Wednesday 26 February 2014

ನೇತ್ರಾವತಿ ಬರಿದಾಗುತ್ತಿದ್ದಾಳೆ!!!

ಜನಪ್ರತಿನಿಧಿಯ 'ಪ್ರದಕ್ಷಿಣೆ' ಯಲ್ಲಿ ನನ್ನ ಇಂದಿನ ಬರಹ.... 


ಮಂಡ್ಯ, ಮೈಸೂರು, ಬೆಂಗಳೂರು ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಬಿಸಿ ಎಲ್ಲರಿಗೂ ಗೊತ್ತು. ಪ್ರತೀ ವರ್ಷ ಇಲ್ಲಿನ ಜನರು, ಕಾವೇರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುತ್ತಾರೆ. ಅಲ್ಲಿಂದ ಒಂದು ಹನಿ ನೀರು ಹೊರಟಿತು ಎಂದಾದರೆ ಆ ಪ್ರದೇಶಗಳಲ್ಲಿ ಬೆಂಕಿ ಬೀಳುತ್ತದೆ. ಇಲ್ಲಿ ಆಗುವುದು ಕೇವಲ ನದಿ ನೀರಿನ 'ಹಂಚಿಕೆ'ಯೇ ಹೊರತು, ನದಿ 'ತಿರು'ವಲ್ಲ!.

ನಾವು ಕರಾವಳಿಯು ಜನತೆ ಶಾಂತಿಪ್ರಿಯರು. ನಮ್ಮಲ್ಲಿದ್ದುದನ್ನು ಹಂಚಿ ತಿನ್ನುವ ಉದಾರ ಮನೋಭಾವದವರು. ಇದು ನಮ್ಮನ್ನು ಇಂದು ದುರಂತದ ಬಾಗಿಲಲ್ಲಿ ನಿಲ್ಲಿಸಿದೆ. ನಮ್ಮ ಜೀವನದಿ ನೇತ್ರಾವತಿ, ನಮ್ಮ ಜಿಲ್ಲೆಯಿಂದ ರಾಜಕಾರಣಿಗಳ ದುರಾಸೆ, ಸ್ವಾರ್ಥ, ದ್ವೇಷ ರಾಜಕಾರಣದಿಂದ ಬೇರೆ ಜಿಲ್ಲೆಗಳಿಗೆ ಹೊರಟಿದ್ದಾಳೆ-ಶಾಶ್ವತವಾಗಿ.

ಇಂದು ದಕ್ಷಿಣ ಕನ್ನಡದ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿರುವುದು ನೇತ್ರಾವತಿ ನದಿ ತಿರುವು ಯೋಜನೆ. ಇದಕ್ಕೆ ಹೆಸರು ಬದಲಾಯೀಸಿ ಎತ್ತಿನಹೊಳೆ ಯೋಜನೆ ಎಂದು ಕರೆದು, ರಾಜ್ಯ ಸರಕಾರ ಜನತೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಸಕಲೇಶಪುರದ ಎತ್ತಿನಹೊಳೆಯಲ್ಲಿ ನೇತ್ರಾವತಿಯನ್ನು  ತಿರುಗಿಸಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಸುಮಾರು ೨೪ಟಿಎಂಸಿ ನೀರನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಇಂದು ದಕ್ಷಿಣ ಕನ್ನಡಿಗನ ಪಾಲಿಗೆ ಜೀವ ಸೆಲೆಯಾಗಿರುವ ಈ ನೇತ್ರಾವತಿಯನ್ನು ಈ ಮೂಲಕ, ತಿರುಗಿಸಿ, ಇಲ್ಲಿನ ಜನತೆಯ ಪಾಲಿಗೆ ಬರಿದುಗೊಳಿಸಿ, ಅದನ್ನು ಬೇರೆ ಜಿಲ್ಲೆಗಳಿಗೆ ಒದಗಿಸುವ ವ್ಯವಸ್ಥಿತ ಹುನ್ನಾರು ಇದು ಎಂದೇ ಪರಿಗಣಿಸಬೇಕಾಗುತ್ತದೆ. 

