೇ ಶಬರಾಯರ ಬಯೋಡಾಟಾ ಕೇಳಿದೆ. ಅವರು ಅದನ್ನು ಒದಗಿಸಿದರು. ಕೊನೆಗೆ ಆಮಂತ್ರಣವನ್ನು ನೀಡಲು ಶಬರಾಯರ ಮನೆಗೆ ಹೋದಾಗ, ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ನಿಜಕ್ಕೆಂದರೆ ಬಯೋಡಾಟವನ್ನು ಅವರು ನನಗೆ ಒದಗಿಸದ ಬಗ್ಗೆ ನನಗೆ ತುಸು ಅಸಮಾಧಾನವೇ ಇತ್ತು!!. ಬಯೋಡಾಟಾದ ವಿಷಯ ಹೇಳುತ್ತಲೇ ಶಬರಾಯರು ಹೇಳಿದ ಮಾತಿನಿಂದ ನಾನು ನಿಜಕ್ಕೂ ಸಮಾಧಾನಗೊಂಡದ್ದು ಮಾತ್ರವಲ್ಲ, ನಮ್ಮ ಪ್ರಶಸ್ತಿಯ ಆಯ್ಕೆಗೆ ಇದು ಸರಿಯಾದ ವ್ಯಕ್ತಿ ಎಂದುಕೊಂಡೆ!!. 'ಸ್ವಾಮೀ, ಅಷ್ಟುದ್ದ ಬರೆದು, ಹೇಳಿಸಿಕೊಂಡು ಸಂಮಾನ ಸ್ವೀಕರಿಸುವ ಬದಲು, ನಿಮಗೆ ಆತ್ಮೀಯವೆನ್ನಿಸುವ ನಿಮ್ಮದೇ ಮಾತಿನಲ್ಲಿ ಪ್ರಶಸ್ತಿ ನೀಡಿ. ಅದನ್ನು ನಿಮ್ಮತ್ತೆ ಹಾಗೂ  ಮಾವ ಮತ್ತು ಯಕ್ಷಗಾನ ರಂಗದ ಮೇಲಿನ ಗೌರವದಿಂದ ನಮ್ರನಾಗಿ ಸ್ವೀಕರಿಸುತ್ತೇನೆ ಎಂಬುದು ಅವರ ಮನದಾಳದ ಮಾತಿನ ಸಾರವಾಗಿತ್ತು. ನಾನು ಸೋತು ಹೋದೆ.

ಇಂತಾದ್ದೇ ಅನೇಕ ಪ್ರಶಸ್ತಿಗಳನ್ನು ನಾವು ಘೋಷಣೆ ಮಾಡಿದ ಬಳಿಕ, ಸಾಮಾನ್ಯವಾಗಿ ಎದುರಿಸುತ್ತಿದ್ದ ಸಮಸ್ಯೆ ಎಂದರೆ ಪ್ರಶಸ್ತಿ ವಿಜೇತರಿಂದ ಅದನ್ನು ಪತ್ರಿಕೆಯಲ್ಲಿ ಬರುವಂತೆ ಮಾಡುವ ಒತ್ತಡ. ಅನೇಕ ಸಂದರ್ಭಗಳಲ್ಲಿ, ಪ್ರಶಸ್ತಿ ವಿಜೇತರು, ಅದನ್ನು ಪತ್ರಿಕೆಯಲ್ಲಿ  ಬರದಿದ್ದರೆ ಅದಕ್ಕೆ ನಾವೇ ಹೊಣೆ ಮತ್ತು ಆ ಪ್ರಶಸ್ತಿ ಸ್ವೀಕಾರಾರ್ಹವೇ ಅಲ್ಲ ಎಂಬಂತೆ ವರ್ತಿಸುವುದನ್ನು ನೋಡಿದ್ದೇನೆ. ಅದಕ್ಕಾಗಿ ಪತ್ರಿಕಾ ಕಾಯಾಲಯಕ್ಕೆ ನಾನು ಎಡತಾಕ ಬೇಕಾದ ಪ್ರಮೇಯವೂ ಇತ್ತು. ಆದರೆ ಇಲ್ಲಿ ನನಗೆ ಹೊಸ ಅನುಭವ. ಶಬರಾಯರ ಪ್ರಶಸ್ತಿಯ ವಿಷಯವನ್ನು ಪ್ರದಾನ ಸಮಾರಂಭಕ್ಕೆ  ಎರಡು ದಿನ ಮೊದಲು, ಎಲ್ಲಾ ಪತ್ರಿಕೆಗಳಿಗೆ ಮೈಲ್ ಮಾಡಿದ್ದೆ. ಆದರೆ ಶಬರಾಯರು ಒಂದು ದಿನವೂ ಆ ಬಗ್ಗೆ ನನ್ನಲ್ಲಿ ಒತ್ತಾಯವನ್ನೋ, 'ತನಿಖೆ'ಯನ್ನೋ ಮಾಡಿದವರಲ್ಲ!!. ಕನಿಷ್ಟ ಕೇಳಿದವರೂ ಅಲ್ಲ. ವಿಶೇಷವೆಂದರೆ ಎಲ್ಲಾ ಪತ್ರಿಕೆಗಳೂ ಈ ವರದಿಯನ್ನು ವಿಶೇಷವಾಗಿ ಪ್ರಕಟಿಸಿದುವು. ಅದು ನನ್ನ ಪಾಲಿಗೆ ನಿಜಕ್ಕೂ ಅಚ್ಚರಿಯೇ!!. ಯಾಕೆಂದರೆ ಪ್ರಚಾರಕ್ಕಾಗಿ ಹಾತೊರೆಯುವವರ ಮಧ್ಯೆ, ಯಾವುದೇ ಒತ್ತಾಯ. ವಿನಂತಿಗೆ ಹೊರತಾಗಿ, ಕೇವಲ ಈ ಮೈಲ್ ನೋಡಿ, ಈ ವರದಿಯನ್ನು ಪತ್ರಿಕೆಗಳು ಪ್ರಕಟಿಸಿದ್ದವೆಂದರೆ, ಅದೂ ಶಬರಾಯರು ಕಾಯ್ದುಕೊಂಡು ಬಂದ ನಿಷ್ಠೆಯ ಫಲವೆಂದೇ ನಾನು ಅಂದುಕೊಂಡಿದ್ದೇನೆ.

ಇನ್ನು ಅವರ ಮನೆಯಲ್ಲಿನ ಆತ್ಮೀಯತೆ. ಕುಳಿತಾಗ ಯಕ್ಷಗಾನ ರಂಗದ ಒಳ-ಹೊರಗನ್ನು  ಸಮಗ್ರವಾಗಿ ತೆರೆದಿಟ್ಟ ಶಬರಾಯರು, ಎಲ್ಲಿಯೂ ತಾನೊಬ್ಬನೇ ಶ್ರೇಷ್ಠ ಎಂಬ ಭಾವ ತೋರಲಿಲ್ಲ. ಸಾಧಿಸಿದ್ದು ಅತ್ಯಲ್ಪ, ಸಾಧಿಸಲು ಬಹಳಷ್ಟಿದೆ ಎಂದೇ ಮಾತು ಆರಂಭಿಸಿದ ಅವರು, ತಾನೊಬ್ಬ ಸಾಮಾನ್ಯ ಕಲಾವಿದ ಎಂಬ ವಿನೀತ ಭಾವವನ್ನು ಎಲ್ಲಿಯೂ ಮರೆಯಲಿಲ್ಲ.

ಓರ್ವ ವಿಜ್ಞಾನ ಪದವೀಧರನಾಗಿ, ಕಾಳಿಂಗ ನಾವುಡರ ಗಾನ ಪಾಂಡಿತ್ಯಕ್ಕೆ ಮನಸೋತು, ಉಪ್ಪೂರರ ಶಿಷ್ಯತ್ವ ಸ್ವೀಕರಿಸಿ, ಯಕ್ಷಗಾನ ರಂಗದಲ್ಲಿ  ತನ್ನದೇ ಒಂದು ವಿಶಿಷ್ಠ ಶಕೆಗೆ ಕಾರಣರಾದ ಶಬರಾಯರು ಹೊಸ ತನದ ಅನ್ವೇಷಕ ಮತ್ತು ವಿನೂತನ ಪ್ರಯೋಗಗಳ ಪ್ರತಿಭಾವಂತ. ಖ್ಯಾತ ಯಕ್ಷಗಾನ ವಿಮರ್ಶಕ ಉದಯ ಕುಮಾರ ಶೆಟ್ಟಿಯವರ ಮಾತಿನಂತೆ ಇವರು ಯಕ್ಷಗಾನ-ಶಾಸ್ತ್ರೀಯ ಸಂಗೀತಗಳ ಸಮನ್ವಯ   ಭಾಗವತ ಎಂದೇ ಗುರುತಿಸಬಹುದು. ಬಡಗು-ತೆಂಕುಗಳೆರಡರಲ್ಲೂ ಸೈ ಅನಿಸಿಕೊಂಡು, ಎರಡೂ ಕಡೆಗಳಲ್ಲಿ ಅಪಾರ ಜನಪ್ರೀತಿಯನ್ನು ಗಳಿಸಿರುವ ಓರ್ವ ವಿಶಿಷ್ಠ ಭಾಗವತನಿದ್ದರೆ ಅದು ಶಬರಾಯರು. ಎಲ್ಲಕ್ಕಿಂತಲೂ ಮುಖ್ಯವಾಗಿ ದೂರದರ್ಶನದ ಮೂಲಕ ಯಕ್ಷಗಾನವನ್ನು ದಶ ದಿಕ್ಕುಗಳಿಗೂ ಪರಿಚಯಿಸುವಲ್ಲಿ ವಿಶೇಷ ಶ್ರಮ ವಹಿಸಿ, ಯಶಸ್ವೀ ಕಲಾರಾಧಕರಾಗಿ ಗುರುತಿಸಿಕೊಂಡ ಶಬರಾಯರು ಎಲ್ಲೂ ಅಹಂ ತೋರದ ಓರ್ವ ನಿಗರ್ವಿ ಮತ್ತು ನೈಜ ಕಲಾವಿದ. ಕಲಾವಿದ ಎಂಬುದಕ್ಕಿಂತಲೂ, ಕಲಾರಾಧಕ ಎಂದೇ ತನ್ನನ್ನು ಪರಿಚಯಿಸಿಕೊಳ್ಳುವಲ್ಲಿ ಅವರಿಗೆ ಹೆಮ್ಮೆಯಂತೆ!!

ನಮ್ಮ ಸಂಸಾರದ ಜೊತೆಗೊಂದು ಆತ್ಮೀಯ ಕ್ಷಣ 
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದಯ ಕುಮಾರ ಶೆಟ್ಟಿಯವರು ಹೇಳಿದಂತೆ, ಶಬರಾಯರು ಓರ್ವ ಕಲಾವಿದರಾಗಿಯಷ್ಟೇ ಅಲ್ಲದೇ ಆತ್ಮೀಯ ಸ್ನೇಹಿತನೂ ಆಗಿ, ಜನರೊಂದಿಗೆ ಬೆರೆಯುತ್ತಾರೆ. ನಮ್ಮೊಳಗೆ ಅವರು ಎಷ್ಟು ಆತ್ಮೀಯತೆಯಿಂದ ಬೆರೆತರು ಎಂದರೆ, ಕಳೆದ ನಾಲ್ಕು ದಶಕಗಳಿಂದಲೂ ಅವರನ್ನು ತಿಳಿಯದಿದ್ದ ನಾನು ಮತ್ತು ನನ್ನ ಕುಟುಂಬ ಇಂದು ಅವರ ಜೀವನ ಪರ್ಯಂತ ಬಂಧುಗಳೋ ಎಂಬಂತೆ ಸನಿಹಕ್ಕೆ ಬಂದಿದ್ದೇವೆ. ಅದಕ್ಕೆ ಕಾರಣ ಅವರ ಸರಳತೆ. ಇನ್ನು ಈ ರೀತಿಯ ಸರಳತೆ ಯಾವತ್ತೂ ಒಂದು ಇಡೀ ಕುಟುಂಬದಲ್ಲಿದ್ದರೆ ಅದು ಸುಖೀ ಸಂಸಾರ. ಇದಕ್ಕೆ ನಿದರ್ಶನವೂ ಶಬರಾಯ ಕುಟುಂಬ. ಮೊದಲ ದಿನ ಅವರ ಮನೆಗೆ ಹೋಗಿ, ಕಾಲಿಂಗ್ ಬೆಲ್ ಒತ್ತಿದಾಕ್ಷಣ ಹೊರ ಬಂದವರು ಶಬರಾಯರ ಶ್ರೀಮತಿ ರಾಜಶ್ರೀ ಅವರು. ಕಂಡಾಕ್ಷಣವೇ ಅದೆಷ್ಟೋ ವರ್ಷಗಳ ಆತ್ಮೀಯತೆ ನಗುವಿನೊಂದಿಗೆ ಸ್ವಾಗತಿಸಿದಾಗ ಅಚ್ಚರಿ, ನಾನಾರು ತಿಳಿಯಿತೇ ಎಂದಾಗ, ಓಹೋ ಗೊತ್ತು ಎಂಬ ಉತ್ತರ...ಇದು ಫೇಸ್ ಬುಕ್ ಪ್ರಭಾವ. ಕೇವಲ ಫೇಸ್ ಬುಕ್ ಪರಿಚಯದಿಂದಲೇ ನನ್ನ ಮುಖ ಪರಿಚಯ ಮಾಡಿಕೊಂಡವರು. ಮತ್ತೆ ಅಲ್ಲಿ ನಮ್ಮನ್ನೆಲ್ಲಾ ಆಳಿದ್ದು ಆತ್ಮೀಯತೆ ಮಾತ್ರ! ರಾಜಶ್ರೀ ಮೇಡಂ ರಾಜಶ್ರೀ ಅಕ್ಕ ಆಗಿದ್ದು ಹೀಗೆ. ಅವರ ಕೈ ರುಚಿಯ ಬಿಸಿ ಬಿಸಿ ಚಹಾ ಸೇವಿಸಿ, ಅವರೂ ನಮ್ಮ ಜೊತೆ ಕುಳಿತು, ಯಕ್ಷಗಾನ ರಂಗದ ಬಗ್ಗೆ, ಮನೆಯ ಕುಟುಂಬದ ಬಗ್ಗೆ ಹರಟಿದ್ದು ಬರೋಬ್ಬರಿ ಒಂದು ಘಂಟೆ. ಅಷ್ಟರಲ್ಲಿ ಅವರ ಮಗಳು ಗಾರ್ಗಿಯನ್ನು ಕರೆದ ಶಬರಾಯರು ನಮ್ಮನ್ನು ತೋರಿಸಿ ಇವರಾರು ಗೊತ್ತೇ ಎಂದಾಗ,ಆಗಲೂ ಅಚ್ಚರಿ. ಓಹೋ, ಅರೆಹೊಳೆ ಅಂಕಲ್ ಅಲ್ವಾ ಎಂಬ ಗಾರ್ಗಿಯ ನಗು...ಇದು ಒಂದು ಸಂಸಾರದ ಸುಸಂಸ್ಕಾರವನ್ನು ತೋರಿಸುತ್ತದೆ. ನಿಜಕ್ಕೂ ನಮ್ಮ ಪ್ರಶಸ್ತಿಗೆ ಹೆಮ್ಮೆ ಬಂದುದೇ ಆಗ.

ಇನ್ನೊಂದು ವಿಷಯವನ್ನಿಲ್ಲಿ ಹೇಳಲೇ ಬೇಕು. ನಾನಿಲ್ಲಿಯ ತನಕ ಯಾವುದೇ ಪ್ರಶಸ್ತಿ ಪ್ರದಾನ ಮಾಡಿದ್ದರೂ, ಮಾಡಿಸಿದ್ದರೂ, ಕೇವಲ ಪ್ರಶಸ್ತಿಗೆ ಆಯ್ಕೆಯಾದವರನ್ನು ಗೌರವಿಸಿದ್ದೇನೆ. ಇಲ್ಲಿ ಆ ಪರಂಪರೆಗೆ ನಾನು ತಿಲಾಂಜಲಿ ಇತ್ತೆ. ಪ್ರಶಸ್ತಿ ಪ್ರದಾನಕ್ಕೆ ವೇದಿಕೆಗೆ ರಾಜಶ್ರೀ ಅಕ್ಕ ಹಾಗೂ ಗಾರ್ಗಿಗೂ ಕರೆವ ಯೋಚನೆ ಮಾಡಿದೆ. ಗಾರ್ಗಿ ಬರದೇ ತಪ್ಪಿಸಕೊಂಡಳು!. ರಾಜಶ್ರೀಯವರಿಗೆ ತಪ್ಪಿಸಿಕೊಳ್ಳುವ ಸಂಭವ ಸಿಗಲಿಲ್ಲ. ಇಬ್ಬರನ್ನೂ ಕುರಿಸಿ, 'ಸುಮಕೃಷ್ಣ'ಪ್ರಶಸ್ತಿ ಪ್ರದಾನಿಸಿದಾಗ, ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಅತ್ತೆ ಮಾವ, ಸುಮತಿ-ಕೃಷ್ಣಮೂರ್ತಿಯವರ ಎಲ್ಲಾ ಮಕ್ಕಳಿಗೆ ಹಾಗೂ ಬಹುಶ: ಅತ್ತೆ ಮಾವನವರಿಗೂ ಸಂತೃಪ್ತಿಯ ಭಾವ

ಅತ್ತೆ-ಮಾವರ ಮಕ್ಕಳೊಂದಿಗೆ 
ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನಭವ. ಬೆಂಗಳೂರಿನ ಓರ್ವ ವ್ಯಕ್ತಿಗೆ ನಾನೂ ಒಂದು ಸಂಸ್ಥೆಯ ಮುಖಾಂತರ ಪ್ರಶಸ್ತಿಯನ್ನು ಕೊಡಿಸಿದ್ದೆ. ಅವರು ಇಲ್ಲಿಗೆ ಬಂದಾಗ ಅವರ ವಸತಿಯಿಂದ ಹಿಡಿದು ಪ್ರತಿಯೊಂದನ್ನೂ  ನಾನೇ ನೋಡಿಕೊಂಡಿದ್ದೆ. ಕೊನೆಗೆ ಪ್ರಶಸ್ತಿ ಪ್ರದಾನದ ನಂತರ ಅವರನ್ನು ಬೆಂಗಳೂರಿನ ಬಸ್ಸು ಹತ್ತಿಸಿ ಬಂದಿದ್ದೆ. ಅದರ ನಂತರ ಇಂದಿನ ತನಕವೂ ನನ್ನ ಒಂದು ಫೋನ್ ಕರೆಗೂ ಆ ವ್ಯಕ್ತಿ ಉತ್ತರಿಸಲಿಲ್ಲ!!. ಬದಲಿಗೆ ಪ್ರಶಸ್ತಿ ಸ್ವೀಕರಿಸಿದಾಗ, ಅದು ತನ್ನ ಆರ್ಹತೆಗೆ ಸಂದ ಗೌರವವೇ ಹೊರತು, ಅದರಲ್ಲಿ ಅಂತಹ ವಿಶೇಷವೇನೇನೂ ಇಲ್ಲ ಎಂಬ ಅನಿಸಿಕೆಯನ್ನು ಅವರು ಹೊರ ಹಾಕಿದಾಗ, ಎಲ್ಲರೂ ಮುಖ ಮುಖ ನೋಡಿಕೊಂಡದ್ದನ್ನು ನಾನಿನ್ನೂ ಮರೆತಿಲ್ಲ. ಅಂತಹ ಕಹಿ ಅನುಭವಗಳ ಮಧ್ಯೆ, ಇಂತಹ ಅನುಭವಗಳು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಶಬರಾಯ ಕುಟುಂಬವೇ ಇಂತಾದ್ದೊಂದು ಸಾರ್ಥಕ ಭಾವನೆಯನ್ನು ನನಗೆ ಮತ್ತು ಕುಟುಂಬಕ್ಕೆ ತಂದು ಕೊಟ್ಟಿದೆ. ಯಕ್ಷಗಾನ ರಂಗಕ್ಕೂ ಈ ಅನುಭವವಾಗಿದ್ದರೆ ಅಚ್ಚರಿ ಇಲ್ಲ.

ಮುಖ್ಯವಾಗಿ ನನ್ನತ್ತೆ-ಮಾವನ ಹೆಸರಿನ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿಗೆ ಇದರಿಂದ ಮೌಲ್ಯ ಹೆಚ್ಚಿದೆ ಎಂಬುದು ನನ್ನ ತೃಪ್ತಿ.


Thursday 1 May 2014

ಪಾಠ...

ನಾನೇನೂ ಕವಿಯಲ್ಲ.... ಆ ಕ್ಷಣಕ್ಕೆ ಹೊಳೆದದ್ದನ್ನು ಗೀಚಿ ಬಿಡುವುದು ನನ್ನ ಅಭ್ಯಾಸ... ಅಂತಹ ಒಂದು ಕವನ ಇಂದು ಹುಟ್ಟಿ ಕೊಂಡಿತು.... ಸಂಗ್ರಹಕ್ಕೂ, ತಮ್ಮ ಗಮನಕ್ಕೂ ಇರಲಿ ಎಂದು ಈ ಬ್ಲಾಗ್  ನಲ್ಲಿ ಅಡಗಿಸಿ ಬಿಟ್ಟೆ.... ಪ್ರತಿಕ್ರಿಯೆಗೆ ಕಾಯುವುದು ಸಹಜ...ಬರೆಯುತ್ತೀರಾ????


                                                      ನಾನೂ ಸೋತಿದ್ದೇನೆ ಅನೇಕ ಬಾರಿ
                                                      ಅದಕೆ ಒಂದಲ್ಲ,  ಹತ್ತು ಹಲವು ದಾರಿ
ಪ್ರತಿಬಾರಿಯೂ ಅದರ ಪ್ರತಿಫಲನ ಒಂದೇ
ಸಾಗುತಿರು  ನೀ ಮತ್ತೆ ಮತ್ತೆ ಮುಂದೆ!!      


ಅಷ್ಟಕ್ಕೂ ಏನಿದೆ ಇಲ್ಲಿ ಬಿಟ್ಟರೆ ಮಣ್ಣು..?
ಎಂಬವರ ಮನಸೊಳಗೆ ತೆರೆಯದೇ ಕಣ್ಣು??
ಮಣ್ಣಲ್ಲವೇ ಹೊನ್ನ ಮೊಗೆದು ಕೊಡುವ ಜೀವ
ಸೇರುವುದು ಬಿಟ್ಟು ಎಲ್ಲರೊಳಗಣ ಭಾವ??

ಗೆದ್ದಿಲ್ಲವೆಂದಲ್ಲ,ಲೆಕ್ಕವಿಟ್ಟಿಲ್ಲ ಅಷ್ಟೇ!
ಅದು ನನ್ನ ಸಾಧನೆ, ಮತ್ತೆ ಅಷ್ಟಕ್ಕಷ್ಟೇ!!
ನನ್ನ ನೋವು ಮಾತ್ರ ಕಂಡವರ ಹಣೆಗೆ
ನಲಿವೆಲ್ಲಾ ನನ್ನದೇ, ಇದು ನನ್ನ ಬಗೆ!!

