Monday 21 April 2014

ಚುನಾವಣೆ ಎಂಬ ಮಳೆ ನಿಂತ ಮೇಲೆ.....

ಆ ಮಹಿಳೆಗೂ ಚುನಾವಣೆಗೂ ಅಷ್ಟಕ್ಕಷ್ಟೇ. ರಾಜಕಾರಣವನ್ನು ಬಯ್ಯುವುದು, ಚುನಾವಣೆ ಬಹಿಷ್ಕಾರ ಹಾಕುತ್ತೇನೆಂದು ಪ್ರತೀ ಬಾರಿಯೂ ಕುಳಿತುಕೊಳ್ಳುವುದು ಆಕೆಯ ಹವ್ಯಾಸ. ಈ ಸಲವೂ ಸಿಕ್ಕಿದಾಗ ಅದನ್ನೇ ಹೇಳಿದ್ದರು. ಮತದಾನ ಪವಿತ್ರದಾನ, ಅದೂ ಇದೂ ಎಂಬ ನನ್ನ ಭಾಷಣ ಆಕೆಯನ್ನು ಬದಲಾಯಿಸಲೇ ಇಲ್ಲ. ...ಈ ಬಾರಿಯ ನನ್ನ 'ಪ್ರದಕ್ಷಿಣೆ'ಯ ಲೇಖನ.... 


ಆರ್ಭಟದ ಮಳೆ ಇದೀಗ ನಿಂತ ಅನುಭವ-ನಮ್ಮ ಕರ್ನಾಟಕಕ್ಕೆ.

ಮಹಾ ಚುನಾವಣೆ ಮುಗಿದಿದೆ. ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಗೆಯಲ್ಲಿ ಭದ್ರವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದರೂ, ವಾಸ್ತವವಾಗಿ ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವುದು  ಮತದಾರನ ಹಣೆ ಬರಹವೇ ಎನ್ನಬೇಕಾಗುತ್ತದೆ. ಮುಂದಿನ ಚುನಾವಣೆಯ ತನಕ ಇನ್ನು ಮತದಾರ ಕೇವಲ ಒಬ್ಬ ಮೂಕ ಪ್ರೇಕ್ಷಕ-ಅದಂತೂ ಸತ್ಯ.

ಈ ಸಲದ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಬೇಕು ಎಂಬುದು ಚುನಾವಣಾ ಆಯೋಗದ ಕಾಳಜಿಯಾಗಿತ್ತು. ಅದರ ದೃಷ್ಟಿ ಮುಖ್ಯವಾಗಿ ಮೂಲ ಭೂತ ಸೌಕರ್ಯ ವಂಚಿತ ಗ್ರಾಮೀಣ ಭಾಗದ ಜನರಾಗಿದ್ದರು. ಹಾಗೆಂದೇ ಚುನಾವಣಾ ಆಯೋಗ, ಮತದಾನ ಜಾಗೃತಿಯನ್ನು ಅಮೂಲಾಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಂಡಿತ್ತು. ಅಂತೂ ಚುನಾವಣೆ ಮುಗಿದು ನೋಡುವಾಗ, ಆಯೋಗಕ್ಕೆ ನಿಜಕ್ಕೂ ಸಾರ್ಥಕ್ಯದ ಭಾವ. ಹೆಚ್ಚಿನ ಮತದಾರ ಮತಗಟ್ಟೆಗೆ ಬಂದಿದ್ದ. ಆದರೆ...!!