ಅಕ್ಟೋಬರ್ ೨೦೧೩ರಲ್ಲಿ ಬೆಂಗಳೂರು ಮೂಲದ ಅರ್ಘ್ಯಂ ಎಂಬ ಸೇವಾ ಸಂಸ್ಥೆ, ದಕ್ಷಿಣ ಕನ್ನಡ-ಉಡುಪಿ ಭಾಗಕ್ಕೆ ನೀರಿನ ನಿರ್ವಹಣೆಯಲ್ಲಿ ಪರಿಣತ ಸಂಸ್ಥೆಯೊಂದನ್ನು ಕಳುಹಿಸಿ, ಈ ಯೋಜನೆಯ ಸಾಧಕ-ಭಾಧಕದ ಬಗ್ಗೆ ಅಧ್ಯಯನ ಕೈಗೊಂಡಿತ್ತು. ಅಂದು ೮೦೦೦ಕೋಟಿಯ ಈ ಯೋಜನೆಯನ್ನು  ಅಧ್ಯಯನ ತಂಡ ತಲೆ ಬುಡವಿಲ್ಲದ ಯೋಜನೆ ಎಂದು ಕರೆದಿತ್ತು. ಅದಕ್ಕೆ ಆ ತಂಡ ರಾಜಸ್ಥಾನದ ಒಂದು ನದಿ ತಿರುವಿನ ಕಥೆಯನ್ನು ಉದಾಹರಣೆಯಾಗಿ ಹೇಳಿತ್ತು. ರಾಜಸ್ಥಾನದ ಆಳಾವಾರ ಜಿಲ್ಲೆಯಲ್ಲಿ ನಂದುವಾಲಿ ಎಂಬ ನದಿಯನ್ನು ೨೨ಕಿಮೀ ಉದ್ದದ ನದಿ ತಿರುವಿನಿಂದಾಗಿ ಮೂರು ದಶಕಗಳಲ್ಲಿ ಆ ನದಿ ಸಂಪೂರ್ಣವಾಗಿ ಬತ್ತಿ ಹೋಗಿತ್ತು!. ಈ ತಿರುವಿನ ಪರಿಣಾಮವಾಗಿ, ಜಿಲ್ಲೆಯ ಸುಮಾರು ೨೮೫ ಬಾವಿಗಳು ಸಂಪೂರ್ಣವಾಗಿ ಬತ್ತಿಹೋಗಿದ್ದುವು. ಜಿಲ್ಲೆಯ ಹಳ್ಳಿ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ೩೫೦ಮಿಮಿ ನಿಂದ ೪೫೦ಮಿಮಿ ತನಕ ಕಡಿಮೆಯಾಯಿತು!. ಇದು ಈ ನಂದುವಲಿ ನದಿ ತಿರುವಿನ ಯೋಜನೆಯ ದುಷ್ಪರಿಣಾಮ. ಪರಿಣಾಮವಾಗಿ ಆಳ್ವಾರ್ ಜಿಲ್ಲೆಯು ಜನರಿಗೂ ಈ ನದಿಯ ನೀರಿಲ್ಲ, ಅದನ್ನು ತಿರುವಿನಿಂದಾಗಿ ಕರೆದುಕೊಂಡು ಹೋದ ಜಿಲ್ಲೆಯ ಜನರಿಗೂ ನೀರಿಲ್ಲ!! ಇದನ್ನು ಉದಾಹರಣೆಯಾಗಿ ನೀಡುತ್ತಾ, ಆ ಅಧ್ಯಯನ ತಂಡ, ನದಿ ತಿರುವು ಯೋಜನೆ ನಿಜಕ್ಕೂ ಅವೈಜ್ಞಾನಿಕ ಎಂದು ಕರೆದಿದೆ. 

