Tuesday 25 March 2014

'ಕೊಲೆ'ಯ ಹಿಂದೆ-ಮುಂದೆ...!

ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...ಜನಪ್ರತಿನಿಧಿ ಯಲ್ಲಿ ನನ್ನ ಇಂದಿನ ಲೇಖನ... 


ಒಂದು ಕ್ಷಣ ಬೆಚ್ಚಿ ಬೀಳಿಸುವ ಘಟನೆ ಆಗಿತ್ತದು!

ಅದೊಂದು ಪುಟ್ಟ ಸಂಸಾರ. ಕಿರಣ್ ಎಂಬ ಗಂಡ, ಸೌಮ್ಯಾ ಎಂಬ ಹೆಂಡತಿ ಮತ್ತು ನಾಲ್ಕರ ಹರೆಯದ ಮುದ್ದಾದ ಮಗುವಿದ್ದ ಆ ಸಂಸಾರ ನೆಮ್ಮದಿಯಿಂದಿತ್ತು. ಆತ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಮೆನೇಜರ್.   ಆಂಧ್ರ ಮೂಲದ ಅವರು ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.  

ಕಿರಣನ  ಕೈಕೆಳಗೆ ಶ್ರದ್ಧಾ ಎಂಬ ಆಕೆ ಕೆಲಸ ಮಾಡುತ್ತಿದ್ದಳು. ಅವಳು ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ಶ್ರದ್ಧಾ ಮತ್ತು ಕಿರಣ್  ಮಧ್ಯೆ ಇದ್ದ ಸಂಬಂಧ ನಿಧಾನವಾಗಿ ಪ್ರೀತಿಗೆ, ನಂತರ ಪ್ರೇಮಕ್ಕೆ ತಿರುಗಿತು. ಎಂಟು ತಿಂಗಳಾಗುವಷ್ಟರಲ್ಲಿ ಆ ಇಬ್ಬರೂ ಬಹಳ ಹತ್ತಿರ ಬಂದರು. ಆದರೆ ಅದೇ ಸಂದರ್ಭದಲ್ಲಿ ಕಿರಣನಿಗೆ ಬೆಂಗಳೂರಿಗೆ ವರ್ಗವಾಯಿತು. ಶ್ರದ್ಧಾಳಿಗೆ ಬಹಳ ನೋವಾಯಿತು. ಕಿರಣ್‌ನನ್ನು ಬಿಟ್ಟಿರಲಾರದೇ ಶ್ರದ್ಧಾ ಒದ್ದಾಡಿದಳು. ಅದೇ ಸಂದರ್ಭದಲ್ಲಿ ಬೆಂಗಳೂರಿಗೆ ಹೋದ ಕಿರಣ್, ಸೌಮ್ಯಾ ಮತ್ತು ಮಗುವನ್ನು ಅಲ್ಲಿಗೆ ಕರೆದೊಯ್ಯಲು ಒಂದು ಮನೆಯನ್ನೂ ನೋಡುತ್ತಾನೆ. ಇದು ಶ್ರದ್ಧಾಳಿಗೆ ಮತ್ತಷ್ಟು ನೋವು ನೀಡಿತು. ಪರಿಣಾಮ, ಒಂದು ಬೆಳಿಗ್ಗೆ ಆಕೆ ಕಿರಣನ ಮಂಗಳೂರಿನ ಬಾಡಿಗೆ ಮನೆಗೆ ಬರುತ್ತಾಳೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೌಮ್ಯಾಗೆ ನಿದ್ದೆ ಮಾತ್ರೆ ನೀಡುತ್ತಾಳೆ. ಮಗುವನ್ನು ಎತ್ತಿಕೊಂಡು ಹೋಗುವ ಮುನ್ನ, ನಿದ್ದೆಯಲ್ಲಿದ್ದ ಸೌಮ್ಯಾಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾಳೆ. ಕೊಲೆ ಮಾಡುತ್ತಾಳೆ.

 ಮರುದಿನ ಬೆಳಿಗ್ಗೆ ಕಿರಣ ಬೆಂಗಳೂರಿನಿಂದ ಬರುತ್ತಾನೆ. ಕೊಲೆಯಾದ ಬಗ್ಗೆ ಆತನಿಗೆ ಪೂರ್ವಮಾಹಿತಿ ಇತ್ತೆಂಬ ಅನುಮಾನವೂ ಇದೆ. ಆತ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಾನೆ. ಈಗ ಇಬ್ಬರೂ ಪೋಲಿಸರ ಅತಿಥಿಗಳು. ಇದು ಕೇವಲ ಒಂದು ವಾರದ ಕೆಳಗೆ ಮಂಗಳೂರಿನಲ್ಲಿ ನಡೆದ ಒಂದು ಕೊಲೆಯ ಘಟನೆ.

ಇಂತಹ ಹತ್ತು ಹಲವಾರು ಘಟನೆಗಳನ್ನು ನಾವು ದಿನ ನಿತ್ಯವೂ ನೋಡುತ್ತಿರುತ್ತೇವೆ. ಪತ್ರಿಕೆಗಳಲ್ಲಿ ಈ ತರದ ಘಟನೆಗಳು ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತವೆ. ಸುಮಾರು ಒಂದೂವರೆ ತಿಂಗಳ ಹಿಂದೆ, ಇದೇ ಮಂಗಳೂರಿನಲ್ಲಿ, ಹಳೆಯ ಪೇಪರ್ ವ್ಯಾಪಾರಿಯೊಬ್ಬನ ಕೊಲೆಯಾಗುತ್ತದೆ. ಪೊದೆಯೊಂದರ ಬಳಿ ಸತ್ತು ಬಿದ್ದಿದ್ದ ಆ ನತದ್ರಷ್ಟನ ಅಸಹಜ ಸಾವಿನ ಬೆನ್ನು ಹತ್ತಿ ಹೋದ ಪೋಲಿಸರು, ಆತನ ಪತ್ನಿಯನ್ನು ಬಂಧಿಸುತ್ತಾರೆ. ಆಗ ಆಕೆ ಬಾಯ್ಬಿಟ್ಟ ಸತ್ಯ ಎಂದರೆ, ಆಕೆ ಮತ್ತು ಇತ್ತೀಚೆಗೆ ಪರಿಚಯವಾದ ಆಕೆಯ ಪ್ರಿಯಕರ ಸೇರಿ, ಆತನನ್ನು ಮುಗಿಸಿರುತ್ತಾರೆ.

ಈ ಎಲ್ಲಾ ಘಟನೆಗಳನ್ನು ಓದುತ್ತಿರುವಂತೆ, ಮನುಷ್ಯ-ಮನುಷ್ಯನ ನಡುವಿನ ಸಂಬಂಧ ಇಂದು ಯಾವ ಮಟ್ಟದಲ್ಲಿದೆ ಎಂಬ ನೋವು ಮತ್ತು ಹತಾಶೆಗಳೆರಡೂ ಕಾಣುತ್ತವೆ. ಈ ರೀತಿಯ ಘಟನೆಗಳು ಸಾಮಾನ್ಯವೆಂಬಂತೆ ಇಂದು ನಮ್ಮ ಸುತ್ತ ಮುತ್ತಲೇ ನಡೆಯುತ್ತಿದ್ದರೆ, ಸಾಮಾಜಿಕವಾಗಿ ನಾವು ಯಾವ ಪರಿ ಅಧ:ಪತನಕ್ಕಿಳಿಯುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ. 

ಒಂದರ್ಥದಲ್ಲಿ ಬದುಕೇ ಹಾಗೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮತ್ತು ಹೊಸದಕ್ಕೆ ಹಾತೊರೆಯುವ ಮನ. ಪ್ರತಿಯೊಬ್ಬನ ಬದುಕಿನಲ್ಲೂ ಸಹಜವಾಗಿ ಕೆಲವು ವಿಷಯಗಳಲ್ಲಿ ಅತೃಪ್ತಿ ಇರುತ್ತದೆ. ಆ ಕೊರತೆಯ ನಿವಾರಣೆಗಾಗಿ ಹಲವು ದಾರಿಗಳೂ ಇರುತ್ತವೆ. ಆದರೆ ಕಾನೂನು ತನ್ನ ಚೌಕಟ್ಟಿನಡಿ ಅನೇಕ ಕಟ್ಟುಪಾಡುಗಳನ್ನು ನಿರ್ಮಿಸಿಟ್ಟಿದ್ದು, ಇದನ್ನು ಅರಿತು ಮುನ್ನಡೆಯಬೇಕಾದ ಅನಿವಾರ್ಯತೆ, ಆರೋಗ್ಯಪೂರ್ಣ ಸಮಾಜದ ಹಿನ್ನೆಲೆಯಲ್ಲಿ ಇಂದಿನ ಅಗತ್ಯವಾಗಿದೆ.

ಮೇಲಿನೆರಡೂ ಘಟನೆಗಳಲ್ಲಿ ಅನೇಕ ಸಂಶಯಗಳು ಹುಟ್ಟಿಕೊಳ್ಳುತ್ತವೆ. ನಮಗೆ ತೀರಾ ಬೇಕು ಎನಿಸಿದಾಗ, ಮನಸ್ಸು ಬೇರಾವುದನ್ನೂ ಯೋಚಿಸದೇ, ಮುಂದೆ ಆಗಲಿರುವ ಯಾವುದೇ ಅನಾಹುತಗಳನ್ನೂ ಲೆಕ್ಕಿಸದೇ, ಇಂದು, ಈ ಕ್ಷಣಕ್ಕೆ ನನಗೆ ಬೇಕಾದ್ದನ್ನು ಪಡೆಯುವಲ್ಲಿ ಹಾತೊರೆಯುತ್ತದೆ. ಅದಕ್ಕಾಗಿ ಬೇರೆ ಜೀವದ ಬಲಿಯಾದರೂ ಆಗಬಹುದು, ನಾನು ಪಾತ್ರ ನೆಮ್ಮದಿಯಿಂದಿರಬೇಕೆಂದು ಮನ ಹಾತೊರೆಯುತ್ತದೆ.

ದುರಂತವೆಂದರೆ ನಮ್ಮ ಸುತ್ತ ಮುತ್ತಲೂ ಇಂತಹ ಹತ್ತು ಹಲವಾರು ಘಟನೆಗಳು ಮರುಕಳಿಸುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧ ಮಾಡಿದವರು ಸಿಕ್ಕಿ ಬೀಳುತ್ತಾರೆ. ಜೀವನ ಪರ್ಯಂತ ಇದಕ್ಕಾಗಿ ಪರಿತಪಿಸುತ್ತಾ ಶಿಕ್ಷೆ ಅನುಭವಿಸುತ್ತಾರೆ. ಇದನ್ನು ನೋಡುತ್ತಲೇ, ಮತ್ತೆ ಮತ್ತೆ ಆ ತಪ್ಪು ಸಮಾಜದಲ್ಲಿ ಮರುಕಳಿಸುತ್ತಿದೆ ಎಂದಾದರೆ, ಜೀವನ ಶೈಲಿಯಲ್ಲಿ ನಾವು ತಪ್ಪಿದ್ದೆಲ್ಲಿ ಎಂಬ ಪ್ರಶ್ನೆ ಕಾಡುತ್ತದೆ.

ಈ ರೀತಿಯ ಅಪರಾಧಗಳಿಂದಾಗಿ, ಅತ್ತ ಬಯಸಿದ್ದೂ ಸಿಗದೇ, ಇತ್ತ ಇದ್ದುದನ್ನೂ ಕಳೆದುಕೊಂಡು, ಜೈಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬರುತ್ತದೆ. 

ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...ಇಂತಹ ಭಾವನೆಗಳು ಹೆಚ್ಚಿನ ಸಂದರ್ಭದಲ್ಲಿ ನಮ್ಮನ್ನು ನಿಯಂತ್ರಿಸುತ್ತವೆ. ಹೀಗೆ ಈ ರೀತಿ, ನಮ್ಮೊಳಗಿನ ಭಾವನೆಗಳೇ ನಮ್ಮನ್ನು ನಿಯಂತ್ರಿಸಲಾರಂಭಿಸಿದಾಗ, (ಅವುಗಳನ್ನು ನಾವು ನಿಯಂತ್ರಿಸುವ ಬದಲು), ಅನಾಹುತಗಳು ಘಟಿಸುತ್ತವೆ. ನಾವು ಓದಿರುತ್ತೇವೆ, ರಜೆ ಕೊಡದ ಮೇಲಧಿಕಾರಿಯನ್ನು ಕೊಂದ ಘಟನೆ, ಪ್ರೇಮ ನಿರಾಕರಣೆಯನ್ನು ಮಾಡಿದಾಗ ಕೊಲೆ ನಡೆದದ್ದು, ಆಸಿಡ್ ದಾಳಿಯಾದದ್ದು...ಸಂದರ್ಭಗಳು ಬೇರೆ ಬೇರೆಯಾಗಿದ್ದರೂ, ಪರಿಣಾಮ ಮತ್ತು ಅದಕ್ಕೆ ಕಾರಣವಾಗುವುದು ನಮ್ಮ ಮಾನಸಿಕ ದೌರ್ಬಲ್ಯ. ಇದನ್ನೇ ಮನ:ಶಾಸ್ರಜ್ಞರು ಮನೋ ವೈಕಲ್ಯ ಎಂದು ಕರೆದದ್ದು. ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ, ಕ್ಷಣಿಕ ದೌರ್ಬಲ್ಯ ಕೆಲಸ ಮಾಡುತ್ತವೆ. ಅನೇಕ ಕೊಲೆಗಳು, ಪೂರ್ವ ಯೋಜಿತವಾಗಿರುತ್ತವಾದರೂ, ಇದರ ಹಿನ್ನೆಲೆ, ಕ್ಷಣಿಕವಾಗಿ ಏನನ್ನೋ ತನ್ನ ಕೈವಶ ಮಾಡಿಕೊಳ್ಳುವ ಅಥವಾ ದ್ವೇಷದ ಪರಮಾವಧಿಯದ್ದಾಗಿರುತ್ತದೆ.