ಕೂಲಂಕುಷವಾಗಿ ಗಮನಿಸಿದರೆ ಚುನಾವಣಾ ಆಯೋಗಕ್ಕೆ ಕೊಂಚ ನಿರಾಸೆಯಾಗಿದೆ. ಯಾವ ಗ್ರಾಮೀಣ ಪ್ರದೇಶದ ಬಗ್ಗೆ ಆಯೋಗ ಅಭಿಯಾನವನ್ನು ಕೈಗೊಂಡಿತ್ತೋ, ಅಲ್ಲಿ ಜನ ಮತ ಹಾಕಿದ್ದರು. ಆದರೆ ಸುಶಿಕ್ಷಿತರು, ಅನುಕೂಲಸ್ಥರು ಎಂದಿದ್ದರೂ ಮತ ಹಾಕುತ್ತಾರೆ ಎಂಬ ಆಯೋಗದ ನಂಬುಗೆಗೆ ಹೊಡೆತ ಬಿದ್ದಿದೆ. ದುರಂತವೆಂದರೆ ಬೆಂಗಳೂರಿನಂತ ನಗರ ಪ್ರದೇಶದ 'ಸುಶಿಕ್ಷಿತ'ರೆಂಬವರು ಮತ ಹಾಕಲೇ ಇಲ್ಲ. ಎರಡು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕೇವಲ ೫೫ಶೇಕಡಾವನ್ನೂ ದಾಟಲಿಲ್ಲ!!.  ಮನೆಯ ಮುಂದೆ ಮತಗಟ್ಟೆ, ಮತದಾನದ ಮಹತ್ವದ ಅರಿವು, ಓಡಾಡಲು ವಾಹನ...ಎಲ್ಲವೂ ಇದ್ದು ನಗರದ ಮತದಾರ ಮನೆ ಬಿಟ್ಟು ಹೊರ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಸುಶಿಕ್ಷಿತ ವರ್ಗದ ಒಂದೆರಡು ಮಾತುಗಳು ನೆನಪಾಗುತ್ತದೆ...

ಆತ ಸರಕಾರಿ ಪೋಷಿತ ಸಂಸ್ಥೆಯೊಂದರ ಉನ್ನತ ವರ್ಗದ ನೌಕರ. ಮತದಾನದ ದಿನ ಅವರ ಮನೆಗೆ ಹೋಗಿದ್ದೆ. ಮಂಗಳೂರಿನಿಂದ ೧೨೫ ಕಿಮೀ ದೂರದ ನನ್ನೂರಿಗೆ ಹೋಗಿ, ಮತ ಚಲಾಯಿಸಿ ಬಂದೆ ಎಂದುದನ್ನು ಕೇಳಿದ ಆತ, ಅಚ್ಚರಿ ವ್ಯಕ್ತ ಪಡಿಸಿದರು. ನೀವು ಮತದಾನಕ್ಕೆ ಹೋಗುವುದಿಲ್ಲವೇ ಎಂದು ಕೇಳಿದೆ. 'ಬೇರೆ ಕೆಲಸ ಇಲ್ವಾ. ಯಾರಿಗೇ ಮತ ಹಾಕಿದರೂ ಅಷ್ಟೇ. ಎಲ್ಲರೂ ಕಳ್ಳರೇ' ಎಂಬುದು ಅವರ ಉತ್ತರವಾಗಿತ್ತು.!. ನೀವು ನಂಬಲಿಕ್ಕಿಲ್ಲ, ಅವರ ಮನೆ ಎದುರಿಗೇ   ರಾಜಕೀಯ ಪಾರ್ಟಿಒಂದರ  ಬೂತ್ ಇತ್ತು. ಹತ್ತು ಹೆಜ್ಜೆ ನಡೆದರೆ ಮತ ಗಟ್ಟೆ ಇತ್ತು. ನಿಮಗೆ ಯಾರೂ ಇಷ್ಟವಿಲ್ಲವೆಂದಾದರೆ 'ನೋಟಾ'ವನ್ನಾದರೂ ಒತ್ತಿ ಬನ್ನಿ ಎಂದೆ. ಒಂದಷ್ಟು ಹೇಳಿದ ನಂತರವೂ ಆ ವ್ಯಕ್ತಿ ಮತಗಟ್ಟೆ ಬಳಿ ಹೋಗಲೇ ಇಲ್ಲ!. ಮೊದಲೇ ಹೇಳಿದ್ದಂತೆ, ಆತ ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರ ನೌಕರ, ಸುಶಿಕ್ಷಿತ ಮತ್ತು ಅನುಕೂಲಸ್ಥ...ಆದರೂ ಹೀಗೆ.