ಈ ದುರಂತಕ್ಕೆ ಪರಿಹಾರವನ್ನೂ ಈ ತಂಡ ನೀಡಿತ್ತು. ಇಂದು ನಮ್ಮ ರಾಜ್ಯದಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗಿ ಸಮುದ್ರ ಸೇರಿಯೋ, ಭೂಮಿಯಲ್ಲಿ ಇಂಗಿಯೋ  ಹಾಳಾಗುತ್ತಿದ್ದರೆ ಅದನ್ನು ಮಳೆ ನೀರಿನ ಕೊಯ್ಲು ಮುಖಾಂತರ ಉಪಯೋಗಿಸಬಹುದು ಎಂಬುದು ಆ ತಜ್ಷ ತಂಡದ ಅಭಿಮತ. ಥಾರ್ ಜಿಲ್ಲೆಯಲ್ಲಿ ಕೇವಲ ವರ್ಷಕ್ಕೆ ೧೦೦ಮಿಮಿ ಮಳೆ ಬೀಳುವ ಪ್ರದೇಶದಲ್ಲಿ ಈ ರೀತಿಯ ಮಳೆ ನೀರು ಕೊಯ್ಲಿನಿಂದಾಗಿ ನೀರಿನ ಸಮಸ್ಯೆ ಪರಹಾರವಾಗಿರುವ ಉದಾಹರಣೆಗಳನ್ನೂ ಇವರು ನೀಡುತ್ತಾರೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಸುಮಾರು ೪೦೦೦ಮಿಮಿ ಮಳೆ ಬೀಳುತ್ತಿದ್ದು, ಈ ರೀತಿಯ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ನೀರಿನ ಸಮಸ್ಯೆಯೇ ಉದ್ಭವಿಸದು ಎಂಬುದು ಅವರ ವಾದ. ಈ ಆಧುನಿಕ ಯೋಜನೆಗಳನ್ನು ರಾಜ್ಯಾದ್ಯಂತ ಜಾರಿಗೆ ತರುವ ಬದಲು, ಸರಕಾರ ಕೈಗೊಂಡಿರುವ ಈ ಯೋಜನೆ, ಕೇವಲ ಸ್ವಾರ್ಥ ರಾಜಕಾರಣದ ಪರಮಾವಧಿ ಎಂಬುದು ಮೇಲ್ನೋಟಕ್ಕೇ ಕಾಣುತ್ತದೆ.

ಇಂದು ಜಿಲ್ಲೆಯಾದ್ಯಂತ ನೇತ್ರಾವತಿ ವಿಷಯದಲ್ಲಿ ಹೋರಾಟ ನಡೆಯುತ್ತಿದೆ. ಈ ಹೋರಾಟವನ್ನು ಕ್ಯಾರೇ ಎನ್ನದ ರಾಜ್ಯ ಸರಕಾರ, ಮಾರ್ಚ್ ಮೂರರಂದು ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಹಮ್ಮಿಕೊಂಡಿದೆ. ವಿಪರ್ಯಾಸವೆಂದರೆ ದಕ್ಷಿಣ ಕನ್ನಡದಿಂದ, ಸಕಲೇಶಪುರದ ಮೂಲಕ ಈ ಭಾಗದ ಜನತೆಗೆ ವ್ಯವಸ್ಥಿತವಾಗಿ ವಿಷ ಉಣ್ಣಿಸುವ ಈ ಯೋಜನೆಯ ಫಲ ಪಡೆಯುವ ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ಶಿಲಾನ್ಯಾಸ. ಏಕೆಂದರೆ ಇಲ್ಲಿನ ವಿರೋಧಕ್ಕಿಂತ ಮಿಗಿಲಾಗಿ, ನಮ್ಮ ಜಿಲ್ಲೆಯ ರಾಜಕಾರಣಿಗಳಿಗೆ ಅಲ್ಲಿನ ಜನರ ವಿಶ್ವಾಸ ಗಳಿಸಿ, ಮುಂದಿನ ಚುನಾವಣೆಯಲ್ಲಿ ಗೆಲ್ಲುವ ತವಕ. ಶೀಘ್ರವೇ ಘೋಷಣೆಯಾಗುವ ಚುನಾವಣೆ ಮತ್ತು ಅದನ್ನು ಹಿಂಬಾಲಿಸುವ ನೀತಿ ಸಂಹಿತೆಯನ್ನು ಗಮನಿಸಿ, ರಾಜಕಾರಣಿಗಳು ತರಾತುರಿಯಲ್ಲಿ ಈ ಕೆಲಸಕ್ಕೆ ಹೊರಟಿದ್ದಾರೆ. ಇಲ್ಲಿ ಮಹಾ ದುರಂತ ಎಂದರೆ, ಇದನ್ನು ನೇತ್ರತ್ವ ವಹಿಸಿ, ವಿಶೇಷ ಕಾಳಜಿ ವಹಿಸಿ ಮಾಡುತ್ತಿರುವವರು,, ದಕ್ಷಿಣ ಕನ್ನಡದ ಜನತೆಯ ಮೂಲಕ ಆಯ್ಕೆಯಾಗಿ, ಮುಂದೆ ರಾಜ್ಯದ ಮುಖ್ಯಮಂತ್ರಿಯೂ ಆಗಿ, ಬುದ್ದಿಜೀವಿ ರಾಜಕಾರಣಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು, ಇಂದು ಕೇಂದ್ರದಲ್ಲಿ ಸಚಿವರಾಗಿರುವ ವೀರಪ್ಪ ಮೊಲಿಯವರು. ಕರ್ನಾಟಕದ ರಾಜ್ಯ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳವಲ್ಲಿ ವಿಶೇಷ ಆಸ್ಥೆ ವಹಿಸಿದ್ದು ಈ  ಮೊಲಿಯವರು. ಇಂದಿಗೂ ಈ ಯೋಜನೆಯನ್ನು ಬಲವಾಗಿ ಸಮರ್ಥಿಸಿ, ತಮ್ಮ 'ರಾಜಕೀಯ' ಜೀವನಕ್ಕೆ ನೆರವಾಗುವಂತೆ ಚಿಕ್ಕಬಳ್ಳಾಪುರದ ಜನತೆಯ ಖುಷಿಗಾಗಿ ಹೋರಾಡುತ್ತಿರುವ ಈ ಮೊಲಿಯವರು, ತಾವು ಇನ್ನೊಂದು ಬದಿಯಲ್ಲಿ ದಕ್ಷಿಣ ಕನ್ನಡದ ಜನತೆಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಯೋಚಿಸುತ್ತಲೇ ಇಲ್ಲ.

ಇನ್ನು ಉಳಿದ ರಾಜಕಾರಣಿಗಳು. ರಾಜ್ಯ ಸರಕಾರದಲ್ಲಿ ಈ ಭಾಗದ ಸಚಿವರಿದ್ದಾರೆ, ಶಾಸಕರಿದ್ದಾರೆ. ವಿಶೇಷವೆಂದರೆ ಅವರೆಲ್ಲರೂ ಆಳುವ ಪಕ್ಷದ ಶಾಸಕರೇ ಆಗಿದ್ದಾರೆ.  ಈ ಭಾಗದ ಜನತೆಯ ಹಿತ ಕಾಯಬೇಕಾದ ಈ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಯೋಜನೆಯ ದುರಂತವನ್ನು ವಿವರವಾಗಿ ತಿಳಿದುಕೊಂಡೂ, ಎಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಈ ವಿರೋಧ ಸಂಚಕಾರ ತಂದಿತೋ ಎಂಬ ಭಯದಿಂದ ನರಸತ್ತಂತಿದ್ದಾರೆ!. ಇದು ನಮ್ಮ ದುರಂತದ ಮತ್ತೊಂದು ಮುಖ. ಇನ್ನು ಪಕ್ಷಾತೀತವಾಗಿ ಯೋಚಿಸಿದರೆ, ಈ ದುರಂತಕ್ಕೆ ಭಾಜಪದ ನಾಯಕಮಣಿಗಳೂ ಕಾಣಿಕೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರು ಯಾವ ಹೋರಾಟವನ್ನೂ ತೋರಲಿಲ್ಲ ಮತ್ತು ಅವರ ಅವಧಿಯಲ್ಲೇ ಈ ಯೋಜನೆಯ ನೀಲಿ ನಕ್ಷೆ ಸಿದ್ದವಾಗಿತ್ತು ಎಂಬುದು ಮಾತು. ನಳಿನ್ ಕುಮಾರ್ ಕಟೀಲ್ ಎಲ್ಲೂ ಈ ಯೋಜನೆಯ ವಿರುದ್ದ ಗಟ್ಟಿ ದನಿಯಲ್ಲಿ ಮಾತಾಡಿದ್ದೇ ಇಲ್ಲ. ಇಂದಿನ ಸ್ತಿತ್ಯಂತರದಲ್ಲಿ ರಾಜಕಾರಣದ ಬೆಂಬಲವಿಲ್ಲದಿದ್ದರೆ, ಇಂತಹ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇರುವಾಗ, ನಮ್ಮ ದುರಂತವೆಂದರೆ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಸ್ವಾರ್ಥ ಸಾಧನೆಯಲ್ಲಿ ನಿರತರಾಗಿದ್ದಾರೆ.

ವೀರಪ್ಪ ಮೊಲಿಯವರಂತೂ ಈ ಯೋಜನೆಯನ್ನು ಶತಾಯ ಗತಾಯ ಮಾಡಿಯೇ ಸಿದ್ದ ಎಂದು  ಹೇಳಿಕೆ ನೀಡುತ್ತಾ, ಓಡಾಡುತ್ತಿದ್ದಾರೆ. ಇಂತಹ ರಾಜಕಾರಣಿಗಳು, ಜಿಲ್ಲೆಯ ಜನತೆಯ ಪಾಲಿಗೆ ವರದಾನವಾಗುವ ಬದಲು, ದುರಂತವಾಗಿ ಪರಿಣಮಿಸಿದ್ದಾರೆ. ಹೋದೆಡೆಯಲ್ಲಿ, ಬಂದೆಡೆಯಲ್ಲಿ ಇವರ ಮಾತು ಒಂದೇ, ನೇತ್ರಾವತಿ ತಿರುವನ್ನು ಕೈ ಬಿಡುವುದಿಲ್ಲ ಎಂಬುದು. ಇದಕ್ಕೆ ಅವರು  ಹಿಂದಿನ ಚುನಾವಣೆಯಲ್ಲಿ ಇಲ್ಲಿ ಸೋತು, ನಂತರ ಚಿಕ್ಕಬಳ್ಳಾಪುರದಲ್ಲಿ ಗೆದ್ದುದಕ್ಕೆ, ಇಲ್ಲಿನ ಜನರ ಮೇಲೆ ಅಘೋಷಿತ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಎಂಬುದು ಒಂದು ಕಾರಣವಾದರೆ, ಮಗ ಹರ್ಷ ಮೊಲಿಗೆ ಮಂಗಳೂರಿನಲ್ಲಿ ಟಿಕೆಟ್ ಕೊಡಿಸಲು ಕಾಂಗ್ರೆಸ್ ಹೈಕಮಾಂಡ್‌ಗೆ ಖುಷಿ ಕೊಡುವ ಯತ್ನ ಎಂದೂ ಹೇಳಲಾಗುತ್ತದೆ. ಗಮನಿಸಿ, ಇವರಿಗೆ ಸ್ವಾರ್ಥ ರಾಜಕಾರಣದ ಮುಂದೆ ಜಿಲ್ಲೆ, ರಾಜ್ಯ, ದೇಶ ಏನೂ ಆಲ್ಲ. ಇದಕ್ಕೆ ವೀರಪ್ಪ ಮೊಲಿಯವರು ಇಂದು ತಾಜಾ ಉದಾಹರಣೆಯಾಗಿದ್ದಾರೆ.

ಏನೇ ಇರಲಿ. ಇದು ಒಂದು ಮುಖವಾದರೆ, ಮತ್ತೊಂದು ಮುಖವೂ ಕಳವಳ ಹುಟ್ಟಿಸುತ್ತದೆ. ಈ ಯೋಜನೆಯ ವಿರುದ್ಧದ ಆರಂಭದ ಧ್ವನಿಯಲ್ಲಿ ಶಕ್ತಿಯೇ ಇರಲಿಲ್ಲ. ಜನತೆ ಎಚ್ಚೆತ್ತುಕೊಂಡು ವಿರೋಧ ಆರಂಭಿಸುವಲ್ಲಿ ಕೆಲಸ ಬಹಳ ಮುಂದುವರಿದಿತ್ತು. ದಿನೇಶ್ ಹೊಳ್ಳ, ವಿಜಯಕುಮಾರ ಶೆಟ್ಟಿ, ಮಾಧವ ಉಳ್ಳಾಲ್, ಎಂ ಜಿ ಹೆಗಡೆಯಂತವರು ಆರಂಭದಲ್ಲಿಯೇ ಹೋರಾಟಕ್ಕಿಳಿದರೂ, ಜಿಲ್ಲೆಯ ಜನತೆಯನ್ನು ಸರಕಾರ ಮತ್ತು ಈ ಸ್ವಾರ್ಥ ರಾಜಕಾರಣಿಗಳು ಸಂಪೂರ್ಣ ದಾರಿ ತಪ್ಪಿಸಿದ್ದ ಪರಿಣಾಮ, ಆರಂಭದಲ್ಲಿ ಹೋರಾಟ ಕಾವು ಪಡೆಯಲೇ ಇಲ್ಲ. ಆರಂಭದಿಂದಲೂ ಹೋರಾಟಕ್ಕಿಳಿದಿದ್ದ ನಾಯಕರ ಸತತ ಪರಿಶ್ರಮವಾಗಿ ಇಂದು ಜನತೆ ಇದರ ಘೋರ ದುರಂತದ ಚಿತ್ರಣವನ್ನು ಅರ್ಥ ಮಾಡಿಕೊಂಡಿದ್ದಾರೆ, ಹೋರಾಟಕ್ಕಿಳಿದಿದ್ದಾರೆ. ಇನ್ನೂ ದುರಂತವೆಂದರೆ, ಸಮಾಜದ ಕಣ್ಣಿನಂತಿರುವ ಅನೇಕ ಬುದ್ದಿ ಜೀವಿಗಳು, ಧಾರ್ಮಿಕ ನಾಯಕರು, ಸಹಕಾರಿ ಧುರೀಣರು, ಸಂಘಟನೆಗಳ ಮುಖ್ಯಸ್ಥರು ಕಣಮುಚ್ಚಿ ಕುಳಿತಿದ್ದಾರೆ. ಹೊಳ್ಳರಂತ ನಾಯಕರು, ಕೇವಲ ನಿಸ್ವಾರ್ಥತೆಯಿಂದ ಹೋರಾಡುತ್ತಾ ಅಕ್ಷರಶ: ಅನ್ನ ನೀರು ಬಿಟ್ಟು ಬೀದಿಗಿಳಿದಿದ್ದಾರೆ. ಆದರೆ ಪ್ರಭಾವಿ ನಾಯಕರು ಕುರುಡಾಗಿದ್ದಾರೆ. ನಮಗೇಕೆ ಎಂಬ ಈ ಪರಿಯ ತಾತ್ಸಾರ ಹೀಗೇ ಮುಂದುವರಿದಲ್ಲಿ ಖಂಡಿತಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಮುಂದಿನ ನಾಗರಿಕರು, ಉತ್ತರ ಕರ್ನಾಟಕದ ಜಿಲ್ಲೆಯ ಜನರಂತೆ ಮೈಲಿಗಟ್ಟಲೆ ದೂರದಿಂದ ನೀರನ್ನು ಹೊತ್ತು ತರುವ ದಿನಕ್ಕೆ ದೂರವಿಲ್ಲ!!.

ಈ ನಡುವೆ ಚುನಾವಣೆ ಬಂದಿದೆ. ಲಜ್ಜೆ ಗೆಟ್ಟ ರಾಜಕಾರಣಿಗಳು ಮತ್ತೆ ಮನೆ ಮನೆಗ ಅದೇ ಮುಖ ಹೊತ್ತು ಬರುತ್ತಾರೆ. ಮೊಲಿಯವರು ತಮ್ಮ ಮಗನನ್ನೇ ಕಣಕ್ಕಿಳಿಸುವ ಪ್ರಯತ್ನದಲ್ಲಿದ್ದಾರೆ. ಈ ಯೋಜನೆಯನ್ನು ವಿರೋಧಿಸುವ ಜನಾರ್ದನ ಪೂಜಾರಿಯವರನ್ನು ಹೊರಗಿಡುವ ಯತ್ನದ ಭಾಗವಾಗಿ ಹರ್ಷ ಮೊಲಿಯೂ ಯೋಜನೆಯ ಪರವಾಗಿ ಭಾಷಣ ಬಿಗಿಯುತ್ತಿದ್ದಾರೆ. ಭಾಜಪದಿಂದ ನಳಿನ್ ಕುಮಾರ್ ಕಟೀಲ್ ಮತ್ತೆ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಆದರೆ ಇಲ್ಲಿನ ಜನತೆ, ಹೋರಾಟಗಾರು, ಯಾವ ನಾಯಕರೂ ಬಹಿರಂಗವಾಗಿ ನೇತ್ರಾವತಿ ಉಳಿಸುವ ಪರ ಮಾತಾಡದಿದ್ದರೆ ಚುನಾವಣೆ ಬಹಿಷ್ಕಾರದ ಬಗ್ಗೆ ಯೋಚಿಸುತ್ತಿದ್ದಾರೆ. ಹೋರಾಟಗಾರರು ಈ ಹಿನ್ನೆಲೆಯಲ್ಲಿ ಜನಾಭಿಯಾನಕ್ಕೂ ಅಣಿಯಾಗಿದ್ದಾರೆ. ನೇತ್ರಾವತಿಯನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಹೋರಾಟದ ಎಲ್ಲಾ ಯತ್ನಕ್ಕೂ ಬೆಂಬಲ ಬೇಕಾಗಿದೆ. ಮುಖ್ಯವಾಗಿ ಜನತೆ ಬೆಂಬಲಿಸಬೇಕಾಗಿದೆ, ಈ ಬಾಗದ ನಾಯಕರು ಸ್ವಾರ್ಥ ಬದಿಗಿಟ್ಟು ಹೋರಾಡವೇಕಾಗಿದೆ.

ಒಂದೇ ಒಂದು ಟಿಪ್ಪಣಿಯೊಂದಿಗೆ ಮುಗಿಸುತ್ತೇನೆ. ಮುಖ್ಯವಾಗಿ ನಮ್ಮ ಭಾಗದಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳಿದ್ದಾರೆ. ಧಾರ್ಮಿಕವಾಗಿ, ವ್ಯವಾಹಾರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ.....ಹೀಗೆ ಎಲ್ಲಾ ರಂಗಗಳಲ್ಲಿಯೂ ಬಹು ಪ್ರಭಾವಿಗಳಿದ್ದಾರೆ. ಮನಸ್ಸು ಮಾಡಿದರೆ ಈ ಸ್ವಾರ್ಥ ರಾಜಕಾರಣಿಗಳನ್ನು ನಿಲ್ಲಿಸಿ, ಈ ಯೋಜನೆಯನ್ನು ನಿಲ್ಲಿಸುವ ಮುಚ್ಚಳಿಕೆ ಬರೆಸಿಕೊಳ್ಳುವ ಶಕ್ತರೂ, ಪ್ರಭಾವಿಗಳೂ ಇಲ್ಲಿದ್ದಾರೆ. ಇಲ್ಲಿ ನೀರು ಕುಡಿದು, ಇಲ್ಲಿನ ಗಾಳಿಯನ್ನು ಉಸಿರಾಡಿ, ಇಲ್ಲಿಂದಲೇ ತಮ್ಮ ನೆಲೆ ಕಂಡುಕೊಂಡು ಇಂದು ಸಾಮಾಜಿಕ ಸ್ಥಾನ ಮಾನಗಳನ್ನು ಅನುಭವಿಸುತ್ತಿದ್ದಾರೆ. ಇವರೆಲ್ಲರಿಗೂ ಈ ಹೋರಾಟದಲ್ಲಿ ನೈತಿಕ ಬಲ ನೀಡಲು ಇರುವ ಅಡ್ಡಿ ಏನು ಎಂಬುದೇ ಪ್ರಶ್ನೆ. ಬಹುಶ: ನೇತ್ರಾವತಿ ಬರಡಾಗುವ ತನಕವೂ ಉತ್ತರಕ್ಕಾಗಿ ಕಾಯಬೇಕೇನೋ!!!.







No comments:

Post a Comment