ನಿನ್ನ  ಗೆಲುವಿಗೆ ಎಲ್ಲರೂ  ವಾರೀಸುದಾರ
ಸೋಲಿಗೆ ನಿನ್ನ ಹಣೆಬರಹವೇ ಗುರಿಕಾರ
ಮರೆತು ಬಿಡು ಜಗ ಇರುವುದೇ ಹೀಗೆ
ನಡೆದು ಬಿಡು, ನಿನ್ನ ದಾರಿ ಇರುವುದೇ ಹಾಗೆ!!












ಫೇಸ್ ಬುಕ್, ಐಪಿಎಲ್.....ಅಯ್ಯೋ!!.

ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ...ಕಳೆದ ವಾರದ ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಬರಹ. 


ಇತ್ತೀಚೆಗೆ ಓದಿದ ಒಂದು ಕಿರು ಕಥೆ ಇಲ್ಲೆ ನೆನಪಾಗುತ್ತದೆ. ಅದರ ರೂಪಾಂತರ ಇಲ್ಲಿ ನೀಡುತ್ತಿದ್ದೇನೆ.

 ಒಂದು ಮನೆ. ಅಲ್ಲಿ ನೀರವ ಮೌನ ಆವರಿಸಿರುತ್ತದೆ. ಮನೆಯಲ್ಲಿನ ಸದಸ್ಯರೆಲ್ಲರೂ ಏನೋ ಅನಾಹುತ ಆದ ಹಾಗೆ ಒದ್ದಾಡುತ್ತಿದ್ದಾರೆ. ಎಲ್ಲರ ದೃಷ್ಟಿಯೂ ಒಂದೇ ಕಡೆ. ಕೊನೆಗೂ ಅಲ್ಲಿ ಲೈಟ್ ಹತ್ತಿಕೊಳ್ಳುತ್ತದೆ. ಓಹ್! ಬಂತು ಎಂದು ಒಬ್ಬ ಸದಸ್ಯ ಕೂಗುವುದಕ್ಕೂ, ಮನೆಯ ಎಲ್ಲಾ ಸದಸ್ಯರೂ ಓಡಿ ಬಂದು ಅದರ ಮುಂದೆ ಕುಳಿತುಕೊಳ್ಳುತ್ತಾರೆ. ಹೌದು, ಇಂಟರ್ ನೆಟ್ ಕನೆಕ್ಟ್ ಆಗಿತ್ತು!!.

ಇಂದು ಇಂಟರ್ ನೆಟ್ ಕನೆಕ್ಷನ್ ಸ್ವಲ್ಪ ಹೊತ್ತು ಹೋದರೆ ನಮ್ಮೊಳಗೆ ಏನೋ ಹೇಳ ತೀರದ ಕಸಿವಿಸಿ. ಅದೇ ರೀತಿ ಟಿ ವಿ ಚ್ಯಾನೆಲ್ ಸಹಾ ಅಷ್ಟೇ. ಕರೆಂಟ್ ಇಲ್ಲದೇ ಅಥವಾ ಯಾವುದಾದರೂ ತಾಂತ್ರಿಕ ಕಾರಣದಿಂದ ಟಿವಿ ಸಂಪರ್ಕ ಕಡಿತಗೊಂಡರೂ ಇದೇ ಅವಸ್ಥೆ.

ಒಮ್ಮೆ ಮನೆಗೆ ಬಂಧು ಒಬ್ಬರು ಬಂದಿದ್ದರು. ಟಿವಿಯಲ್ಲಿ ಯಾವುದೋ ಸುದ್ದಿ ನೋಡುತ್ತಿದ್ದೆ. ಅವರ ಮುಖದಲ್ಲಿ ಅದೇನೋ ಅಸಹನೆ. ನಾನು ಗಮನಿಸುತ್ತಲೇ ಇದ್ದೆ. ಕೊನೆಗೂ ತಡೆಯಲಾರದೇ ಅವರು ಕೇಳಿಯೇ ಬಿಟ್ಟರು. ಲಾವಣ್ಯಗೇನಾಯ್ತು ನೋಡಬೇಕು, ಸ್ವಲ್ಪ ಈಟಿವಿ ಹಾಕ್ತೀರಾ ಎಂದು. ನನಗೋ ಅಚ್ಚರಿ. ಯಾವ ಲಾವಣ್ಯ ಮತ್ತು ಏನಾಗಿತ್ತು ಎಂದರೆ ಅವರು ಈಟಿವಿಯ 'ಬದುಕು'ಧಾರಾವಾಹಿಯ ಬಗ್ಗೆ ಹೇಳಲು ಕುಳಿತರು. ನಾವೆಲ್ಲರೂ ಈ ಧಾರಾವಾಹಿಯ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತೇವೆ. ಅನೇಕ ವರ್ಷಗಳಿಂದ ಬರುತ್ತಿರುವ ಧಾರಾವಾಹಿ ಮುಗಿಯುವುದೇ ಇಲ್ಲವೇನೋ ಎಂದು ಮುಖ ಸಿಂಡರಿಸುತ್ತೇವೆ. ಆದರೆ ಅದಕ್ಕಾಗಿಯೇ ಕಾಯುತ್ತಿರುವ ಮತ್ತು ಆ ಪಾತ್ರಗಳ ಬಗ್ಗೆ ಅನುಕಂಪ ತೋರುವ ಅದೆಷ್ಟೋ ಜನ ನಮ್ಮ ನಡುವೆ ಇರುತ್ತಾರೆ. ಹೀಗೆಯೇ ಲೋಕಾಭಿರಾಮವಾಗಿ ಮಾತಾಡುವಾಗ ಅವರೆಂದರು. ಅವರು ದಿನಾಲೂ ಮೂಡುಬಿದಿರೆಯಿಂದ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಾರೆ. ಮರಳಿ ಸಂಜೆ ಮನೆಗೆ ಹೋಗುವಾಗ ಅವರ ಖಾಯಂ ಬಸ್ ಒಂದಿದೆ. ಅದು ಸಿಕ್ಕದೇ ಇದ್ದರೇ ಆ ದಿನ ಅವರ ಮೂಡ್ ಹಾಳಾಗಿರುತ್ತದೆ. ಬಸ್ ಇಳಿಯುತ್ತಲೇ, ಮನೆಗೆ ಓಡಿಯೇ ಹೋಗಿ, ಬಾಗಿಲು ತೆರೆದು ಒಳಗ ಹೊಕ್ಕು, ಮೊದಲು ಟಿವಿಯ ಸ್ವಿಚ್ ಆನ್ ಮಾಡಿ, ಮನೆಯೊಂದು ಮೂರು ಬಾಗಿಲು (ಆಗ) ಹಾಕಿದ ನಂತರವೇ ಅವರು ನಿರಾಳ!!. ಇದನ್ನು ಕೇಳಿದಾಗ ನಿಜಕ್ಕೂ ಅಚ್ಚರಿ ಅನಿಸಿತು. ನಾನೂ ಕೇಳಿದೆ. ಈ ಟಿವಿ ಮಾಧ್ಯಮ ಇಷ್ಟು ಹತ್ತಿರವಾಗುವ ಮೊದಲೂ ನೀವು ಇದ್ದಿರಿ. ಆಗೇನು ಮಾಡುತ್ತಿದ್ದಿರಿ ಎಂದು. ಅದಕ್ಕವರು ಆಗ ಪುಸ್ತಕ ಓದುತ್ತಿದ್ದೆ ಎಂದರು. ಈಗ...?? ಪುಸ್ತಕ ಓದದೇ ಯಾವ ಕಾಲವಾಯಿತೋ!!

ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ. ನಮ್ಮ ಪಕ್ಕದ ಮನೆಯಲ್ಲಿದ್ದ ಅನಂತ ಪದ್ಮನಾಭ ನಾಯರಿ ದಂಪತಿಗಳು ನನಗೆ ಇದನ್ನು ಒದಗಿಸುತ್ತಿದ್ದರು. ಊರಿನಲ್ಲಿ ತರಂಗ, ಸುಧಾ, ಪ್ರಜಾಮತಗಳು ನಿಯಮಿತವಾಗಿ ಬರುತ್ತಿದ್ದುದು ಅವರ ಮನೆಯಲ್ಲಿ ಮಾತ್ರ. ತಪ್ಪದೇ ಆವುಗಳನ್ನು ಕಡ ತಂದು ಓದದಿದ್ದರೆ ಊಟ ಮಾಡಿದ್ದು ಜೀರ್ಣವಾಗದ ಪರಿಸ್ಥಿತಿ. ಆದರೆ ಈಗ..? ನಾನೇ ಮನೆಗೆ ತರಂಗ, ಸುಧಾಗಳನ್ನು ತರಿಸುತ್ತಿದ್ದರೂ, ಓದುವುದು ನಿಯಮಿತವಾಗಿದೆ ಎಂಬುದು ಪ್ರಾಮಾಣಿಕ ಅನಿಸಿಕೆ. ಯಾಕೆಂದುಕೊಂಡರೆ ಸಮಯ ಸಿಗದು ಎಂಬುದು ಪಿಳ್ಳೆ ನೆವ ಅಷ್ಟೇ. ಸಿಗುವ ಸಮಯವನ್ನು ಟಿವಿ, ಕಂಪ್ಯೂಟರ್‌ಗೆ ಕೊಟ್ಟು ಬಿಟ್ಟರೆ ಮತ್ತೆ ಸಮಯ ಸಿಗಬೇಕು ಎಲ್ಲಿಂದ?

ನಾನು ಹೇಳ ಹೊರಟದ್ದು ಇಂದಿನ ಇಂತಹ ಗಜಿಬಿಜಿ ಬದುಕಿನ ಬಗ್ಗೆ. ಈಗ ನಮ್ಮ ಮಕ್ಕಳಿಗಂತೂ ಓದು ಬಲು ದೂರವಾಗಿಬಿಟ್ಟಿದೆ. ಕನ್ನಡ ಬರಹಗಾರರ ಬಗ್ಗೆ ಒಂದಾದರೂ ಪ್ರಶ್ನೆಗೆ ಅವರು ಉತ್ತರಿಸಿದರೆ, ಅದೇ ಬಹು ದೊಡ್ಡ ಸಮಾಧಾನ ಎಂಬಂತಾಗಿದೆ. ಟಿವಿ ಒಂದು ರೀತಿಯಲ್ಲಿ ನಿಯಮಿತವಾಗಿ ನಮ್ಮೊಳಗಿನ ಬದಲಾವಣೆಗೆ ಕಾರಣವಾಗಿದ್ದರೆ, ಇಂದು ಕಂಪ್ಯೂಟರ್ ಮತ್ತು ಆ ಮೂಲಕವಾಗಿ ಇಂಟರ್ ನೆಟ್, ಮತ್ತೂ ಮುಂದೆ ಯೋಚಿಸಿದರೆ ಫೇಸ್ ಬುಕ್ ಗಳು ಇನ್ನಿಲ್ಲದಂತೆ ನಮ್ಮ ಬದುಕಿನ ಅಮೂಲ್ಯ ಸಮಯವನ್ನು ತಿನ್ನುತ್ತಿವೆ. ನೀವು ಫೇಸ್ ಬುಕ್‌ನಲ್ಲಿರುವ ಹೆಚ್ಚಿನ ಸ್ನೇಹಿತರನ್ನು ಕಛೇರಿಯಲ್ಲಿ ಗಮನಿಸಿದರೆ, ಅವರ ಕಂಪ್ಯೂಟರ್ ನಲ್ಲಿ ಫೇಸ್ ಬುಕ್ ಯಾವಾಗಲೂ ತೆರೆದುಕೊಂಡಿರುತ್ತದೆ. ಒಮ್ಮೊಮ್ಮೆ ನೀವು ಫೆಸ್ ಬುಕ್ ತೆರೆದಿರಿ ಎಂದರೆ, ನಿಮಗಿಷ್ಟ ಇದ್ದೋ, ಇಲ್ಲದೆಯೋ ಚಾಟ್ ಆರಂಭವಾದರೆ ಅದು ಘಂಟೆಗಟ್ಟಲೇ ಮುಂದುವರಿಯುವ ಅಪಾಯವಿರುತ್ತದೆ. ಇಷ್ಟಕ್ಕೇ ಸೀಮಿತವಾಗದೇ, ಇದು ಅನೇಕ ಸಲ, ಸಂಬಂಧದ ದಿಕ್ಕನ್ನೇ ಬದಲಾಯಿಸಿ ಬಿಡುವ ದುರಂತವಿರುತ್ತದೆ. ಇತ್ತೀಚೆಗೆ ಓದಿದ ಘಟನೆ ಈ ಕ್ಷಣದಲ್ಲಿ ನೆನಾಪಾಗುತ್ತದೆ. ಓರ್ವ ಯುವಕ ಫೇಸ್ ಬುಕ್‌ನಲ್ಲಿ ಯುವತಿಯೋರ್ವಳೊಂದಿಗೆ ಸ್ನೇಹ ಗಳಿಸುತ್ತಾನೆ. ಅವರ ಚಾಟ್ ಇಬ್ಬರನ್ನೂ ಪ್ರೇಮಿಸುವ ತನಕ ಒಯ್ಯುತ್ತದೆ. ಫೆಸ್ ಬುಕ್‌ನ ಯುವತಿಯ ಫೋಟೋ ನೋಡಿದ ಯುವಕ ಆಕೆಯನ್ನೇ ಕಲ್ಪಿಸಿಕೊಂಡಡು, ಕೊನೆಗೂ ಒಂದು ದಿನ ಇಬ್ಬರೂ ಬೇಟಿಯ ತೀರ್ಮಾನ ಮಾಡುತ್ತಾರೆ. ಅಂತೆಯೇ ಒಬ್ಬರನ್ನೊಬ್ಬರು ಸಂಧಿಸಿದಾಗ ಯುವಕನಿಗೆ ಅಚ್ಚರಿ. ಆಕೆ ಫೇಸ್‌ಬುಕ್ ನಲ್ಲಿ ಹಾಕಿದ ಫೋಟೋ ಬೇರೆಯದೇ ಆಗಿದ್ದು, ನೋಡಲು ಅಷ್ಟೇನೂ ಸುಂದರಿ ಅಲ್ಲ ಎಂದು ತಿಳಿದ ಆತ ಆಕೆಯನ್ನು ಇರಿದು ಕೊಲ್ಲುತ್ತಾನೆ ಮತ್ತು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ...! ಬೇಕಾ ಈ ದುರಂತ??

ಫೇಸ್ ಬುಕ್ ಕಮೆಂಟ್ ಗಳದ್ದೇ ಮತ್ತೊಂದು ಕಥೆ. ಸದ್ಯಕ್ಕೆ ಇಲ್ಲಿ ಯಾವುದೇ ನೀತಿ ಸಂಹಿತೆ ಇಲ್ಲ. ಯಾರು ಯಾರನ್ನು ಹೇಗೆ ಬೇಕಾದರೂ ಬಯ್ಯಬಹುದು ಎಂಬುದು ಅಘೋಷಿತ ನಿಯಮ.  ಈಗ ಚುನಾವಣೆಯ ಪರ್ವ. ಅನೇಕ 'ಬುದ್ದಿಜೀವಿ'ಗಳು ಈ ಮಾಧ್ಯಮದ ಮೂಲಕ, ಅನೇಕ ನಾಯಕರಿಗೆ ಬಾಯಿಗೆ ಬಂದಂತೆ ಬಯ್ದು ಚಪಲ ತೀರಿಸಕೊಳ್ಳುತ್ತಿದ್ದಾರೆ. ತನ್ನ ಕಾಲ ಕೆಳಗಿನ ಹೇಸಿಗೆ ಇವರಿಗೆ ಕಾಣಿಸದೇ, ಬೇರೆಯರ ಹುಳುಕನ್ನು ಅದಕ್ಕೆ ಕೈಕಾಲು ಸೇರಿಸಿ ವರ್ಣಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಒಂದು ಮನೆಯೊಳಗೆ ಕಾಲಿಟ್ಟರೆ, ಅಲ್ಲಿ ಈಗಷ್ಟೇ ಅ ಆ ಕಲಿಯುವ ಮಗುವಿನಿಂದ ಹಿಡಿದು ಅತೀ ಹಿರಿಯನ ತನಕೂ, ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಮುಂದೆ ಕೀಲಿಸಿಕೊಂಡಿರುತ್ತಾರೆ. ಎಲ್ಲರದ್ದೂ ಫೇಸ್ ಬುಕ್ ಪ್ರಪಂಚ. ಅದೊಂದು ಇಂದಿನ ವರ್ಣ ಮಯ ಬದುಕೇ ಆಗಿಬಿಟ್ಟಿದೆ. 

ಹಾಗೆಂದು ಇದು ಹೀಗೆಯೇ ಕೆಟ್ಟದ್ದು ಎಂಬುದು ಖಂಡಿತ ನನ್ನ ವಾದವಲ್ಲ. ಇದೇ ಫೇಸ್ ಬುಕ್ ಮೂಲಕ ಅದೆಷ್ಟೋ ಒಳ್ಳೆಯ ಕೆಲಸಗಳಾಗಿದ್ದು ನಾನೂ ಗಮನಿಸಿದ್ದೇನೆ. ಅನೇಕ ಸಮಾನ ಮನಸ್ಕರು ಒಂದಾಗಿ, ಸಾಮಾಜಿಕ ಕಾಳಜಿ ಮೆರೆದ ಉದಾರಹರಣೆಗಳಿವೆ. ಅನೇಕ ಸೋಶಲ್ ನೆಟ್ ವರ್ಕ್ ತಂಡಗಳು ಸಮಾಜದ ಒಳಿತಿಗಾಗಿ, (ಉದಾ:- ಏಡ್ಸ್ ಜಾಗೃತಿ, ಅನಾಥ ಮಕ್ಕಳ ಕಲ್ಯಾಣ, ಸಾಹಿತ್ಯಿಕವಾಗಿ ಗುಂಪು ರಚನೆ) ಶ್ರಮಿಸಲೂ ಇದೇ ಫೇಸ್ ಬುಕ್ ಕಾರಣವಾಗಿದೆ. ಆದರೆ ಇಲ್ಲಿ ಒಳಿತು ಕೆಡುಕುಗಳ ವಿಮರ್ಶೆಗೊಳಗಾಗದೇ,ಅದನ್ನೇ ಒಂದು ಗೀಳಾಗಿ ಹಚ್ಚಿಕೊಂಡು ಹಾಳಾಗುವ ವರ್ಗ ದೊಡ್ಡದಿದೆ. ಅದು ಖೇದಕರ ಅಷ್ಟೇ.

ಇನ್ನು ಇತ್ತೀಚೆಗೆ ಮನೆಯೊಳ ಹೊಕ್ಕರೆ ರಾತ್ರಿ ೧೧ರ ತನಕ ಊಟ-ನೀರಿಲ್ಲದಂತೆ ಮಾಡುತ್ತಿರುವುದು ಐಪಿಎಲ್. ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ಒಂದು ರಂಗ ಪ್ರವೇಶ ಇತ್ತು. ಅದಕ್ಕೆ ಬರುವಂತೆ ನಾನು ಓರ್ವ ಸ್ನೇಹಿತರಲ್ಲಿ ವಿನಂತಿ ಮಾಡಿದೆ. ಎಷ್ಟು ಘಂಟೆಗೆ ಅಂದರು. ಸಂಜೆ ೫.೩೦ಕ್ಕೆ ಅಂದೆ. ತಕ್ಷಣ ಅವರೆಂದರು, ಇಲ್ಲ ಬರಲಾಗದು, ಐಪಿಎಲ್ ಮ್ಯಾಚ್ ನೋಡಬೇಕು ಎಂದರು. ಇದು ಐಪಿಎಲ್ ಮಾಡಿದ ಪ್ರಭಾವ. ನಮ್ಮೊಳಗಿನ ಹುಚ್ಚನ್ನು ಇದು ಎಷ್ಟರ ಮಟ್ಟಿಗೆ ಮೂರ್ಖರನ್ನಾಗಿಸಿದೆ ಎಂದರೆ, ಮನೆಯೊಳಗೆ ಸಹಜವಾಗಿ ಆಗಬೇಕಾಗುವ ಊಟ-ತಿಂಡಿಗಳ ಸಮಯವನ್ನೂ ಇದು ತಿಂದು ಹಾಕುತ್ತಿದೆ. ಅಥವಾ ಮನೆಯೊಳಗೆ ಯಾವುದಾದರೂ ಬಂಧು ಬರಬೇಕೆಂದಿದ್ದರೆ ಮ್ಯಾಚ್ ಆರಂಭಕ್ಕಿಂತಲೂ ಮುಂಚೆ ಬಂದು ಹೋದರೆ ಸಾಕೆಂಬ ಮನ ಸ್ಥಿತಿಗೂ ನಮ್ಮನ್ನು ತಳ್ಳಿಬಿಟ್ಟಿದೆ. 

ಇಂದು ನೀವು ಯಾರಲ್ಲೇ ಕೇಳಿ. ಅಯ್ಯೋ ಪುರುಸೊತ್ತೇ ಇಲ್ಲ ಎಂಬ ಉದ್ಘಾರ ಸಾಮಾನ್ಯವಾಗಿರುತ್ತದೆ. ದುರಂತವೆಂದರೆ ಇವರ ಹೆಚ್ಚಿನ ಸಮಯವನ್ನು ತಿನ್ನುವುದು ಫೆಸ್ ಬುಕ್, ವಾಟ್ಸ್ ಆಪ್, ಟಿವಿಯಂತಹ 'ಜೀವನ'ಗಳು!! ಈ ಮೂಲಕ ನಾವಿಂದು ಸ್ನೇಹಿತರನ್ನು, ಬಂಧುಗಳನ್ನು, ನೆರೆಹೊರೆಯವರನ್ನು......ಮನೆಯವರನ್ನೂ ಕಳೆದುಕೊಳ್ಳುತ್ತೇವೆ.

ನಾವು ಯೋಚಿಸಿ ಎಲ್ಲಕ್ಕೂ ಒಂದು ಮಿತಿ ಹಾಕಿಕೊಳ್ಳಬೇಡವೇ..??

Monday 21 April 2014

ಚುನಾವಣೆ ಎಂಬ ಮಳೆ ನಿಂತ ಮೇಲೆ.....

ಆ ಮಹಿಳೆಗೂ ಚುನಾವಣೆಗೂ ಅಷ್ಟಕ್ಕಷ್ಟೇ. ರಾಜಕಾರಣವನ್ನು ಬಯ್ಯುವುದು, ಚುನಾವಣೆ ಬಹಿಷ್ಕಾರ ಹಾಕುತ್ತೇನೆಂದು ಪ್ರತೀ ಬಾರಿಯೂ ಕುಳಿತುಕೊಳ್ಳುವುದು ಆಕೆಯ ಹವ್ಯಾಸ. ಈ ಸಲವೂ ಸಿಕ್ಕಿದಾಗ ಅದನ್ನೇ ಹೇಳಿದ್ದರು. ಮತದಾನ ಪವಿತ್ರದಾನ, ಅದೂ ಇದೂ ಎಂಬ ನನ್ನ ಭಾಷಣ ಆಕೆಯನ್ನು ಬದಲಾಯಿಸಲೇ ಇಲ್ಲ. ...ಈ ಬಾರಿಯ ನನ್ನ 'ಪ್ರದಕ್ಷಿಣೆ'ಯ ಲೇಖನ.... 


ಆರ್ಭಟದ ಮಳೆ ಇದೀಗ ನಿಂತ ಅನುಭವ-ನಮ್ಮ ಕರ್ನಾಟಕಕ್ಕೆ.