ಇನ್ನೊಂದು ಉದಾಹರಣೆಯೂ ಸ್ವಾರಸ್ಯಕರವಾಗಿದೆ. ಆ ಮಹಿಳೆಗೂ ಚುನಾವಣೆಗೂ ಅಷ್ಟಕ್ಕಷ್ಟೇ. ರಾಜಕಾರಣವನ್ನು ಬಯ್ಯುವುದು, ಚುನಾವಣೆ ಬಹಿಷ್ಕಾರ ಹಾಕುತ್ತೇನೆಂದು ಪ್ರತೀ ಬಾರಿಯೂ ಕುಳಿತುಕೊಳ್ಳುವುದು ಆಕೆಯ ಹವ್ಯಾಸ. ಈ ಸಲವೂ ಸಿಕ್ಕಿದಾಗ ಅದನ್ನೇ ಹೇಳಿದ್ದರು. ಮತದಾನ ಪವಿತ್ರದಾನ, ಅದೂ ಇದೂ ಎಂಬ ನನ್ನ ಭಾಷಣ ಆಕೆಯನ್ನು ಬದಲಾಯಿಸಲೇ ಇಲ್ಲ. ಚುನಾವಣೆ ಮುಗಿದ ನಂತರ ಒಮ್ಮೆ ಸಿಕ್ಕಾಕೆ, ತನ್ನ ಬೆರಳ ಶಾಯಿಯ ಗುರುತು ತೋರಿಸಿದರು. ಸಂತಸ ಮತ್ತು ಅಚ್ಚರಿಗಳೆರಡೂ ಒಟ್ಟಿಗೇ ಆದುವು. ವೋಟ್ ಹಾಕಿದ್ದಕ್ಕೆ ಧನ್ಯವಾದ, ಆದರೆ ನೀವು ಬದಲಾದ್ದು.....? ಎಂದೆ. ಅದಕ್ಕಾಕೆ ಕೊಟ್ಟ ಉತ್ತರ ಗಮನಾರ್ಹವಾಗಿತ್ತು. 'ಬೆಳಗ್ಗೆಯಿಂದ ಟಿವಿ ಹಾಕಿಕೊಂಡು ರಜಾದ ಮಜಾ ಸವಿಯುತ್ತಿದ್ದೆ. ಸುದ್ದಿವಾಹಿನಿಗಳಲ್ಲಿ ವೋಟ್ ಹಾಕಿದವರನ್ನೆಲ್ಲಾ ತೋರಿಸುತ್ತಿದ್ದರು. ಕೈ ಕಾಲಿಲ್ಲದವು, ವಯಸ್ಸಾದವರು, ನಡೆಯಲೂ ಆಗದವರು ಕಷ್ಟ ಪಟ್ಟು ಮತಗಟ್ಟೆಗೆ ಬಂದು ಮತ ಚಲಾಯಿಸುವುದು ನೋಡಿ ಬೇಜಾರಾಯಿತು!. ಎಲ್ಲಾ ಸರಿ ಇದ್ದೂ, ನಮ್ಮಂತವರು ಮನೆಯಲ್ಲಿ ಕಾಲು ಚಾಚಿ ಕುಳಿತುಕೊಳ್ಳುವುದು ನಾಚಿಕೆ ತರಿಸಿತು. ಕೊನೆಗೂ ಕೊನೇ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಮತದಾನ ಮಾಡಿಬಿಟ್ಟೆ ಎಂದ ಮಹಿಳೆಯನ್ನೇ ಅಚ್ಚರಿಯಿಂದ ನೋಡಿದೆ!!. ಶಹಬ್ಬಾಸ್ ಅಂದೆ-ಆಕೆಗಲ್ಲ, ಆಕೆಯನ್ನು ಬದಲಾಯಿಸಿದ ನಮ್ಮ ಇಂದಿನ ವ್ಯವಸ್ಥೆಗೆ.