ಆತ್ಮಹತ್ಯೆಯೂ ಒಂದು ರೀತಿಯ ಕೊಲೆಯೇ ಆಗಿರುತ್ತದೆ. ಬೇರೊಂದು ಜೀವಿಯನ್ನು ಕೊಲ್ಲವುದಕ್ಕೆ ಭಿನ್ನವಾಗಿ ತನ್ನನ್ನೇ ತಾನು ಕೊಂದುಕೊಳ್ಳುವ ಸ್ಥಿತಿಯೇ ಆತ್ಮಹತ್ಯೆ. ಇದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದಂತೆ, ಅನೇಕ ಸಂದರ್ಭಗಳಲ್ಲಿ ಕ್ಷುಲ್ಲಕ ಕಾರಣಗಳೇ, ಜೀವಾಂತ್ಯಕ್ಕೆ ಕಾರಣವಾಗಿರುತ್ತವೆ. ತನ್ನ ಇಷ್ಟದ ಚ್ಯಾನೆಲ್ ನೋಡಲು ಮನೆಯವರು ಬಿಡಲಿಲ್ಲ ಎಂಬ ಕಾರಣ, ಪರೀಕ್ಷೆಯಲ್ಲಿ ಫೇಲ್ ಆಗಿ ಜೀವನವೇ ಮುಗಿಯಿತು ಎಂಬ ಭಾವನೆ...ಹೀಗೆ ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆಗಳು ನಡೆದದ್ದನ್ನು ಕೇಳೀದ್ದೇವೆ, ಕಂಡಿದ್ದೇವೆ.

ಸಾಮಾಜಿಕ ಸ್ವಾಸ್ಥ್ಯಗಳು ಈ ರೀತಿ ಕೆಡುತ್ತಿದ್ದರೆ, ನಮ್ಮ ಸುತ್ತಲಿನ ಪ್ರಪಂಚವೇ ಭೀಬತ್ಸವಾಗುತ್ತಾ ಹೋಗುತ್ತದೆ. ಈ ರೀತಿಯ ಮನೋ ವೈಕಲ್ಯ ಅಥವಾ ಹತಾಶೆಗೊಳಗಾಗುವುದನ್ನು ತಪ್ಪಿಸಲು ಅನೇಕ ಸಂದರ್ಭಗಳಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಡುವ ಕಲೆ, ಸಾಂಸ್ಕೃತಿಕ ಅಥವಾ ಧಾರ್ಮಿಕತೆಗೆ ನಮ್ಮನ್ನು ತೆರೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಒಂದು ಕ್ಷಣದ ಹತಾಶಾ ಭಾವನೆಯಿಂದ ನಾವು ಸೀದಾ ಸಾವಿನ ಮನೆಯ ಬಾಗಿಲಿಗೆ ಹೋಗುವ ಅಥವಾ ಬೇರೊಬ್ಬರನ್ನು ದೂಡುವ ಬದಲಿಗೆ, ಯಾವುದೋ ಒಂದು ಮಂದಿರದಲ್ಲೋ, ಅಥವಾ ಸಮಾರಂಭದಲ್ಲೋ ಒಂದಷ್ಟು ಹೊತ್ತು ಕಳೆದು ಬರುವ ಯೋಚನೆಯಿಂದ ಅತ್ತ ಹೋದರೆ...ಬರುವುದರಲ್ಲಿ ಮನಸ್ಸು ಪ್ರಫುಲ್ಲವಾಗಿರದಿದ್ದರೆ ಕೇಳಿ!! ಆಗ ಯಾವುದೇ ಅವಘಡಗಳಿಗೂ ಕಾರಣವೇ ಇರುವುದಿಲ್ಲ.

ಇದೀಗ ಪರೀಕ್ಷೆಯ ಸಮಯ-ಫಲಿತಾಂಶದ ಸಮಯ. ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದು ರೀತಿಯ ಅವ್ಯಕ್ತ ಭಯ ಇರುತ್ತದೆ. ಇದೇ ಮುಂದೆ ಫಲಿತಾಂಶ ಬಂದಾಗ, ಹತಾಶೆಯಾಗಿ ಮಾರ್ಪಟ್ಟು ಆತ್ಮ ಹತ್ಯೆಗೆ ಶರಣಾಗುವ ಅಪಾಯವಿರುವುದರಿಂದ, ನಿಜಕ್ಕೆಂದರೆ ಈ ಸಮಯಗಳಲ್ಲಿ ಪತ್ರಿಕೆ ನೋಡುವುದೇ ಹೆದರಿಕೆ ಹುಟ್ಟಿಸುವ ಹಾಗಿರುತ್ತದೆ. ಎಲ್ಲಿಯ ತನಕ ಎಂದರೆ ಫೆಲಾದವರು ಮತ್ತು ಅನೇಕ ಸಂದರ್ಭಗಳಲ್ಲಿ ನಿರೀಕ್ಷಿತ ಶೆಕಡಾವಾರು ಫಲಿತಾಂಶ ಬರದ ಕಾರಣವನ್ನೂ ಮುಂದೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಕಾಣುತ್ತವೆ!!. ದುರಂತವಲ್ಲವೇ??

ಮೇಲೆ ತಿಳಿಸಿದ ಎಲ್ಲಾ ಸೂಚ್ಯ ಘಟನೆಗಳು ನಮ್ಮ ಇಂದಿನ ದುರಂತಮಯ ಸನ್ನಿವೇಶಗಳನ್ನು ತೆರೆದಿಡುತ್ತಿವೆ. ಪ್ರಜ್ಞಾವಂತರಾದ ನಾವು ಯೋಚಿಸಿ, ದುಡುಕಿನ ಕೈಗೆ ಬುದ್ದಿ ಕೊಡದೇ, ಬದುಕನ್ನು ಹಸನು ಮಾಡಿಕೊಳ್ಳಬಹುದು...ಅಲ್ಲವೇ..!!

Tuesday 18 March 2014

ಗಂಡಸರೇಕೆ ಅಳ ಬಾರದು...???

ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಜನಪ್ರತಿನಿಧಿ ಯಲ್ಲಿ ನನ್ನ ಇಂದಿನ 'ಪ್ರದಕ್ಷಿಣೆ'ಯ ಬರಹ... 

ನುಷ್ಯ ಹುಟ್ಟಿದಾಕ್ಷಣ ಮೊದಲು ಅಳುತ್ತಾನೆ-ಅಯ್ಯೋ, ಈ ನೀರಸ ಪ್ರಪಂಚದಲ್ಲಿ ಇನ್ನು ನನ್ನ ಅಭಿಯಾನ ಆರಂಭವಾಯಿತು ಎಂಬ ಕೊರಗೋ-ಗೊತ್ತಿಲ್ಲ. ಹುಟ್ಟಿದ ಮಗು ಅಳದಿದ್ದರೆ,  ಅದರ ಆರೋಗ್ಯದಲ್ಲಿ ಏನೋ ಏರು ಪೇರಿದೆ ಎಂದೇ ಅರ್ಥ. ಅದಿಲ್ಲವಾದರೆ ಆ ಗಳಿಗೆ ಕೆಟ್ಟದ್ದು ಎಂದು ನಂಬುವುದೂ ಇದೆ...ಅದು ನಂಬಿಕೆಯೋ ಮೂಡ ನಂಬಿಕೆಯೋ ಗೊತ್ತಿಲ್ಲ.
ಇನ್ನು ನಮ್ಮ ಲೇಖನದ ಶೀರ್ಷಿಕೆಯ ವಿಚಾರಕ್ಕೆ ಬರೋಣ. ಗಂಡಸರು ಅಳ ಬಾರದು!!. ಇದು ಒಂದು ರೀತಿಯ ಅಘೋಷಿತ ಶಾಸನದಂತೆ ಆಗಾಗ ಹೇಳಲಾಗುತ್ತದೆ. ಮೊದಲಾಗಿ ಅಳು ಎಂಬುದೇ ಒಂದು ವೈಜ್ಞಾನಿಕ ಕ್ರಿಯೆ. ಅಳುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಅನೇಕ ಒಳ್ಳೆಯ ಪರಿಣಾಮಗಳೂ ಬೀರುತ್ತವೆ ಎಂದು ಮನ ಶಾಸ್ತ್ರ ಹೇಳುತ್ತದೆ. ಇಂತಾದ್ದರಲ್ಲಿ ಗಂಡಸು ಅಳಬಾರದು ಎಂದರೆ...??

ಈ ಮಾತನ್ನು ಯಾರು ಹುಟ್ಟು ಹಾಕಿದರೋ ಗೊತ್ತಿಲ್ಲ. ಅಳುವ ಗಂಡಸನ್ನು ಮತ್ತು ನಗುವ ಹೆಂಗಸನ್ನು ನಂಬ ಬಾರದು ಎಂಬುದು.!. ನನಗಿನ್ನೂ ಚೆನ್ನಾಗಿ ನೆನಪಿದೆ. ರಜೆಯಲ್ಲಿ ನಾವು ಅಜ್ಜನ ಮನೆಗೋ, ಯಾವುದೋ ಸಂಬಂಧಿಯ ಮನೆಗೋ ಹೋಗುತ್ತಿದ್ದೆವು. ಅಲ್ಲಿಂದ ರಜೆ ಮುಗಿಸಿ ಮರಳುವಾಗ ಸಹಜವೆಂಬಂತೆ ಅಳುತ್ತಿದ್ದೆವು. ತಮಾಷೆಯ ವಿಷಯವೆಂದರೆ, ಮನೆಯಿಂದ ಹೊರಡುವಾಗ ಮತ್ತು ಮನೆಗೆ ಮರಳುವಾಗ-ಸಾಮಾನ್ಯವೆಂಬಂತೆ ಅಳುತ್ತಿದ್ದೆವು. ಆಗ ನನ್ನಲ್ಲಿ ಒಬ್ಬರು, ಅಯ್ಯೋ, ನೀನು ಗಂಡಸಾಗಿ ಅಳುವುದಾ ಮಾರಾಯ ಎಂದು ಕೇಳಿದ್ದು ನೆನಪಾಗುತ್ತದೆ!. ಹಾಗೆಂದು ಅಳುವನ್ನು ನಿಲ್ಲಿಸಬೇಕು ಎಂದು ಕೊಂಡರೆ ಅದೂ ಅಷ್ಟು ಸುಲಭ ಸಾಧುವಲ್ಲ ಎಂಬುದು ಹಲವು ಪ್ರಯತ್ನಗಳ ನಂತರ ನನಗೆ ಅನಿಸಿದ್ದುಂಟು...!

ಅದಿರಲಿ, ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಹೆಣ್ಣನ್ನು ಭಾವನಾತ್ಮಕವಾಗಿ ಹೆಚ್ಚು ಅವಲಂಬಿತಳು ಎನ್ನುತ್ತಾರೆ. ಹೆಣ್ಣಿಗೆ ಹೋಲಿಸಿದರೆ, ಗಂಡು ತನ್ನನ್ನು ತಾನು ಭಾವನೆಯ ಕಟ್ಟುಪಾಡಿನಿಂದ ತಡೆದುಕೊಳ್ಳಬಲ್ಲ ಎಂಬುದೂ ನಂಬಿಕೆ. ಮತ್ತೆ ಯಾವುದೇ ಸನ್ನಿವೇಶದಲ್ಲಿಯೂ ಗಂಡು-ಹೆಣ್ಣು ಇಬ್ಬರೂ  ಅತ್ತರೆ, ಬಹುಶ: ಅಲ್ಲಿ ಸಮಾಧಾನಿಸಲು ಯಾರೂ ಇಲ್ಲವೆಂಬ ಭಾವವೋ ಏನೋ, ಹಿರಿಯರು ಗಂಡು ಅಳಬಾರದು-ಹೆಣ್ಣು ನಗಬಾರದು ಎಂಬ ಗಾದೆ ಮಾಡಿಟ್ಟಿರಬಹುದು.

ಶತ ಶತಮಾನಗಳಿಂದ ಹೆಣ್ಣನ್ನು ಒಂದು ಕಟ್ಟು ಪಾಡಿಲ್ಲಿ ಬೆಳೆಸಿದ ಬಗ್ಗೆ ಕೇಳುತ್ತೇವೆ. ಹೆಣ್ಣು ನಕ್ಕರೆ ಅದೇ ಅಪರಾಧವೆಂಬಂತೆ ಬಿಂಬಿಸುವ ದುರಂತ, ಇಂದಿಗೂ ಕೆಲವು ಮೂಲಭೂತವಾದಿರಾಷ್ಟ್ರಗಳಲ್ಲಿ ಜ್ಯಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಗಂಡು ಅಳಲೇ ಬಾರದೇ ಎಂಬುದಕ್ಕೆ ಉತ್ತರ ಕಂಡುಕೊಂಡರೆ ಬಹುಶ: ಹೆಣ್ಣೂ ನಗಬಹುದು ಎಂಬ ನಂಬಿಕೆ ಬಲಗೊಳ್ಳಬಹುದು.