ಮಹಾ ಚುನಾವಣೆ ಮುಗಿದಿದೆ. ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಗೆಯಲ್ಲಿ ಭದ್ರವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದರೂ, ವಾಸ್ತವವಾಗಿ ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವುದು  ಮತದಾರನ ಹಣೆ ಬರಹವೇ ಎನ್ನಬೇಕಾಗುತ್ತದೆ. ಮುಂದಿನ ಚುನಾವಣೆಯ ತನಕ ಇನ್ನು ಮತದಾರ ಕೇವಲ ಒಬ್ಬ ಮೂಕ ಪ್ರೇಕ್ಷಕ-ಅದಂತೂ ಸತ್ಯ.

ಈ ಸಲದ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಬೇಕು ಎಂಬುದು ಚುನಾವಣಾ ಆಯೋಗದ ಕಾಳಜಿಯಾಗಿತ್ತು. ಅದರ ದೃಷ್ಟಿ ಮುಖ್ಯವಾಗಿ ಮೂಲ ಭೂತ ಸೌಕರ್ಯ ವಂಚಿತ ಗ್ರಾಮೀಣ ಭಾಗದ ಜನರಾಗಿದ್ದರು. ಹಾಗೆಂದೇ ಚುನಾವಣಾ ಆಯೋಗ, ಮತದಾನ ಜಾಗೃತಿಯನ್ನು ಅಮೂಲಾಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಂಡಿತ್ತು. ಅಂತೂ ಚುನಾವಣೆ ಮುಗಿದು ನೋಡುವಾಗ, ಆಯೋಗಕ್ಕೆ ನಿಜಕ್ಕೂ ಸಾರ್ಥಕ್ಯದ ಭಾವ. ಹೆಚ್ಚಿನ ಮತದಾರ ಮತಗಟ್ಟೆಗೆ ಬಂದಿದ್ದ. ಆದರೆ...!!

ಕೂಲಂಕುಷವಾಗಿ ಗಮನಿಸಿದರೆ ಚುನಾವಣಾ ಆಯೋಗಕ್ಕೆ ಕೊಂಚ ನಿರಾಸೆಯಾಗಿದೆ. ಯಾವ ಗ್ರಾಮೀಣ ಪ್ರದೇಶದ ಬಗ್ಗೆ ಆಯೋಗ ಅಭಿಯಾನವನ್ನು ಕೈಗೊಂಡಿತ್ತೋ, ಅಲ್ಲಿ ಜನ ಮತ ಹಾಕಿದ್ದರು. ಆದರೆ ಸುಶಿಕ್ಷಿತರು, ಅನುಕೂಲಸ್ಥರು ಎಂದಿದ್ದರೂ ಮತ ಹಾಕುತ್ತಾರೆ ಎಂಬ ಆಯೋಗದ ನಂಬುಗೆಗೆ ಹೊಡೆತ ಬಿದ್ದಿದೆ. ದುರಂತವೆಂದರೆ ಬೆಂಗಳೂರಿನಂತ ನಗರ ಪ್ರದೇಶದ 'ಸುಶಿಕ್ಷಿತ'ರೆಂಬವರು ಮತ ಹಾಕಲೇ ಇಲ್ಲ. ಎರಡು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕೇವಲ ೫೫ಶೇಕಡಾವನ್ನೂ ದಾಟಲಿಲ್ಲ!!.  ಮನೆಯ ಮುಂದೆ ಮತಗಟ್ಟೆ, ಮತದಾನದ ಮಹತ್ವದ ಅರಿವು, ಓಡಾಡಲು ವಾಹನ...ಎಲ್ಲವೂ ಇದ್ದು ನಗರದ ಮತದಾರ ಮನೆ ಬಿಟ್ಟು ಹೊರ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಸುಶಿಕ್ಷಿತ ವರ್ಗದ ಒಂದೆರಡು ಮಾತುಗಳು ನೆನಪಾಗುತ್ತದೆ...

ಆತ ಸರಕಾರಿ ಪೋಷಿತ ಸಂಸ್ಥೆಯೊಂದರ ಉನ್ನತ ವರ್ಗದ ನೌಕರ. ಮತದಾನದ ದಿನ ಅವರ ಮನೆಗೆ ಹೋಗಿದ್ದೆ. ಮಂಗಳೂರಿನಿಂದ ೧೨೫ ಕಿಮೀ ದೂರದ ನನ್ನೂರಿಗೆ ಹೋಗಿ, ಮತ ಚಲಾಯಿಸಿ ಬಂದೆ ಎಂದುದನ್ನು ಕೇಳಿದ ಆತ, ಅಚ್ಚರಿ ವ್ಯಕ್ತ ಪಡಿಸಿದರು. ನೀವು ಮತದಾನಕ್ಕೆ ಹೋಗುವುದಿಲ್ಲವೇ ಎಂದು ಕೇಳಿದೆ. 'ಬೇರೆ ಕೆಲಸ ಇಲ್ವಾ. ಯಾರಿಗೇ ಮತ ಹಾಕಿದರೂ ಅಷ್ಟೇ. ಎಲ್ಲರೂ ಕಳ್ಳರೇ' ಎಂಬುದು ಅವರ ಉತ್ತರವಾಗಿತ್ತು.!. ನೀವು ನಂಬಲಿಕ್ಕಿಲ್ಲ, ಅವರ ಮನೆ ಎದುರಿಗೇ   ರಾಜಕೀಯ ಪಾರ್ಟಿಒಂದರ  ಬೂತ್ ಇತ್ತು. ಹತ್ತು ಹೆಜ್ಜೆ ನಡೆದರೆ ಮತ ಗಟ್ಟೆ ಇತ್ತು. ನಿಮಗೆ ಯಾರೂ ಇಷ್ಟವಿಲ್ಲವೆಂದಾದರೆ 'ನೋಟಾ'ವನ್ನಾದರೂ ಒತ್ತಿ ಬನ್ನಿ ಎಂದೆ. ಒಂದಷ್ಟು ಹೇಳಿದ ನಂತರವೂ ಆ ವ್ಯಕ್ತಿ ಮತಗಟ್ಟೆ ಬಳಿ ಹೋಗಲೇ ಇಲ್ಲ!. ಮೊದಲೇ ಹೇಳಿದ್ದಂತೆ, ಆತ ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರ ನೌಕರ, ಸುಶಿಕ್ಷಿತ ಮತ್ತು ಅನುಕೂಲಸ್ಥ...ಆದರೂ ಹೀಗೆ.

ಇನ್ನೊಂದು ಉದಾಹರಣೆಯೂ ಸ್ವಾರಸ್ಯಕರವಾಗಿದೆ. ಆ ಮಹಿಳೆಗೂ ಚುನಾವಣೆಗೂ ಅಷ್ಟಕ್ಕಷ್ಟೇ. ರಾಜಕಾರಣವನ್ನು ಬಯ್ಯುವುದು, ಚುನಾವಣೆ ಬಹಿಷ್ಕಾರ ಹಾಕುತ್ತೇನೆಂದು ಪ್ರತೀ ಬಾರಿಯೂ ಕುಳಿತುಕೊಳ್ಳುವುದು ಆಕೆಯ ಹವ್ಯಾಸ. ಈ ಸಲವೂ ಸಿಕ್ಕಿದಾಗ ಅದನ್ನೇ ಹೇಳಿದ್ದರು. ಮತದಾನ ಪವಿತ್ರದಾನ, ಅದೂ ಇದೂ ಎಂಬ ನನ್ನ ಭಾಷಣ ಆಕೆಯನ್ನು ಬದಲಾಯಿಸಲೇ ಇಲ್ಲ. ಚುನಾವಣೆ ಮುಗಿದ ನಂತರ ಒಮ್ಮೆ ಸಿಕ್ಕಾಕೆ, ತನ್ನ ಬೆರಳ ಶಾಯಿಯ ಗುರುತು ತೋರಿಸಿದರು. ಸಂತಸ ಮತ್ತು ಅಚ್ಚರಿಗಳೆರಡೂ ಒಟ್ಟಿಗೇ ಆದುವು. ವೋಟ್ ಹಾಕಿದ್ದಕ್ಕೆ ಧನ್ಯವಾದ, ಆದರೆ ನೀವು ಬದಲಾದ್ದು.....? ಎಂದೆ. ಅದಕ್ಕಾಕೆ ಕೊಟ್ಟ ಉತ್ತರ ಗಮನಾರ್ಹವಾಗಿತ್ತು. 'ಬೆಳಗ್ಗೆಯಿಂದ ಟಿವಿ ಹಾಕಿಕೊಂಡು ರಜಾದ ಮಜಾ ಸವಿಯುತ್ತಿದ್ದೆ. ಸುದ್ದಿವಾಹಿನಿಗಳಲ್ಲಿ ವೋಟ್ ಹಾಕಿದವರನ್ನೆಲ್ಲಾ ತೋರಿಸುತ್ತಿದ್ದರು. ಕೈ ಕಾಲಿಲ್ಲದವು, ವಯಸ್ಸಾದವರು, ನಡೆಯಲೂ ಆಗದವರು ಕಷ್ಟ ಪಟ್ಟು ಮತಗಟ್ಟೆಗೆ ಬಂದು ಮತ ಚಲಾಯಿಸುವುದು ನೋಡಿ ಬೇಜಾರಾಯಿತು!. ಎಲ್ಲಾ ಸರಿ ಇದ್ದೂ, ನಮ್ಮಂತವರು ಮನೆಯಲ್ಲಿ ಕಾಲು ಚಾಚಿ ಕುಳಿತುಕೊಳ್ಳುವುದು ನಾಚಿಕೆ ತರಿಸಿತು. ಕೊನೆಗೂ ಕೊನೇ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಮತದಾನ ಮಾಡಿಬಿಟ್ಟೆ ಎಂದ ಮಹಿಳೆಯನ್ನೇ ಅಚ್ಚರಿಯಿಂದ ನೋಡಿದೆ!!. ಶಹಬ್ಬಾಸ್ ಅಂದೆ-ಆಕೆಗಲ್ಲ, ಆಕೆಯನ್ನು ಬದಲಾಯಿಸಿದ ನಮ್ಮ ಇಂದಿನ ವ್ಯವಸ್ಥೆಗೆ.

ಬಹುಷ: ನಮ್ಮ ನಗರ ಪ್ರದೇಶದ ಜನರನ್ನು ಮತ್ತು ಮೇಲೆ ನಾನು ಹೇಳಿದ ಮತದಾನ ವಿರೋಧಿ ವ್ಯಕ್ತಿಯಂತವರಿಗೆ ಇಂತಹ ವಿಷಯಗಳನ್ನು ಮನನ ಮಾಡಬೇಕಾದ ಜರೂರು ಇಂದು ಇದೆ. ಚುನಾವಣೆಯ ದಿನ ಬೆಂಗಳೂರಿನ ಬಂಧು ಒಬ್ಬರಿಗೆ ಫೋನ್ ಮಾಡಿದ್ದೆ. ಲೋಕಾಭಿರಾಮ ಮಾತಿನೊಂದಿಗೆ ನಾನು ಊರಿಗೆ ಹೋಗಿ ಮತ ಚಲಾಯಿಸಿ ಬಂದ ವಿಷಯ ಹೇಳಿದೆ. ಅದಕ್ಕವರು ನಮ್ಮ ಬೆಂಗಳೂರಿನ ಜನ ನೋಡಿ ಮಾರಾಯ್ರೇ, ನೀವು ೧೨೫ ಕಿ ಮೀ ದೂರ ಹೋಗಿ ಮತ ಹಾಕಿ ಬಂದಿರಿ, ಇವರು ಮನೆ ಎದುರಿನ ಮತಗಟ್ಟೆಗೇ ಹೋಗಲಿಲ್ಲ, ಎಷ್ಟು ನಾಚಿಕೆ ಗೇಡಿನ ವಿಷಯ ಎನ್ನುತ್ತಿದ್ದರು. ಮತದಾನದ ನಂತರ ಓದಿದ ಒಂದು ಸುದ್ದಿ ಎಂದರೆ, ಓರ್ವ ದಂಪತಿ, ದುಬೈನಿಂದ ಮತದಾನಕ್ಕಾಗಿ ಎರಡು ಲಕ್ಷ ರೂಪಾಯಿ ವ್ಯಯಿಸಿ, ಊರಿಗೆ ಒಂದು ದಿನದ ಮಟ್ಟಿಗೆ ಬಂದು ಮತ ಚಲಾಯಿಸಿ ಹೋಗಿದ್ದರು!. ಇಂತಹ ಘಟನೆಗಳು, 'ಮತದಾನ ವಿರೋಧಿ' ಮನಸ್ಸುಗಳಿಗೆ ಪಾಠ ಕಲಿಸಬೇಕು.

ಕಳೆದ ಲೇಖನದಲ್ಲಿ ಚುನಾವಣೆಯ ವೇಳೆಗೆ ಬೈಗುಳಗಳ ಬಗ್ಗೆ ಬರೆದಿದ್ದೆ. ಫೇಸ್ ಬುಕ್ ಮತ್ತು ಅಂತರಜಾಲ ಮಾಧ್ಯಮ ಇಂದು ಬಹು ಪ್ರಭಾವಿ ಮಾಧ್ಯಮವಾಗಿದೆ. ಫೇಸ್ ಬುಕ್ ಮಾತ್ರ, ಎಷ್ಟು ಪ್ರಭಾವಿಯೋ ಅಷ್ಟೇ ಅಪಾಯಕಾರಿ ಕೂಡಾ. ಚುನಾವಣೆಯ ವಿಷಯಕ್ಕೆ ಬಂದರೆ ಕೆಲವರ 'ಪೋಸ್ಟ್'ಗಳನ್ನು ನಿಯಮಿತವಾಗಿ ಗಮನಿಸಿದ್ದೇನೆ. ಮೋದಿ, ರಾಹುಲ್ ಮುಂತಾದ ವ್ಯಕ್ತಿಗಳಿಗೆ ಬಯ್ಯುತ್ತಿರುವಾಗ, ಭಾಷೆ, ಸಂಸ್ಕೃತಿ ಎಲ್ಲವನ್ನೂ ತೂರಿ ಬಿಟ್ಟ ಬುದ್ದಿಜೀವಿಗಳನ್ನು ಗಮನಿಸಿದ್ದೇನೆ. ಅಸಭ್ಯ ಸಂಸ್ಕೃತಿಯನ್ನು ಫೇಸ್ ಬುಕ್‌ಮೂಲಕ ಬೆಳೆಸಿದ ಇಂತಹ ಬುದ್ದಿ ಜೀವಿಗಳು, ತಾವೇ ಭಾರತದ ಆಡಳಿತದ ನಿರ್ಮಾತೃರು ಎಂಬಂತೆ ಬರೆದುದನ್ನು ಗಮನಿಸಿದ್ದೇನೆ. ತಮ್ಮ ಬಾಯಿಗೆ ಬಂದಂತೆ ಬೈಗುಳದ ಮಳೆ ಸುರಿಸುವ ರಾಜಕಾರಣಿಗಳೂ ಇವರ ಮುಂದೆ ತೀರಾ ಕನಿಷ್ಠರಾಗಿ ಹೋಗಿದ್ದಾರೆ!!. ಆದರೆ ರಾಜಕಾರಣಿಗೆ ತೀರಾ ಕನಿಷ್ಠ ಮಟ್ಟಕ್ಕಿಳಿದರೆ   ನೀತಿ ಸಂಹಿತೆಯ ಬಿಸಿ ಕಾದಿರುತ್ತದೆ. ಆದರೆ ಈ ಸಾಮಾಜಿಕ ಜಾಲತಾಣದ ಪೋಸ್ಟ್ ಗಳಿಗೆ ಯಾವುದೇ ನೀತಿ ಸಂಹಿತೆ ಈ ಚುನಾವಣೆಯಲ್ಲಿ ಜಾರಿಗೆ ಬಂದಿಲ್ಲ. ಹಾಗೆಂದೇ ಕೆಲವು ವ್ಯವಸ್ಥಿತ ವರ್ಗಗಳು ಇಲ್ಲಿ ಹೇಗೆ ಬೇಕೋ ಹಾಗೆ, ಏನು ಬೇಕೋ ಅದನ್ನು ಪೋಸ್ಟ್ ಮಾಡಿ, ತೀರಾ ಅಸಭ್ಯ ಮತ್ತು ಅಸಂಸ್ಕೃತರಂತೆ ವರ್ತಿಸುವ ಮೂಲಕ ತಮ್ಮ ಅನಾಗರೀಕತೆಯನ್ನು ಪ್ರದರ್ಶಿಸಿದ್ದಾರೆ. 

ಬಹುಶ ಚುನಾವಣಾ ಆಯೋಗಕ್ಕೆ ಇನ್ನು ಮುಂದಿನ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳನ್ನೂ ಕಾಯುವುದು ಒಂದು ಮಹತ್ತರ ಜವಾಬ್ದಾರಿಯಾಗಬಹುದು. ನರಹಂತಕ, ರಾಕ್ಷಸ, ರಕ್ತ ದಾಹಿ, ಧೂರ್ತ...ಇಂತಹ ಮತ್ತು ಇದಕ್ಕಿಂತಲೂ ಕೆಳ ಮಟ್ಟದ ಬೈಗುಳಗಳು ಫೇಸ್ ಬುಕ್ ನಲ್ಲಿ ರಾರಾಜಿಸಿವೆ. ಇದನ್ನೆಲ್ಲಾ ಪೋಸ್ಟ್ ಮಾಡಿದವರು ಯಾರೆಂದು ಗಮನಿಸಿದರೆ ಅಚ್ಚರಿಯಾಗಿದ್ದಿದೆ.  ಸಮಾಜದಲ್ಲಿ  ಪೃತಿಷ್ಠಿತರೆನಿಸಿಕೊಂಡವರು, ಅದಕ್ಕೂ ಮುಖ್ಯವಾಗಿ ಬುದ್ದಿಜೀವಿಗಳೆನಿಸಿಕೊಂಡವರು, ಇನ್ನು ಮುಂದೆ ಯೋಚಿಸಿದರೆ ತಾವೂ ಅಂತಾದ್ದೇ ವರ್ಗದಲ್ಲಿದ್ದುಕೊಂಡು ಮುಖಕ್ಕೆ ಈಗ ಸಭ್ಯತೆಯ ಸೋಗು ಹಾಕಿಕೊಂಡವರು!!. ಇದನ್ನೆಲ್ಲಾ ಕಂಡಾಗ ನಿಜಕ್ಕೂ ಅಚ್ಚರಿಯಾಗಿದ್ದು ಸುಳ್ಳಲ್ಲ. ನಾನಿಲ್ಲಿ ಉದಾಹರಿಸಿದ ಕೆಲವು ಶಬ್ದಗಳು, ಅವರ ದೃಷ್ಟಿಯಲ್ಲಿ ಸುಸಂಸ್ಕೃತ ಅನಿಸಿಕೊಂಡಿದ್ದಿರಬಹುದು-ಯಾಕೆಂದರೆ ಇದಕ್ಕೂ ನಿಕೃಷ್ಟವಾದ ಪೋಸ್ಟ್ ಗಳನ್ನು ಅವರು ಮಾಡಿದ್ದರು.  ಇಂತವರು ಮಾಡುವ ಪೋಸ್ಟ್ ಗಳಿಗೆ ತಮ್ಮ ಕಮೆಂಟ್ ಗಳ ಮೂಲಕ ಮತ್ತಷ್ಟು ಕೀಳು ಅಭಿರುಚಿಯನ್ನು ಪ್ರದರ್ಶಿಸುವ ಮತ್ತೊಂದು ವರ್ಗ. ಸ್ವಾರಸ್ಯವೆಂದರೆ ಹೀಗೆ ಪೋಸ್ಟ್ ಮಾಡುವ ಮತ್ತು ಕಮೆಂಟ್ ಹಾಕುವ ವ್ಯಕ್ತಿಗಳು ಪುನರಪಿ ಅದನ್ನೇ ಮಾಡುತ್ತಿದ್ದರು. 
ಇದನ್ನೆಲ್ಲಾ ನಮ್ಮ ಸುಶಿಕ್ಷಿತ ಎಂದು ಕರೆಸಿಕೊಳ್ಳುವ ಜನರ ಮತ್ತು ಅವರ ಸಾಮಾಜಿಕ ಜವಾಬ್ದಾರಿಗಳನ್ನು ಎಚ್ಚರಿಸು ಉದ್ದೇಶದಿಂದ ಹೇಳುತ್ತಿದ್ದೇನೆ. ಇದನ್ನೇ ಅವರು ಮತ ಗಟ್ಟೆಗೆ ಜನರನ್ನು ತರಲು,  ಮತದಾನದ  ಜಾಗೃತಿ ಬೆಳೆಸಲು, ಉತ್ತಮ ಆಯ್ಕೆಗೆ ಸಭ್ಯಮಾರ್ಗ ಅನುಕರಿಸಲು, ಉಪಯೋಗಿಸಿಕೊಂಡಿದ್ದರೆ ಅವರೂ ಸಮಾಜದ ದೃಷ್ಟಿಯಲ್ಲಿ ಶ್ಲಾಘನಾರ್ಹರಾಗುತ್ತಿದ್ದರು. ಮುಂದೆ ಆ ಆಶಯದಲ್ಲಿರೋಣ.

ಮಂಗಳೂರು ಸಮೀಪದ ಮತ ಗಟ್ಟೆಯೊಂದರಲ್ಲಿ ಮತದಾನ ಮಾಡಿದ ಬಳಿಕ ಮಹಿಳೆಯೊಬ್ಬಳು ಕುಸಿದು ಬಿದ್ದು, ಸತ್ತರು. ತಮ್ಮ ಅಮೂಲ್ಯ ಕರ್ತವ್ಯವನ್ನು ಮಾಡಿ ನಿಧನರಾದ ಆಕೆಯ ಮನೆಗೆ ಓರ್ವ ಅಭ್ಯರ್ಥಿ ಮರುದಿನವೇ ಭೇಟಿಕೊಟ್ಟು ಸಾಂತ್ವನ ಹೇಳಿದರು. ಇದು ರಾಜಕಾರಣಿಗೂ ಇರಬೇಕಾದ ಆದರ್ಶವನ್ನು ತೋರಿಸುತ್ತದೆ. ಚುನಾವಣೆಗೆ ಸಾವಿರಾರು ಸರಕಾರಿ ನೌಕರರು ಶ್ರಮಿಸುತ್ತಾರೆ. ಅನೇಕ ಕಡೆ ಮೂಲ ಭೂತ ಸೌಕರ್ಯಗಳೂ ಇಲ್ಲದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ, ಇಲ್ಲೆಲ್ಲವೂ ನಿಸ್ವಾರ್ಥವಾಗಿ ಮಾಡುವ ಇವರ ಸೇವೆ ಮತ್ತು ಅವರ ಕಷ್ಟವನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಈ ಸಲ, ಕರ್ನಾಟಕದಲ್ಲಿ ಚುನಾವಣಾ ಕರ್ತವ್ಯದ ವೇಳೆ ಹ್ರದಯಾಘಾತದಿಂದ ಸತ್ತವರು ಮೂರಕ್ಕೂ ಹೆಚ್ಚು ಮಂದಿ. ಈ ಬಿರು ಬೇಸಗೆ, ಸೆಖೆಯಲ್ಲಿ ಚುನಾವಣಾ ಕರ್ತವ್ಯದ ನಂತರ ಅನಾರೋಗ್ಯ ಪೀಡಿತರಾದವರ ವಿವರ ಎಲ್ಲೂ ಬರುವುದಿಲ್ಲ. ತಾವು ಗಮನಿಸಿರಬಹುದ, ಚುನಾವಣೆ ಘೋಷಣೆಯಾಗುತ್ತಲೇ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮತ ಚಿಟಿ ನೀಡುವುದು, ಪಟ್ಟಿ ಪರಿಷ್ಕರಣೆ ಮಾಡುವುದು ನೋಡಿದ್ದೇವೆ. ಬೆವರು ಸುರಿಸಿ, ನಡೆಯಲೂ ಆಗದೇ, ಒದ್ದಾಡುತ್ತಾ ನಿಸ್ವಾರ್ಥ ಸೇವೆ ಮಾಡುವುದನ್ನೂ ಗಮನಿಸಿದ್ದೇವೆ. ಆದರೆ ಚುನಾವಣೆ ಮುಗಿಯುತ್ತಲೇ ಇವರೆಲ್ಲರೂ ಮರೆತು ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಯಾಗಲೀ, ಚುನಾವಣಾ ಆಯೋಗವೇ ಆಗಲಿ, ಮತದಾರನೇ ಆಗಲಿ ಅವರಿಗೆ ಕನಿಷ್ಠ ಒಂದು ಧನ್ಯವಾದವನ್ನು ಸಹಾ ಹೇಳದೇ ಕೃತಘ್ನರಾಗುತ್ತಾರೆ!!. ಹೋಗಲಿ ಎಂದರೆ ಸಾಮಾಜಿಕ ಜಾಲತಾಣದ, ಸಮಾಜದ ಸರ್ವವನ್ನೂ ಗ್ರಹಿಸುವ 'ಬುದ್ದಿ ಜೀವಿ'ಕಣ್ಣುಗಳಿಗೂ ಇದೊಂದೂ ಕಾಣುವುದೇ ಇಲ್ಲ!!