ಬಹುಷ: ನಮ್ಮ ನಗರ ಪ್ರದೇಶದ ಜನರನ್ನು ಮತ್ತು ಮೇಲೆ ನಾನು ಹೇಳಿದ ಮತದಾನ ವಿರೋಧಿ ವ್ಯಕ್ತಿಯಂತವರಿಗೆ ಇಂತಹ ವಿಷಯಗಳನ್ನು ಮನನ ಮಾಡಬೇಕಾದ ಜರೂರು ಇಂದು ಇದೆ. ಚುನಾವಣೆಯ ದಿನ ಬೆಂಗಳೂರಿನ ಬಂಧು ಒಬ್ಬರಿಗೆ ಫೋನ್ ಮಾಡಿದ್ದೆ. ಲೋಕಾಭಿರಾಮ ಮಾತಿನೊಂದಿಗೆ ನಾನು ಊರಿಗೆ ಹೋಗಿ ಮತ ಚಲಾಯಿಸಿ ಬಂದ ವಿಷಯ ಹೇಳಿದೆ. ಅದಕ್ಕವರು ನಮ್ಮ ಬೆಂಗಳೂರಿನ ಜನ ನೋಡಿ ಮಾರಾಯ್ರೇ, ನೀವು ೧೨೫ ಕಿ ಮೀ ದೂರ ಹೋಗಿ ಮತ ಹಾಕಿ ಬಂದಿರಿ, ಇವರು ಮನೆ ಎದುರಿನ ಮತಗಟ್ಟೆಗೇ ಹೋಗಲಿಲ್ಲ, ಎಷ್ಟು ನಾಚಿಕೆ ಗೇಡಿನ ವಿಷಯ ಎನ್ನುತ್ತಿದ್ದರು. ಮತದಾನದ ನಂತರ ಓದಿದ ಒಂದು ಸುದ್ದಿ ಎಂದರೆ, ಓರ್ವ ದಂಪತಿ, ದುಬೈನಿಂದ ಮತದಾನಕ್ಕಾಗಿ ಎರಡು ಲಕ್ಷ ರೂಪಾಯಿ ವ್ಯಯಿಸಿ, ಊರಿಗೆ ಒಂದು ದಿನದ ಮಟ್ಟಿಗೆ ಬಂದು ಮತ ಚಲಾಯಿಸಿ ಹೋಗಿದ್ದರು!. ಇಂತಹ ಘಟನೆಗಳು, 'ಮತದಾನ ವಿರೋಧಿ' ಮನಸ್ಸುಗಳಿಗೆ ಪಾಠ ಕಲಿಸಬೇಕು.