ಬದುಕಿನ ಅನೇಕ ಸಂಕಷ್ಟಗಳು ಮನುಷ್ಯನನ್ನು ಹಣ್ಣು ಹಣ್ಣು ಮಾಡುತ್ತವ. ಬಹಳ ಹಿಂದಿನ, ಘಟನೆಯೊಂದು ನೆನಪಾಗುತ್ತದೆ. ಕೆಲಸ ಮಾಡುತ್ತಿದ್ದ ಕಂಪೆನಿಯೊಂದರಲ್ಲಿ ಕೆಲವು ಹಿತ ಶತ್ರುಗಳ ರಾಜಕೀಯದಿಂದ ನನ್ನನ್ನು ಓರ್ವ ಭ್ರಷ್ಟನಂತೆ ಗುರುತಿಸಲಾಯಿತು. ಒಂದು ಗಳಿಗೆಯಲ್ಲಿ ಕೆಲಸ ಕಳೆದುಕೊಳ್ಳಬೇಕಾದ ಅನಿವಾರ್ಯತೆ. ಇದ್ದುದು ದೂರದ ಕೊಚ್ಚಿನ್ ನಲ್ಲಿ. ಕೂಡಿಟ್ಟದ್ದು ಏನೂ ಇಲ್ಲ. ಕೆಲಸದಿಂದ ಬಿಡಿಸಿದರೆ ಬಸ್ ಚಾರ್ಚ್‌ಗೂ ಹಣ ಇಲ್ಲದ ಪರಿಸ್ಥಿತಿ. ಎಲ್ಲಾ ವ್ಯವಸ್ಥೆಗಳೂ ನನ್ನ ವಿರುದ್ಧವೇ. ಇನ್ನುಳಿದದ್ದು ಆತ್ಮ ಹತ್ಯೆ ಮಾತ್ರ ಎಂಬ ಭಾವನೆ. ಸರಿ, ಕೆಲಸಕ್ಕೆ ಸಂಬಂಧಿಸಿದ ಎಲ್ಲವನ್ನು ಹಸ್ತಾಂತರಿಸಿಯಾಯಿತು. ಒಂದು ರೀತಿಯ ನಿರ್ಲಿಪ್ತತೆ ಮನದಲ್ಲಿತ್ತು. ಇನ್ನೂ ಒಂದು ವರ್ಷದ ಮಗು ಮತ್ತು ಮಡದಿ ಮನೆಯಲ್ಲಿ ಕಾಯುತ್ತಿದ್ದರು. ಏನಾಗಿದೆ ಎಂಬುದರ ಪರಿವೆಯೇ ಅವರಿಗಿರಲಿಲ್ಲ. ನನ್ನ ಮನಸ್ಸು ಸಂಪೂರ್ಣ ಖಿನ್ನತೆಗೊಳಗಾಗಿತ್ತು. ಇನ್ನೂ ಮನೆಗೆ ಹೋಗುವುದಕ್ಕಿಂತಲೂ, ಆತ್ಮಹತ್ಯೆಯೇ ಸೂಕ್ತ ಎಂದು ಕೊಂಡವನು, ಒಂದು ಕ್ಷಣ ಮನೆಯಲ್ಲಿ ಇಬ್ಬರನ್ನೂ ನೋಡಿ ಬರಲೇ ಎಂದುಕೊಂಡು ಅತ್ತ ಹೋದೆ. ಮನೆಯೊಳಗೆ ಕಾಲಿಡುತ್ತಲೇ, ಎಲ್ಲಿತ್ತೋ ಗೊತ್ತಿಲ್ಲ, ಅಳು ಭೋರ್ಗರೆದು ಬಂತು!!. ಗಟ್ಟಿಯಾಗಿ ನಾಲ್ಕೂ ಗೋಡೆಗಳು ಕೇಳುವಂತೆ ಅತ್ತೂ ಅತ್ತೂ ಹಗುರಾದಾಗ ಮನಸ್ಸಿಗೇನೋ ಬಿಡುಗಡೆಯ ಭಾವ!!. ನನ್ನ ಆತ್ಮ ಹತ್ಯೆಯ ಆಲೋಚನೆ ಆ ಕ್ಷಣಕ್ಕೆ ಮಾಯವಾಯಿತು. ಕಳೆದ ವಾರ ಮರಳಿ ಕೊಚ್ಚಿನ್‌ಗೆ ಹೋದಾಗ ಇದೆಲ್ಲವೂ ನೆನಪಾಯಿತು. ಇಂದು ನನಗನಿಸುತ್ತಿರುವುದೇನೆಂದರೆ, ಅಳು ಒಮ್ಮೊಮ್ಮೆ ಮನಸ್ಸನ್ನು ಹಗುರ ಮಾಡಿ, ಆಗಬಹುದಾದ ದುರಂತವನ್ನೂ ತಪ್ಪಿಸುತ್ತದೆ ಎಂದು!.

ಗಂಡಸು ಅಳಬಾರದು ಎಂಬುದಕ್ಕೆ ನನ್ನ ವಿರೋಧವಿರುವುದಕ್ಕೆ ಸ್ವಾನುಭವ ಅನೇಕ ಬಾರಿ ಕಾರಣವಾಗಿದ್ದಿದೆ. ಭಾವ ಪರವಶತೆ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಮನುಜ ಜೀವಿತದ ಸಹಜ ಸ್ವಭಾವ. ಆದರೆ ಅಳು ಮೊಸಳೆ ಕಣ್ಣೀರಾಗಬಾರದು ಅಷ್ಟೇ. ಬಹುಶ: ಸಮಯ ಸಾಧಕತನದ ಕೆಲವು ಅಳುಗಳನ್ನು ನೋಡಿ, ಹಿರಿಯರು ಈ ಮಾತನ್ನು ಹುಟ್ಟು ಹಾಕಿರಬಹುದು. ಆದರೆ ಅಳುವನ್ನು ಯಾರೊಬ್ಬನ ಸ್ವತ್ತನ್ನಾಗಿ ಪರಿಗಣಿಸಬಾರದು.

ನಾನಂತೂ ಅಳುವನ್ನು ಬಹಳ ಇಷ್ಟ ಪಡುತ್ತೇನೆ!. ಇದನ್ನು ನಾವು ಧನಾತ್ಮಕವಾಗಿ ಚಿಂತಿಸಬೇಕು..ಅಷ್ಟೇ. ಅದೆಷ್ಟೋ ಸಂದರ್ಭಗಳಲ್ಲಿ ಮಾನಸಿಕವಾಗಿ ಇನ್ನಿಲ್ಲದಂತೆ ಕುಗ್ಗಿಹೋದಾಗ ಅಳು ಸಂಜೀವಿನಿ ಎಂದೇ ನನ್ನ ಭಾವನೆ. ಬಹುಶ: ಯಾರಿಗೂ ತಿಳಿದಿರದ ಗುಟ್ಟು ಎಂದರೆ, ಅದೆಷ್ಟೋ ಸಂದರ್ಭಗಳಲ್ಲಿ ನಾನು ಈಗಲೂ ಒಂಟಿಯಾಗಿ ಅತ್ತು ಹಗುರಾಗುವ ಅಭ್ಯಾಸ ಇಟ್ಟುಕೊಂಡಿದ್ದ ಕಾರಣದಿಂದಲೇ ಬದುಕನ್ನು ಸಮಚಿತ್ತದಿಂದ ಎದುರಿಸಲಾಗುತ್ತಿದೆ ಅನಿಸುತ್ತಿದೆ. ಯಾವುದೋ ಒಂದು ಸದರ್ಭದಲ್ಲಿ ಇದನ್ನು ಒಬ್ಬರಲ್ಲಿ ಹೇಳಿದಾಗ, ಅತ್ಯಂತ ಆಪ್ತರಾಗಿದ್ದ ಅವರು ಹೇಳಿದರು-ನನಗೆ ಅದೆಲ್ಲಾ ಗೊತ್ತಿಲ್ಲ, ನೀನು ಅಳಬಾರದು ಅಷ್ಟೇ! ಏಕೆ ಎಂದರೆ ಅವರ ಬಳಿ ಇದ್ದುದೂ ಅದೇ ಸೂತ್ರ, ನೀನು ಗಂಡಸು, ಅಳಬಾರದು !!

ಇನ್ನು ಇತ್ತೀಚಿನ ರಾಜಕಾರಣಕ್ಕೆ ಬಂದರೆ, ಅಲ್ಲಿ ಅಳು ಸರ್ವ ವ್ಯಾಪಿ. ಬಹುಶ: ದೇವೇ ಗೌಡರು, ಯಡ್ಯೂರಪ್ಪನವರು ರಾಜ್ಯ ಮಟ್ಟದಲ್ಲಿ ಅತ್ತಷ್ಟು ಬೇರಾರೂ ಅತ್ತಿರಲಿಕ್ಕಿಲ್ಲ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಅಡ್ವಾಣಿಯವರನ್ನು ಈ ವಿಷಯದಲ್ಲಿ ಯಾರೂ ಗೆದ್ದಿಲ್ಲ. ಅಮೇರಿಕದ ಅಧ್ಯಕ್ಷ ಒಬಾಮಾ ಸಹಾ ಆಗಾಗ ಈ ರೀತಯ ಭಾವ ಪರವಶತೆಗೊಳಗಾಗಿ ಗದ್ಗದರಾದ ಬಗ್ಗೆ ಓದಿದ್ದೇವೆ. ಕೆಲವನ್ನು ಇಲ್ಲಿ 'ಮೊಸಳೆ ಕಣ್ಣೀರು' ಅನ್ನ ಬಹುದಾದರೂ, ಅತ್ತವರೆಲ್ಲರೂ ಗಂಡಸರು ಎಂಬ ಹಿನ್ನೆಲೆಯಲ್ಲಿ ಅಳು ಸರ್ವ ವ್ಯಾಪಿ ಎನ್ನಲಡ್ಡಿ ಇಲ್ಲ. ಇದನ್ನೇ ಇನ್ನು ಮತ್ತೊಂದು ದ್ರಷ್ಟಿಯಲ್ಲಿ ಯೋಚಿಸಿದರೆ...ಬಹಿರಂಗವಾಗಿ ಸೋನಿಯಾ ಗಾಂಧಿ ಅತ್ತದ್ದು ಕಡಿಮೆ.  ದೂರದ ಮಾತು ಬಿಡಿ, ಯಾವಾಗಲೂ ನಗುತ್ತಲೇ ಇರುವ ನಮ್ಮ ಶೋಭಕ್ಕ...ಅತ್ತದ್ದು ಕಡಿಮೆ.! ಅಳುವ ಗಂಡಸರ ಮತ್ತು ಹೆಂಗಸರ ವಿಷಯದಲ್ಲಿ ನಾವು ಅದೇ ಸೂತ್ರ ಅಳವಡಿಸಿಕೊಂಡರೆ, ಇವರೆಲ್ಲಾ ಏನು ಎಂಬ ಪ್ರಶ್ನೆ ಕಾಡುತ್ತದೆ. 

ಜೆಫ್ರಿ ಪ್ಲಾಟ್ಸ್ ಎಂಬೊಬ್ಬ ವ್ಯಕ್ತಿತ್ವ ವಿಕಸನದ ಗುರುವಿನ ಪ್ರಕಾರ ಗಂಡಸು ಹೆಚ್ಚು ಅಳಬೇಕು. ಅದಕ್ಕೆ ಆತ ಐದು ಕಾರಣಗಳನ್ನೂ ಕೊಡುತ್ತಾನೆ. ಮೊದಲೆಯದಾಗಿ ಭಾವನಗೆಳು ನಮ್ಮ ಇಡೀ ದೇಹದಲ್ಲಿ ಪ್ರವಹಿಸುತ್ತಿರುವ, ಯಾವತ್ತೂ ಹೊರ ಬರುವ ಮೂಲಕ ಮಾನಸಿಕ ಗಟ್ಟಿತನವನ್ನು ಹೆಚ್ಚಸುವ ಸಹಜ ಸ್ವಭಾವ. ಅದರ ಹರಿವು ನಿರಾತಂಕವಾಗಿರಬೇಕಾದರೆ, ಅಳುವಿನ ಮೂಲಕ ಅದು ಹೊರ ಬರಬೇಕು. ಒಂದು ರೀತಿಯ್ಲಲಿ ನಮ್ಮ ಜೀವನದ ಪೈಪ್ ಲೈನ್ ನಿರಾತಂಕವಾಗಿರಬೇಕಾದರೆ ಅಳಬೇಕು. ಎರಡನೆಯ ಕಾರಣ ನಿಮ್ಮ ಅಳು ಹೊರ ಪ್ರಪಂಚದ ಜನರಿಗೆ, ನಿಮ್ಮೊಳಗಿನ ಭಾವನೆಯ ಪರಿಚಯವನ್ನು ಮಾಡಿಕೊಡುತ್ತದೆ. ಆ ಮೂಲಕ, ಜನರಿಗೆ ನಾವು ಹತ್ತಿರವಾಗಲು, ಅವರು ನಮ್ಮನ್ನು ಅರ್ಥ ಮಾಡಿಕೊಳ್ಳು ಈ ಅಳು ಸೇತುವಾಗುತ್ತದೆ. ಮೂರನೆಯದಾಗಿ ಅಳುವಿನ ಮೂಲಕ ನಿಮ್ಮ ಭಾವುಕತೆಯನ್ನು ಮತ್ತೆ ಮತ್ತೆ ನಿಯಂತ್ರಿಸಿಕೊಳ್ಳ ಬಹುದು. ಅದಿಲ್ಲವಾದರೆ ಮನದೊಳಗೇ ಹೆಪ್ಪುಗಟ್ಟಿಕೊಂಡಿರುವ ನೋವು, ಭಾವಗಳು ಮುಂದೆ ಮನಸ್ಸನ್ನು ಕೇವಲ ಸಂಕುಚಿತಗೊಳಿಸಿ, ಆತ್ಮಹತ್ಯೆಯೋ, ಮಾನಸಿಕ ವೈಕಲ್ಯಕ್ಕೋ ಕಾರಣವಾಗಬಹುದು. ನಾಲ್ಕನೆಯ ಕಾರಣ ಅಳುವಿನ ಮೂಲಕ ನಿಮ್ಮ ಭಾವನಾತ್ಮಕವಾಗಿ ಸ್ಪಂದಿಸುವ ನರ ನಾಡಿಗಳ ಶಕ್ತಿ ವೃದ್ಧಿಸುತ್ತದೆ!. ಈ ಮೂಲಕ ನಿಮ್ಮ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿಯಾಗುತ್ತದೆ;ಕಾರಣವಾಗುತ್ತದೆ. ಮತ್ತು ಐದನೆಯ ಕಾರಣವೆಂದರೆ ನಮ್ಮ ಭಾವನೆಗಳು ಮತ್ತು ಮನಸ್ಸಿನಲ್ಲಿರುವ ವಿಚಾರ ಈ ಹಂತದಲ್ಲಿ ಹೆಚ್ಚು ಹೊರ ಬರುತ್ತದೆ ಮತ್ತು ಆ ಮೂಲಕ ಸಮಾಜಕ್ಕೆ ನಾವು ಏನು ಎಂಬುದರ ಪರಿಚಯವಾಗುತ್ತದೆ. ಹೀಗೆ ಅಳುವನ್ನು ನಾವು ಯಾರಿಗೂ, ಹೀಗೆಯೇ ಎಂದು ಸೀಮಿತಗೊಳಿಸಬಾರದು. ಎಂಬುದ ಆ ಮನ;ಶಾಸ್ತ್ರಜ್ಞನ ಅಭಿಮತ. 