ಮತದಾನದಂತಹ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡ ಇಂತಹ ಸಹಸ್ರಾರು ಮನಸುಗಳಿಗೆ ಇದೋ ನಮ್ಮ ಹ್ರದಯತುಂಬಿದ ನಮನ.

Tuesday 1 April 2014

ಭಾರತಾಂಬೆಯೇ ನಿನ್ನ ಮಡಿಲಿಗೆ ಯಾವ ತಾಯಿಯ ಮಗನೋ!!??

ಭಾರತಾಂಬೆಯ ಮಡಿಲಿಗೆ ಯಾರ ಮಕ್ಕಳನ್ನು ನಾಯಕತ್ವ ಕೊಟ್ಟು ಕೂರಿಸುತ್ತಾನೋ ಈ ಪ್ರಬುದ್ಧ ಮತದಾರ ಎಂದು ತಿಳಿಯಲು ಮೇ ೧೭ರ ತನಕ ಕಾಯಬೇಕು. ಅಷ್ಟೇ!! ಜನಪ್ರತಿನಿಧಿಯಲ್ಲಿ ನನ್ನ ಈ ಬಾರಿಯ ಅಂಕಣ 'ಪ್ರದಕ್ಷಿಣೆ'ಯ ಬರಹ.... 


ಣವೀಳ್ಯವನ್ನು ತೆಗೆದುಕೊಂಡ ರಾಜಕೀಯ ಪಕ್ಷಗಳು, ಅಜನ್ಮ ಶತ್ರುಗಳಂತೆ, ಇದ್ದ ಬದ್ದ ಕೆಸರನ್ನೆಲ್ಲಾ ಪರಸ್ಪರರಿಗೆರಚಿಕೊಳ್ಳುತ್ತಾ ದೆಹಲಿಯ ಗದ್ದುಗೆಗಾಗಿ ಹೋರಾಡುತ್ತಿವೆ. ಎಲ್ಲಿ ನೋಡಿದರೂ ಈಗ ಇದೇ ಮಾತು. ಸೋಲು-ಗಲುವಿನ 'ತಮ್ಮ ತಮ್ಮ'ದೇ ಲೆಕ್ಕಾಚಾರದಲ್ಲಿ ಮುಳುಗಿರುವ ನಾಯಕರು, ಅಧಿಕಾರವೊಂದನ್ನೇ ಅಜೆಂಡಾವನ್ನಾಗಿಸಿಕೊಂಡು ಹಗಲಿರುಳು ಒದ್ದಾಡುತ್ತಿದ್ದಾರೆ.

ಒಂದೆಡೆ ಮೈಸುಡುವ ಬಿಸಿಲು-ಸೆಖೆ-ಬೆವರಧಾರೆ. ಇನ್ನೊಂದೆಡೆ ಸಂಪೂರ್ಣ ಕಾವೇರಿಸಿಕೊಂಡಿರುವ ಚುನಾವಣೆ. ಈ ಎರಡರ ನಡುವೆ ಮಾಧ್ಯಮಗಳ ನಿರಂತರ ಬಿಸಿ-ಬಿಸಿ ಒಗ್ಗರಣೆ. ಹೌದು, ಅಖಾಡಾ ಸರ್ವ ಸನ್ನದ್ಧವಾಗಿವೆ, ಹಾಗಾದರೆ ಭಾರತ ಮಾತೆಯ ಮಡಿಲಿಗೆ ಈಗ ಹೊಸ ಪ್ರಧಾನಿಯಾಗಿ ಬರಲಿರುವ ನಾಯಕ, ಯಾವ ತಾಯಿಯ ಮಗ ಎಂಬ ಗೊಂದಲ ಎಲ್ಲರಲ್ಲೂ ಮನೆ ಮಾಡಿದ್ದರೂ, ಕಾಯಲೇ ಬೇಕು-ಮೇ-೧೭ರತನಕ.

ದೇಶದಲ್ಲಿ ಇದು ಸಮ್ಮಿಶ್ರ ಸರಕಾರದ ಯುಗ. ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸ್ಥಾಪಿಸುವ ಪರಂಪರೆ ಆರಂಭವಾದಾಗಿನಿಂದ, ದೆಹಲಿಯ ಗದ್ದುಗೆಗೆ ಏಕ ಪಕ್ಷದ ಅಧಿಪತ್ಯ ಕೊನೆಗೊಂಡಿತ್ತು. ಪ್ರತೀ ಚುನಾವಣೆಯಲ್ಲಿಯೂ ಬಹು ದೊಡ್ಡ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳು ತಾವೇ ಅಧಿಕಾರ ಹಿಡಿಯುತ್ತೇವೆ ಎಂದೇ ಆಖಾಡಕ್ಕಿಳಿದರೂ, ಎರಡೂ ಪಕ್ಷಗಳಲ್ಲೂ ಪ್ರಾದೇಶೀಕ ಪಕ್ಷಗಳ ಬಗೆಗೊಂದು 'ಭಯ' ಇದ್ದೇ ಇರುತ್ತದೆ. ಹಾಗೆಂದೇ ಕಾಂಗ್ರೆಸ್ ಹಾಗೂ ಭಾಜಪಗಳು, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯೊಂದಿಗೇ ಚುನಾವಣೆ ಎದುರಿಸುತ್ತವೆ. ದೆಹಲಿಯ ಗದ್ದುಗೆಯ ಮೇಲೆ ಪ್ರಭಾವ ಬೀರುವಷ್ಟೂ ಪ್ರಾದೇಶಿಕ ಪಕ್ಷಗಳು ಪ್ರಭಾವಿಯಾಗಿವೆ. ಈ ಹಿನ್ನೆಲೆಯಲ್ಲಿ, ಹಿಂದೊಮ್ಮೆ ದೇವೇ ಗೌಡರು ಪ್ರಧಾನಿಯಾದ ಹಾಗೆಯೇ, ತಾವೂ 'ಅದ್ರಷ್ಟವಶಾತ್' ಪ್ರಧಾನಿಯಾಗಬಹುದೆಂಬ ಕನಸು ಕಾಣುವ ಅನೇಕ ನಾಯಕರೂ ಹುಟ್ಟಿಕೊಂಡಿದ್ದಾರೆ.  ಆದರೂ ಈಗ ಚಾಲ್ತಿಯಲ್ಲಿರುವ ಎರಡು ಪ್ರಮುಖ ಹೆಸರುಗಳು-ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ.

 ಸೋನಿಯಾ ಗಾಂಧಿ!. ತನ್ನ ಮನೆಯಂಗಳಕ್ಕೆ ಬಂದಿದ್ದ ಪ್ರಧಾನಿ ಪಟ್ಟವನ್ನು ನಯವಾಗಿ ಹೊರಕಳುಹಿಸುವ ಮೂಲಕ, ಇಡೀ ದೇಶಕ್ಕೇ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದವರು!. ಎರಡು ದಶಕದ ಹಿಂದಿನ ಲೋಕ ಸಭಾ ಚುನಾವಣೆಯಲ್ಲಿ, ಚುನಾವಣೆಗೆ ಮುನ್ನ ಎಂದೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಪರಂಪರೆ ಇಲ್ಲದ ಕಾಂಗ್ರೆಸ್, ಅಲ್ಲಿಯೂ ಸೋನಿಯಾ ನೇತ್ರತ್ವದಲ್ಲಿಯೇ ಚುನಾವಣಾ ಅಖಾಡಕ್ಕಿಳಿದಿತ್ತು. ಎನ್‌ಡಿಎ ವಿರೋಧಿ ಅಲೆಯಿಂದ ಅಂದು ದೆಹಲಿಯ ಗದ್ದುಗೆಗೆ ಸ್ಪಷ್ಟ ಬಹುಮತ ದೊರಕದಾದಾಗ, ಸೋನಿಯಾ ನೇತ್ರತ್ವದ ಕಾಂಗ್ರೆಸ್, ಯುಪಿಎ ಮೂಲಕ ಅಧಿಕಾರ ಹಿಡಿದಾಗ, ಸೋನಿಯಾ ದೇಶದ ಪ್ರಧಾನಿ ಆದರು ಎಂದೇ ಕಾಂಗ್ರೆಸಿಗರು ಸಂತಸ ಪಟ್ಟಿದ್ದರು. ಆದರೆ ಆದದ್ದೇ ಬೇರೆ! ಪ್ರಧಾನಿ ಪದವಿಯನ್ನು ಒಲ್ಲೆ ಎಂದ ಸೋನಿಯಾ, ಅದನ್ನು ಮನ ಮೋಹನ ಸಿಂಗ್ ಅವರ ಮುಡಿಗೇರಿಸಿದರು. ದೇವೇಗೌಡರಿಗೆ ಅನಿರೀಕ್ಷಿತವಾಗಿ ಒದಗಿ ಬಂದಹಾಗೆ, ದೇಶದ ಪ್ರಧಾನಿ ಪಟ್ಟ ಅಂದು ಮನ ಮೋಹನರಿಗೆ ಒಲಿಯಿತು. ಮುಂದಿನದ್ದು ಇತಿಹಾಸ. ಎರಡು ಅವಧಿಗೆ ನಿರಂತರ ಪ್ರಧಾನಿಯಾದ ,ಮನಮೋಹನ ಸಿಂಗ್‌ರು ಮೌನವಾಗಿದ್ದುದೇ ಹೆಚ್ಚು. ಸೋನಿಯಾ ಅವರ ಕ್ರಪೆಯಿಂದ ತಮಗೊದಗಿದ ಪ್ರಧಾನಿ ಹುದ್ದೆಯನ್ನು ಅವರ ಪ್ರಸಾದವೆಂಬಂತೆ ಮೌನವಾಗಿಯೇ ಅನುಭವಿಸಿದ ಮನಮೋಹನ ಸಿಂಗ್, ಎಂದೂ ಸ್ವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳದೇ, ಪ್ರಧಾನಿ ಪದವಿಗೂ  ರಬ್ಬರ್ ಸ್ಟಾಂಪ್ ಲೇಬಲ್ ಹಚ್ಚಿದರು!!. 

ಇನ್ನೂ ಇದೇ ಯೋಚನೆಯಿಂದ ಮುನ್ನಡೆದರೆ ಈ ಸಲ ಕಷ್ಟ ಎಂಬ ಸತ್ಯ ಅರಿತ ಕಾಂಗ್ರೆಸ್, ಈ ಸಲ ಕಾಂಗ್ರೆಸಿಗರು ಕರೆಯುವ 'ಯುವರಾಜ'ನನ್ನು ಆಖಾಡಕ್ಕಿಳಿಸಿದೆ. ಒಂದೆಡೆ ವಿಧಾನ ಸಭಾ ಚುನಾವಣೆಗಳಲ್ಲಿ  ಅಲ್ಲಲ್ಲಿ ಹೊರತು ಪಡಿಸಿದರೆ ಸಾಲು ಸಾಲು ಸೋಲುಗಳೂ ಕಾಂಗ್ರೆಸ್‌ನ್ನು ಹತಾಶೆಗೊಳಪಡಿಸಿದ್ದರೆ, ಮತ್ತೊಂದೆಡೆ ಬಹಳ ಹಿಂದಿನಿಂದಲೇ ಭಾಜಪ ಹಬ್ಬಿಸಿದ ಮೋದಿ ಅಲೆ, ಕಾಂಗ್ರಸ್ಸಿಗರಿಗೆ 'ಏನಾದರೂ', ಮಾಡಬೇಕೆಂಬ ಅನಿವಾರ್ಯತೆಯನ್ನು ಹುಟ್ಟು ಹಾಕಿತ್ತು. ಕೆಲವು ರಾಜ್ಯ ಮಟ್ಟದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಿದ್ದ ಕಾಂಗ್ರೆಸ್‌ಗೆ ತನ್ನ ನೇತ್ರತ್ವದ ಯುಪಿಎ ಕೇಂದ್ರದಲ್ಲಿ ಮಾಡಿದ ಭ್ರಷ್ಟಾಚಾರ ಬೆಟ್ಟದತ್ತೆರಕ್ಕೇರಿದಾಗ ಸಹಜವಾಗಿಯೇ ಇರಿಸು ಮುರುಸಾಗಿತ್ತು.  ಅತ್ತ ಗುಜಾರಾತ್‌ನಲ್ಲಿ ಮಾದರಿ ಆಡಳಿತವನ್ನು ನೀಡಿ, ಕಾಂಗ್ರ್ರೆಸ್ ಅಥವಾ ಇತರ ರಾಜಕೀಯ ಪಕ್ಷಗಳು ಏನೇ ಕೆಸರೆರಚಿದರೂ, ಜನ ಮಾತ್ರ ಮೋದಿಯ ಕೈ ಬಿಡದಿದ್ದ ಸಂಕಟವೂ, ಅದನ್ನೇ ದೇಶಾದ್ಯಂತ ಹೈಟೆಕ್ ಪ್ರಚಾರದ ಮೂಲಕ ಪಸರಿಸಿದ ಭಾಜಪದ ಯೋಜನಾ ಬದ್ಧ ನಡೆಯೂ  ಕಂಗ್ರೆಸ್ಸಿಗೆ ತಲೆನೋವಾಗಿದ್ದು ಸುಳ್ಳಲ್ಲ!

ಇದು ಒಂದೆಡೆಯಾದರೆ, ಮನ ಮೋಹನರಿಗೆ ಈ ಅವಧಿಯೇ ಕೊನೆಯದು, ಮುಂದೆ ಪಕ್ಷ ಗೆದ್ದರೂ ಅವರು ಪ್ರಧಾನಿಯಾಗುವುದಿಲ್ಲ ಎಂಬುದು ಪೂರ್ವ ನಿರ್ಣಯವಾದರೂ, ಮುಂದೆ ಯಾರು ಎಂಬುದನ್ನು ಕಾಂಗ್ರೆಸ್ ಎಲ್ಲಿಯೂ ಹೇಳಲಿಲ್ಲ!. ಈ ಸಲ ಅಧಿಕ್ರತವಾಗಿ ಪ್ರಧಾನಿ ಪದದ ಉಮೇದುವಾರರನ್ನು ಕಾಂಗ್ರೆಸ್ ಸಹಾ ತನ್ನ ಪರಂಪರೆ ಮುರಿದು ಘೋಷಿಸುವ ನಿರೀಕ್ಷೆ ಇತ್ತು. ಅದು ಆಗಲೇ ಇಲ್ಲ. ಹಾಗೆಂದ ಮಾತ್ರಕ್ಕೆ ಅಲ್ಲಿ ಬೇರೆ ಯಾವುದೋ ಉಮೇದುವಾರರಿದ್ದಾರೆ ಎಂಬುದು ಭಾವನೆಯಲ್ಲಿ. ಅಧಿಕೃತ ಘೋಷಣೆ ಆಗಿಲ್ಲ ಅಷ್ಟೇ! ಎಲ್ಲೆಡೆಯಲ್ಲಿಯೂ ಈಗ ರಾಹುಲ್ ನಾಯಕತ್ವದ್ದೇ ಮಾತು-ಅದೇ ಗಾಳಿ.
ರಾಹುಲ್ ಗಾಂಧಿ!. ರಾಜೀವ ಗಾಂಧಿ ದೇಶದ ಚುಕ್ಕಾಣಿ ಹಿಡಿಯುವ ವೇಳೆಯಲ್ಲಿ ಕಾಂಗ್ರೆಸ್ ಜಪಿಸಿದ್ದ ಮಂತ್ರ, ಯುವ ಜನರೇ ದೇಶದ ಆಸ್ತಿ ಎಂಬುದಾಗಿತ್ತು. ಅದಾದ ನಂತರ, ತನ್ನ ಪರಂಪರೆಯಂತೆ 'ವಯೋವೃದ್ದ' ಪರಂಪರೆಯನ್ನು ಮುಂದುವರಿಸಿಕೊಂಡು ಹೋಯಿತು. ಮುಖ್ಯವಾಗಿ ಸೋನಿಯಾ ಗಾಂಧಿಯವರ ಮಾತಿಗೆ ಎದುರಾಡದ ನಾಯಕರನ್ನು ಅದು ಬೆಳೆಸುತ್ತಾ ಹೋಯಿತು. ಇಂದಿನ ಕಾಂಗ್ರೆಸ್‌ನಲ್ಲಿ ಸೋನಿಯಾ ನಿಷ್ಠರು ಮಾತ್ರ ಆಯ ಕಟ್ಟಿನ ಜಾಗದಲ್ಲಿ ಉಳಿಯ ಬಹುದು ಮತ್ತು ಬೇರಾರಿಗೂ ಅಲ್ಲಿ ಸ್ಥಾನವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ. ಹಾಗೆಂದು ತನ್ನ ಮನೆ ಬಾಗಿಲಿಗೆ ಬಂದು, ತಾನೇ ತಿರಸ್ಕರಿಸಿದ್ದ ಪ್ರಧಾನಿ ಪದವಿ ಇನ್ನೂ ತನ್ನ ಮನೆಯಂಗಳದ ಹೊರಗೇ ಉಳಿಯುವುದು ಸೋನಿಯಾಗೆ ಈಗ ಇಷ್ಟವಿಲ್ಲ. ಹಾಗಾಗಿಯೇ ತಾನು ರಾಜಕೀಯವಾಗಿ ಮಗನನ್ನು 'ಸಂಪೂರ್ಣ' ಅಣಿಗೊಳಿಸಿದ್ದೇನೆ ಎಂಬ 'ಸ್ವಯಂತೀರ್ಮಾನ'ಕ್ಕೆ ಬಂದ ಸೋನಿಯಾ, ಅನಧಿಕೃತವಾಗಿ ರಾಹುಲ್ ಪಟ್ಟಾಭಿಷೇಕ ಘೋಷಿಸಿದ್ದಾರೆ!!-ಕಾಂಗ್ರೆಸ್(ಯುಪಿಎ) ಗೆದ್ದರೆ.
ರಾಹುಲ್ ಹೇಗೆ ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟ. ಕೇಂದ್ರ ಸರಕಾರದ ಆಯಕಟ್ಟಿನ ಜಾಗದಲ್ಲಿ ಯಾವುದೇ ಜವಾಬ್ದಾರಿಯುವ ಹುದ್ದೆಯನ್ನು ಇನ್ನೂ ಅನುಭವಿಸಿದ ಅನುಭವವಿಲ್ಲದ ರಾಹುಲ್ ನೇತ್ರತ್ವದಲ್ಲಿ ನಡೆದ ಚುನಾವಣೆಗಳು, ಕಾಂಗ್ರೆಸ್‌ಗೆ ಗೆಲುವಿಗಿಂತ ಹೆಚ್ಚು ಸೋಲನ್ನೇ ತಂದಿವೆ ಎಂಬುದು ಎಲ್ಲರೂ ಹೇಳುವ ಮತ್ತು ಒಪ್ಪುವ ಮಾತು. ಯಾವುದಕ್ಕೂ ಸಮರ್ಥವಾಗಿ ಉತ್ತರಿಸಲು ರಾಹುಲ್ ತಡಕಾಡುತ್ತಾರೆ. ಯಾರೋ ತಯಾರಿಸಿಕೊಟ್ಟ ಭಾಷಣವನ್ನು ಓದಿ, ಮುಜುಗುರಕ್ಕೊಳಗಾಗುತ್ತಾರೆ. ತಮ್ಮದೇ ಪಕ್ಷದ ಮನಮೋಹನರ ಕೆಲವು ನಿರ್ಣಯಗಳಿಗೆ ತಾವೇ ಎದುರಾಡಿ ಮುಜುಗುರದ ಅನೇಕ ಸನ್ನಿವೇಶಗಳಿಗೆ ಕಾರಣರಾಗಿದ್ದಾರೆ. ಸಂದರ್ಶನದ ವೇಳೆಯಲ್ಲಿ ಪೆದ್ದು ಪೆದ್ದಾಗಿ ಉತ್ತರಿಸುತ್ತಾ, ಕಾಂಗ್ರೆಸಿಗರೂ ಮೈ ಪರಚಿಕೊಳ್ಳುವಂತೆ ಮಾಡಿದ್ದಾರೆ. ತಾವು ಭೇಟಿ ಮಾಡಿದ ಕೊಳಚೆಗೇರಿ, ಅಥವಾ ಇತರ ಪ್ರದೇಶದ ಚಿತ್ರಣಗಳನ್ನು ಕೇವಲ ಚುನಾವಣಾ ಪ್ರಚಾರದ ಗಿಮಿಕ್‌ಗಳಿಗೆಂಬಂತೆ ಬಳಸಿಕೊಂಡಿದ್ದಾರೆ. ಎಲ್ಲಕ್ಕಿಂತಲೂ ಭಾಜಪ(ಎನ್‌ಡಿಎ) ದ ಪ್ರಧಾನಿ ಅಭ್ಯರ್ಥಿ 'ಎಸೆಯುವ' ಸವಾಲುಗಳಿಗೆ ನೇರ ಮತ್ತು ಶಕ್ತ ಮರುಸವಾಲೆಸೆಯುವಲ್ಲಿ ಸೋಲುತ್ತಿದ್ದಾರೆ. ತಮ್ಮ ಸುತ್ತಲೂ ಇರುವ ಆಪ್ತರ ಮಾತುಗಳನ್ನೇ ವೇದ ವಾಕ್ಯದಂತೆ ಪಾಲಿಸುತ್ತಾ, ಅನೇಕ ಹಿರಿಯ-ಕಿರಿಯ ನೆಹರೂ ಕುಟುಂಬಾಪ್ತರಲ್ಲದವರಿಗೆ ಮುಜುಗುರ ತರುತ್ತಿದ್ದಾರೆ. ವಿರೋಧಿಗಳು ಹೇಳುವಂತೆ ದೇಶದ ಉದ್ದಗಲದ ಸಮಸ್ಯೆಗಳು ಅಥವಾ ಇಂದಿನ ಅಗತ್ಯಗಳ ಪರಿಚಯಕ್ಕೆ ಹೊರತಾಗಿ, ಕೇವಲ 'ಯುವ ಭಾರತ'ದ ಕನವರಿಯಕೆಯಲ್ಲಿದ್ದಾರೆ. ಇದು ಪ್ರಧಾನಿ ಪದವಿಗೆ ಸಾಲದು ಎಂಬುದು ರಾಹುಲ್ ಬಗೆಗಿರುವ ಋಣಾತ್ಮಕ ಅಂಶಗಳು. ಈ ರಾಜೀವ್-ಸೋನಿಯಾ ಪುತ್ರ ಭಾರತ ಮಾತೆಯ ಮಡಿಲಿನಲ್ಲಿ ನವತಾರೆಯಾಗಬಹುದೇ..??.