ಕಳೆದ ಲೇಖನದಲ್ಲಿ ಚುನಾವಣೆಯ ವೇಳೆಗೆ ಬೈಗುಳಗಳ ಬಗ್ಗೆ ಬರೆದಿದ್ದೆ. ಫೇಸ್ ಬುಕ್ ಮತ್ತು ಅಂತರಜಾಲ ಮಾಧ್ಯಮ ಇಂದು ಬಹು ಪ್ರಭಾವಿ ಮಾಧ್ಯಮವಾಗಿದೆ. ಫೇಸ್ ಬುಕ್ ಮಾತ್ರ, ಎಷ್ಟು ಪ್ರಭಾವಿಯೋ ಅಷ್ಟೇ ಅಪಾಯಕಾರಿ ಕೂಡಾ. ಚುನಾವಣೆಯ ವಿಷಯಕ್ಕೆ ಬಂದರೆ ಕೆಲವರ 'ಪೋಸ್ಟ್'ಗಳನ್ನು ನಿಯಮಿತವಾಗಿ ಗಮನಿಸಿದ್ದೇನೆ. ಮೋದಿ, ರಾಹುಲ್ ಮುಂತಾದ ವ್ಯಕ್ತಿಗಳಿಗೆ ಬಯ್ಯುತ್ತಿರುವಾಗ, ಭಾಷೆ, ಸಂಸ್ಕೃತಿ ಎಲ್ಲವನ್ನೂ ತೂರಿ ಬಿಟ್ಟ ಬುದ್ದಿಜೀವಿಗಳನ್ನು ಗಮನಿಸಿದ್ದೇನೆ. ಅಸಭ್ಯ ಸಂಸ್ಕೃತಿಯನ್ನು ಫೇಸ್ ಬುಕ್‌ಮೂಲಕ ಬೆಳೆಸಿದ ಇಂತಹ ಬುದ್ದಿ ಜೀವಿಗಳು, ತಾವೇ ಭಾರತದ ಆಡಳಿತದ ನಿರ್ಮಾತೃರು ಎಂಬಂತೆ ಬರೆದುದನ್ನು ಗಮನಿಸಿದ್ದೇನೆ. ತಮ್ಮ ಬಾಯಿಗೆ ಬಂದಂತೆ ಬೈಗುಳದ ಮಳೆ ಸುರಿಸುವ ರಾಜಕಾರಣಿಗಳೂ ಇವರ ಮುಂದೆ ತೀರಾ ಕನಿಷ್ಠರಾಗಿ ಹೋಗಿದ್ದಾರೆ!!. ಆದರೆ ರಾಜಕಾರಣಿಗೆ ತೀರಾ ಕನಿಷ್ಠ ಮಟ್ಟಕ್ಕಿಳಿದರೆ   ನೀತಿ ಸಂಹಿತೆಯ ಬಿಸಿ ಕಾದಿರುತ್ತದೆ. ಆದರೆ ಈ ಸಾಮಾಜಿಕ ಜಾಲತಾಣದ ಪೋಸ್ಟ್ ಗಳಿಗೆ ಯಾವುದೇ ನೀತಿ ಸಂಹಿತೆ ಈ ಚುನಾವಣೆಯಲ್ಲಿ ಜಾರಿಗೆ ಬಂದಿಲ್ಲ. ಹಾಗೆಂದೇ ಕೆಲವು ವ್ಯವಸ್ಥಿತ ವರ್ಗಗಳು ಇಲ್ಲಿ ಹೇಗೆ ಬೇಕೋ ಹಾಗೆ, ಏನು ಬೇಕೋ ಅದನ್ನು ಪೋಸ್ಟ್ ಮಾಡಿ, ತೀರಾ ಅಸಭ್ಯ ಮತ್ತು ಅಸಂಸ್ಕೃತರಂತೆ ವರ್ತಿಸುವ ಮೂಲಕ ತಮ್ಮ ಅನಾಗರೀಕತೆಯನ್ನು ಪ್ರದರ್ಶಿಸಿದ್ದಾರೆ. 