ಗಂಡಸರು ಅಳಲೇ ಬಾರದು ಎಂಬುದನ್ನು ಆತ್ಮೀಯರೂ, ಹಿತೈಷಿಗಳೂ ಆಗಾಗ ಹೇಳುವುದನ್ನು ಕೇಳಿ, ಇದೇಕೆ ಎಂದು ವಿಶ್ಲೇಷಣೆಗೆ ಕುಳಿತಾಗ ಈ ಎಲ್ಲಾ ವಿಚಾರಗಳು ಹೊಳೆದುವು. ಹುಡುಕುತ್ತಾ ಹೋದಾಗ, ಅನೇಕ ವಿಚಾರಗಳು ತೆರೆದುಕೊಳ್ಳುತ್ತಾ ಹೋದುವು. ನಾವೆಲ್ಲರೂ ನಗು ನಗುತ್ತಿರೋಣ ಎಂಬ ಮಾತನ್ನು ಹೇಳಬೇಕಾದ ಈ ಹೊತ್ತಿನಲ್ಲಿ ಗಂಡಸೇಕೆ ಅಳ ಬಾರದು ಎಂದು ಪ್ರಶ್ನಿಸಿ ನಿಮ್ಮನ್ನೆಲ್ಲಾ ಅಳಿಸುತ್ತಿದ್ದೇನೆ ಎಂದು ಕೊಳ್ಳಬೇಡಿ. ನೋವು-ನಲಿವಿನ ಅಭಿವ್ಯಕ್ತಿಯಲ್ಲಿ ಮನುಷ್ಯ ಮನುಷ್ಯನಂತಾಗುತ್ತಾನೆ ಎಂಬುದು ನನ್ನ ಅನಿಸಿಕೆ. ಈ ಲೇಖನವನ್ನು ಓದುತ್ತಿರುವ ಗಂಡಸು ನೀವಾಗಿದ್ದಲ್ಲಿ, ಇನ್ನು ಸಂಕೋಚ ಬೇಡ, ನಿಮ್ಮ ಭಾವನೆಯನ್ನು ಅದುಮಿಟ್ಟುಕೊಳ್ಳುವ ಪ್ರಯತ್ನದಿಂದ ದಿನವೂ ಹಣ್ಣಾಗದೇ, ಅತ್ತು ಅದನ್ನು ಹೊರಗೆಡವಿಬಿಡಿ!!. ಇದನ್ನು ಓದುತ್ತಿರುವ ಮಹಿಳೆಯರೇ...ಅಳುವ ಗಂಡಸನ್ನು ನೀವು ಖಂಡಿತಕ್ಕೂ ನಂಬಬಹುದು ಮತ್ತು ನೀವು ಅವರ ಬಗ್ಗೆ ಹೆಮ್ಮೆಯನ್ನೂ ಪಟ್ಟುಕೊಳ್ಳಬಹುದು-ಯಾಕೆಂದರೆ ಅವರ ಭಾವುಕತೆ ಎಂದೆಮದಿಗೂ ತೀವ್ರವಾಗಿರುತ್ತದೆ ಮತ್ತು ಸಮಾಜ ಸ್ನೇಹಿಯಾಗಿರುತ್ತೆ. ಅವರೂ ಅಳಲಿ ಬಿಡಿ!!.

ನಗು ನಗುತ್ತಾ ಬದುಕೋಣ, ನೋವನ್ನು ಅತ್ತು ಹೊರ ಹಾಕಿಕೊಳ್ಳುವ ಮೂಲಕ...


Thursday 13 March 2014

ಶೋಷಣೆಯ ಎರಡು ವ್ಯಾಖ್ಯೆಗಳು...

ಜನಪ್ರತಿನಿಧಿ ಯ ಅಂಕಣ ಪ್ರದಕ್ಷಿಣೆ ಯಲ್ಲಿ ನನ್ನ ಈ  ವಾರದ ಬರಹ 

ಇತ್ತೀಚೆಗೆ ಕಾಲೇಜೊಂದರ ಭಾಷಣ ಸ್ಪರ್ಧೆಯೊಂದರಲ್ಲಿ ತೀರ್ಪುಗಾರನಾಗಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅದನ್ನು ಒಂದು ಸುವರ್ಣಾವಕಾಶ ಎಂದೇ ಭಾವಿಸಿದ್ದೇನೆ. ಬೆಳಿಗ್ಗೆ ಸಮಯಕ್ಕೆ ಸ್ವಲ್ಪ ಮುಂಚೆಯೇ ಕಾಲೇಜಿಗೆ ಹೋಗಿ, ಸಹ ತೀರ್ಪುಗಾರರಾಗಿದ್ದ ಖ್ಯಾತ ಲೇಖಕಿ ಸತ್ಯಮೂರ್ತಿ ಸುರತ್ಕಲ್ ಅವರ ಜೊತೆ ಮಾತಾಡುತ್ತಾ ನಿಂತಿದ್ದಾಗ, ಅಲ್ಲಿನ ಮಕ್ಕಳ ಕಲರವ ಕಂಡು ಮುದಗೊಂಡ ಅವರು ಒಂದು ಮಾತು ಹೇಳಿದರು. ಈ ಶಾಲೆ-ಕಾಲೇಜಿನ ಅಧ್ಯಾಪಕ-ಉಪನ್ಯಾಸಕರ ಮನಸ್ಸಿಗೆ  ವಯಸ್ಸೇ ಆಗುವುದಿಲ್ಲ, ಯಾಕೆಂದರೆ ಅವರ ಸುತ್ತಲೂ ದಿನ ನಿತ್ಯವೂ ಎಳೆಯ ಮನಸ್ಸುಗಳೇ ತುಂಬಿಕೊಂಡು ಅವರನ್ನು ಸದಾ ಉಲ್ಲಸಿತರನ್ನಾಗಿಸಿರುತ್ತದೆ. ಆ ಮಟ್ಟಿಗೆ ಅವರು ಪುಣ್ಯವಂತರು ಎಂದು ಹೇಳುತ್ತಿದ್ದರು. ಅಲ್ಲಿ ಕೆಲವೇ ಕೆಲವು ಹೊತ್ತು ಕಳೆದ ನನಗೂ ಅವರ ಮಾತು ಸತ್ಯವೆನಿಸಿತು.

ಇಲ್ಲಿ ನಾನು ಹೇಳ ಹೊರಟಿರುವ ವಿಷಯ ಬೇರೆ. ಅಂದು ಕಾಲೇಜಿನಲ್ಲಿ ಕನ್ನಡ ಭಾಷಣಕ್ಕೆ ಕೊಟ್ಟಿದ್ದ ವಿಷಯ, ಭಾರತದಲ್ಲಿ ಮಹಿಳೆಯ ಸಮಸ್ಯೆ ಮತ್ತು ರಕ್ಷಣೆ. ೧೭ ವಿದ್ಯಾರ್ಥಿಗಳು ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಳೆಯ ಮಕ್ಕಳ ಮನಸ್ಸು ಎಂದೆಂದಿಗೂ ಪ್ರಸ್ತುತ ಸಮಸ್ಯೆಯ ಸುತ್ತ ಸುತ್ತುತ್ತಿರುವಾಗ ಅವರು ಅದನ್ನು ವಿಶ್ಲೇಷಣೆಗೆ ಒಡ್ಡಿಕೊಳ್ಳುವ ಪರಿ ಕಂಡು ನಿಜಕ್ಕೂ ಮನ ಒಮ್ಮೆ ಭಾವುಕವಾದರೆ, ಮತ್ತೊಮ್ಮೆ ಈ ಮನ:ಸ್ಥಿತಿಯನ್ನು ನಮ್ಮ ಮಕ್ಕಳಿಗೆ ಒದಗಿಸಿದರೆ ಮುಂದಿನ ಜನಾಂಗ, ಭಾರತ ಹೇಗಾದೀತು ಎಂಬ ನಿರಾಶಾ ಭಾವನೆ ನನ್ನದಾಗಿತ್ತು.

ಅಲ್ಲಿ ಮಾತಾಡಿದ ೧೭ಮಕ್ಕಳುಗಳಲ್ಲಿ, ಕೇವಲ ಇಬ್ಬರು ಮಾತ್ರ ಹುಡುಗರಾಗಿದ್ದರು. ಇದು ಮೊದಲ ನೋಟಕ್ಕೇ ಮಹಿಳೆಯ ಸುರಕ್ಷೆ ಮತ್ತು ಸಮಸ್ಯೆಯ ಬಗ್ಗೆ ಮಾತಾಡಬೇಕಿರುವುದು  ಕೇವಲ ಮಹಿಳೆ/ಹುಡುಗಿಯೇ ಆಗಿರಲಿ ಎಂಬ ಸಾಮಾನ್ಯ ಭಾವನೆಯೋ ಎಂಬ ಅನುಮಾನ ಕಾಡಿದಾಗ, ಅದಕ್ಕೆ ಪರಿಹಾರವನ್ನೂ ಸಂಘಟಕರು ಹೇಳಿದಂತೆ ,ಇಂದು ಭಾಷಣ ಅಥವಾ ಇಂತಹಾ ಯಾವುದೇ ಸ್ಪರ್ಧೆಗೆ ಹುಡುಗಿಯರು ಮಾತ್ರ ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂದರು. ಅದು ಒತ್ತಟ್ಟಿಗಿಡೋಣ. ಮಾತಾಡಲು ವೇದಿಕೆ ಹತ್ತಿದ  ಮಕ್ಕಳ(ಯುವ ಮನಸ್ಸುಗಳು) ಮುಖ್ಯ ಗಮನ ತಮ್ಮ ಶೈಲಿಯತ್ತ ಮತ್ತು ಕಡ ತಂದ ಸಂಸ್ಕೃತ ಶ್ಲೋಕಗಳನ್ನುದ್ಧರಿಸುವತ್ತ ನೆಟ್ಟಿತ್ತು. ಯತ್ರ ನಾರೀ.....ಎಂಬ ಶ್ಲೋಕವನ್ನು ಮತ್ತು ಗಾಂಧೀಜಿಯವರು ಮಧ್ಯ ರಾತ್ರಿ ಹುಡುಗಿಯೊಬ್ಬಳು ನಿರ್ಭಯವಾಗಿ ಮನೆ ಹೊರಗೆ ಹೋದಾಗಲೇ ಭಾರತ ಸ್ವತಂತ್ರ ಎಂಬ ಉಕ್ತಿಯನ್ನು ೧೭ರಲ್ಲಿ ೧೪ ಮಕ್ಕಳು ಪುನರಪಿ ಹೇಳಿದರು!! ಇದನ್ನು ನಾನೂ ತೀರ್ಪುಗಾರನಾಗಿ ನನ್ನ ಮಾತುಗಳಲ್ಲಿ ಹೇಳಿದೆ ಮತ್ತು ಉಳಿದ ಇಬ್ಬರು ತಿರ್ಪುಗಾರರೂ ಇದನ್ನು ಅನುಮೋದಿಸಿದರು. ಉಳಿದಂತೆ ಎಲ್ಲಾ ಮಕ್ಕಳು ಮಾತಾಡಿಕೊಂಡು ಬಂದಿದ್ದಂತೆ ಉಜಿರೆಯ ಸೌಜನ್ಯಾ ಪ್ರಕರಣ, ದೆಹಲಿ-ಮಣಿಪಾಲಗಳ ಗ್ಯಾಂಗ್ ರೇಪ್ ವಿಷಯಗಳನ್ನು ಮತ್ತೆ ಮತ್ತೆ ಹೇಳಿದರು. ಅದನ್ನು ಹೇಳುವಾಗ ಒಂದು ರೀತಿಯ ಕ್ರಾಂತಿಕಾರಿ ಮನೋಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. 

ಅಲ್ಲಿ ನಾವು ಗಮನಿಸಿದ್ದೆಂದರೆ ಎಲ್ಲಾ ಮಕ್ಕಳು ಪ್ರಸ್ತುತ ಘಟನೆಗಳ ಬಗ್ಗೆ ತೆರೆದ ಕಣ್ಣಾಗಿದ್ದಾರೆ ಮತ್ತು ಅದನ್ನು ವಿರೋಧಿಸುವ ಮನೋಭಾವ ಎಲ್ಲರಲ್ಲೂ ಇದೆ. ಆದರೆ ಅಲ್ಲಿ ರೋಷದಿಂದ ವ್ಯವಸ್ಥೆ ಪೂರ್ತಿ ಕೆಟ್ಟುಹೋಗಿದೆ ಎಂಬ ಹತಾಶೆ, ಇನ್ನು ಇಲ್ಲಿ ಏನೂ ಸರಿಯಾಗದೇನೋ  ಎಂಬ ನಿರಾಶೆ, ವಿರೋಧಿಸುವುದರಿಂದ ನಮಗೇನಾದೀತೋ ಎಂಬ ಅಳುಕು ಎದ್ದು ಕಾಣುತ್ತಿತ್ತು. ಇನ್ನು ಅಲ್ಲಿ ಮಾತಾಡಿದ ಹೆಚ್ಚಿನ ಹುಡುಗಿಯರು ಪುರುಷರಿರುವುದೇ ಮಹಿಳೆಯ ಶೋಷಣೆ ಮಾಡುವುದು ಮತ್ತು ಪುರುಷ ವರ್ಗಕ್ಕೆ ನಮ್ಮ ಧಿಕ್ಕಾರ ಎಂಬರ್ಥದ ಮಾತುಗಳನ್ನು ಒತ್ತಿ ಒತ್ತಿ ಹೇಳಿದರು. ಮತ್ತೂ ಒಂದು ತಮಾಷೆಯ ಅಥವಾ ಯೋಚಿಸಬೇಕಾದ ವಿಷಯವೆಂದರೆ, ಎಲ್ಲಾ ಹುಡುಗಿಯರೂ ಪ್ರಪಂಚದಲ್ಲಿನ ಪುರುಷರು ಶೋಷಣೆ ಮಾಡುತ್ತಲೇ ಇದ್ದಾರೆ ಎಂದು ಹೇಳಿದರು ಮತ್ತು ಹೆಣ್ಣು ಹೆಣ್ಣೆಂದು ಹೀಗಳೆಯುವಿರೇಕೆ ಎಂದು ಕೂಗಿದರೇ ಹೊರತು, ತಮ್ಮದೇ ಮನೆಯಲ್ಲಿರುವ ಅಣ್ಣ, ತಮ್ಮ, ಅಪ್ಪ...ಹೀಗೆ ಪುರುಷರಿಂದ ಸಿಗುವ ರಕ್ಷಣೆಯ ಬಗ್ಗೆ (ಸಿಗುತ್ತಿರುವ ಅಥವಾ ಸಿಗದಿರುವ!) ಚಕಾರವನ್ನೂ ಎತ್ತಲಿಲ್ಲ!!.  ಅಂದರೆ ಇಂದಿನ ಒಟ್ಟೂ ಸಮಾಜ ಮಹಿಳಾ ವಿರೋಧಿಯೇ ಎಂಬಂತೆ ಕಂಡು ಬಂತು!. ಮಹಿಳೆ ಏನನ್ನೂ ಸಾಧಿಸ ಬಲ್ಲಳು ಮತ್ತು ಅದಕ್ಕೆ ಪುರುಷ ವಿರೋಧಿ ಎಂಬಂತೆ ಮಾತುಗಳು ಕೇಳಿಬಂದುವು.

ಇದು ಒಂದು ಭಾಗವಾದರೆ ಮತ್ತೊಂದು ಭಾಗ ಸ್ವಾರಸ್ಯಕರವಾಗಿದೆ. ಅದೇ ಕಾಲೇಜಿನಲ್ಲಿ ಅದೇ ಮಧ್ಯಾಹ್ನ, ಕರ್ನಾಟಕದ ಇಂದಿನ ಲೋಕಾಯುಕ್ತ ವೈ ಭಾಸ್ಕರ ರಾವ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವಿತ್ತು. ಸಂಘಟಕರು ಬಹುಶ: ನಿರೀಕ್ಷಿಸಿದ್ದು  ಲೋಕಾಯುಕ್ತರೆನ್ನುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ, ಪ್ರಜಾಪ್ರಭುತ್ವದ ವಿಚಾರಗಳು ಹೆಚ್ಚು ಚರ್ಚಿತವಾಗಬಹುದು ಎಂದಿದ್ದಿರಬಹುದು. ಆದರೆ ೯೦ಶೇಕಡಾ ವಿದ್ಯಾರ್ಥಿಗಳೇ ತುಂಬಿದ್ದ ಆ ಸಭಾಂಗಣದಲ್ಲಿ ಲೋಕಾಯುಕ್ತರಿಗೆ ಅನೇಕ ಪ್ರಶ್ನೆಗಳು ಬಂದುವು. ಅದರಲ್ಲೂ ಮುಖ್ಯವಾಗಿ ಕೆಲವು ಹುಡುಗರೇ ಇಲ್ಲಿ ಪ್ರಶ್ನೇ ಕೇಳುವುದರಲ್ಲಿ ಮುಂದಿದ್ದರು. ಇಬ್ಬರು ಕೇಳಿದ ಪ್ರಶ್ನೆಗಳ ಸ್ವರೂಪ ಒಂದೇ ಆಗಿತ್ತು ಓರ್ವ ವಿದ್ಯಾರ್ಥಿ, ಇಂದಿನ ಹೆಚ್ಚಿನ ಕೇಸುಗಳಲ್ಲಿ ಮಹಿಳೆ ತನಗಿರುವ ಕಾನೂನಿನ ಸಹಾನುಭೂತಿಯನ್ನು ದುರುಪಯೋಗಪಡಿಸಿಕೊಂಡು ಪುರುಷನನ್ನು ಪೀಡಿಸುವ ಸಂಸ್ಕೃತಿ ಹೆಚ್ಚುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ ಲೋಕಾಯುಕ್ತರು ಇದು ಅತ್ಯಂತ ವಿರಳ ಪ್ರಸಂಗಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದರು. ತಕ್ಷಣವೇ, ಮತ್ತೋರ್ವ ಸಾರ್ವಜನಿಕರು ಎದ್ದು ನಿಂತು, ಲೋಕಾಯುಕ್ತರ ಮಾತನ್ನು ಖಂಡಿಸಿ, ಇದು ಹೆಚ್ಚಿನ ಸಂದರ್ಭಗಳಲ್ಲಿ ಆಗುತ್ತದೆ. ಓರ್ವ ಮಹಿಳೆ ವರದಕ್ಷಿಣೆಯ ವಿರುದ್ದ, ಗಂಡನ ಮನೆಯವರ ಮೇಲೆ ಕೇಸು ಹಾಕಿದಾಗ, ಯುಕ್ತಾಯುಕ್ತತೆ, ಸತ್ಯ ಯಾವುದನ್ನೂ ವಿಶ್ಲೇಷಿಸದೇ ಗಂಡನ ಮನೆಯ ಎಲ್ಲರನ್ನೂ ಜೈಲಿಗಟ್ಟಿ ವಿಚಾರಿಸುವ ಪರಿಸ್ಥಿತಿ ಇದೆ. ಇದಕ್ಕೂ ಮಿಗಿಲಾಗಿ, ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗುವಷ್ಟರಲ್ಲಿಯೇ ಗಂಡ ಮತ್ತು ಮನೆಯವರಿಗೆ ಸಾಕಷ್ಟು ಮಾನಸಿಕ ಹಿಂಸೆ ಆಗಿರುತ್ತದೆ ಎಂದು ಏರು ದನಿಯಲ್ಲಿ ಹೇಳಿದಾಗ ಇಡೀ ಸಭಾಂಗಣ ಸ್ತಬ್ಧವಾಗಿತ್ತು!!. ಕೊನೆಗೆ ಲೋಕಾಯುಕ್ತರೂ ಈ ವಿಚಾರವನ್ನು ಅಲ್ಲಗಳೆಯಲಾಗದು ಎಂದಾಗ ಸಭಾಂಗಣದ  ಎಲ್ಲರೂ ಚಪ್ಪಾಳೆ ಹೊಡೆದರು. ಇಂದಿನ ಕಾನೂನಿನಲ್ಲಿ ಮಹಿಳೆಗೆ ನೆರವಾಗುವ ರೀತಿಯ ವಿಶೇಷ ಅನುಕಂಪ ವನ್ನು ೯೫% ಕೇಸುಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಸಭಾಂಗಣದಲ್ಲಿ ಅನೇಕರು ಹೇಳಿದಾಗ, ಒಂದು ರೀತಿಯ ಆಶ್ಚರ್ಯದ ಚಹರೆ ಅಲ್ಲಿ ನೆಲೆಸಿತ್ತು. 

ಎಲ್ಲವೂ ಮುಗಿಸಿ ಹೊರಬಂದಾಗ ಮನಸ್ಸು ಒಂದು ರೀತಿಯ ಗೊಂದಲದಿಂದ ಕೂಡಿತ್ತು. ಎರಡೂ ವಿಚಾರಗಳನ್ನು ಒಮ್ಮೆ  ಅವಲೋಕಿಸಿದರೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಒಂದನೆಯದಾಗಿ ಎಲ್ಲಾ ಮಹಿಳೆಯರೂ ತಮ್ಮನ್ನು ಶೋಷಣೆ ಮಾಡುತ್ತಾರೆ ಎಂದು ಭಾಷಣದಲ್ಲಿ ಖಂಡಿಸಿ, ಇದರ ವಿರುದ್ಧದ ಕೂಗನ್ನು ಗಟ್ಟಿಯಾಗಿ ಹೇಳಿದ್ದರೆ, ಮಧ್ಯಾಹ್ನದ ವೇಳೆಗೆ ಅವರೂ ಇದ್ದ ಸಭಾಂಗಣದಲ್ಲಿನ ಚಿತ್ರಣವೇ ಬೇರೆಯಾಗಿತ್ತು. ಇಲ್ಲಿ ಸಮಸ್ಯೆ ಇದ್ದುದು ಎಲ್ಲಿ ಎಂಬುದಕ್ಕೆ ಸ್ಪಷ್ಟ ಉತ್ತರವೇ ಸಿಗಲಿಲ್ಲ.
ಸರಿ, ಇಂದು ಮಹಿಳೆಯ ಮೇಲೆ ದೌರ್ಜನ್ಯ, ಶೋಷಣೆ ಹಿಂದಿನಂತೆಯೇ ನಡೆದಿದೆ. ಇದು ಎಲ್ಲೆಡೆಯಲ್ಲಿಯೂ ಕಂಡು ಬರುತ್ತದೆ. ಕೊನೆಗೆ ಎರಡೂ ಕಾರ್ಯಕ್ರಮಗಳ ಬಳಿಕ, ಸ್ನೇಹಿತರಲ್ಲಿ ಲೋಕಾಭಿರಾಮವಾಗಿ ಮಾತಾಡುವಾಗ  ಬಂದ ಅಭಿಪ್ರಾಯವೇ ಬೇರೆ. ಅದೆಂದರೆ ಬೆಳಿಗ್ಗೆ ಮಕ್ಕಳು ಹೇಳಿದ್ದೂ, ಮಧ್ಯಾಹ್ನದ ವೇಳೆಗೆ ಚರ್ಚೆಯ ವೇಳೆ ಹೊರ ಬಂದ ವಿಚಾರ ಎರಡೂ ಸರಿಯೇ!!. ಮಕ್ಕಳು ಹೇಳಿದಂತೆ ಮಹಿಳೆಯ ಮೇಲಿನ ದೌರ್ಜನ್ಯ ಮಿತಿ ಮೀರಿದ್ದು ಸರಿ. ಅದನ್ನು ಖಂಡಿಸಿ ಅವರಿಂದು ಮಾತಾಡುತ್ತಿರುವುದೂ ಸರಿ. ಮಹಿಳೆಯರ ಮೇಲಿನ ಕಾನೂನಿನ ಅನುಕಂಪದಿಂದ ಪುರುಷ ಪೀಡೆಯಾಗುತ್ತಿರುವುದೂ ಸರಿಯೇ. ಇಲ್ಲಿ ಸಮಸ್ಯೆ ಏನೆಂದರೆ, ಎರಡೂ ಕಡೆಗಳಲ್ಲಿ ಒಂದು ವಿರೋಧಾಭಾಸ ಇದೆ. ಅದೆಂದರೆ ಮೊದಲ ವಿಷಯದಲ್ಲಿ ಇಂದು 'ನಿಜವಾಗಿಯೂ' ಶೊಷಣೆ, ಪೀಡೆಗೊಳಗಾಗುವ ಮಹಿಳೆ ದೂರನ್ನೇ ಕೊಡುವುದಿಲ್ಲ!. ಅದಕ್ಕೆ ಮತ್ತೆ ಅನೇಕ ಕಾರಣಗಳು ಹುಟ್ಟಿಕೊಳ್ಳುತ್ತವೆ. ಹಾಗೆ ದೂರನ್ನು ಕೊಡಲೇ ಬೇಕಾದರೆ ಆಕೆಗೆ ಮತ್ತೆ ಅನೇಕ ಪ್ರಭಾವಗಳು ಬೇಕಾಗುತ್ತದೆ. ರಾಜಕೀಯ, ಆರ್ಥಿಕ ಬೆಂಬಲ, ಕುಟುಂಬದ ಬೆಂಬಲ...ಹೀಗೆ ಅನೇಕ ವಿಷಯಗಳನ್ನು ಅವಲೋಕಿಸಿ, ಸೂಕ್ಷ್ಮವಾಗಿ ವಿಮರ್ಶಿಸಿಕೊಂಡು ಆಕೆ ದೂರನ್ನು ಕೊಡಬೇಕಾಗುತ್ತದೆ. ಅದು ಆಗುವುದಿಲ್ಲ ಎಂದಾಗ ಆಕೆ ಆ ಶೋಷಣೆಯನ್ನು ಮೌನವಾಗಿ ನುಂಗಿಕೊಳ್ಳುತ್ತಾಳೆ. ಅದೇ ಎರಡನೆಯ ವಿಷಯದಲ್ಲಿ (ಹೆಚ್ಚಿನ ಸಂದರ್ಭಗಳಲ್ಲಿ) ಬೇರೆಯಾಗಿರುತ್ತದೆ. ಈ ಮೇಲೆ ಹೇಳಿದ ಎಲ್ಲಾ ಅನುಕೂಲ ಇರುವ ಮಹಿಳೆಯನ್ನು ಮೇಲಿನ ಪ್ರಭಾವಗಳು 'ಬಳಸಿಕೊಳ್ಳುತ್ತವೆ'. ಇದರ ಪರಿಣಾಮವಾಗಿ ಆಕೆ ದೂರು ಕೊಡುತ್ತಾಳೆ...ಪರಿಸ್ಥಿತಿಯ ವಿಕೋಪಕ್ಕೆ ಸಿಲುಕಿ ಪುರುಷನೂ ಪೀಡನೆಗೊಳಗಾಗುತ್ತಾನೆ!!. ಇದು ಇಂದು ಎಷ್ಟೋ ಕಡೆಗಳಲ್ಲಿ ನಡೆಯುತ್ತಿರುವ, ಆದರೆ ಬಹಿರಂಗವಾಗಿ ಯಾರೂ ಒಪ್ಪಿಕೊಳ್ಳಿದಿರುವ ಸತ್ಯ. ಮತ್ತು ನಮ್ಮ ಸಮಾಜದ ಮಟ್ಟಿಗೆ ದುರಂತವೂ!!
ಈ ಎಲ್ಲಾ ಅವಲೋಕನದ ನಂತರ, ಓರ್ವ ಮಹಿಳೆಯಲ್ಲಿಯೇ ಈ ಬಗ್ಗೆ ಕೇಳಿದಾಗ ನನ್ನ ಮಾತಿಗೆ ಆಕೆಯ ಸಹಮತವೂ ಇತ್ತು!. ಆಕೆಯ ಅಭಿಪ್ರಾಯದಂತೆ ಇಂದು ಹೆಚ್ಚಿನ ಕುಟುಂಬಗಳಲ್ಲಿ ಆಗುತ್ತಿರುವ ಸಮಸ್ಯೆ ಎಂದರೆ ಮನೆಯಲ್ಲಿ ಗಂಡು ಮಗು ಹುಟ್ಟಿದಾಗ ಅದನ್ನು ಬೆಳೆಸುತ್ತಾರೆ.....ಒಂದು ಮಗುವಿನಂತೆ!. ಅದು ತನ್ನ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯುತ್ತದೆ. ಆದರೆ ಅದೇ ಆ ಮಗು ಹೆಣ್ಣಾಗಿದ್ದರೆ, ಅದನ್ನು 'ಹೆಣ್ಣು ಮಗು'ವಿನಂತೆ ಸಾಕಲಾಗುತ್ತದೆ!! ಹೆಜ್ಜೆ ಹೆಜ್ಜೆಗೂ ಅದನ್ನು ಹೆಣ್ಣು..ಹೆಣ್ಣೆಂಬ ಎಚ್ಚರಿಕೆಯ ನಡುವೆ ಬೆಳೆಸಲಾಗುತ್ತದೆ. ಪರಿಣಾಮವೆಂದರೆ ಆ ಮಗುವಿಗೆ ಸ್ವಲ್ಪ ಬುದ್ದಿ ಬಂತೆಂದರೆ ತಾನು ಪುರುಷನಿಗಿಂತ ಕೆಳಗಿನವಳು, ತನಗೆ ಅವನಿಗಿಂತ ಇತಿ ಮಿತಿಗಳು ಹೆಚ್ಚು ಎಂಬ ಭಾವನೆ ಬೆಳೆಯುತ್ತಾ ಹೋಗುತ್ತದೆ. ಪ್ರಾಥಮಿಕ ವಿದ್ಯಾಭ್ಯಾಸದ ಹಂತದಿಂದಲೂ ಅದನ್ನೇ ಆಕೆಯ ಮನಸ್ಸಿನಲ್ಲಿ ಗಟ್ಟಿ ಮಾಡಲಾಗುತ್ತದೆ. ಕೊನೆಗೆ ಆಕೆಗೆ ತಾನೂ ಎಲ್ಲರಂತೆ ಸ್ವತಂತ್ರಳು ಎಂಬ ಭಾವ ಬರುವಷ್ಟರಲ್ಲಿ, ತನ್ನದೇ ಬುದ್ದಿ ಮತ್ತೆಯಲ್ಲಿ ಅದನ್ನು ವಿಶ್ಲೇಷಿಸುವ ಹಂತದಲ್ಲಿ ಆಕೆಗೆ ಇಡೀ ಪುರುಷ ವ್ಯವಸ್ಥೆ, ತನ್ನನ್ನು ಈ ಕೂಪಕ್ಕೆ ತಳ್ಳಿದೆ ಎಂಬ ಹತಾಶಾ ಹಾಗೂ ವಿರೋಧಿ ಭಾವನೆ ಬಲಿತಿರುತ್ತದೆ. ಆಗ ಈ ಸಂಘರ್ಷಗಳು ಆರಂಭವಾಗುತ್ತವೆ!!. 

ಈ ಮಾತನ್ನೂ ಒಪ್ಪಲೇ ಬೇಕು. ಮತ್ತು ಒಂದು ಹಂತದ ತನಕ ಅದು ಸತ್ಯವೂ ಅನಿಸುತ್ತದೆ. ಹೀಗೆ ಮಹಿಳಾ ಶೋಷಣೆ, ಪುರುಷ ಪೀಡೆ...ಅದರದ್ದೇ ಆದ ವ್ಯಾಪ್ತಿಯಲ್ಲಿ ನಡೆಯುತ್ತಲೇ ಇರುತ್ತದೆ. ಈ ಕೂಗು ನಿರಂತರವಾಗಿರುತ್ತದೆ. ಇಲ್ಲಿ ಯೋಚಿಸಬೇಕಾದ ಮತ್ತೊಂದು ವಿಚಾರವೆಂದರೆ, ಗಂಡು ಮಗು ಕೇವಲ ಮನೆಯ ಸದಸ್ಯನಾಗಿ ಬೆಳೆಯುತ್ತಾ, ಮಹಿಳೆ ಎಂದರೆ ಹೀಗೇ ಎಂಬ ಪೂರ್ವಾಗ್ರಹದಿಂದ ಬೆಳೆದಾಗ, ಮುಂದಿನ ಸಾಮಾಜಿಕ ಅನಾಹುತಗಳಿಗೆ ಕಾರಣನಾಗುತ್ತಾನೆ!!. ಇದೂ ಮನೋ ವಿಜ್ಞಾನಕ್ಕೆ ಬರುವ ವಿಷಯವಾದರೂ ಸಾಮಾನ್ಯ ಜ್ಞಾನದಿಂದಲೂ ಅಥೈಸಿಕೊಳ್ಳಬಹುದಾದ ಸತ್ಯ. ಹೇಗೆ ಹೆಣ್ಣು ತನ್ನ 'ತಿಳುವಳಿಕೆ'ಯಿಂದ ತಾನೂ ಪುರುಷನಷ್ಟೇ ಸಮಾನಳು ಎಂದು ಕೊಳ್ಳುತ್ತಾಳೋ, ಹಾಗೆಯೇ ಪುರುಷನೂ ಅಂದುಕೊಂಡರೆ ಅದು ಸಹಜ. ಹಾಗಾದಾಗ ಆತ ಸುಸಂಸ್ಕೃತನೆನಿಸೊಕೊಳ್ಳುತ್ತಾನೆ.

ಆದರೆ ಎರಡೂ ಕಡೆ ವಿರುದ್ದದ ಪರಿಸ್ಥಿತಿಯನ್ನೂ ಅಲ್ಲಗಳೆಯಲಾಗದು. ಹಾಗಾದಾಗ ಈ ರೀತಿಯ ವೈಪರೀತ್ಯಗಳುಉ ನಡೆಯುತ್ತದೆ. ಒಟ್ಟಾರೆಯಾಗಿ ವಿಷಯವನ್ನು ಚಿಂತನೆಯ ಒರೆಗೆ ಹಚ್ಚಿ ಯೋಚಿಸಿದರೆ, ಮಹಿಳೆ-ಪುರುಷ ಇಬ್ಬರೂ ಒಂದಿಲ್ಲೊಂದು ರೀತಿಯ ಶೋಷಣೆಯನ್ನು ಅನುಭವಿಸುತ್ತಿರುತ್ತಾರೆ. ಅಂಕಿ ಸಂಖ್ಯೆಯಲ್ಲಿ ವ್ಯತ್ಯಾಸವಿರಬಹುದಷ್ಟೇ!!
ಕೊನೆಗೂ ನನಗೆ ಬಹಳ ದೊಡ್ಡ ಪ್ರಶ್ನೆಯಾಗಿ ಕಾಡಿದ್ದು ಮೇಲಿನ ಭಾಷಣ ಸ್ಪರ್ಧೆಯ ವಿಚಾರದಲ್ಲಿ ಯಾವ ಭಾಷಣ ಸ್ಪರ್ಧಿಯೂ ಮಹಿಳೆಯ ಸಮಸ್ಯೆಯ  ಪರಿಧಿಯಿಂದ ಹೊರಬಂದು ಆಕೆಯ ರಕ್ಷಣೆಯ ಬಗ್ಗೆ ಮಾತಾಡಲಿಲ್ಲ. ಮಧ್ಯಾಹ್ನವೂ ಲೋಕಾಯುಕ್ತರಿಗೆ ಕೇಳಿದ ಕಾನೂನಿನ ಅನುಕಂಪದಿಂದಾಗುವ ಪುರುಷ ಪೀಡನೆಯ ವಿಷಯದಲ್ಲಿ ಯಾವ ಮಹಿಳೆಯೂ ಮಾತಾಡಲಿಲ್ಲ. ಒಂದು ರೀತಿಯ ದ್ವಂದ್ವ, ಇಂದು ಸಾಮಾಜಿಕವಾಗಿಯೂ ಬೆಳೆದಿದೆ ಅನ್ನಬಹುದು. 


Thursday 6 March 2014

ನಾರಾಯಣ ಶಬರಾಯರಿಗೆ ೨೦೧೪ನೇ ಸಾಲಿನ 'ಸುಮ ಕ್ರಷ್ಣ 'ಯಕ್ಷಗಾನ ಪ್ರಶಸ್ತಿ.





ಅತ್ತೆ ಸುಮತಿ ಮತ್ತು ಮಾವ ಕೃ‍ಷ್ಣ ಮೂರ್ತಿ ಇಬ್ಬರೂ ಇನ್ನಿಲ್ಲ. ಮಂದಾರ್ತಿ ಮೇಳದಲ್ಲಿ ದೀರ್ಘ ಅವಧಿಗೆ ಅಡುಗೆ-ಪೂಜೆಯವರಾಗಿದ್ದ ಮಾವ ಯಕ್ಷಗಾನವನ್ನೇ ಜೀವನ ಎಂದುಕೊಂಡು ಬದುಕಿದವರು. ಅತ್ತೆ ಸುಮತಿ, ಯಕ್ಷಗಾನದ ವಿಶೇ‍ಷ ಒಲವುಳ್ಳವರು....ಈಗ ಇಬ್ಬರೂ ಕೇವಲ ನೆನಪು. ಅವರಿಗೆ ಗೌರವ ಪೂರ್ವಕವಾಗಿ ಇಬ್ಬರ ಸ್ಮರಣಾರ್ಥ ಈ ವರ್ಷದಿಂದ 'ಸುಮಕೃ‍ಷ್ಣ' ಯಕ್ಷಗಾನ ಪ್ರಶಸ್ತಿಯನ್ನು ಆರಂಭಿಸಿದ್ದೆವೆ. ಅವರ ಮಕ್ಕಳು-ಅಳಿಯಂದಿರು ಸೇರಿ ಕೊಡಮಾಡುವ ಈ ಪ್ರಶಸ್ತಿ ಐದು ಸಾವಿರ ರೂಪಾಯಿಯ ಗೌರವಧನ, ಪ್ರಶಸ್ತಿ ಪತ್ರ, ಫಲಕಗಳನ್ನು ಒಳಗೊಂಡಿರುತ್ತದೆ. ಇದನ್ನು ಅರೆಹೊಳೆ ಪ್ರತಿಷ್ಠಾನ (ರಿ) ಪ್ರತೀ ವರ್ಷ ಕೊಡಮಾಡುತ್ತದೆ. ಈ ವರ್ಷದ 'ಸುಮಕೃ‍ಷ್ಣ' ಯಕ್ಷಗಾನ ಪ್ರಶಸ್ತಿ ಗೆ ಬಡಗು-ತೆಂಕಿನ ಖ್ಯಾತ ಭಾಗವರ ಶ್ರೀ ನಾರಾಯಣ ಶಬರಾಯ ಅವರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಏಪಿಲ್ 24 ರಂದು ಕೆಂಜೂರು ಸಮೀಪದ ಬಲ್ಲೆಬೈಲಿನಲ್ಲಿರುವ ನಮ್ಮ ಮನೆ 'ನಂದಗೋಕುಲ'ದ ಅಂಗಳದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೆರಲಿದೆ. ಅದೇ ರಾತ್ರಿ ಮಂದಾರ್ತಿ ಮೇಳದವರಿಂದ ನಮ್ಮ ವಾರ್ಷಿಕ ಸೇವೆಯಾಗಿ ಯಕ್ಷಗಾನ ನಡೆಯಲಿದೆ.....ತಮಗೆಲ್ಲರಿಗೂ ಇದು ಅಕ್ಕರೆಯ ಸುದ್ದಿ....ಪ್ರೀತಿಯ ಆಹ್ವಾನ...ಆ ದಿನವನ್ನು ನಮಗಾಗಿ ಮೀಸಲಿಡಿ....
                                                 
ಸುಮ ಕ್ರಷ್ಣ ಯಕ್ಷಗಾನ ಪ್ರಶಸ್ತಿ ಗೆ ಆಯ್ಕೆಯಾದ 
ನಾರಾಯಣ ಶಬರಾಯರಿಗೆ ಅಭಿನಂದನೆಗಳು 

Tuesday 4 March 2014

'ಆಕೆ'ಯ ಕಷ್ಟಕ್ಕೆ ಅನೇಕ ಮುಖಗಳು!!

ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಾನು ಈ ವಾರ  ಬರೆದ ಜನಪ್ರತಿನಿಧಿ ಅಂಕಣ, 'ಪ್ರದಕ್ಷಿಣೆ'  ಬರಹ..... 


ಹೆಣ್ಣು ಹೆಣ್ಣೆಂದು ಹೀಗಳೆಯುವಿರೇಕೆ ನೀವು ಹೆಣ್ಣಲ್ಲವೇ ನಮ್ಮ ಹೆತ್ತ ತಾಯಿ!....ಈ ಕವಿವಾಣಿಯೊಂದೇ ಸಾಕು, ಹೆಣ್ಣು ಎಂದರೇನೆಂದು ವರ್ಣಿಸಲು.

ಮಾರ್ಚ್ ೮ನ್ನು ನಾವು ಅಂತಾರಾಷ್ರೀಯ ಮಹಿಳಾ ದಿನವನ್ನಾಗಿ ಆಚರಿಸಿಕೊಳ್ಳುತ್ತಿದ್ದೇವೆ. ಎಲ್ಲಾ ವಿಶೇಷ ದಿನಗಳಲ್ಲಿ ಮಾಡುವಂತೆ ಈ ದಿನ  ನಾವು ಮಹಿಳೆಯ ಗುಣ ಗಾನ ಮಾಡಿ, ಮರುದಿನದಿಂದ ನಮ್ಮ ಸಹಜ ಜೀವನದತ್ತ ತೆರಳಿ ಬಿಡುತ್ತೇವೆ. ಪ್ರೀತಿಗೆ, ಧರ್ಯಕ್ಕೆ, ಸ್ಥೈರ್ಯಕ್ಕೆ, ವಿಶಾಲ ಮನೋಭಾವಕ್ಕೆ, ತ್ಯಾಗಕ್ಕೆ, ಸ್ನೇಹಕ್ಕೆ, ಬಾಂಧವ್ಯಕ್ಕೆ, ಆತ್ಮೀಯತೆಗೆ, ಸಹೋದರತೆಗೆ, ವಾತ್ಸಲ್ಯಕ್ಕೆ...ಹೀಗೆ ಸುಸಂಸ್ಕೃತ ಜೀವನದ ಪ್ರತೀ ಮಗ್ಗುಲಿಗೂ ನಾವು ಉದಾಹರಣೆಯಾಗಿ ಕೊಡುವುದು ಮಹಿಳೆಯನ್ನು. ಓರ್ವ ಮಹಿಳೆಯಲ್ಲಿ ದೈವ ಸ್ವರೂಪವನ್ನೇ ಕಾಣುವುದು ನಮ್ಮ ಭಾರತೀಯ ಸಂಸ್ಕಾರ. ಇದೆಲ್ಲವೂ ಸರಿ.
ಬಹುಶ: ಗಾಂಧೀಜಿ ಹೇಳಿದ್ದರು ಎನ್ನುವ ಮಾತೊಂದು ಮಹಿಳಾ ದಿನಾಚರಣೆಯಲ್ಲಿ ಮಾತ್ರ 'ಬಳಕೆ'ಯಾಗುತ್ತದೆ. ಓರ್ವ ಮಹಿಳೆ ಮಧ್ಯರಾತ್ರಿ ಸುರಕ್ಷಿತವಾಗಿ ಮನೆ ಸೇರುತ್ತಾಳೆ ಎಂದರೆ ಆಗ ಅದು ನಿಜವಾದ ಸ್ವಾತಂತ್ರ್ಯ ಎಂದವರು ಹೇಳಿದ್ದರಂತೆ. ಆ  ಹಿನ್ನೆಲೆಯಲ್ಲಿ ಹೇಳ ಹೊರಟರೆ,ಎದುರು ಕಾಣುವ ನಮ್ಮ ಪ್ರಪಂಚದಲ್ಲಿ ಇಂದು ಹೇಳಿಕೆಯನ್ನು ಬದಲಾಯಿಸಲೇ ಬೇಕು. ಇಂದು ಮಹಿಳೆ ಒಂದೊಮ್ಮೆ ಮಧ್ಯರಾತ್ರಿಯಾದರೂ ಸುರಕ್ಷಿತವಾಗಿ ಮನೆ ತಲುಪಬಹುದು, ಮನೆಯೊಳಗೇ ಆಕೆ ಸುರಕ್ಷಿತಳಾಗಿದ್ದರೆ ಸಾಕು!!.

ಆಶ್ಚರ್ಯವಾಗಬಹುದು ನಿಮಗೆ. ಇಲ್ಲಿ ಮನೆ ಎನ್ನುವುದನ್ನು ನಾನು ಕೇವಲ ಒಂದು ಸಂಕೇತವಾಗಿ ಬಳಸಿಕೊಂಡಿದ್ದೇನೆ. ಮಹಿಳೆ ಎನ್ನುವುದನ್ನು ಕೇವಲ ಇಡೀ ಸ್ತ್ರೀ ಸಮೂಹವಾಗಿ ಕಂಡಿದ್ದೇನೆ. ಮನೆ ಎಂಬಲ್ಲಿ ನೀವು ಕಛೇರಿ, ಮನೆ, ವಿದ್ಯಾಕ್ಷೇತ್ರ, ಕಾರ್ಖಾನೆ, ರಸ್ತೆ.....ಹೀಗೆ ಸಮಾಜದ ಒಟ್ಟೂ ವ್ಯವಸ್ಥೆಯ ಎಲ್ಲಾ ಆಯಗಳನ್ನೂ ಸೇರಿಸಿಕೊಳ್ಳಬಹುದು. ಮಹಿಳೆ  ಎಂದರೆ ಅದು ಇಂದು ಹುಟ್ಟಿದ ಹೆಣ್ಣು ಮಗುವಿನಿಂದ ಹಿಡಿದು, ಅತ್ಯಂತ ಹಿರಿಯ ಮಹಿಳೆಯ ತನಕವೂ ಆಗಿರಬಹುದು. ಆಕೆ, ಬೇರಾರೋ ಕಣ್ಣಿಗೆ ಕಾಣದ ಸ್ತ್ರೀಯಿಂದ ಹಿಡಿದು, ನಮ್ಮದೇ ಮನೆಯ ಅಕ್ಕ ತಂಗಿಯರ ತನಕವೂ ಆಗಿರಬಹುದು, ಆಕೆಯನ್ನು ನಾವು ಕಣ್ಣಿಗೆ ಕಾಣದಂತೆ, ಅನೇಕ ರೀತಿಯ ಶೋಷಣೆಗೊಳಪಡಿಸುತ್ತಿರುತ್ತೇವೆ-ನಮ್ಮರಿವಿಗೂ ಬರದಂತೆ!!


ಅತ್ಯಂತ ಆತ್ಮೀಯ ಮಹಿಳೆಯಲ್ಲಿ ಒಮ್ಮೆ ಕೇಳಿ ನೋಡಿ-ನಿನಗೆ ಅತೀ ಇಷ್ಟ ಎನಿಸುವ ಭಾವನೆಯನ್ನು ಈ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳು ಎಂದು. ಆಕೆಯ ಉತ್ತರ ದಲ್ಲಿ ಬಹುಪಾಲು ಈ ಎರಡು ಅಂಶಗಳದ್ದಾಗಿರುತ್ತದೆ. ಒಂದು ಇಡೀ ಸಮಾಜದಲ್ಲಿ ನಿರ್ಭೀತವಾಗಿ ಓಡಾಡಿಕೊಂಡು, ಒಂದೂ ಕೆಟ್ಟ ದೃಷ್ಟಿ ಬೀಳದಂತೆ ಓಡಾಡುವ ವಾತಾವರಣ ಇದ್ದರೆ ಅದೇ ತನಗೆ ಬದುಕು. ಎರಡನೆಯದು- ಓರ್ವ ಮಹಿಳೆ ಸಂಪೂರ್ಣ ಸಂತಸ ಪಡುವುದು ಆಕೆ ಅತ್ಯಂತ ಕಷ್ಟದಲ್ಲಿದ್ದಾಗ, ತನ್ನ ಪ್ರೀತಿ ಪಾತ್ರರು ನಿಜಾರ್ಥದಲ್ಲಿ ನಿಸ್ವಾರ್ಥದಿಂದ ಬೆಂಬಲಿಸಿದಾಗ, ಬೆಂಗಾವಲಾಗಿ ನಿಂತಾಗ!

ಇಂದು ನಾವು ಅನೇಕ ಕಡೆಗಳಲ್ಲಿ ಕಾಣುತ್ತೇವೆ. ಎಷ್ಟೋ ಕಡೆ ವಾಸ್ತವವಾಗಿ ಮಹಿಳಾ ಹೋರಾಟದ ಮಾತಾಡುತ್ತಾ, ತಮ್ಮದೆ ನಾಲ್ಕು ಗೋಡೆಯ ನಡುವೆ ಮಹಿಳೆಯನ್ನು ಹೀನಾಯವಾಗಿ ಕಾಣುವ ಪ್ರವ್ರತ್ತಿ ಇದೆ. ಅದು ಎಷ್ಟು ಭೀಕರವೆಂದರೆ ಕೇವಲ ಊಹಿಸಲೂ ಆಗದಷ್ಟು!!. ಬಹುಶ: ನಂಬಲೂ ಆಗದ ಕಥೆಗಳು ನಿತ್ಯ ನಮ್ಮ ಸಮಾಜದಲ್ಲಿ ಆಗುತ್ತಿರುತ್ತವೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದೊಂದು ಮಾತಿದೆ. ಇದನ್ನು ತಮಾಷೆಯಾಗಿ ಎಷ್ಟೋ ಕಡೆ ಹೇಳುತ್ತೇವಾದರೂ, ಇದೇ ಸತ್ಯವಾದ ಅದೆಷ್ಟೋ ಉದಾಹರಣೆಗಳು ನಾವು ಒಮ್ಮೆ ತೆರೆದ ಕಣ್ಣಿನಿಂದ ಪ್ರಪಂಚವನ್ನು ನೋಡಿದರೆ ಕಾಣ ಸಿಗುತ್ತದೆ. ಓರ್ವ ಮಹಿಳಾ ಪರ ಹೋರಾಟಗಾರ್ತಿ ಎಂದು ಹೇಳಿಕೊಳ್ಳುತ್ತಾ, ವೇದಿಕೆಯಲ್ಲಿ ಭಾಷಣ ಬಿಗಿಯುತ್ತಾ, ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಾ...ಪ್ರಸಿದ್ದರಾದ ಮಹಿಳೆಯ ಬಗ್ಗೆ ಆಕೆಯ ವಿದ್ಯಾರ್ಥಿನಿಯೋರ್ವರಲ್ಲಿ ಕೇಳಿದೆ. ಅದಕ್ಕವರು ನೀಡಿದ ಉತ್ತರ ನನ್ನನ್ನು ಬೆಚ್ಚಿ ಬೀಳಿಸಿತು-ಅವರೆಂದರು, ಈ ಶೋಷಣೆ ಎನ್ನುವುದು ಲೈಂಗಿಕವಾಗಿ ಮಾತ್ರ ಎಂದು ನೀವಂದುಕೊಂಡಿದ್ದರೆ ಅದು ತಪ್ಪು, ನಿಜವಾದ ಶೋಷಣೆ ಎಂದರೆ ಏನೆಂದು ಈ ಮೇಡಂ ಹತ್ತಿರ ನೀವು ಕೆಲವು ಸಮಯ ವಿದ್ಯಾರ್ಥಿಯಾಗಿದ್ದುಕೊಂಡರೆ ತಿಳಿಯುತ್ತದೆ!!. ಅದೆಷ್ಟೋ ಸಂದರ್ಭಗಳಲ್ಲಿ ಈ ಮಹಿಳೆಯಿಂದ ನನ್ನನ್ನು ಓರ್ವ ಸರ್ ರಕ್ಷಿಸಿದ್ದರು!! ಎಂಬುದು ಆಕೆಯ ಉತ್ತರವಾಗಿತ್ತು, ಇದರ ವಿರುದ್ದ ನಿಮಗೇಕೆ ದೂರು ಕೊಡಲಾಗುವುದಿಲ್ಲ ಎಂದರೆ ಆಕೆ ಹೇಳುತ್ತಾರೆ, ಹಾಗೇನಾದರೂ ದೂರು ಕೊಡುವುದಕ್ಕಿಂತ ಮೊದಲು ಎರಡು ವಿಷಯ ಯೋಚಿಸಬೇಕಾಗುತ್ತದೆ. ಮೊದಲನೆಯದು ನಾನಲ್ಲಿ ಮುಂದುವರಿಯಬೇಕೇ ಬೇಡವೇ ಎಂಬುದಾದರೆ, ಎರಡನೆಯದು ಈ ದೂರಿನ ನಂತರದ 'ಪ್ರಚಾರ'ವನ್ನು ಎದುರಿಸಿ ಇಡೀ ಬದುಕಿನಲ್ಲಿ ಹೋರಾಡಬಲ್ಲೆನೇ ಎಂಬುದು ಎಂದು ಆಕೆ ಹೇಳುವಾಗ ಆಕೆಯ ಕಣ್ಣಿನಲ್ಲಿ ನೀರು!!

ಇತ್ತೀಚೆಗೆ ನಾವು ದಿನ ಪತ್ರಿಕೆಗಳಲ್ಲಿ ದಿನವೂ ಓದುತ್ತಿರುತ್ತೇವೆ. ಅದೆಷ್ಟೋ ಕಡೆ ತಂದೆಯಿಂದಾಗಿ, ಸಹೋರನಿಂದಾಗಿ, ಚಿಕ್ಕಪ್ಪನಿಂದಾಗಿ.....ಹೀಗೆ ತೀರಾ ಭಾವನಾತ್ಮಕವಾಗಿ ರಕ್ಷಣೆ ಕೊಡಬೇಕಾದವರಿಂದಾಗಿಯೇ ಹೆಣ್ಣು ಗರ್ಭಿಣಿಯಾದ ಬಗ್ಗೆ, ಅತ್ಯಾಚಾರಕ್ಕೊಳಗಾದ ಬಗ್ಗೆ ಓದುತ್ತಿರುತ್ತೇವೆ. ಆಕೆಯ ಮನ:ಸ್ಥಿತಿಯನ್ನು ಒಮ್ಮೆ ಯೋಚಿಸೋಣ. ಇಡೀ ಸಮಾಜ ಆಕೆಯನ್ನು ಮತ್ತು ಆಕೆಯನ್ನು ಮಾತ್ರ ತಪ್ಪಿತಸ್ಥಳನ್ನಾಗಿ ಕಾಣುತ್ತದೆ. ಅದೆಂದಿಗೂ ಅದಕ್ಕೆ ಕಾರಣ ಆಕೆ ಮಾತ್ರ ಎಂಬ 'ನಿರ್ಧಾರ'ದಿಂದ ಹೊರ ಬರುವುದೇ ಇಲ್ಲ. ಇದಕ್ಕೆ ನಿಜವಾಗಿಯೂ ಆಕೆಯನ್ನು ಪರಿಸ್ಥಿತಿಯ ಕೈಗೊಂಬೆಯಾಗಿ ಮಾಡಿ ಬಳಸಿಕೊಂಡ ವ್ಯವಸ್ಥೆಯ ಬಗ್ಗೆ ಅದು 'ಚ'ಕಾರವನ್ನೂ ಎತ್ತದೇ, ಆಕೆಯನ್ನು ಮಾತ್ರ ಕಂಡ ಕಂಡಲ್ಲಿ ಬೆರಳಿಟ್ಟು ತೋರಿಸುತ್ತದೆ. ಇದು ಆಮಾನವೀಯತೆಯ ಅತಿರೇಖ. 

ಇನ್ನು ಕೆಲಸ ಮಾಡುವಲ್ಲಿ ಮಹಿಳೆ ಪಡುವ ಬವಣೆ ಯಾರಿಗೂ ಬೇಡ. ಅದೆಷ್ಟೋ ಕಛೇರಿಗಳಲ್ಲಿ ಇಂದಿಗೂ 'ಬಾಸ್' ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದ ದುರವಸ್ಥೆ ಮಹಿಳೆಯದ್ದು. ಮುಖ್ಯವಾಗಿ ಪ್ರಮೋಶನ್, ವರ್ಗಾವಣೆ ಇಂತಾದ್ದು ಅನಿವಾರ್ಯವಾಗಿರುವ ಕಛೇರಿಗಳಲ್ಲಿ ಅದೆಷ್ಟೋ ಮಹಿಳೆ, ಹೇಳಲೂ ಆಗದೇ, ಅನುಭವಿಸಲೂ ಆಗದೇ ಕೊರಗುತ್ತಿರುತ್ತಾಳೆ, ಕಾನೂನು, ಸಮಾಜ, ವ್ಯವಸ್ಥೆ ಎಂದೇನಾದರೂ ವಿಷಯ ಹೊರ ಹಾಕಿದರೆ ಅದೆಲ್ಲವನ್ನೂ ಕೇವಲ ತಮ್ಮ ತಮ್ಮ ಮೂಗಿನ ನೇರದಲ್ಲಿ 'ಬಳಸಿ'ಕೊಳ್ಳುವವರೇ ಹೆಚ್ಚೇ ಹೊರತು, ಅದರಿಂದಾಗಿ ನಿಜವಾದ ನ್ಯಾಯ ಮರೀಚಿಕೆ ಎಂಬುದು ಅನೇಕ ಮಹಿಳೆಯರ ಅಭಿಮತ. ಆಶ್ಚರ್ಯವೆಂದರೆ, ಮಹಿಳಾ ಶೋಷಣೆಯ ವಿರುದ್ಧ ಹೊರಾಡುವ ಘಟಕವೊಂದರ ಸಕ್ರಿಯ ಸದಸ್ಯೆಯೋರ್ವರೇ ಈ ರೀತಿಯ ಶೋಷಣೆಗೊಳಗಾಗಿದ್ದು, ಅದರ ವಿರುದ್ಧ ಹೋರಾಡಲಾರದೇ ಪರಿತಪಿಸಿದ್ದನ್ನು ನಾನು ಓದಿದ್ದೇನೆ!!. ಇನ್ನು ಮಹಿಳೆಯನ್ನು ಯಾರು ರಕ್ಷಿಸಬೇಕು, ಹೇಗೆ ರಕ್ಷಿಸಬೇಕು!!

ಬಹುಶ: ಮಹಿಳಾ ಜೀವನದ ಒಂದೇ ಮಗ್ಗುಲಿನ ಬಗ್ಗೆ ಹೇಳುತ್ತೇನೆ ಎಂದು ಭಾವಿಸಬೇಡಿ. ಆದರೆ ಒಂದಂತೂ ಸತ್ಯವೆಂದು ನಾನು ಮನಗಂಡಿದ್ದೇನೆ, ಅದೆಂದರೆ ಸಮಾಜದ ಯಾವುದೇ ಉನ್ನತ ಸ್ತರದಲ್ಲಿರಲಿ, ಮಹಿಳೆ ಈ ಶೋಷಣೆಯ ಒಂದಾದರೂ ಅನುಭವವನ್ನು ಅಪ್ಪಿಕೊಂಡೇ ಬದುಕ ಬೇಕಾದ ಅನಿವಾರ್ಯತೆ ಇದೆ. ಈ ಲೇಖನದ ತಯಾರಿಯ ದೃಷ್ಟಿಯಲ್ಲಿ ಕೆಲವರನ್ನು ಸಹಜವಾಗಿಯೇ ಕೇಳಿದರೆ, ಶೋಷಣೆಯ ವಿಷಯ ಬಂದಾಗ ಒಬ್ಬೊಬ್ಬರದ್ದೂ ಒಂದೊಂದು ಅನುಭವ ಮತ್ತು ಯಾರೂ ಇದರಿಂದ ಹೊರತಾಗಿಲ್ಲ ಎಂದು ತಿಳಿದಾಗ ಮಾತ್ರ ಆಶ್ಚರ್ಯವಾಯಿತು!!. ಇದು ನಮ್ಮ ದುರಂತ.
ಇತ್ತೀಚೆಗೆ ಮಂಗಳೂರಿನ ಒಂಟಿ ಮನೆಯಲ್ಲಿದ್ದ ೬೦ರ ಮಹಿಳೆಯನ್ನು ಯಾರೋ ಕೊಂದು ಆಭರಣ ದೋಚಿದ್ದರು. ಮೊದಲಿನ ದಿನದ ಸುದ್ದಿ ಪ್ರಕಾರ ಆಕೆಯ ಆಭರಣ ದೋಚಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಅತ್ಯಾಚಾರವನ್ನೂ ಮಾಡಿದ್ದರು!!. ನಾಲ್ಕೈದು ದಿನದ ಹಿಂದೆ ಮಂಗಳೂರು ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ೩೫-೪೦ವಯೋಮಾನದ ಮಹಿಳೆಯೋರ್ವಳ ಶವ ಸಿಕ್ಕಿತ್ತು. ಆಕೆ ಎಲ್ಲಿಯವಳು ಯಾರು ಎಂಬುದೇ ತಿಳಿದಿಲ್ಲ, ಆಕೆಯ ಮೇಲೂ ಅತ್ಯಾಚಾರವಾಗಿತ್ತು. ದಕ್ಷಿಣ ಕನ್ನಡವೊಂದರಲ್ಲೇ ಸಾವಿರಾರು ಮಹಿಳೆಯರು ನಾಪತ್ತೆಯಾಗಿ ಎಲ್ಲಿದ್ದಾರೆಂದೇ ತಿಳಿಯುತ್ತಿಲ್ಲ. ಉಜಿರೆಯ ಲಾಡ್ಜ್ ಒಂದರಲ್ಲಿ ಓರ್ವ ಮಹಿಳೆಯನ್ನು ಪ್ರೇಮದ ಹೆಸರಲ್ಲಿ ಮೋಸ ಮಾಡಿ, ಕೊನೆಗೆ ಕೊಲೆ ಮಾಡಿದ ವರದಿಯನ್ನು ನಾವು ಓದಿದ್ದೇವೆ.....ಗಮನಿಸುತ್ತಾ ಹೋದರೆ ದಿನ ನಿತ್ಯ ಇಂತಹ ಅನಾಚಾರಗಳು, ಅತ್ಯಾಚಾರಗಳು ಲೆಕ್ಕವಿಲ್ಲದಷ್ಟೂ ಸಿಗುತ್ತವೆ. ಮಹಿಳೆ ಎಲ್ಲಿ ಸುರಕ್ಷಿತಳು??

ಒಂದೆರಡು ಸ್ವಾನುಭವದೊಂದಿಗೆ ಮುಗಿಸುತ್ತೇನೆ. ಅದೊಂದು ವೇದಿಕೆ. ಅಲ್ಲಿ ಓರ್ವ   ಯುವತಿ ಹಾಡು ಹೇಳುತ್ತಿದ್ದಳು. ಆಕೆಯ ಜೊತೆಗೆ ಓರ್ವ ಹುಡುಗನೂ ಹಾಡು ಹೇಳುತ್ತಿದ್ದ. ಅದು 'ಬಾರೇ ಇಲ್ಲಿ ಪಂಕಜ' ಎಂಬ ಸಾಲಿದ್ದ ಹಾಡಾಗಿತ್ತು. ಆಕೆ ಆ ಹಾಡನ್ನು ಹಾಡಿ ವೇದಿಕೆ ಇಳಿದು ಹೋಗುತ್ತಾಳೆ.  ಕೆಲವು ಕಾರ್ಯಕ್ರಮಗಳ ಬಳಿಕ, ಆಕೆ ಮತ್ತೆ ಹಾಡಿಗಾಗಿ ವೇದಿಕೆಗೆ ಬರುತ್ತಾಳೆ, ಆಗ ಜನ ಸಂದಣಿಯಿಂದ ಅನೇಕ ಧ್ವನಿಗಳು ಒಟ್ಟಾಗಿ 'ಬಾರೇ ಇಲ್ಲಿ ಪಂಕಜ' ಎಂದು ಜೋರಾಗಿ ಕೇಳಿಬರುತ್ತವೆ!!. ಆಕೆಗಾದರೋ ಭೂಮಿ ಕುಸಿದ ಅನುಭವ. ಆದರೂ ಸಮಾಧಾನ ಚಿತ್ತದಿಂದ ಆಕೆ ಹಾಡನ್ನು ಮುಂದುವರಿಸುತ್ತಾಳೆ. ಆಕೆ ಹಾಡುತ್ತಿರವಾಗೆಲ್ಲಾ ಈ ಕೂಗು ಜನಸಂದಣಿಯ ಅನೇಕರಿಂದ ಕೇಳಿ ಬರುತ್ತಲೇ  ಇರುತ್ತದೆ. ಆಕೆಗೆ ಹಾಡು, ಲಯ ಎಲ್ಲವೂ ತಪ್ಪುತ್ತದೆ. ಅಂತೂ ಆಕೆ ವೇದಿಕಯಿಂದ ಹಿಂದೆ ಸರಿದರೆ ಸಾಕೆಂದು ಮುಗಿಸಿ ಹೋಗುತ್ತಾಳೆ. ಕೊನೆಗೆ ಮೊದಲು ಹಾಡಿದ ಹುಡುಗನ ಸರದಿ. ಆತ ವೇದಿಕೆಗೆ ಬರುತ್ತಲೇ ಮತ್ತೆ ಸಭೆಯ ಮಧ್ಯದಿಂದ ಕೂಗು ಕೇಳಿ ಬರುತ್ತದೆ, 'ಪಂಕಜನ್ನ ಕರ್ಕೊಂಡ್ಪಾರೋ'!!

ಇದು ಒಂದು ಸಾಧಾರಣ ವಿಷಯವಾಗಿ ಕಾಣ ಬಹುದು. ಮತ್ತು ಇಂದು ಇಂತಹ ಘಟನೆಗಳು ಸಾಧಾರಣ, ಸಮಾನ್ಯ ಎಂದು ನಾವು ಪರಿಗಣಿಸಿಬಿಡುತ್ತೇವೆ. ಆದರೆ ಅಲ್ಲಿ ಹಾಡುವ ಹುಡುಗಿ ನಮ್ಮ ಅಕ್ಕ-ತಂಗಿಯೋ ಆಗಿದ್ದರೆ ಒಮ್ಮೆ ಮನೆಯಲ್ಲಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳೋಣ!!. ಎದೆಗೆ ಭರ್ಚಿ ಚುಚ್ಚಿದ ಅನುಭವವಾಗುತ್ತದೆ!!. ಇಂತಹ ವಿಷಯಗಳಲ್ಲಿ ಪುರುಷ ಯಾವತ್ತೂ ಸುರಕ್ಷಿತ ಎಂಬುದು ನನ್ನ ಭಾವನೆ.

ಒಂದು ಕಡೆ ಇಂತಾದ್ದೇ ಒಂದು ಕಾರ್ಯಕ್ರಮ ನಡೆಯುತ್ತಿತ್ತು. ಓರ್ವ ಕಲಾವಿದೆ ಸಹೋದರಿ, ಕಾರ್ಯಕ್ರಮಕ್ಕೆಂದು ಬಂದಿದ್ದವಳು, ತನ್ನ ಕಾರ್ಯಕ್ರಮಕ್ಕೆ ಸ್ವಲ್ಪ ಸಮಯ ಇದೆ ಎಂದು ನನ್ನ  ನಿಲ್ಲಿಸಿದ್ದ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಳು. ನಾನು ಹೊರಗೆ ನಿಂತಿದ್ದೆ, ಕೆಲವೇ ನಿಮಿಷಗಳ ನಂತರ ನಾನು ಗಮನಿಸಿದ್ದೆಂದರೆ, ನನ್ನ ಕಾರಿನ ಮುಂದೆ ಅನೇಕ ಪಡ್ಡೆ ಹುಡುಗರು ಜಮಾಯಿಸಿ, ಆಕೆಯನ್ನು ನೋಡುತ್ತಾ ಅದೇನೇನೋ ತಮಾಷೆಯಲ್ಲಿ ನಿರತರಾಗಿದ್ದರು. ಆಕೆಯನ್ನು ಕಾರಿನಿಂದಿಳಿಯುವಂತೆ ಹೇಳಿದೆ, ಕೊನೆಗೆ ಆ ಹುಡುಗರ ಪಕ್ಕಕ್ಕೆ ನಾನು ಹೋಗಿ ನಿಂತು ಇಲ್ಲೇನು ಮಾಡುತ್ತೀರೆಂದು ಕೇಳಿದರೆ ಅವಾಚ್ಯ ಶಬ್ದದಿಂದ ಇದು ನಿನ್ನ ಜಾಗವಲ್ಲ, ನಾವೆಲ್ಲಿ ಬೇಕಾದರೂ ನಿಲ್ಲುತ್ತೇವೆ ಎಂಬ ಉತ್ತರ ಬಂತು. ಸಂಬಂಧಿಸಿದವರಲ್ಲಿ ಈ ಬಗ್ಗೆ ಹೇಳಿದರೆ ಆ ಹುಡುಗಿಯನ್ನು ಒಳಗೆ ಕುಳಿತುಕೊಳ್ಳಲು ಹೇಳಿ ಎಂಬ 'ಸಲಹೆ'ನನಗೆ. ಹೀಗಾದರೆ ಯಾರು ಯಾರನ್ನು ತಿದ್ದಬೇಕು, ಸಮಾಜದಲ್ಲಿನ ಓರೆ ಕೋರೆಗೆ ಯಾರು ಕನ್ನಡಿ ಹಿಡಿಯಬೇಕು, ಬೆಕ್ಕಿನ ಕುತ್ತಿಗೆಗೆ ಯಾರು ಘಂಟೆ ಕಟ್ಟಬೇಕು......ಈ ಮಹಿಳಾ ದಿನಾಚರಣೆಯಲ್ಲಿ ಇದೇ ಪ್ರಶ್ನೆ.