ನರೇಂದ್ರ ಮೋದಿ!. ಗುಜರಾತ್ ಮಂತ್ರವನ್ನೇ ದೇಶದ ಉದ್ದಗಲಕ್ಕೂ ನಿರಂತರ ಜಪಿಸುತ್ತಿರುವ ಮೂಲಕ, ಪ್ರಧಾನಿ ಪದವಿಯ ಮೇಲೆ ಕಣ್ಣಿಟ್ಟಿರುವ ಮತ್ತೋರ್ವ ನಾಯಕ. ಯಾವ ಗುಜರಾತ್ ಅಭಿವೃದ್ಧಿ ಇವರಿಗೆ 'ಖಚಿತ'ಮಾನದಂಡವೋ, ಅದೇ ಗುಜರಾತ್‌ನಲ್ಲಿ ನಡೆದ ನರಮೇಧದ ರಕ್ತದ ಕಲೆಯನ್ನು ವಿರೋಧಿಗಳೂ ಇವರ ಮೈಗೆ ಹಚ್ಚಿ ಟೀಕಿಸುತ್ತಿದ್ದಾರೆ!. ಮೋದಿಯ ಮೋಡಿ ಏನೂ ಇಲ್ಲ, ಎಲ್ಲವೂ ಭಾಜಪ ನಿರ್ಮಿಸಿದ ನಾಟಕ ಕಂಪೆನಿಯೆಂಬುದು ವಿರೋಧಿಗಳ ಮಾತು. ಒಂದು ರೀತಿಯಲ್ಲಿ ನೋಡಿದರೆ, ಈ ನಾಯಕತ್ವಕ್ಕೆ ವಿರೋಧವಿರುವುದು ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳಲ್ಲಾದರೂ, ಕಂಡು ಕೇಳರಿಯದ ವಿರೋಧವನ್ನು ಇವರು ಎದುರಿಸುತ್ತಿರುವುದು ತಮ್ಮದೇ ಪಕ್ಷದ ಹಿರಿಯ ನಾಯಕರಾದ ಅಡ್ವಾಣಿ-ಸುಷ್ಮಾ ಅವರಂತಹ ನಾಯಕರಿಂದ!!. ದೇಶ ಮತ್ತು ಕಾಂಗ್ರೆಸ್ ಪಾಲಿಗೆ ರಾಹುಲ್ ಯುವ ನೇತಾರರಾದರೆ, ಪ್ರಧಾನಿ ಪದವಿಗಾಗಿ ದಶಕಗಳಿಂದ ಕಾಯುತ್ತಿರುವ ಭಾಜಪದ ಕೆಲವು ಹಿರಿಯ ತಲೆಗಳಿಗೆ, ಈ 'ಯುವ'ಮೋದಿ ತಲೆನೋವು!!. ಇನ್ನೂ ರಾಜಕೀಯದಲ್ಲಿ   ಪ್ರಧಾನಿಯಾಗಲು 'ಮುಂದೆ'ಅವಕಾಶವಿರುವಾಗ ಮೋದಿಗೆ 'ಇಂದೇ' ಏಕೆ ಅವಸರ ಎಂಬುದು ಭಾಜಪದೊಳಗಿನ  'ಹಿರಿ'ತಲೆಗಳ ಕಿಚ್ಚು. ಇದೂ ಮೋದಿ ವಿರೋಧಿ ಅಲೆಯಾಗಿ ಪರೋಕ್ಷವಾಗಿ ಕೆಲಸ ಮಾಡುತ್ತಿದೆ.

ಮೋದಿಯವರನ್ನು ಭಾಜಪ ಸುಮಾರು ಒಂದು ವರ್ಷದಿಂದೀಚೆಗೆ ಆಖಾಡಕ್ಕೆ ಅಣಿಗೊಳಿಸುತ್ತಿತ್ತು. ವಿರೋಧಿಗಳ ಬಾಯಿ ಮುಚ್ಚಿಸಲು, ಹೊಸ ಹೊಸ ತಂತ್ರ-ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಾ, ತನ್ನ ಪ್ರತೀ ರ್‍ಯಾಲಿಯಲ್ಲಿ ಹೊಸ ಹೊಸ 'ನುಡಿಬಾಂಬ್'ಗಳನ್ನೆಸೆಯುತ್ತಾ ಮೋದಿಯೂ ಆಕರ್ಷಿಸಿದ್ದು ಯುವಕರನ್ನೇ!!. ಯುವ ಭಾರತ ನಿರ್ಮಾಣದ ಮಾತಾಡುತ್ತಾ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್‌ಗೆ, ಮೋದಿಗೆ ಯುವ ಜನತೆಯನ್ನು ಆಕರ್ಷಿಸುವ ಕಲೆ ಕರಗತವಾಗಿದ್ದು, ಪರಿಣಾಮವಾಗಿ ಈ ವಯಸ್ಸಿನಲ್ಲೂ ಯುವ ನೇತಾರನಾಗಿ ಕಾಣಿಸಿಕೊಳ್ಳುತ್ತಿರುವುದು ತಲೆನೋವಿನ ವಿಚಾರ. ಹಾಗೆಂದು ಮೋದಿ ಅಲೆಗೂ ವಿರೋಧವಿಲ್ಲ ಎಂದಲ್ಲ. 'ಮೋದಿ ಅಲೆ'ಎಂಬ ಅಲೆ ದೇಶದೆಲ್ಲೆಡೆ ಇದೆ ಎಂದು ಕೂಗೆಬ್ಬಿಸಿದ್ದು ಭಾಜಪ ಮತ್ತದರ (ಅವರನ್ನು ಒಪ್ಪಿಕೊಂಡಿರುವ) ಮಿತ್ರ ಪಕ್ಷಗಳೇ ಹೊರತು, ದೇಶದ ಜನತೆ ಅಲ್ಲ!. ಮೋದಿಯವರನ್ನು ಕೇವಲ ಒಂದು 'ಬ್ರಾಂಡ್' ಆಗಿ ಭಾಜಪ ನಿರೂಪಿಸುತ್ತಾ ಹೋಗಿದೆಯೇ ಹೊರತು, ತನ್ನೊಳಗಿನ ಹಿರಿಯ ನಾಯಕರದ್ದೇ ವಿಶ್ವಾಸ ಕಳೆದುಕೊಂಡಿದ್ದು ಸುಳ್ಳಲ್ಲ. ಎಲ್ಲರೂ ಆ ಬಿಸಿಯನ್ನು ಅನುಭವಿಸುತ್ತಲೇ ಇದ್ದರೆ, ಕೆಲವರು ಅದರಲ್ಲಿಯೇ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಅಷ್ಟೆ.  ಹೀರಾ ಬೆನ್-ದಾಮೋದರದಾಸ್ ಮೂಲ್ ಚಂದ್ ಮೋದಿ ದಂಪತಿಗಳ ಈ ೬೩ರ ವಯೋವೃದ್ದ 'ಯುವಕ' ಭಾರತಾಂಬೆಯ ಮಡಿಲ ನಾಯಕ ಮಣಿಯಾಗಿ ಹೊರ ಹೊಮ್ಮುತ್ತಾರೆಯೇ..??. ಸ್ವಲ್ಪ ಕಾಯ ಬೇಕು ಅಷ್ಟೇ.

ಇನ್ನು ತೃತೀಯ ರಂಗ ಎಂಬ ಚುನಾವಣಾ ವೇಳೆಯ  'ಶಿಶು'! ಇದು ದೇವೇ ಗೌಡ, ಜಯಲಲಿತಾಎಂಬ ಪ್ರಧಾನಿ ಪಟ್ಟದ ಆಕಾಂಕ್ಷಿಗಳ 'ಗರ್ಭ'ಧರಿಸಿದೆ!!. ಅತ್ತ ಮಮತಾ ಬ್ಯಾನರ್ಜಿ, ಇತ್ತ ಮುಲಾಯಂ ಸಿಂಗ್ ಯಾದವ್-ಮಾಯಾವತಿಗಳೂ ತಮ್ಮ ಅದ್ರಷ್ಟ ಚೀಟಿ ಹಿಡಿದು ಕುಳಿತಿದ್ದಾರೆ!!. ದೆಹಲಿಯಲ್ಲಿ'ಅಚಾತುರ್ಯ'ದಿಂದ ಗದ್ದುಗೆ ಹಿಡಿದ ಆಮ್ ಆದ್ಮಿಗಳು, ಪವಾಡದ ನಿರೀಕ್ಷೆಯಲ್ಲಿದ್ದಾರೆ ಮತ್ತು ದೇಶದ ಜನತೆಗೆ ಇವರಿಂದ ಪುಕ್ಕಟೆ ಮನೋರಂಜನೆ ಸಿಗುತ್ತಿದೆ. ಅವರ ದೃಷ್ಟಿಯಲ್ಲಿ ಕೇಜ್ರಿವಾಲ್ ಪ್ರಧಾನಿಯಾಗಿಯಾಗಿದೆ!!. ಅಂತೂ ಈ ಬಿಸಿಲ ಬೇಗೆ, ಕಾವೂ ಸಹ, ಚುನಾವಣೆಯ ಬಿಸಿ ಯಿಂದಾಗಿ, ತನ್ನತನ ಕಳೆದುಕೊಂಡಿದೆ. ದೇಶದ ಪ್ರಬುದ್ಧ ಮತದಾರ ಮಾತ್ರ, ಮೀಸೆಯ ಕೆಳಗೆ ನಗುತ್ತಾ ತುಂಟ ನಗೆ ಬೀರುತ್ತಿದ್ದಾನೆ. ಅವನಿಗೆ ತಾನು  'ತಾತ್ಕಾಲಿಕ'  ಪ್ರಭುವಾದ ಬಗ್ಗೆ ನೋವಿದೆ, ಸಿಡುಕಿದೆ, ಕೋಪವಿದೆ. ಅಷ್ಟೇ ಮುಖ್ಯವಾಗಿ, ತನ್ನ   'ಹಕ್ಕಿನ'  ಪರಿಧಿ ಚುನಾವಣೆಗೆ ಮಾತ್ರ ಸೀಮಿತ ಎಂಬ ಅರಿವಿದೆ!!.

ಭಾರತಾಂಬೆಯ ಮಡಿಲಿಗೆ ಯಾರ ಮಕ್ಕಳನ್ನು ನಾಯಕತ್ವ ಕೊಟ್ಟು ಕೂರಿಸುತ್ತಾನೋ ಈ ಪ್ರಬುದ್ಧ ಮತದಾರ ಎಂದು ತಿಳಿಯಲು ಮೇ ೧೭ರ ತನಕ ಕಾಯಬೇಕು. ಅಷ್ಟೇ!!



Tuesday 25 March 2014

'ಕೊಲೆ'ಯ ಹಿಂದೆ-ಮುಂದೆ...!

ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...ಜನಪ್ರತಿನಿಧಿ ಯಲ್ಲಿ ನನ್ನ ಇಂದಿನ ಲೇಖನ... 


ಒಂದು ಕ್ಷಣ ಬೆಚ್ಚಿ ಬೀಳಿಸುವ ಘಟನೆ ಆಗಿತ್ತದು!

ಅದೊಂದು ಪುಟ್ಟ ಸಂಸಾರ. ಕಿರಣ್ ಎಂಬ ಗಂಡ, ಸೌಮ್ಯಾ ಎಂಬ ಹೆಂಡತಿ ಮತ್ತು ನಾಲ್ಕರ ಹರೆಯದ ಮುದ್ದಾದ ಮಗುವಿದ್ದ ಆ ಸಂಸಾರ ನೆಮ್ಮದಿಯಿಂದಿತ್ತು. ಆತ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಮೆನೇಜರ್.   ಆಂಧ್ರ ಮೂಲದ ಅವರು ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.  

ಕಿರಣನ  ಕೈಕೆಳಗೆ ಶ್ರದ್ಧಾ ಎಂಬ ಆಕೆ ಕೆಲಸ ಮಾಡುತ್ತಿದ್ದಳು. ಅವಳು ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ಶ್ರದ್ಧಾ ಮತ್ತು ಕಿರಣ್  ಮಧ್ಯೆ ಇದ್ದ ಸಂಬಂಧ ನಿಧಾನವಾಗಿ ಪ್ರೀತಿಗೆ, ನಂತರ ಪ್ರೇಮಕ್ಕೆ ತಿರುಗಿತು. ಎಂಟು ತಿಂಗಳಾಗುವಷ್ಟರಲ್ಲಿ ಆ ಇಬ್ಬರೂ ಬಹಳ ಹತ್ತಿರ ಬಂದರು. ಆದರೆ ಅದೇ ಸಂದರ್ಭದಲ್ಲಿ ಕಿರಣನಿಗೆ ಬೆಂಗಳೂರಿಗೆ ವರ್ಗವಾಯಿತು. ಶ್ರದ್ಧಾಳಿಗೆ ಬಹಳ ನೋವಾಯಿತು. ಕಿರಣ್‌ನನ್ನು ಬಿಟ್ಟಿರಲಾರದೇ ಶ್ರದ್ಧಾ ಒದ್ದಾಡಿದಳು. ಅದೇ ಸಂದರ್ಭದಲ್ಲಿ ಬೆಂಗಳೂರಿಗೆ ಹೋದ ಕಿರಣ್, ಸೌಮ್ಯಾ ಮತ್ತು ಮಗುವನ್ನು ಅಲ್ಲಿಗೆ ಕರೆದೊಯ್ಯಲು ಒಂದು ಮನೆಯನ್ನೂ ನೋಡುತ್ತಾನೆ. ಇದು ಶ್ರದ್ಧಾಳಿಗೆ ಮತ್ತಷ್ಟು ನೋವು ನೀಡಿತು. ಪರಿಣಾಮ, ಒಂದು ಬೆಳಿಗ್ಗೆ ಆಕೆ ಕಿರಣನ ಮಂಗಳೂರಿನ ಬಾಡಿಗೆ ಮನೆಗೆ ಬರುತ್ತಾಳೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೌಮ್ಯಾಗೆ ನಿದ್ದೆ ಮಾತ್ರೆ ನೀಡುತ್ತಾಳೆ. ಮಗುವನ್ನು ಎತ್ತಿಕೊಂಡು ಹೋಗುವ ಮುನ್ನ, ನಿದ್ದೆಯಲ್ಲಿದ್ದ ಸೌಮ್ಯಾಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾಳೆ. ಕೊಲೆ ಮಾಡುತ್ತಾಳೆ.

 ಮರುದಿನ ಬೆಳಿಗ್ಗೆ ಕಿರಣ ಬೆಂಗಳೂರಿನಿಂದ ಬರುತ್ತಾನೆ. ಕೊಲೆಯಾದ ಬಗ್ಗೆ ಆತನಿಗೆ ಪೂರ್ವಮಾಹಿತಿ ಇತ್ತೆಂಬ ಅನುಮಾನವೂ ಇದೆ. ಆತ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಾನೆ. ಈಗ ಇಬ್ಬರೂ ಪೋಲಿಸರ ಅತಿಥಿಗಳು. ಇದು ಕೇವಲ ಒಂದು ವಾರದ ಕೆಳಗೆ ಮಂಗಳೂರಿನಲ್ಲಿ ನಡೆದ ಒಂದು ಕೊಲೆಯ ಘಟನೆ.

ಇಂತಹ ಹತ್ತು ಹಲವಾರು ಘಟನೆಗಳನ್ನು ನಾವು ದಿನ ನಿತ್ಯವೂ ನೋಡುತ್ತಿರುತ್ತೇವೆ. ಪತ್ರಿಕೆಗಳಲ್ಲಿ ಈ ತರದ ಘಟನೆಗಳು ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತವೆ. ಸುಮಾರು ಒಂದೂವರೆ ತಿಂಗಳ ಹಿಂದೆ, ಇದೇ ಮಂಗಳೂರಿನಲ್ಲಿ, ಹಳೆಯ ಪೇಪರ್ ವ್ಯಾಪಾರಿಯೊಬ್ಬನ ಕೊಲೆಯಾಗುತ್ತದೆ. ಪೊದೆಯೊಂದರ ಬಳಿ ಸತ್ತು ಬಿದ್ದಿದ್ದ ಆ ನತದ್ರಷ್ಟನ ಅಸಹಜ ಸಾವಿನ ಬೆನ್ನು ಹತ್ತಿ ಹೋದ ಪೋಲಿಸರು, ಆತನ ಪತ್ನಿಯನ್ನು ಬಂಧಿಸುತ್ತಾರೆ. ಆಗ ಆಕೆ ಬಾಯ್ಬಿಟ್ಟ ಸತ್ಯ ಎಂದರೆ, ಆಕೆ ಮತ್ತು ಇತ್ತೀಚೆಗೆ ಪರಿಚಯವಾದ ಆಕೆಯ ಪ್ರಿಯಕರ ಸೇರಿ, ಆತನನ್ನು ಮುಗಿಸಿರುತ್ತಾರೆ.

ಈ ಎಲ್ಲಾ ಘಟನೆಗಳನ್ನು ಓದುತ್ತಿರುವಂತೆ, ಮನುಷ್ಯ-ಮನುಷ್ಯನ ನಡುವಿನ ಸಂಬಂಧ ಇಂದು ಯಾವ ಮಟ್ಟದಲ್ಲಿದೆ ಎಂಬ ನೋವು ಮತ್ತು ಹತಾಶೆಗಳೆರಡೂ ಕಾಣುತ್ತವೆ. ಈ ರೀತಿಯ ಘಟನೆಗಳು ಸಾಮಾನ್ಯವೆಂಬಂತೆ ಇಂದು ನಮ್ಮ ಸುತ್ತ ಮುತ್ತಲೇ ನಡೆಯುತ್ತಿದ್ದರೆ, ಸಾಮಾಜಿಕವಾಗಿ ನಾವು ಯಾವ ಪರಿ ಅಧ:ಪತನಕ್ಕಿಳಿಯುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ. 

ಒಂದರ್ಥದಲ್ಲಿ ಬದುಕೇ ಹಾಗೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮತ್ತು ಹೊಸದಕ್ಕೆ ಹಾತೊರೆಯುವ ಮನ. ಪ್ರತಿಯೊಬ್ಬನ ಬದುಕಿನಲ್ಲೂ ಸಹಜವಾಗಿ ಕೆಲವು ವಿಷಯಗಳಲ್ಲಿ ಅತೃಪ್ತಿ ಇರುತ್ತದೆ. ಆ ಕೊರತೆಯ ನಿವಾರಣೆಗಾಗಿ ಹಲವು ದಾರಿಗಳೂ ಇರುತ್ತವೆ. ಆದರೆ ಕಾನೂನು ತನ್ನ ಚೌಕಟ್ಟಿನಡಿ ಅನೇಕ ಕಟ್ಟುಪಾಡುಗಳನ್ನು ನಿರ್ಮಿಸಿಟ್ಟಿದ್ದು, ಇದನ್ನು ಅರಿತು ಮುನ್ನಡೆಯಬೇಕಾದ ಅನಿವಾರ್ಯತೆ, ಆರೋಗ್ಯಪೂರ್ಣ ಸಮಾಜದ ಹಿನ್ನೆಲೆಯಲ್ಲಿ ಇಂದಿನ ಅಗತ್ಯವಾಗಿದೆ.

ಮೇಲಿನೆರಡೂ ಘಟನೆಗಳಲ್ಲಿ ಅನೇಕ ಸಂಶಯಗಳು ಹುಟ್ಟಿಕೊಳ್ಳುತ್ತವೆ. ನಮಗೆ ತೀರಾ ಬೇಕು ಎನಿಸಿದಾಗ, ಮನಸ್ಸು ಬೇರಾವುದನ್ನೂ ಯೋಚಿಸದೇ, ಮುಂದೆ ಆಗಲಿರುವ ಯಾವುದೇ ಅನಾಹುತಗಳನ್ನೂ ಲೆಕ್ಕಿಸದೇ, ಇಂದು, ಈ ಕ್ಷಣಕ್ಕೆ ನನಗೆ ಬೇಕಾದ್ದನ್ನು ಪಡೆಯುವಲ್ಲಿ ಹಾತೊರೆಯುತ್ತದೆ. ಅದಕ್ಕಾಗಿ ಬೇರೆ ಜೀವದ ಬಲಿಯಾದರೂ ಆಗಬಹುದು, ನಾನು ಪಾತ್ರ ನೆಮ್ಮದಿಯಿಂದಿರಬೇಕೆಂದು ಮನ ಹಾತೊರೆಯುತ್ತದೆ.

ದುರಂತವೆಂದರೆ ನಮ್ಮ ಸುತ್ತ ಮುತ್ತಲೂ ಇಂತಹ ಹತ್ತು ಹಲವಾರು ಘಟನೆಗಳು ಮರುಕಳಿಸುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧ ಮಾಡಿದವರು ಸಿಕ್ಕಿ ಬೀಳುತ್ತಾರೆ. ಜೀವನ ಪರ್ಯಂತ ಇದಕ್ಕಾಗಿ ಪರಿತಪಿಸುತ್ತಾ ಶಿಕ್ಷೆ ಅನುಭವಿಸುತ್ತಾರೆ. ಇದನ್ನು ನೋಡುತ್ತಲೇ, ಮತ್ತೆ ಮತ್ತೆ ಆ ತಪ್ಪು ಸಮಾಜದಲ್ಲಿ ಮರುಕಳಿಸುತ್ತಿದೆ ಎಂದಾದರೆ, ಜೀವನ ಶೈಲಿಯಲ್ಲಿ ನಾವು ತಪ್ಪಿದ್ದೆಲ್ಲಿ ಎಂಬ ಪ್ರಶ್ನೆ ಕಾಡುತ್ತದೆ.

ಈ ರೀತಿಯ ಅಪರಾಧಗಳಿಂದಾಗಿ, ಅತ್ತ ಬಯಸಿದ್ದೂ ಸಿಗದೇ, ಇತ್ತ ಇದ್ದುದನ್ನೂ ಕಳೆದುಕೊಂಡು, ಜೈಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬರುತ್ತದೆ. 

ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...ಇಂತಹ ಭಾವನೆಗಳು ಹೆಚ್ಚಿನ ಸಂದರ್ಭದಲ್ಲಿ ನಮ್ಮನ್ನು ನಿಯಂತ್ರಿಸುತ್ತವೆ. ಹೀಗೆ ಈ ರೀತಿ, ನಮ್ಮೊಳಗಿನ ಭಾವನೆಗಳೇ ನಮ್ಮನ್ನು ನಿಯಂತ್ರಿಸಲಾರಂಭಿಸಿದಾಗ, (ಅವುಗಳನ್ನು ನಾವು ನಿಯಂತ್ರಿಸುವ ಬದಲು), ಅನಾಹುತಗಳು ಘಟಿಸುತ್ತವೆ. ನಾವು ಓದಿರುತ್ತೇವೆ, ರಜೆ ಕೊಡದ ಮೇಲಧಿಕಾರಿಯನ್ನು ಕೊಂದ ಘಟನೆ, ಪ್ರೇಮ ನಿರಾಕರಣೆಯನ್ನು ಮಾಡಿದಾಗ ಕೊಲೆ ನಡೆದದ್ದು, ಆಸಿಡ್ ದಾಳಿಯಾದದ್ದು...ಸಂದರ್ಭಗಳು ಬೇರೆ ಬೇರೆಯಾಗಿದ್ದರೂ, ಪರಿಣಾಮ ಮತ್ತು ಅದಕ್ಕೆ ಕಾರಣವಾಗುವುದು ನಮ್ಮ ಮಾನಸಿಕ ದೌರ್ಬಲ್ಯ. ಇದನ್ನೇ ಮನ:ಶಾಸ್ರಜ್ಞರು ಮನೋ ವೈಕಲ್ಯ ಎಂದು ಕರೆದದ್ದು. ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ, ಕ್ಷಣಿಕ ದೌರ್ಬಲ್ಯ ಕೆಲಸ ಮಾಡುತ್ತವೆ. ಅನೇಕ ಕೊಲೆಗಳು, ಪೂರ್ವ ಯೋಜಿತವಾಗಿರುತ್ತವಾದರೂ, ಇದರ ಹಿನ್ನೆಲೆ, ಕ್ಷಣಿಕವಾಗಿ ಏನನ್ನೋ ತನ್ನ ಕೈವಶ ಮಾಡಿಕೊಳ್ಳುವ ಅಥವಾ ದ್ವೇಷದ ಪರಮಾವಧಿಯದ್ದಾಗಿರುತ್ತದೆ.

ಆತ್ಮಹತ್ಯೆಯೂ ಒಂದು ರೀತಿಯ ಕೊಲೆಯೇ ಆಗಿರುತ್ತದೆ. ಬೇರೊಂದು ಜೀವಿಯನ್ನು ಕೊಲ್ಲವುದಕ್ಕೆ ಭಿನ್ನವಾಗಿ ತನ್ನನ್ನೇ ತಾನು ಕೊಂದುಕೊಳ್ಳುವ ಸ್ಥಿತಿಯೇ ಆತ್ಮಹತ್ಯೆ. ಇದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದಂತೆ, ಅನೇಕ ಸಂದರ್ಭಗಳಲ್ಲಿ ಕ್ಷುಲ್ಲಕ ಕಾರಣಗಳೇ, ಜೀವಾಂತ್ಯಕ್ಕೆ ಕಾರಣವಾಗಿರುತ್ತವೆ. ತನ್ನ ಇಷ್ಟದ ಚ್ಯಾನೆಲ್ ನೋಡಲು ಮನೆಯವರು ಬಿಡಲಿಲ್ಲ ಎಂಬ ಕಾರಣ, ಪರೀಕ್ಷೆಯಲ್ಲಿ ಫೇಲ್ ಆಗಿ ಜೀವನವೇ ಮುಗಿಯಿತು ಎಂಬ ಭಾವನೆ...ಹೀಗೆ ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆಗಳು ನಡೆದದ್ದನ್ನು ಕೇಳೀದ್ದೇವೆ, ಕಂಡಿದ್ದೇವೆ.

ಸಾಮಾಜಿಕ ಸ್ವಾಸ್ಥ್ಯಗಳು ಈ ರೀತಿ ಕೆಡುತ್ತಿದ್ದರೆ, ನಮ್ಮ ಸುತ್ತಲಿನ ಪ್ರಪಂಚವೇ ಭೀಬತ್ಸವಾಗುತ್ತಾ ಹೋಗುತ್ತದೆ. ಈ ರೀತಿಯ ಮನೋ ವೈಕಲ್ಯ ಅಥವಾ ಹತಾಶೆಗೊಳಗಾಗುವುದನ್ನು ತಪ್ಪಿಸಲು ಅನೇಕ ಸಂದರ್ಭಗಳಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಡುವ ಕಲೆ, ಸಾಂಸ್ಕೃತಿಕ ಅಥವಾ ಧಾರ್ಮಿಕತೆಗೆ ನಮ್ಮನ್ನು ತೆರೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಒಂದು ಕ್ಷಣದ ಹತಾಶಾ ಭಾವನೆಯಿಂದ ನಾವು ಸೀದಾ ಸಾವಿನ ಮನೆಯ ಬಾಗಿಲಿಗೆ ಹೋಗುವ ಅಥವಾ ಬೇರೊಬ್ಬರನ್ನು ದೂಡುವ ಬದಲಿಗೆ, ಯಾವುದೋ ಒಂದು ಮಂದಿರದಲ್ಲೋ, ಅಥವಾ ಸಮಾರಂಭದಲ್ಲೋ ಒಂದಷ್ಟು ಹೊತ್ತು ಕಳೆದು ಬರುವ ಯೋಚನೆಯಿಂದ ಅತ್ತ ಹೋದರೆ...ಬರುವುದರಲ್ಲಿ ಮನಸ್ಸು ಪ್ರಫುಲ್ಲವಾಗಿರದಿದ್ದರೆ ಕೇಳಿ!! ಆಗ ಯಾವುದೇ ಅವಘಡಗಳಿಗೂ ಕಾರಣವೇ ಇರುವುದಿಲ್ಲ.

ಇದೀಗ ಪರೀಕ್ಷೆಯ ಸಮಯ-ಫಲಿತಾಂಶದ ಸಮಯ. ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದು ರೀತಿಯ ಅವ್ಯಕ್ತ ಭಯ ಇರುತ್ತದೆ. ಇದೇ ಮುಂದೆ ಫಲಿತಾಂಶ ಬಂದಾಗ, ಹತಾಶೆಯಾಗಿ ಮಾರ್ಪಟ್ಟು ಆತ್ಮ ಹತ್ಯೆಗೆ ಶರಣಾಗುವ ಅಪಾಯವಿರುವುದರಿಂದ, ನಿಜಕ್ಕೆಂದರೆ ಈ ಸಮಯಗಳಲ್ಲಿ ಪತ್ರಿಕೆ ನೋಡುವುದೇ ಹೆದರಿಕೆ ಹುಟ್ಟಿಸುವ ಹಾಗಿರುತ್ತದೆ. ಎಲ್ಲಿಯ ತನಕ ಎಂದರೆ ಫೆಲಾದವರು ಮತ್ತು ಅನೇಕ ಸಂದರ್ಭಗಳಲ್ಲಿ ನಿರೀಕ್ಷಿತ ಶೆಕಡಾವಾರು ಫಲಿತಾಂಶ ಬರದ ಕಾರಣವನ್ನೂ ಮುಂದೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಕಾಣುತ್ತವೆ!!. ದುರಂತವಲ್ಲವೇ??

ಮೇಲೆ ತಿಳಿಸಿದ ಎಲ್ಲಾ ಸೂಚ್ಯ ಘಟನೆಗಳು ನಮ್ಮ ಇಂದಿನ ದುರಂತಮಯ ಸನ್ನಿವೇಶಗಳನ್ನು ತೆರೆದಿಡುತ್ತಿವೆ. ಪ್ರಜ್ಞಾವಂತರಾದ ನಾವು ಯೋಚಿಸಿ, ದುಡುಕಿನ ಕೈಗೆ ಬುದ್ದಿ ಕೊಡದೇ, ಬದುಕನ್ನು ಹಸನು ಮಾಡಿಕೊಳ್ಳಬಹುದು...ಅಲ್ಲವೇ..!!

Tuesday 18 March 2014

ಗಂಡಸರೇಕೆ ಅಳ ಬಾರದು...???

ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಜನಪ್ರತಿನಿಧಿ ಯಲ್ಲಿ ನನ್ನ ಇಂದಿನ 'ಪ್ರದಕ್ಷಿಣೆ'ಯ ಬರಹ... 

ನುಷ್ಯ ಹುಟ್ಟಿದಾಕ್ಷಣ ಮೊದಲು ಅಳುತ್ತಾನೆ-ಅಯ್ಯೋ, ಈ ನೀರಸ ಪ್ರಪಂಚದಲ್ಲಿ ಇನ್ನು ನನ್ನ ಅಭಿಯಾನ ಆರಂಭವಾಯಿತು ಎಂಬ ಕೊರಗೋ-ಗೊತ್ತಿಲ್ಲ. ಹುಟ್ಟಿದ ಮಗು ಅಳದಿದ್ದರೆ,  ಅದರ ಆರೋಗ್ಯದಲ್ಲಿ ಏನೋ ಏರು ಪೇರಿದೆ ಎಂದೇ ಅರ್ಥ. ಅದಿಲ್ಲವಾದರೆ ಆ ಗಳಿಗೆ ಕೆಟ್ಟದ್ದು ಎಂದು ನಂಬುವುದೂ ಇದೆ...ಅದು ನಂಬಿಕೆಯೋ ಮೂಡ ನಂಬಿಕೆಯೋ ಗೊತ್ತಿಲ್ಲ.
ಇನ್ನು ನಮ್ಮ ಲೇಖನದ ಶೀರ್ಷಿಕೆಯ ವಿಚಾರಕ್ಕೆ ಬರೋಣ. ಗಂಡಸರು ಅಳ ಬಾರದು!!. ಇದು ಒಂದು ರೀತಿಯ ಅಘೋಷಿತ ಶಾಸನದಂತೆ ಆಗಾಗ ಹೇಳಲಾಗುತ್ತದೆ. ಮೊದಲಾಗಿ ಅಳು ಎಂಬುದೇ ಒಂದು ವೈಜ್ಞಾನಿಕ ಕ್ರಿಯೆ. ಅಳುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಅನೇಕ ಒಳ್ಳೆಯ ಪರಿಣಾಮಗಳೂ ಬೀರುತ್ತವೆ ಎಂದು ಮನ ಶಾಸ್ತ್ರ ಹೇಳುತ್ತದೆ. ಇಂತಾದ್ದರಲ್ಲಿ ಗಂಡಸು ಅಳಬಾರದು ಎಂದರೆ...??

ಈ ಮಾತನ್ನು ಯಾರು ಹುಟ್ಟು ಹಾಕಿದರೋ ಗೊತ್ತಿಲ್ಲ. ಅಳುವ ಗಂಡಸನ್ನು ಮತ್ತು ನಗುವ ಹೆಂಗಸನ್ನು ನಂಬ ಬಾರದು ಎಂಬುದು.!. ನನಗಿನ್ನೂ ಚೆನ್ನಾಗಿ ನೆನಪಿದೆ. ರಜೆಯಲ್ಲಿ ನಾವು ಅಜ್ಜನ ಮನೆಗೋ, ಯಾವುದೋ ಸಂಬಂಧಿಯ ಮನೆಗೋ ಹೋಗುತ್ತಿದ್ದೆವು. ಅಲ್ಲಿಂದ ರಜೆ ಮುಗಿಸಿ ಮರಳುವಾಗ ಸಹಜವೆಂಬಂತೆ ಅಳುತ್ತಿದ್ದೆವು. ತಮಾಷೆಯ ವಿಷಯವೆಂದರೆ, ಮನೆಯಿಂದ ಹೊರಡುವಾಗ ಮತ್ತು ಮನೆಗೆ ಮರಳುವಾಗ-ಸಾಮಾನ್ಯವೆಂಬಂತೆ ಅಳುತ್ತಿದ್ದೆವು. ಆಗ ನನ್ನಲ್ಲಿ ಒಬ್ಬರು, ಅಯ್ಯೋ, ನೀನು ಗಂಡಸಾಗಿ ಅಳುವುದಾ ಮಾರಾಯ ಎಂದು ಕೇಳಿದ್ದು ನೆನಪಾಗುತ್ತದೆ!. ಹಾಗೆಂದು ಅಳುವನ್ನು ನಿಲ್ಲಿಸಬೇಕು ಎಂದು ಕೊಂಡರೆ ಅದೂ ಅಷ್ಟು ಸುಲಭ ಸಾಧುವಲ್ಲ ಎಂಬುದು ಹಲವು ಪ್ರಯತ್ನಗಳ ನಂತರ ನನಗೆ ಅನಿಸಿದ್ದುಂಟು...!

ಅದಿರಲಿ, ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಹೆಣ್ಣನ್ನು ಭಾವನಾತ್ಮಕವಾಗಿ ಹೆಚ್ಚು ಅವಲಂಬಿತಳು ಎನ್ನುತ್ತಾರೆ. ಹೆಣ್ಣಿಗೆ ಹೋಲಿಸಿದರೆ, ಗಂಡು ತನ್ನನ್ನು ತಾನು ಭಾವನೆಯ ಕಟ್ಟುಪಾಡಿನಿಂದ ತಡೆದುಕೊಳ್ಳಬಲ್ಲ ಎಂಬುದೂ ನಂಬಿಕೆ. ಮತ್ತೆ ಯಾವುದೇ ಸನ್ನಿವೇಶದಲ್ಲಿಯೂ ಗಂಡು-ಹೆಣ್ಣು ಇಬ್ಬರೂ  ಅತ್ತರೆ, ಬಹುಶ: ಅಲ್ಲಿ ಸಮಾಧಾನಿಸಲು ಯಾರೂ ಇಲ್ಲವೆಂಬ ಭಾವವೋ ಏನೋ, ಹಿರಿಯರು ಗಂಡು ಅಳಬಾರದು-ಹೆಣ್ಣು ನಗಬಾರದು ಎಂಬ ಗಾದೆ ಮಾಡಿಟ್ಟಿರಬಹುದು.

ಶತ ಶತಮಾನಗಳಿಂದ ಹೆಣ್ಣನ್ನು ಒಂದು ಕಟ್ಟು ಪಾಡಿಲ್ಲಿ ಬೆಳೆಸಿದ ಬಗ್ಗೆ ಕೇಳುತ್ತೇವೆ. ಹೆಣ್ಣು ನಕ್ಕರೆ ಅದೇ ಅಪರಾಧವೆಂಬಂತೆ ಬಿಂಬಿಸುವ ದುರಂತ, ಇಂದಿಗೂ ಕೆಲವು ಮೂಲಭೂತವಾದಿರಾಷ್ಟ್ರಗಳಲ್ಲಿ ಜ್ಯಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಗಂಡು ಅಳಲೇ ಬಾರದೇ ಎಂಬುದಕ್ಕೆ ಉತ್ತರ ಕಂಡುಕೊಂಡರೆ ಬಹುಶ: ಹೆಣ್ಣೂ ನಗಬಹುದು ಎಂಬ ನಂಬಿಕೆ ಬಲಗೊಳ್ಳಬಹುದು.

ಬದುಕಿನ ಅನೇಕ ಸಂಕಷ್ಟಗಳು ಮನುಷ್ಯನನ್ನು ಹಣ್ಣು ಹಣ್ಣು ಮಾಡುತ್ತವ. ಬಹಳ ಹಿಂದಿನ, ಘಟನೆಯೊಂದು ನೆನಪಾಗುತ್ತದೆ. ಕೆಲಸ ಮಾಡುತ್ತಿದ್ದ ಕಂಪೆನಿಯೊಂದರಲ್ಲಿ ಕೆಲವು ಹಿತ ಶತ್ರುಗಳ ರಾಜಕೀಯದಿಂದ ನನ್ನನ್ನು ಓರ್ವ ಭ್ರಷ್ಟನಂತೆ ಗುರುತಿಸಲಾಯಿತು. ಒಂದು ಗಳಿಗೆಯಲ್ಲಿ ಕೆಲಸ ಕಳೆದುಕೊಳ್ಳಬೇಕಾದ ಅನಿವಾರ್ಯತೆ. ಇದ್ದುದು ದೂರದ ಕೊಚ್ಚಿನ್ ನಲ್ಲಿ. ಕೂಡಿಟ್ಟದ್ದು ಏನೂ ಇಲ್ಲ. ಕೆಲಸದಿಂದ ಬಿಡಿಸಿದರೆ ಬಸ್ ಚಾರ್ಚ್‌ಗೂ ಹಣ ಇಲ್ಲದ ಪರಿಸ್ಥಿತಿ. ಎಲ್ಲಾ ವ್ಯವಸ್ಥೆಗಳೂ ನನ್ನ ವಿರುದ್ಧವೇ. ಇನ್ನುಳಿದದ್ದು ಆತ್ಮ ಹತ್ಯೆ ಮಾತ್ರ ಎಂಬ ಭಾವನೆ. ಸರಿ, ಕೆಲಸಕ್ಕೆ ಸಂಬಂಧಿಸಿದ ಎಲ್ಲವನ್ನು ಹಸ್ತಾಂತರಿಸಿಯಾಯಿತು. ಒಂದು ರೀತಿಯ ನಿರ್ಲಿಪ್ತತೆ ಮನದಲ್ಲಿತ್ತು. ಇನ್ನೂ ಒಂದು ವರ್ಷದ ಮಗು ಮತ್ತು ಮಡದಿ ಮನೆಯಲ್ಲಿ ಕಾಯುತ್ತಿದ್ದರು. ಏನಾಗಿದೆ ಎಂಬುದರ ಪರಿವೆಯೇ ಅವರಿಗಿರಲಿಲ್ಲ. ನನ್ನ ಮನಸ್ಸು ಸಂಪೂರ್ಣ ಖಿನ್ನತೆಗೊಳಗಾಗಿತ್ತು. ಇನ್ನೂ ಮನೆಗೆ ಹೋಗುವುದಕ್ಕಿಂತಲೂ, ಆತ್ಮಹತ್ಯೆಯೇ ಸೂಕ್ತ ಎಂದು ಕೊಂಡವನು, ಒಂದು ಕ್ಷಣ ಮನೆಯಲ್ಲಿ ಇಬ್ಬರನ್ನೂ ನೋಡಿ ಬರಲೇ ಎಂದುಕೊಂಡು ಅತ್ತ ಹೋದೆ. ಮನೆಯೊಳಗೆ ಕಾಲಿಡುತ್ತಲೇ, ಎಲ್ಲಿತ್ತೋ ಗೊತ್ತಿಲ್ಲ, ಅಳು ಭೋರ್ಗರೆದು ಬಂತು!!. ಗಟ್ಟಿಯಾಗಿ ನಾಲ್ಕೂ ಗೋಡೆಗಳು ಕೇಳುವಂತೆ ಅತ್ತೂ ಅತ್ತೂ ಹಗುರಾದಾಗ ಮನಸ್ಸಿಗೇನೋ ಬಿಡುಗಡೆಯ ಭಾವ!!. ನನ್ನ ಆತ್ಮ ಹತ್ಯೆಯ ಆಲೋಚನೆ ಆ ಕ್ಷಣಕ್ಕೆ ಮಾಯವಾಯಿತು. ಕಳೆದ ವಾರ ಮರಳಿ ಕೊಚ್ಚಿನ್‌ಗೆ ಹೋದಾಗ ಇದೆಲ್ಲವೂ ನೆನಪಾಯಿತು. ಇಂದು ನನಗನಿಸುತ್ತಿರುವುದೇನೆಂದರೆ, ಅಳು ಒಮ್ಮೊಮ್ಮೆ ಮನಸ್ಸನ್ನು ಹಗುರ ಮಾಡಿ, ಆಗಬಹುದಾದ ದುರಂತವನ್ನೂ ತಪ್ಪಿಸುತ್ತದೆ ಎಂದು!.

ಗಂಡಸು ಅಳಬಾರದು ಎಂಬುದಕ್ಕೆ ನನ್ನ ವಿರೋಧವಿರುವುದಕ್ಕೆ ಸ್ವಾನುಭವ ಅನೇಕ ಬಾರಿ ಕಾರಣವಾಗಿದ್ದಿದೆ. ಭಾವ ಪರವಶತೆ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಮನುಜ ಜೀವಿತದ ಸಹಜ ಸ್ವಭಾವ. ಆದರೆ ಅಳು ಮೊಸಳೆ ಕಣ್ಣೀರಾಗಬಾರದು ಅಷ್ಟೇ. ಬಹುಶ: ಸಮಯ ಸಾಧಕತನದ ಕೆಲವು ಅಳುಗಳನ್ನು ನೋಡಿ, ಹಿರಿಯರು ಈ ಮಾತನ್ನು ಹುಟ್ಟು ಹಾಕಿರಬಹುದು. ಆದರೆ ಅಳುವನ್ನು ಯಾರೊಬ್ಬನ ಸ್ವತ್ತನ್ನಾಗಿ ಪರಿಗಣಿಸಬಾರದು.

ನಾನಂತೂ ಅಳುವನ್ನು ಬಹಳ ಇಷ್ಟ ಪಡುತ್ತೇನೆ!. ಇದನ್ನು ನಾವು ಧನಾತ್ಮಕವಾಗಿ ಚಿಂತಿಸಬೇಕು..ಅಷ್ಟೇ. ಅದೆಷ್ಟೋ ಸಂದರ್ಭಗಳಲ್ಲಿ ಮಾನಸಿಕವಾಗಿ ಇನ್ನಿಲ್ಲದಂತೆ ಕುಗ್ಗಿಹೋದಾಗ ಅಳು ಸಂಜೀವಿನಿ ಎಂದೇ ನನ್ನ ಭಾವನೆ. ಬಹುಶ: ಯಾರಿಗೂ ತಿಳಿದಿರದ ಗುಟ್ಟು ಎಂದರೆ, ಅದೆಷ್ಟೋ ಸಂದರ್ಭಗಳಲ್ಲಿ ನಾನು ಈಗಲೂ ಒಂಟಿಯಾಗಿ ಅತ್ತು ಹಗುರಾಗುವ ಅಭ್ಯಾಸ ಇಟ್ಟುಕೊಂಡಿದ್ದ ಕಾರಣದಿಂದಲೇ ಬದುಕನ್ನು ಸಮಚಿತ್ತದಿಂದ ಎದುರಿಸಲಾಗುತ್ತಿದೆ ಅನಿಸುತ್ತಿದೆ. ಯಾವುದೋ ಒಂದು ಸದರ್ಭದಲ್ಲಿ ಇದನ್ನು ಒಬ್ಬರಲ್ಲಿ ಹೇಳಿದಾಗ, ಅತ್ಯಂತ ಆಪ್ತರಾಗಿದ್ದ ಅವರು ಹೇಳಿದರು-ನನಗೆ ಅದೆಲ್ಲಾ ಗೊತ್ತಿಲ್ಲ, ನೀನು ಅಳಬಾರದು ಅಷ್ಟೇ! ಏಕೆ ಎಂದರೆ ಅವರ ಬಳಿ ಇದ್ದುದೂ ಅದೇ ಸೂತ್ರ, ನೀನು ಗಂಡಸು, ಅಳಬಾರದು !!

ಇನ್ನು ಇತ್ತೀಚಿನ ರಾಜಕಾರಣಕ್ಕೆ ಬಂದರೆ, ಅಲ್ಲಿ ಅಳು ಸರ್ವ ವ್ಯಾಪಿ. ಬಹುಶ: ದೇವೇ ಗೌಡರು, ಯಡ್ಯೂರಪ್ಪನವರು ರಾಜ್ಯ ಮಟ್ಟದಲ್ಲಿ ಅತ್ತಷ್ಟು ಬೇರಾರೂ ಅತ್ತಿರಲಿಕ್ಕಿಲ್ಲ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಅಡ್ವಾಣಿಯವರನ್ನು ಈ ವಿಷಯದಲ್ಲಿ ಯಾರೂ ಗೆದ್ದಿಲ್ಲ. ಅಮೇರಿಕದ ಅಧ್ಯಕ್ಷ ಒಬಾಮಾ ಸಹಾ ಆಗಾಗ ಈ ರೀತಯ ಭಾವ ಪರವಶತೆಗೊಳಗಾಗಿ ಗದ್ಗದರಾದ ಬಗ್ಗೆ ಓದಿದ್ದೇವೆ. ಕೆಲವನ್ನು ಇಲ್ಲಿ 'ಮೊಸಳೆ ಕಣ್ಣೀರು' ಅನ್ನ ಬಹುದಾದರೂ, ಅತ್ತವರೆಲ್ಲರೂ ಗಂಡಸರು ಎಂಬ ಹಿನ್ನೆಲೆಯಲ್ಲಿ ಅಳು ಸರ್ವ ವ್ಯಾಪಿ ಎನ್ನಲಡ್ಡಿ ಇಲ್ಲ. ಇದನ್ನೇ ಇನ್ನು ಮತ್ತೊಂದು ದ್ರಷ್ಟಿಯಲ್ಲಿ ಯೋಚಿಸಿದರೆ...ಬಹಿರಂಗವಾಗಿ ಸೋನಿಯಾ ಗಾಂಧಿ ಅತ್ತದ್ದು ಕಡಿಮೆ.  ದೂರದ ಮಾತು ಬಿಡಿ, ಯಾವಾಗಲೂ ನಗುತ್ತಲೇ ಇರುವ ನಮ್ಮ ಶೋಭಕ್ಕ...ಅತ್ತದ್ದು ಕಡಿಮೆ.! ಅಳುವ ಗಂಡಸರ ಮತ್ತು ಹೆಂಗಸರ ವಿಷಯದಲ್ಲಿ ನಾವು ಅದೇ ಸೂತ್ರ ಅಳವಡಿಸಿಕೊಂಡರೆ, ಇವರೆಲ್ಲಾ ಏನು ಎಂಬ ಪ್ರಶ್ನೆ ಕಾಡುತ್ತದೆ. 

ಜೆಫ್ರಿ ಪ್ಲಾಟ್ಸ್ ಎಂಬೊಬ್ಬ ವ್ಯಕ್ತಿತ್ವ ವಿಕಸನದ ಗುರುವಿನ ಪ್ರಕಾರ ಗಂಡಸು ಹೆಚ್ಚು ಅಳಬೇಕು. ಅದಕ್ಕೆ ಆತ ಐದು ಕಾರಣಗಳನ್ನೂ ಕೊಡುತ್ತಾನೆ. ಮೊದಲೆಯದಾಗಿ ಭಾವನಗೆಳು ನಮ್ಮ ಇಡೀ ದೇಹದಲ್ಲಿ ಪ್ರವಹಿಸುತ್ತಿರುವ, ಯಾವತ್ತೂ ಹೊರ ಬರುವ ಮೂಲಕ ಮಾನಸಿಕ ಗಟ್ಟಿತನವನ್ನು ಹೆಚ್ಚಸುವ ಸಹಜ ಸ್ವಭಾವ. ಅದರ ಹರಿವು ನಿರಾತಂಕವಾಗಿರಬೇಕಾದರೆ, ಅಳುವಿನ ಮೂಲಕ ಅದು ಹೊರ ಬರಬೇಕು. ಒಂದು ರೀತಿಯ್ಲಲಿ ನಮ್ಮ ಜೀವನದ ಪೈಪ್ ಲೈನ್ ನಿರಾತಂಕವಾಗಿರಬೇಕಾದರೆ ಅಳಬೇಕು. ಎರಡನೆಯ ಕಾರಣ ನಿಮ್ಮ ಅಳು ಹೊರ ಪ್ರಪಂಚದ ಜನರಿಗೆ, ನಿಮ್ಮೊಳಗಿನ ಭಾವನೆಯ ಪರಿಚಯವನ್ನು ಮಾಡಿಕೊಡುತ್ತದೆ. ಆ ಮೂಲಕ, ಜನರಿಗೆ ನಾವು ಹತ್ತಿರವಾಗಲು, ಅವರು ನಮ್ಮನ್ನು ಅರ್ಥ ಮಾಡಿಕೊಳ್ಳು ಈ ಅಳು ಸೇತುವಾಗುತ್ತದೆ. ಮೂರನೆಯದಾಗಿ ಅಳುವಿನ ಮೂಲಕ ನಿಮ್ಮ ಭಾವುಕತೆಯನ್ನು ಮತ್ತೆ ಮತ್ತೆ ನಿಯಂತ್ರಿಸಿಕೊಳ್ಳ ಬಹುದು. ಅದಿಲ್ಲವಾದರೆ ಮನದೊಳಗೇ ಹೆಪ್ಪುಗಟ್ಟಿಕೊಂಡಿರುವ ನೋವು, ಭಾವಗಳು ಮುಂದೆ ಮನಸ್ಸನ್ನು ಕೇವಲ ಸಂಕುಚಿತಗೊಳಿಸಿ, ಆತ್ಮಹತ್ಯೆಯೋ, ಮಾನಸಿಕ ವೈಕಲ್ಯಕ್ಕೋ ಕಾರಣವಾಗಬಹುದು. ನಾಲ್ಕನೆಯ ಕಾರಣ ಅಳುವಿನ ಮೂಲಕ ನಿಮ್ಮ ಭಾವನಾತ್ಮಕವಾಗಿ ಸ್ಪಂದಿಸುವ ನರ ನಾಡಿಗಳ ಶಕ್ತಿ ವೃದ್ಧಿಸುತ್ತದೆ!. ಈ ಮೂಲಕ ನಿಮ್ಮ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿಯಾಗುತ್ತದೆ;ಕಾರಣವಾಗುತ್ತದೆ. ಮತ್ತು ಐದನೆಯ ಕಾರಣವೆಂದರೆ ನಮ್ಮ ಭಾವನೆಗಳು ಮತ್ತು ಮನಸ್ಸಿನಲ್ಲಿರುವ ವಿಚಾರ ಈ ಹಂತದಲ್ಲಿ ಹೆಚ್ಚು ಹೊರ ಬರುತ್ತದೆ ಮತ್ತು ಆ ಮೂಲಕ ಸಮಾಜಕ್ಕೆ ನಾವು ಏನು ಎಂಬುದರ ಪರಿಚಯವಾಗುತ್ತದೆ. ಹೀಗೆ ಅಳುವನ್ನು ನಾವು ಯಾರಿಗೂ, ಹೀಗೆಯೇ ಎಂದು ಸೀಮಿತಗೊಳಿಸಬಾರದು. ಎಂಬುದ ಆ ಮನ;ಶಾಸ್ತ್ರಜ್ಞನ ಅಭಿಮತ. 

ಗಂಡಸರು ಅಳಲೇ ಬಾರದು ಎಂಬುದನ್ನು ಆತ್ಮೀಯರೂ, ಹಿತೈಷಿಗಳೂ ಆಗಾಗ ಹೇಳುವುದನ್ನು ಕೇಳಿ, ಇದೇಕೆ ಎಂದು ವಿಶ್ಲೇಷಣೆಗೆ ಕುಳಿತಾಗ ಈ ಎಲ್ಲಾ ವಿಚಾರಗಳು ಹೊಳೆದುವು. ಹುಡುಕುತ್ತಾ ಹೋದಾಗ, ಅನೇಕ ವಿಚಾರಗಳು ತೆರೆದುಕೊಳ್ಳುತ್ತಾ ಹೋದುವು. ನಾವೆಲ್ಲರೂ ನಗು ನಗುತ್ತಿರೋಣ ಎಂಬ ಮಾತನ್ನು ಹೇಳಬೇಕಾದ ಈ ಹೊತ್ತಿನಲ್ಲಿ ಗಂಡಸೇಕೆ ಅಳ ಬಾರದು ಎಂದು ಪ್ರಶ್ನಿಸಿ ನಿಮ್ಮನ್ನೆಲ್ಲಾ ಅಳಿಸುತ್ತಿದ್ದೇನೆ ಎಂದು ಕೊಳ್ಳಬೇಡಿ. ನೋವು-ನಲಿವಿನ ಅಭಿವ್ಯಕ್ತಿಯಲ್ಲಿ ಮನುಷ್ಯ ಮನುಷ್ಯನಂತಾಗುತ್ತಾನೆ ಎಂಬುದು ನನ್ನ ಅನಿಸಿಕೆ. ಈ ಲೇಖನವನ್ನು ಓದುತ್ತಿರುವ ಗಂಡಸು ನೀವಾಗಿದ್ದಲ್ಲಿ, ಇನ್ನು ಸಂಕೋಚ ಬೇಡ, ನಿಮ್ಮ ಭಾವನೆಯನ್ನು ಅದುಮಿಟ್ಟುಕೊಳ್ಳುವ ಪ್ರಯತ್ನದಿಂದ ದಿನವೂ ಹಣ್ಣಾಗದೇ, ಅತ್ತು ಅದನ್ನು ಹೊರಗೆಡವಿಬಿಡಿ!!. ಇದನ್ನು ಓದುತ್ತಿರುವ ಮಹಿಳೆಯರೇ...ಅಳುವ ಗಂಡಸನ್ನು ನೀವು ಖಂಡಿತಕ್ಕೂ ನಂಬಬಹುದು ಮತ್ತು ನೀವು ಅವರ ಬಗ್ಗೆ ಹೆಮ್ಮೆಯನ್ನೂ ಪಟ್ಟುಕೊಳ್ಳಬಹುದು-ಯಾಕೆಂದರೆ ಅವರ ಭಾವುಕತೆ ಎಂದೆಮದಿಗೂ ತೀವ್ರವಾಗಿರುತ್ತದೆ ಮತ್ತು ಸಮಾಜ ಸ್ನೇಹಿಯಾಗಿರುತ್ತೆ. ಅವರೂ ಅಳಲಿ ಬಿಡಿ!!.

ನಗು ನಗುತ್ತಾ ಬದುಕೋಣ, ನೋವನ್ನು ಅತ್ತು ಹೊರ ಹಾಕಿಕೊಳ್ಳುವ ಮೂಲಕ...


Thursday 13 March 2014

ಶೋಷಣೆಯ ಎರಡು ವ್ಯಾಖ್ಯೆಗಳು...

ಜನಪ್ರತಿನಿಧಿ ಯ ಅಂಕಣ ಪ್ರದಕ್ಷಿಣೆ ಯಲ್ಲಿ ನನ್ನ ಈ  ವಾರದ ಬರಹ 

ಇತ್ತೀಚೆಗೆ ಕಾಲೇಜೊಂದರ ಭಾಷಣ ಸ್ಪರ್ಧೆಯೊಂದರಲ್ಲಿ ತೀರ್ಪುಗಾರನಾಗಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅದನ್ನು ಒಂದು ಸುವರ್ಣಾವಕಾಶ ಎಂದೇ ಭಾವಿಸಿದ್ದೇನೆ. ಬೆಳಿಗ್ಗೆ ಸಮಯಕ್ಕೆ ಸ್ವಲ್ಪ ಮುಂಚೆಯೇ ಕಾಲೇಜಿಗೆ ಹೋಗಿ, ಸಹ ತೀರ್ಪುಗಾರರಾಗಿದ್ದ ಖ್ಯಾತ ಲೇಖಕಿ ಸತ್ಯಮೂರ್ತಿ ಸುರತ್ಕಲ್ ಅವರ ಜೊತೆ ಮಾತಾಡುತ್ತಾ ನಿಂತಿದ್ದಾಗ, ಅಲ್ಲಿನ ಮಕ್ಕಳ ಕಲರವ ಕಂಡು ಮುದಗೊಂಡ ಅವರು ಒಂದು ಮಾತು ಹೇಳಿದರು. ಈ ಶಾಲೆ-ಕಾಲೇಜಿನ ಅಧ್ಯಾಪಕ-ಉಪನ್ಯಾಸಕರ ಮನಸ್ಸಿಗೆ  ವಯಸ್ಸೇ ಆಗುವುದಿಲ್ಲ, ಯಾಕೆಂದರೆ ಅವರ ಸುತ್ತಲೂ ದಿನ ನಿತ್ಯವೂ ಎಳೆಯ ಮನಸ್ಸುಗಳೇ ತುಂಬಿಕೊಂಡು ಅವರನ್ನು ಸದಾ ಉಲ್ಲಸಿತರನ್ನಾಗಿಸಿರುತ್ತದೆ. ಆ ಮಟ್ಟಿಗೆ ಅವರು ಪುಣ್ಯವಂತರು ಎಂದು ಹೇಳುತ್ತಿದ್ದರು. ಅಲ್ಲಿ ಕೆಲವೇ ಕೆಲವು ಹೊತ್ತು ಕಳೆದ ನನಗೂ ಅವರ ಮಾತು ಸತ್ಯವೆನಿಸಿತು.

ಇಲ್ಲಿ ನಾನು ಹೇಳ ಹೊರಟಿರುವ ವಿಷಯ ಬೇರೆ. ಅಂದು ಕಾಲೇಜಿನಲ್ಲಿ ಕನ್ನಡ ಭಾಷಣಕ್ಕೆ ಕೊಟ್ಟಿದ್ದ ವಿಷಯ, ಭಾರತದಲ್ಲಿ ಮಹಿಳೆಯ ಸಮಸ್ಯೆ ಮತ್ತು ರಕ್ಷಣೆ. ೧೭ ವಿದ್ಯಾರ್ಥಿಗಳು ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಳೆಯ ಮಕ್ಕಳ ಮನಸ್ಸು ಎಂದೆಂದಿಗೂ ಪ್ರಸ್ತುತ ಸಮಸ್ಯೆಯ ಸುತ್ತ ಸುತ್ತುತ್ತಿರುವಾಗ ಅವರು ಅದನ್ನು ವಿಶ್ಲೇಷಣೆಗೆ ಒಡ್ಡಿಕೊಳ್ಳುವ ಪರಿ ಕಂಡು ನಿಜಕ್ಕೂ ಮನ ಒಮ್ಮೆ ಭಾವುಕವಾದರೆ, ಮತ್ತೊಮ್ಮೆ ಈ ಮನ:ಸ್ಥಿತಿಯನ್ನು ನಮ್ಮ ಮಕ್ಕಳಿಗೆ ಒದಗಿಸಿದರೆ ಮುಂದಿನ ಜನಾಂಗ, ಭಾರತ ಹೇಗಾದೀತು ಎಂಬ ನಿರಾಶಾ ಭಾವನೆ ನನ್ನದಾಗಿತ್ತು.

ಅಲ್ಲಿ ಮಾತಾಡಿದ ೧೭ಮಕ್ಕಳುಗಳಲ್ಲಿ, ಕೇವಲ ಇಬ್ಬರು ಮಾತ್ರ ಹುಡುಗರಾಗಿದ್ದರು. ಇದು ಮೊದಲ ನೋಟಕ್ಕೇ ಮಹಿಳೆಯ ಸುರಕ್ಷೆ ಮತ್ತು ಸಮಸ್ಯೆಯ ಬಗ್ಗೆ ಮಾತಾಡಬೇಕಿರುವುದು  ಕೇವಲ ಮಹಿಳೆ/ಹುಡುಗಿಯೇ ಆಗಿರಲಿ ಎಂಬ ಸಾಮಾನ್ಯ ಭಾವನೆಯೋ ಎಂಬ ಅನುಮಾನ ಕಾಡಿದಾಗ, ಅದಕ್ಕೆ ಪರಿಹಾರವನ್ನೂ ಸಂಘಟಕರು ಹೇಳಿದಂತೆ ,ಇಂದು ಭಾಷಣ ಅಥವಾ ಇಂತಹಾ ಯಾವುದೇ ಸ್ಪರ್ಧೆಗೆ ಹುಡುಗಿಯರು ಮಾತ್ರ ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂದರು. ಅದು ಒತ್ತಟ್ಟಿಗಿಡೋಣ. ಮಾತಾಡಲು ವೇದಿಕೆ ಹತ್ತಿದ  ಮಕ್ಕಳ(ಯುವ ಮನಸ್ಸುಗಳು) ಮುಖ್ಯ ಗಮನ ತಮ್ಮ ಶೈಲಿಯತ್ತ ಮತ್ತು ಕಡ ತಂದ ಸಂಸ್ಕೃತ ಶ್ಲೋಕಗಳನ್ನುದ್ಧರಿಸುವತ್ತ ನೆಟ್ಟಿತ್ತು. ಯತ್ರ ನಾರೀ.....ಎಂಬ ಶ್ಲೋಕವನ್ನು ಮತ್ತು ಗಾಂಧೀಜಿಯವರು ಮಧ್ಯ ರಾತ್ರಿ ಹುಡುಗಿಯೊಬ್ಬಳು ನಿರ್ಭಯವಾಗಿ ಮನೆ ಹೊರಗೆ ಹೋದಾಗಲೇ ಭಾರತ ಸ್ವತಂತ್ರ ಎಂಬ ಉಕ್ತಿಯನ್ನು ೧೭ರಲ್ಲಿ ೧೪ ಮಕ್ಕಳು ಪುನರಪಿ ಹೇಳಿದರು!! ಇದನ್ನು ನಾನೂ ತೀರ್ಪುಗಾರನಾಗಿ ನನ್ನ ಮಾತುಗಳಲ್ಲಿ ಹೇಳಿದೆ ಮತ್ತು ಉಳಿದ ಇಬ್ಬರು ತಿರ್ಪುಗಾರರೂ ಇದನ್ನು ಅನುಮೋದಿಸಿದರು. ಉಳಿದಂತೆ ಎಲ್ಲಾ ಮಕ್ಕಳು ಮಾತಾಡಿಕೊಂಡು ಬಂದಿದ್ದಂತೆ ಉಜಿರೆಯ ಸೌಜನ್ಯಾ ಪ್ರಕರಣ, ದೆಹಲಿ-ಮಣಿಪಾಲಗಳ ಗ್ಯಾಂಗ್ ರೇಪ್ ವಿಷಯಗಳನ್ನು ಮತ್ತೆ ಮತ್ತೆ ಹೇಳಿದರು. ಅದನ್ನು ಹೇಳುವಾಗ ಒಂದು ರೀತಿಯ ಕ್ರಾಂತಿಕಾರಿ ಮನೋಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. 

ಅಲ್ಲಿ ನಾವು ಗಮನಿಸಿದ್ದೆಂದರೆ ಎಲ್ಲಾ ಮಕ್ಕಳು ಪ್ರಸ್ತುತ ಘಟನೆಗಳ ಬಗ್ಗೆ ತೆರೆದ ಕಣ್ಣಾಗಿದ್ದಾರೆ ಮತ್ತು ಅದನ್ನು ವಿರೋಧಿಸುವ ಮನೋಭಾವ ಎಲ್ಲರಲ್ಲೂ ಇದೆ. ಆದರೆ ಅಲ್ಲಿ ರೋಷದಿಂದ ವ್ಯವಸ್ಥೆ ಪೂರ್ತಿ ಕೆಟ್ಟುಹೋಗಿದೆ ಎಂಬ ಹತಾಶೆ, ಇನ್ನು ಇಲ್ಲಿ ಏನೂ ಸರಿಯಾಗದೇನೋ  ಎಂಬ ನಿರಾಶೆ, ವಿರೋಧಿಸುವುದರಿಂದ ನಮಗೇನಾದೀತೋ ಎಂಬ ಅಳುಕು ಎದ್ದು ಕಾಣುತ್ತಿತ್ತು. ಇನ್ನು ಅಲ್ಲಿ ಮಾತಾಡಿದ ಹೆಚ್ಚಿನ ಹುಡುಗಿಯರು ಪುರುಷರಿರುವುದೇ ಮಹಿಳೆಯ ಶೋಷಣೆ ಮಾಡುವುದು ಮತ್ತು ಪುರುಷ ವರ್ಗಕ್ಕೆ ನಮ್ಮ ಧಿಕ್ಕಾರ ಎಂಬರ್ಥದ ಮಾತುಗಳನ್ನು ಒತ್ತಿ ಒತ್ತಿ ಹೇಳಿದರು. ಮತ್ತೂ ಒಂದು ತಮಾಷೆಯ ಅಥವಾ ಯೋಚಿಸಬೇಕಾದ ವಿಷಯವೆಂದರೆ, ಎಲ್ಲಾ ಹುಡುಗಿಯರೂ ಪ್ರಪಂಚದಲ್ಲಿನ ಪುರುಷರು ಶೋಷಣೆ ಮಾಡುತ್ತಲೇ ಇದ್ದಾರೆ ಎಂದು ಹೇಳಿದರು ಮತ್ತು ಹೆಣ್ಣು ಹೆಣ್ಣೆಂದು ಹೀಗಳೆಯುವಿರೇಕೆ ಎಂದು ಕೂಗಿದರೇ ಹೊರತು, ತಮ್ಮದೇ ಮನೆಯಲ್ಲಿರುವ ಅಣ್ಣ, ತಮ್ಮ, ಅಪ್ಪ...ಹೀಗೆ ಪುರುಷರಿಂದ ಸಿಗುವ ರಕ್ಷಣೆಯ ಬಗ್ಗೆ (ಸಿಗುತ್ತಿರುವ ಅಥವಾ ಸಿಗದಿರುವ!) ಚಕಾರವನ್ನೂ ಎತ್ತಲಿಲ್ಲ!!.  ಅಂದರೆ ಇಂದಿನ ಒಟ್ಟೂ ಸಮಾಜ ಮಹಿಳಾ ವಿರೋಧಿಯೇ ಎಂಬಂತೆ ಕಂಡು ಬಂತು!. ಮಹಿಳೆ ಏನನ್ನೂ ಸಾಧಿಸ ಬಲ್ಲಳು ಮತ್ತು ಅದಕ್ಕೆ ಪುರುಷ ವಿರೋಧಿ ಎಂಬಂತೆ ಮಾತುಗಳು ಕೇಳಿಬಂದುವು.

ಇದು ಒಂದು ಭಾಗವಾದರೆ ಮತ್ತೊಂದು ಭಾಗ ಸ್ವಾರಸ್ಯಕರವಾಗಿದೆ. ಅದೇ ಕಾಲೇಜಿನಲ್ಲಿ ಅದೇ ಮಧ್ಯಾಹ್ನ, ಕರ್ನಾಟಕದ ಇಂದಿನ ಲೋಕಾಯುಕ್ತ ವೈ ಭಾಸ್ಕರ ರಾವ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವಿತ್ತು. ಸಂಘಟಕರು ಬಹುಶ: ನಿರೀಕ್ಷಿಸಿದ್ದು  ಲೋಕಾಯುಕ್ತರೆನ್ನುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ, ಪ್ರಜಾಪ್ರಭುತ್ವದ ವಿಚಾರಗಳು ಹೆಚ್ಚು ಚರ್ಚಿತವಾಗಬಹುದು ಎಂದಿದ್ದಿರಬಹುದು. ಆದರೆ ೯೦ಶೇಕಡಾ ವಿದ್ಯಾರ್ಥಿಗಳೇ ತುಂಬಿದ್ದ ಆ ಸಭಾಂಗಣದಲ್ಲಿ ಲೋಕಾಯುಕ್ತರಿಗೆ ಅನೇಕ ಪ್ರಶ್ನೆಗಳು ಬಂದುವು. ಅದರಲ್ಲೂ ಮುಖ್ಯವಾಗಿ ಕೆಲವು ಹುಡುಗರೇ ಇಲ್ಲಿ ಪ್ರಶ್ನೇ ಕೇಳುವುದರಲ್ಲಿ ಮುಂದಿದ್ದರು. ಇಬ್ಬರು ಕೇಳಿದ ಪ್ರಶ್ನೆಗಳ ಸ್ವರೂಪ ಒಂದೇ ಆಗಿತ್ತು ಓರ್ವ ವಿದ್ಯಾರ್ಥಿ, ಇಂದಿನ ಹೆಚ್ಚಿನ ಕೇಸುಗಳಲ್ಲಿ ಮಹಿಳೆ ತನಗಿರುವ ಕಾನೂನಿನ ಸಹಾನುಭೂತಿಯನ್ನು ದುರುಪಯೋಗಪಡಿಸಿಕೊಂಡು ಪುರುಷನನ್ನು ಪೀಡಿಸುವ ಸಂಸ್ಕೃತಿ ಹೆಚ್ಚುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ ಲೋಕಾಯುಕ್ತರು ಇದು ಅತ್ಯಂತ ವಿರಳ ಪ್ರಸಂಗಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದರು. ತಕ್ಷಣವೇ, ಮತ್ತೋರ್ವ ಸಾರ್ವಜನಿಕರು ಎದ್ದು ನಿಂತು, ಲೋಕಾಯುಕ್ತರ ಮಾತನ್ನು ಖಂಡಿಸಿ, ಇದು ಹೆಚ್ಚಿನ ಸಂದರ್ಭಗಳಲ್ಲಿ ಆಗುತ್ತದೆ. ಓರ್ವ ಮಹಿಳೆ ವರದಕ್ಷಿಣೆಯ ವಿರುದ್ದ, ಗಂಡನ ಮನೆಯವರ ಮೇಲೆ ಕೇಸು ಹಾಕಿದಾಗ, ಯುಕ್ತಾಯುಕ್ತತೆ, ಸತ್ಯ ಯಾವುದನ್ನೂ ವಿಶ್ಲೇಷಿಸದೇ ಗಂಡನ ಮನೆಯ ಎಲ್ಲರನ್ನೂ ಜೈಲಿಗಟ್ಟಿ ವಿಚಾರಿಸುವ ಪರಿಸ್ಥಿತಿ ಇದೆ. ಇದಕ್ಕೂ ಮಿಗಿಲಾಗಿ, ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗುವಷ್ಟರಲ್ಲಿಯೇ ಗಂಡ ಮತ್ತು ಮನೆಯವರಿಗೆ ಸಾಕಷ್ಟು ಮಾನಸಿಕ ಹಿಂಸೆ ಆಗಿರುತ್ತದೆ ಎಂದು ಏರು ದನಿಯಲ್ಲಿ ಹೇಳಿದಾಗ ಇಡೀ ಸಭಾಂಗಣ ಸ್ತಬ್ಧವಾಗಿತ್ತು!!. ಕೊನೆಗೆ ಲೋಕಾಯುಕ್ತರೂ ಈ ವಿಚಾರವನ್ನು ಅಲ್ಲಗಳೆಯಲಾಗದು ಎಂದಾಗ ಸಭಾಂಗಣದ  ಎಲ್ಲರೂ ಚಪ್ಪಾಳೆ ಹೊಡೆದರು. ಇಂದಿನ ಕಾನೂನಿನಲ್ಲಿ ಮಹಿಳೆಗೆ ನೆರವಾಗುವ ರೀತಿಯ ವಿಶೇಷ ಅನುಕಂಪ ವನ್ನು ೯೫% ಕೇಸುಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಸಭಾಂಗಣದಲ್ಲಿ ಅನೇಕರು ಹೇಳಿದಾಗ, ಒಂದು ರೀತಿಯ ಆಶ್ಚರ್ಯದ ಚಹರೆ ಅಲ್ಲಿ ನೆಲೆಸಿತ್ತು. 

ಎಲ್ಲವೂ ಮುಗಿಸಿ ಹೊರಬಂದಾಗ ಮನಸ್ಸು ಒಂದು ರೀತಿಯ ಗೊಂದಲದಿಂದ ಕೂಡಿತ್ತು. ಎರಡೂ ವಿಚಾರಗಳನ್ನು ಒಮ್ಮೆ  ಅವಲೋಕಿಸಿದರೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಒಂದನೆಯದಾಗಿ ಎಲ್ಲಾ ಮಹಿಳೆಯರೂ ತಮ್ಮನ್ನು ಶೋಷಣೆ ಮಾಡುತ್ತಾರೆ ಎಂದು ಭಾಷಣದಲ್ಲಿ ಖಂಡಿಸಿ, ಇದರ ವಿರುದ್ಧದ ಕೂಗನ್ನು ಗಟ್ಟಿಯಾಗಿ ಹೇಳಿದ್ದರೆ, ಮಧ್ಯಾಹ್ನದ ವೇಳೆಗೆ ಅವರೂ ಇದ್ದ ಸಭಾಂಗಣದಲ್ಲಿನ ಚಿತ್ರಣವೇ ಬೇರೆಯಾಗಿತ್ತು. ಇಲ್ಲಿ ಸಮಸ್ಯೆ ಇದ್ದುದು ಎಲ್ಲಿ ಎಂಬುದಕ್ಕೆ ಸ್ಪಷ್ಟ ಉತ್ತರವೇ ಸಿಗಲಿಲ್ಲ.
ಸರಿ, ಇಂದು ಮಹಿಳೆಯ ಮೇಲೆ ದೌರ್ಜನ್ಯ, ಶೋಷಣೆ ಹಿಂದಿನಂತೆಯೇ ನಡೆದಿದೆ. ಇದು ಎಲ್ಲೆಡೆಯಲ್ಲಿಯೂ ಕಂಡು ಬರುತ್ತದೆ. ಕೊನೆಗೆ ಎರಡೂ ಕಾರ್ಯಕ್ರಮಗಳ ಬಳಿಕ, ಸ್ನೇಹಿತರಲ್ಲಿ ಲೋಕಾಭಿರಾಮವಾಗಿ ಮಾತಾಡುವಾಗ  ಬಂದ ಅಭಿಪ್ರಾಯವೇ ಬೇರೆ. ಅದೆಂದರೆ ಬೆಳಿಗ್ಗೆ ಮಕ್ಕಳು ಹೇಳಿದ್ದೂ, ಮಧ್ಯಾಹ್ನದ ವೇಳೆಗೆ ಚರ್ಚೆಯ ವೇಳೆ ಹೊರ ಬಂದ ವಿಚಾರ ಎರಡೂ ಸರಿಯೇ!!. ಮಕ್ಕಳು ಹೇಳಿದಂತೆ ಮಹಿಳೆಯ ಮೇಲಿನ ದೌರ್ಜನ್ಯ ಮಿತಿ ಮೀರಿದ್ದು ಸರಿ. ಅದನ್ನು ಖಂಡಿಸಿ ಅವರಿಂದು ಮಾತಾಡುತ್ತಿರುವುದೂ ಸರಿ. ಮಹಿಳೆಯರ ಮೇಲಿನ ಕಾನೂನಿನ ಅನುಕಂಪದಿಂದ ಪುರುಷ ಪೀಡೆಯಾಗುತ್ತಿರುವುದೂ ಸರಿಯೇ. ಇಲ್ಲಿ ಸಮಸ್ಯೆ ಏನೆಂದರೆ, ಎರಡೂ ಕಡೆಗಳಲ್ಲಿ ಒಂದು ವಿರೋಧಾಭಾಸ ಇದೆ. ಅದೆಂದರೆ ಮೊದಲ ವಿಷಯದಲ್ಲಿ ಇಂದು 'ನಿಜವಾಗಿಯೂ' ಶೊಷಣೆ, ಪೀಡೆಗೊಳಗಾಗುವ ಮಹಿಳೆ ದೂರನ್ನೇ ಕೊಡುವುದಿಲ್ಲ!. ಅದಕ್ಕೆ ಮತ್ತೆ ಅನೇಕ ಕಾರಣಗಳು ಹುಟ್ಟಿಕೊಳ್ಳುತ್ತವೆ. ಹಾಗೆ ದೂರನ್ನು ಕೊಡಲೇ ಬೇಕಾದರೆ ಆಕೆಗೆ ಮತ್ತೆ ಅನೇಕ ಪ್ರಭಾವಗಳು ಬೇಕಾಗುತ್ತದೆ. ರಾಜಕೀಯ, ಆರ್ಥಿಕ ಬೆಂಬಲ, ಕುಟುಂಬದ ಬೆಂಬಲ...ಹೀಗೆ ಅನೇಕ ವಿಷಯಗಳನ್ನು ಅವಲೋಕಿಸಿ, ಸೂಕ್ಷ್ಮವಾಗಿ ವಿಮರ್ಶಿಸಿಕೊಂಡು ಆಕೆ ದೂರನ್ನು ಕೊಡಬೇಕಾಗುತ್ತದೆ. ಅದು ಆಗುವುದಿಲ್ಲ ಎಂದಾಗ ಆಕೆ ಆ ಶೋಷಣೆಯನ್ನು ಮೌನವಾಗಿ ನುಂಗಿಕೊಳ್ಳುತ್ತಾಳೆ. ಅದೇ ಎರಡನೆಯ ವಿಷಯದಲ್ಲಿ (ಹೆಚ್ಚಿನ ಸಂದರ್ಭಗಳಲ್ಲಿ) ಬೇರೆಯಾಗಿರುತ್ತದೆ. ಈ ಮೇಲೆ ಹೇಳಿದ ಎಲ್ಲಾ ಅನುಕೂಲ ಇರುವ ಮಹಿಳೆಯನ್ನು ಮೇಲಿನ ಪ್ರಭಾವಗಳು 'ಬಳಸಿಕೊಳ್ಳುತ್ತವೆ'. ಇದರ ಪರಿಣಾಮವಾಗಿ ಆಕೆ ದೂರು ಕೊಡುತ್ತಾಳೆ...ಪರಿಸ್ಥಿತಿಯ ವಿಕೋಪಕ್ಕೆ ಸಿಲುಕಿ ಪುರುಷನೂ ಪೀಡನೆಗೊಳಗಾಗುತ್ತಾನೆ!!. ಇದು ಇಂದು ಎಷ್ಟೋ ಕಡೆಗಳಲ್ಲಿ ನಡೆಯುತ್ತಿರುವ, ಆದರೆ ಬಹಿರಂಗವಾಗಿ ಯಾರೂ ಒಪ್ಪಿಕೊಳ್ಳಿದಿರುವ ಸತ್ಯ. ಮತ್ತು ನಮ್ಮ ಸಮಾಜದ ಮಟ್ಟಿಗೆ ದುರಂತವೂ!!
ಈ ಎಲ್ಲಾ ಅವಲೋಕನದ ನಂತರ, ಓರ್ವ ಮಹಿಳೆಯಲ್ಲಿಯೇ ಈ ಬಗ್ಗೆ ಕೇಳಿದಾಗ ನನ್ನ ಮಾತಿಗೆ ಆಕೆಯ ಸಹಮತವೂ ಇತ್ತು!. ಆಕೆಯ ಅಭಿಪ್ರಾಯದಂತೆ ಇಂದು ಹೆಚ್ಚಿನ ಕುಟುಂಬಗಳಲ್ಲಿ ಆಗುತ್ತಿರುವ ಸಮಸ್ಯೆ ಎಂದರೆ ಮನೆಯಲ್ಲಿ ಗಂಡು ಮಗು ಹುಟ್ಟಿದಾಗ ಅದನ್ನು ಬೆಳೆಸುತ್ತಾರೆ.....ಒಂದು ಮಗುವಿನಂತೆ!. ಅದು ತನ್ನ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯುತ್ತದೆ. ಆದರೆ ಅದೇ ಆ ಮಗು ಹೆಣ್ಣಾಗಿದ್ದರೆ, ಅದನ್ನು 'ಹೆಣ್ಣು ಮಗು'ವಿನಂತೆ ಸಾಕಲಾಗುತ್ತದೆ!! ಹೆಜ್ಜೆ ಹೆಜ್ಜೆಗೂ ಅದನ್ನು ಹೆಣ್ಣು..ಹೆಣ್ಣೆಂಬ ಎಚ್ಚರಿಕೆಯ ನಡುವೆ ಬೆಳೆಸಲಾಗುತ್ತದೆ. ಪರಿಣಾಮವೆಂದರೆ ಆ ಮಗುವಿಗೆ ಸ್ವಲ್ಪ ಬುದ್ದಿ ಬಂತೆಂದರೆ ತಾನು ಪುರುಷನಿಗಿಂತ ಕೆಳಗಿನವಳು, ತನಗೆ ಅವನಿಗಿಂತ ಇತಿ ಮಿತಿಗಳು ಹೆಚ್ಚು ಎಂಬ ಭಾವನೆ ಬೆಳೆಯುತ್ತಾ ಹೋಗುತ್ತದೆ. ಪ್ರಾಥಮಿಕ ವಿದ್ಯಾಭ್ಯಾಸದ ಹಂತದಿಂದಲೂ ಅದನ್ನೇ ಆಕೆಯ ಮನಸ್ಸಿನಲ್ಲಿ ಗಟ್ಟಿ ಮಾಡಲಾಗುತ್ತದೆ. ಕೊನೆಗೆ ಆಕೆಗೆ ತಾನೂ ಎಲ್ಲರಂತೆ ಸ್ವತಂತ್ರಳು ಎಂಬ ಭಾವ ಬರುವಷ್ಟರಲ್ಲಿ, ತನ್ನದೇ ಬುದ್ದಿ ಮತ್ತೆಯಲ್ಲಿ ಅದನ್ನು ವಿಶ್ಲೇಷಿಸುವ ಹಂತದಲ್ಲಿ ಆಕೆಗೆ ಇಡೀ ಪುರುಷ ವ್ಯವಸ್ಥೆ, ತನ್ನನ್ನು ಈ ಕೂಪಕ್ಕೆ ತಳ್ಳಿದೆ ಎಂಬ ಹತಾಶಾ ಹಾಗೂ ವಿರೋಧಿ ಭಾವನೆ ಬಲಿತಿರುತ್ತದೆ. ಆಗ ಈ ಸಂಘರ್ಷಗಳು ಆರಂಭವಾಗುತ್ತವೆ!!. 

ಈ ಮಾತನ್ನೂ ಒಪ್ಪಲೇ ಬೇಕು. ಮತ್ತು ಒಂದು ಹಂತದ ತನಕ ಅದು ಸತ್ಯವೂ ಅನಿಸುತ್ತದೆ. ಹೀಗೆ ಮಹಿಳಾ ಶೋಷಣೆ, ಪುರುಷ ಪೀಡೆ...ಅದರದ್ದೇ ಆದ ವ್ಯಾಪ್ತಿಯಲ್ಲಿ ನಡೆಯುತ್ತಲೇ ಇರುತ್ತದೆ. ಈ ಕೂಗು ನಿರಂತರವಾಗಿರುತ್ತದೆ. ಇಲ್ಲಿ ಯೋಚಿಸಬೇಕಾದ ಮತ್ತೊಂದು ವಿಚಾರವೆಂದರೆ, ಗಂಡು ಮಗು ಕೇವಲ ಮನೆಯ ಸದಸ್ಯನಾಗಿ ಬೆಳೆಯುತ್ತಾ, ಮಹಿಳೆ ಎಂದರೆ ಹೀಗೇ ಎಂಬ ಪೂರ್ವಾಗ್ರಹದಿಂದ ಬೆಳೆದಾಗ, ಮುಂದಿನ ಸಾಮಾಜಿಕ ಅನಾಹುತಗಳಿಗೆ ಕಾರಣನಾಗುತ್ತಾನೆ!!. ಇದೂ ಮನೋ ವಿಜ್ಞಾನಕ್ಕೆ ಬರುವ ವಿಷಯವಾದರೂ ಸಾಮಾನ್ಯ ಜ್ಞಾನದಿಂದಲೂ ಅಥೈಸಿಕೊಳ್ಳಬಹುದಾದ ಸತ್ಯ. ಹೇಗೆ ಹೆಣ್ಣು ತನ್ನ 'ತಿಳುವಳಿಕೆ'ಯಿಂದ ತಾನೂ ಪುರುಷನಷ್ಟೇ ಸಮಾನಳು ಎಂದು ಕೊಳ್ಳುತ್ತಾಳೋ, ಹಾಗೆಯೇ ಪುರುಷನೂ ಅಂದುಕೊಂಡರೆ ಅದು ಸಹಜ. ಹಾಗಾದಾಗ ಆತ ಸುಸಂಸ್ಕೃತನೆನಿಸೊಕೊಳ್ಳುತ್ತಾನೆ.

ಆದರೆ ಎರಡೂ ಕಡೆ ವಿರುದ್ದದ ಪರಿಸ್ಥಿತಿಯನ್ನೂ ಅಲ್ಲಗಳೆಯಲಾಗದು. ಹಾಗಾದಾಗ ಈ ರೀತಿಯ ವೈಪರೀತ್ಯಗಳುಉ ನಡೆಯುತ್ತದೆ. ಒಟ್ಟಾರೆಯಾಗಿ ವಿಷಯವನ್ನು ಚಿಂತನೆಯ ಒರೆಗೆ ಹಚ್ಚಿ ಯೋಚಿಸಿದರೆ, ಮಹಿಳೆ-ಪುರುಷ ಇಬ್ಬರೂ ಒಂದಿಲ್ಲೊಂದು ರೀತಿಯ ಶೋಷಣೆಯನ್ನು ಅನುಭವಿಸುತ್ತಿರುತ್ತಾರೆ. ಅಂಕಿ ಸಂಖ್ಯೆಯಲ್ಲಿ ವ್ಯತ್ಯಾಸವಿರಬಹುದಷ್ಟೇ!!
ಕೊನೆಗೂ ನನಗೆ ಬಹಳ ದೊಡ್ಡ ಪ್ರಶ್ನೆಯಾಗಿ ಕಾಡಿದ್ದು ಮೇಲಿನ ಭಾಷಣ ಸ್ಪರ್ಧೆಯ ವಿಚಾರದಲ್ಲಿ ಯಾವ ಭಾಷಣ ಸ್ಪರ್ಧಿಯೂ ಮಹಿಳೆಯ ಸಮಸ್ಯೆಯ  ಪರಿಧಿಯಿಂದ ಹೊರಬಂದು ಆಕೆಯ ರಕ್ಷಣೆಯ ಬಗ್ಗೆ ಮಾತಾಡಲಿಲ್ಲ. ಮಧ್ಯಾಹ್ನವೂ ಲೋಕಾಯುಕ್ತರಿಗೆ ಕೇಳಿದ ಕಾನೂನಿನ ಅನುಕಂಪದಿಂದಾಗುವ ಪುರುಷ ಪೀಡನೆಯ ವಿಷಯದಲ್ಲಿ ಯಾವ ಮಹಿಳೆಯೂ ಮಾತಾಡಲಿಲ್ಲ. ಒಂದು ರೀತಿಯ ದ್ವಂದ್ವ, ಇಂದು ಸಾಮಾಜಿಕವಾಗಿಯೂ ಬೆಳೆದಿದೆ ಅನ್ನಬಹುದು. 


Thursday 6 March 2014

ನಾರಾಯಣ ಶಬರಾಯರಿಗೆ ೨೦೧೪ನೇ ಸಾಲಿನ 'ಸುಮ ಕ್ರಷ್ಣ 'ಯಕ್ಷಗಾನ ಪ್ರಶಸ್ತಿ.





ಅತ್ತೆ ಸುಮತಿ ಮತ್ತು ಮಾವ ಕೃ‍ಷ್ಣ ಮೂರ್ತಿ ಇಬ್ಬರೂ ಇನ್ನಿಲ್ಲ. ಮಂದಾರ್ತಿ ಮೇಳದಲ್ಲಿ ದೀರ್ಘ ಅವಧಿಗೆ ಅಡುಗೆ-ಪೂಜೆಯವರಾಗಿದ್ದ ಮಾವ ಯಕ್ಷಗಾನವನ್ನೇ ಜೀವನ ಎಂದುಕೊಂಡು ಬದುಕಿದವರು. ಅತ್ತೆ ಸುಮತಿ, ಯಕ್ಷಗಾನದ ವಿಶೇ‍ಷ ಒಲವುಳ್ಳವರು....ಈಗ ಇಬ್ಬರೂ ಕೇವಲ ನೆನಪು. ಅವರಿಗೆ ಗೌರವ ಪೂರ್ವಕವಾಗಿ ಇಬ್ಬರ ಸ್ಮರಣಾರ್ಥ ಈ ವರ್ಷದಿಂದ 'ಸುಮಕೃ‍ಷ್ಣ' ಯಕ್ಷಗಾನ ಪ್ರಶಸ್ತಿಯನ್ನು ಆರಂಭಿಸಿದ್ದೆವೆ. ಅವರ ಮಕ್ಕಳು-ಅಳಿಯಂದಿರು ಸೇರಿ ಕೊಡಮಾಡುವ ಈ ಪ್ರಶಸ್ತಿ ಐದು ಸಾವಿರ ರೂಪಾಯಿಯ ಗೌರವಧನ, ಪ್ರಶಸ್ತಿ ಪತ್ರ, ಫಲಕಗಳನ್ನು ಒಳಗೊಂಡಿರುತ್ತದೆ. ಇದನ್ನು ಅರೆಹೊಳೆ ಪ್ರತಿಷ್ಠಾನ (ರಿ) ಪ್ರತೀ ವರ್ಷ ಕೊಡಮಾಡುತ್ತದೆ. ಈ ವರ್ಷದ 'ಸುಮಕೃ‍ಷ್ಣ' ಯಕ್ಷಗಾನ ಪ್ರಶಸ್ತಿ ಗೆ ಬಡಗು-ತೆಂಕಿನ ಖ್ಯಾತ ಭಾಗವರ ಶ್ರೀ ನಾರಾಯಣ ಶಬರಾಯ ಅವರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಏಪಿಲ್ 24 ರಂದು ಕೆಂಜೂರು ಸಮೀಪದ ಬಲ್ಲೆಬೈಲಿನಲ್ಲಿರುವ ನಮ್ಮ ಮನೆ 'ನಂದಗೋಕುಲ'ದ ಅಂಗಳದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೆರಲಿದೆ. ಅದೇ ರಾತ್ರಿ ಮಂದಾರ್ತಿ ಮೇಳದವರಿಂದ ನಮ್ಮ ವಾರ್ಷಿಕ ಸೇವೆಯಾಗಿ ಯಕ್ಷಗಾನ ನಡೆಯಲಿದೆ.....ತಮಗೆಲ್ಲರಿಗೂ ಇದು ಅಕ್ಕರೆಯ ಸುದ್ದಿ....ಪ್ರೀತಿಯ ಆಹ್ವಾನ...ಆ ದಿನವನ್ನು ನಮಗಾಗಿ ಮೀಸಲಿಡಿ....
                                                 
ಸುಮ ಕ್ರಷ್ಣ ಯಕ್ಷಗಾನ ಪ್ರಶಸ್ತಿ ಗೆ ಆಯ್ಕೆಯಾದ 
ನಾರಾಯಣ ಶಬರಾಯರಿಗೆ ಅಭಿನಂದನೆಗಳು