ಬಹುಶ ಚುನಾವಣಾ ಆಯೋಗಕ್ಕೆ ಇನ್ನು ಮುಂದಿನ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳನ್ನೂ ಕಾಯುವುದು ಒಂದು ಮಹತ್ತರ ಜವಾಬ್ದಾರಿಯಾಗಬಹುದು. ನರಹಂತಕ, ರಾಕ್ಷಸ, ರಕ್ತ ದಾಹಿ, ಧೂರ್ತ...ಇಂತಹ ಮತ್ತು ಇದಕ್ಕಿಂತಲೂ ಕೆಳ ಮಟ್ಟದ ಬೈಗುಳಗಳು ಫೇಸ್ ಬುಕ್ ನಲ್ಲಿ ರಾರಾಜಿಸಿವೆ. ಇದನ್ನೆಲ್ಲಾ ಪೋಸ್ಟ್ ಮಾಡಿದವರು ಯಾರೆಂದು ಗಮನಿಸಿದರೆ ಅಚ್ಚರಿಯಾಗಿದ್ದಿದೆ.  ಸಮಾಜದಲ್ಲಿ  ಪೃತಿಷ್ಠಿತರೆನಿಸಿಕೊಂಡವರು, ಅದಕ್ಕೂ ಮುಖ್ಯವಾಗಿ ಬುದ್ದಿಜೀವಿಗಳೆನಿಸಿಕೊಂಡವರು, ಇನ್ನು ಮುಂದೆ ಯೋಚಿಸಿದರೆ ತಾವೂ ಅಂತಾದ್ದೇ ವರ್ಗದಲ್ಲಿದ್ದುಕೊಂಡು ಮುಖಕ್ಕೆ ಈಗ ಸಭ್ಯತೆಯ ಸೋಗು ಹಾಕಿಕೊಂಡವರು!!. ಇದನ್ನೆಲ್ಲಾ ಕಂಡಾಗ ನಿಜಕ್ಕೂ ಅಚ್ಚರಿಯಾಗಿದ್ದು ಸುಳ್ಳಲ್ಲ. ನಾನಿಲ್ಲಿ ಉದಾಹರಿಸಿದ ಕೆಲವು ಶಬ್ದಗಳು, ಅವರ ದೃಷ್ಟಿಯಲ್ಲಿ ಸುಸಂಸ್ಕೃತ ಅನಿಸಿಕೊಂಡಿದ್ದಿರಬಹುದು-ಯಾಕೆಂದರೆ ಇದಕ್ಕೂ ನಿಕೃಷ್ಟವಾದ ಪೋಸ್ಟ್ ಗಳನ್ನು ಅವರು ಮಾಡಿದ್ದರು.  ಇಂತವರು ಮಾಡುವ ಪೋಸ್ಟ್ ಗಳಿಗೆ ತಮ್ಮ ಕಮೆಂಟ್ ಗಳ ಮೂಲಕ ಮತ್ತಷ್ಟು ಕೀಳು ಅಭಿರುಚಿಯನ್ನು ಪ್ರದರ್ಶಿಸುವ ಮತ್ತೊಂದು ವರ್ಗ. ಸ್ವಾರಸ್ಯವೆಂದರೆ ಹೀಗೆ ಪೋಸ್ಟ್ ಮಾಡುವ ಮತ್ತು ಕಮೆಂಟ್ ಹಾಕುವ ವ್ಯಕ್ತಿಗಳು ಪುನರಪಿ ಅದನ್ನೇ ಮಾಡುತ್ತಿದ್ದರು. 
ಇದನ್ನೆಲ್ಲಾ ನಮ್ಮ ಸುಶಿಕ್ಷಿತ ಎಂದು ಕರೆಸಿಕೊಳ್ಳುವ ಜನರ ಮತ್ತು ಅವರ ಸಾಮಾಜಿಕ ಜವಾಬ್ದಾರಿಗಳನ್ನು ಎಚ್ಚರಿಸು ಉದ್ದೇಶದಿಂದ ಹೇಳುತ್ತಿದ್ದೇನೆ. ಇದನ್ನೇ ಅವರು ಮತ ಗಟ್ಟೆಗೆ ಜನರನ್ನು ತರಲು,  ಮತದಾನದ  ಜಾಗೃತಿ ಬೆಳೆಸಲು, ಉತ್ತಮ ಆಯ್ಕೆಗೆ ಸಭ್ಯಮಾರ್ಗ ಅನುಕರಿಸಲು, ಉಪಯೋಗಿಸಿಕೊಂಡಿದ್ದರೆ ಅವರೂ ಸಮಾಜದ ದೃಷ್ಟಿಯಲ್ಲಿ ಶ್ಲಾಘನಾರ್ಹರಾಗುತ್ತಿದ್ದರು. ಮುಂದೆ ಆ ಆಶಯದಲ್ಲಿರೋಣ.

ಮಂಗಳೂರು ಸಮೀಪದ ಮತ ಗಟ್ಟೆಯೊಂದರಲ್ಲಿ ಮತದಾನ ಮಾಡಿದ ಬಳಿಕ ಮಹಿಳೆಯೊಬ್ಬಳು ಕುಸಿದು ಬಿದ್ದು, ಸತ್ತರು. ತಮ್ಮ ಅಮೂಲ್ಯ ಕರ್ತವ್ಯವನ್ನು ಮಾಡಿ ನಿಧನರಾದ ಆಕೆಯ ಮನೆಗೆ ಓರ್ವ ಅಭ್ಯರ್ಥಿ ಮರುದಿನವೇ ಭೇಟಿಕೊಟ್ಟು ಸಾಂತ್ವನ ಹೇಳಿದರು. ಇದು ರಾಜಕಾರಣಿಗೂ ಇರಬೇಕಾದ ಆದರ್ಶವನ್ನು ತೋರಿಸುತ್ತದೆ. ಚುನಾವಣೆಗೆ ಸಾವಿರಾರು ಸರಕಾರಿ ನೌಕರರು ಶ್ರಮಿಸುತ್ತಾರೆ. ಅನೇಕ ಕಡೆ ಮೂಲ ಭೂತ ಸೌಕರ್ಯಗಳೂ ಇಲ್ಲದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ, ಇಲ್ಲೆಲ್ಲವೂ ನಿಸ್ವಾರ್ಥವಾಗಿ ಮಾಡುವ ಇವರ ಸೇವೆ ಮತ್ತು ಅವರ ಕಷ್ಟವನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಈ ಸಲ, ಕರ್ನಾಟಕದಲ್ಲಿ ಚುನಾವಣಾ ಕರ್ತವ್ಯದ ವೇಳೆ ಹ್ರದಯಾಘಾತದಿಂದ ಸತ್ತವರು ಮೂರಕ್ಕೂ ಹೆಚ್ಚು ಮಂದಿ. ಈ ಬಿರು ಬೇಸಗೆ, ಸೆಖೆಯಲ್ಲಿ ಚುನಾವಣಾ ಕರ್ತವ್ಯದ ನಂತರ ಅನಾರೋಗ್ಯ ಪೀಡಿತರಾದವರ ವಿವರ ಎಲ್ಲೂ ಬರುವುದಿಲ್ಲ. ತಾವು ಗಮನಿಸಿರಬಹುದ, ಚುನಾವಣೆ ಘೋಷಣೆಯಾಗುತ್ತಲೇ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮತ ಚಿಟಿ ನೀಡುವುದು, ಪಟ್ಟಿ ಪರಿಷ್ಕರಣೆ ಮಾಡುವುದು ನೋಡಿದ್ದೇವೆ. ಬೆವರು ಸುರಿಸಿ, ನಡೆಯಲೂ ಆಗದೇ, ಒದ್ದಾಡುತ್ತಾ ನಿಸ್ವಾರ್ಥ ಸೇವೆ ಮಾಡುವುದನ್ನೂ ಗಮನಿಸಿದ್ದೇವೆ. ಆದರೆ ಚುನಾವಣೆ ಮುಗಿಯುತ್ತಲೇ ಇವರೆಲ್ಲರೂ ಮರೆತು ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಯಾಗಲೀ, ಚುನಾವಣಾ ಆಯೋಗವೇ ಆಗಲಿ, ಮತದಾರನೇ ಆಗಲಿ ಅವರಿಗೆ ಕನಿಷ್ಠ ಒಂದು ಧನ್ಯವಾದವನ್ನು ಸಹಾ ಹೇಳದೇ ಕೃತಘ್ನರಾಗುತ್ತಾರೆ!!. ಹೋಗಲಿ ಎಂದರೆ ಸಾಮಾಜಿಕ ಜಾಲತಾಣದ, ಸಮಾಜದ ಸರ್ವವನ್ನೂ ಗ್ರಹಿಸುವ 'ಬುದ್ದಿ ಜೀವಿ'ಕಣ್ಣುಗಳಿಗೂ ಇದೊಂದೂ ಕಾಣುವುದೇ ಇಲ್ಲ!!

ಮತದಾನದಂತಹ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡ ಇಂತಹ ಸಹಸ್ರಾರು ಮನಸುಗಳಿಗೆ ಇದೋ ನಮ್ಮ ಹ್ರದಯತುಂಬಿದ ನಮನ.

1 comment: