Wednesday 21 May 2014

ಕಾಂಗ್ರೆಸ್ ಸೋಲಿಗೆ 'ಯಾರೋ'ಕಾರಣರಲ್ಲ..!!

ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್‌ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಈ ವಾರದ ಬರಹ.... 

ಜನತೆಯ ಕಣ್ಣುಗಳಲ್ಲಿ ಕೇವಲ ನಿರೀಕ್ಷೆಗಳು ತುಂಬಿವೆ!.

ನರೇಂದ್ರ ಮೋದಿ ಎಂಬ ಒಬ್ಬ ವ್ಯಕ್ತಿ ರಾಜಕಾರಣದ ದಿಕ್ಕನ್ನು ಈ ರೀತಿ ಬದಲಿಸಬಹುದು ಎಂಬ ಕಲ್ಪನೆಯೇ ಇರದೇ, ಇಂದು ಕಾಂಗ್ರೆಸ್ ಧೂಳೀಪಟಕ್ಕೆ ಕಾರಣವಾದದ್ದು, ಓರ್ವ ನಾಯಕ ಸಮರ್ಥನಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ.ಹಾಗೆಂದು ಎಲ್ಲವನ್ನೂ ಹೀಗೇ ಎಂದು ತೀರ್ಮಾನಿಸಲು ಇದು ಸಮಯವಲ್ಲ. ಜನರ ಅಪಾರ ನಿರೀಕ್ಷೆಗಳಿಗೆ ಮೋದಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಲೇ ಬೇಕು.

ಈ ಸಲ ಮೋದಿಯವರ ಆಯ್ಕೆಯ ಹಿನ್ನೆಲೆಯಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಬಹುದು. ಆದರೆ ಅಷ್ಟೇ ಹೊಸ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಮೋದಿ ಅಲೆ ಒಪ್ಪಲೇ ಬೇಕಾದ ಸತ್ಯ. ಹಾಗೆಂದು ಸೋತು ಸುಣ್ಣವಾದ ನಾಯಕರ ಬಹು ದೊಡ್ಡ ಪಡೆಯೇ ಇದೆ.ಜಿಲ್ಲಿ ಮುಖ್ಯವಾಗಿ ಕಾಣುವ ಸೋಲು ಕಾಂಗ್ರೆಸ್‌ನದ್ದು. ಕೇಂದ್ರದಲ್ಲಿ ಯುಪಿಎ ಎಂಬ ಕಾಂಗ್ರೆಸ್ ನೇತ್ರತ್ವದ ಸರಕಾರವಿದ್ದೂ, ಅದರ ಮಂತ್ರಿಮಂಡಳದ ಸುಮಾರು ಅರ್ಧದಷ್ಟೂ ನಾಯಕರು ಗೆದ್ದಿಲ್ಲವೆಂದರೆ ಆಲೋಚಿಸಬೇಕು. ಉತ್ತರ ಪ್ರದೇಶದಂತಹ ಒಂದೇ ರಾಜ್ಯದಲ್ಲಿ ಗೆದ್ದಷ್ಟೂ ನಾಯಕರನ್ನು ಗೆಲ್ಲಿಸುವಲ್ಲಿ ಇಡೀ ದೇಶದ ಕಾಂಗ್ರೆಸ್ ಸೋತಿದೆ. ಬಹುಶ: ಇಷ್ಟು ಹೀನಾಯ ಸೋಲನ್ನು ಕಾಂಗ್ರೆಸ್ ನಿರೀಕ್ಷಿಸರಲೇ ಇಲ್ಲ. ಅಲ್ಲಿ ಕೊರತೆಯಾಗಿದ್ದು ಏನು ಎಂದುಕೊಂಡರೆ, ಅನೇಕ ಪ್ರಶ್ನೆಗಳು ಮತ್ತೆ ಹುಟ್ಟಿಕೊಳ್ಳುತ್ತವೆ.

ಒಂದು ಸಣ್ಣ ಉದಾಹರಣೆ. ಮಂಗಳೂರಿನಲ್ಲಿ ಮೋದಿ ಮತ್ತು ರಾಹುಲ್ ಇಬ್ಬರೂ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ರಾಹುಲ್ ಚುನಾವಣಾ ಭಾಷಣದ ಮರುದಿನ ಪತ್ರಿಕೆಗಳಲ್ಲಿ ಎರಡೂ ಸಭೆಗಳ ಛಾಯಾಚಿತ್ರಗಳನ್ನು ಪ್ರಕಟಿಸಿ, ಕೆಲವು ಮಾಧ್ಯಮಗಳು ಎರಡರಲ್ಲೂ ಸೇರಿದ್ದ ಜನರನ್ನು ಅಂದಾಜಿಸಿದ್ದುವು. ರಾಹುಲ್ ಸಭೆಗೆ ಜನರೇ ಇರಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಮರುದಿನ ಕಾಂಗ್ರೆಸ್ ನಾಯಕರು, ಇದೆಲ್ಲವೂ ಮಾಧ್ಯಮ ಸೃಷ್ಟಿ, ಜನ ಸಾಗರವೇ ರಾಹುಲ್ ರ್‍ಯಾಲಿಯಲ್ಲಿತ್ತು ಎಂಬ ಸಮಜಾಯಿಷಿ ನೀಡಿದ್ದರು. ಇಲ್ಲಿ ವಾಸ್ತವದಲ್ಲಿ ರಾಹುಲ್ ರ್‍ಯಾಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಕಾಂಗ್ರೆಸ್ಸಿಗರು ಯಾವ ಮನ:ಸ್ಥಿತಿಯಲ್ಲಿದ್ದರು ಎಂದರೆ   ಕಣ್ಣೆದುರಿಗಿರುವ ಸತ್ಯವನ್ನೂ ಒಪ್ಪಿಕೊಳ್ಳಲು ಅವರಿಗೆ ಆಗುತ್ತಿರಲ್ಲ.
ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್‌ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. ಬದಲಿಗೆ ಈ ಸೋಲಿಗೆ ಅವರು ಹೊಣೆ ಮಾಡಿದ್ದು ಪರೋಕ್ಷವಾಗಿ ಮನಮೋಹನ್ ಸಿಂಗ್ ಅವರನ್ನು!!. ಕಾಂಗ್ರೆಸ್‌ಮಟ್ಟಿನ ದುರಂತ ನೋಡಿ. ಈ ನೆಹರೂ ಕುಟುಂಬಕ್ಕೆ ನಿಷ್ಠರಾದಷ್ಟು ಅವರು ಎಂದಿಗೂ ದೇಶದ ಜನತೆಗೋ, ಪ್ರಜಾಪ್ರಭುತ್ವ ವ್ಯವಸ್ಥೆಗೋ ನಿಷ್ಠರಾಗಲೇ ಇಲ್ಲ. ಮನ ಮೋಹನ್ ಹೇಗೆ ಆಡಳಿತ ನಡೆಸಿದ್ದರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಅವರು ಕೇವಲ ಸೋನಿಯಾ ಕ್ರಪಾಪೋಷಿತ ಪ್ರಧಾನಿಯಾಗಿದ್ದರು ಎಂಬುದು, ಎಲ್ಲಿಯ ತನಕ ಅವರ ಕೈಗಳನ್ನು ಕಟ್ಟಿಹಾಕಲಾಗಿತ್ತು ಎಂದರೆ ಅವರ ನಿರ್ಧಾರಗಳನ್ನು ರಾಹುಲ್ ಗಾಂಧಿ ಸಹಾ ಪ್ರಶ್ನಿಸುತ್ತಿದ್ದರು ಮತ್ತು ಇಡೀ ಸರಕಾರವೇ ಅವರ ಹಿಂದಿದ್ದರೂ, ರಾಹುಲ್ ಹೇಳಿ ಮನಮೋಹನರು ನಿರ್ಧಾರಗಳನ್ನು ಬದಲಿಸುತ್ತಿದ್ದರು ಎಂಬುದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ!. ಹೀಗಿದ್ದೂ ಮನಮೋಹನರನ್ನು ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಕಾಂಗ್ರಸಿಗರು ಮುಗಿಬೀಳುತ್ತಿದ್ದಾರೆ. ಕಾಂಗ್ರೆಸಿಗರು ತಿಳಿದಿರಲೇ ಬೇಕಾದ ಸತ್ಯ ಮತ್ತೊಂದಿದೆ. ಅದು ಮನ ಮೋಹನರಲ್ಲದೇ ಬೇರಾವೇ 'ಸ್ವಂತಿಕೆ' ಇದ್ದ ವ್ಯಕ್ತಿ ಪ್ರಧಾನಿ ಪಟ್ಟದಲ್ಲಿದ್ದಿದ್ದರೆ, ಎರಡು ಅವಧಿಗೆ ಪ್ರಧಾನಿಯಾಗುವುದು ಕಷ್ಟವಿತ್ತು! ಒಂದೊಮ್ಮೆ ಇದ್ದಿದ್ದರೂ, ಸೋನಿಯಾ-ರಾಹುಲ್ ಕೇವಲ ಪಕ್ಷಚಟುವಟಿಕೆಗೆ ಮಾತ್ರ ಸೀಮಿತವಾಗಿರುತ್ತಿದ್ದರು.!!. ಇಂತಹ ಪ್ರಾಥಮಿಕ ಹಂತದ ತಪ್ಪುಗಳೇ ಇಂದು ಕಾಂಗ್ರೆಸ್‌ಗೆ ಈ ಹೀನಾಯ ಸ್ಥಿತಿ ಒದಗಿಸಿದೆ.
ಕಾಂಗ್ರೆಸ್‌ನ ಇನ್ನೊಂದು ಸಂಸ್ಕೃತಿಯ ಬಗ್ಗೆ ಇಲ್ಲಿ ಹೇಳಲೇ ಬೇಕು. ಮೊನ್ನೆ ಫಲಿತಾಂಶ ಪ್ರಕಟವಾಗುತ್ತಲೇ ಮತ್ತೆ ಓರ್ವ  ಕಾಂಗ್ರೆಸ್ ನಾಯಕ, ಶಾಸಕ ಅದೇ ಹಳೆಯ ಮಾತನ್ನು ಎಸೆದುಬಿಟ್ಟರು. ಈ ಸಲದ ಚುನಾವಣೆಯನ್ನು ನಾವು ಸತ್ಯದಿಂದ ಎದುರಿಸಿದರೆ, ಭಾಜಪ ಹಣ-ಹೆಂಡ ಹಂಚಿ ಚುನಾವಣೆ ಗೆದ್ದಿದೆ!!. ಈ ಶಾಸಕ ಮಹಾಶಯ ಇನ್ನೂ ಜನರನ್ನೇ ಜರೆಯುವುದನ್ನು ಬಿಟ್ಟಿಲ್ಲ!. ಅಂದರೆ ಮತದಾನ ಮಾಡಿದ, ಅಥವಾ ಕಾಂಗ್ರೆಸ್ ವಿರೋಧಿಗಳಿಗೆ ಮತದಾನ ಮಾಡಿದ ಮತದಾರರೆಲ್ಲರೂ ಹಣ ಪಡೆದು, ಹೆಂಡ ಕುಡಿದು ಮತದಾನ ಮಾಡಿದ್ದರು ಎಂಬುದು ಇವರ ಮಾತಿನ ಅರ್ಥ. ದೇಶದಲ್ಲಿ ಇಂದು ಯುಪಿಎ ಗೆದ್ದ ೫೯ಕ್ಷೇತ್ರದ ಮತದಾರರನ್ನು ಬಿಟ್ಟು, ಉಳಿದ ಕ್ಷೇತ್ರದಲ್ಲೆಲ್ಲಾ ಈ ಅವ್ಯವಾಹಾರ ನಡೆದಿದೆ ಎಂಬುದು ಅವರ ಮಾತಿನ ಮರ್ಮವಾದರೆ, ಮತ್ತು ಇಂದಿಗೂ ಪ್ರಜಾಪ್ರಭುತ್ವ ಭಾgತದಲ್ಲಿ ಹೆಂಡ-ಹಣದಿಂದಲೇ ನಾಯಕರು ಗೆಲ್ಲುತ್ತಿದ್ದಾರೆ ಎಂಬುದಾದರೆ, ಕಳೆದ ಚುನಾವಣೆಯಲ್ಲಿ ಇವರು ಗೆದ್ದದ್ದು...??? 

ದುರಂತವೆಂದರೆ ಇಂತಹ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ!. ಆದರೆ ಜನ ಮಾತ್ರ ಇದರ ಗಂಭೀರತೆಯನ್ನು ಅಂತಹ ನಾಯಕರಿಗೆ ತೋರಿಸಲು, ಮತ್ತೊಂದು ಚುನಾವಣೆಯ ತನಕವೂ ಕಾದು ಕೂತಿರುತ್ತಾರೆ. ಈ ಸಲವೂ ಆಗಿದ್ದು ಅದೇ. ಮತ್ತು ಇದು ಪಕ್ಷಾತೀತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಮುಖ್ಯವಾಗಿ ರಾಜಕಾರಣಿಗಳು ಅರಿತುಕೊಳ್ಳಲೇ ಬೇಕಾದ ಮತ್ತೊಂದು ಸತ್ಯವೆಂದರೆ ಇಂದು ಸಾರ್ವಜನಿಕರ ನೆನಪಿನ ಶಕ್ತಿ 'ದೀರ್ಘ'ಕಾಲದ್ದು!
ಸೋನಿಯಾ-ರಾಹುಲ್ ಪರ್ವದ ಬಗ್ಗೆ ಯೋಚಿಲೇ ಬೇಕು. ಅವರ ರಾಜೀನಾಮೆ ಪ್ರಹಸನ ಮತ್ತು ಅವರೇ ಮುಂದೆಯೂ ಪಕ್ಷದ ಚುಕ್ಕಾಣಿ ಹಿಡಿಯುವಲ್ಲಿ ಯಾರಿಗೂ ಯಾವುದೇ ಅನುಮಾನಗಳಿರಲಿಲ್ಲ. ಅದೇ ಆಗಿದೆ. ಅಂದರೆ ಇಂದು ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಎಂದರೆ, ಯಾರೇ ಪ್ರಧಾನಿಯಾಗಲಿ, ಯಾರೇ ಚುನಾವಣೆಗೆ ಗೆಲ್ಲಲಿ, ತಮ್ಮ ಸ್ವಂತಿಕೆಯನ್ನು ಈ ನೆಹರೂ ಕುಟುಂಬಕ್ಕೆ ಒಪ್ಪಿಸಿಯೇ ಇರಬೇಕಾಗುತ್ತದೆ ಎಂಬುದು. ಇದಕ್ಕೆ ತಾಜಾ ಉದಾಹರಣೆಯೂ ಮತ್ತೊಂದಿದೆ. ಲೋಕಸಭಾ ಚುನಾವಣೆಯ ಸೋಲಿನ ನಂತರ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲು ಮಾಡಿದ್ದು ತಮ್ಮ ಪಟ್ಟ ಗಟ್ಟಿಮಾಡಿಕೊಳ್ಳುವ ಪ್ರಯತ್ನ. ಎಲ್ಲರಿಗೂ ತಿಳಿದಿರುವ ಸತ್ಯ ಎಂದರೆ, ಕಾಂಗ್ರೆಸ್ ಏನಾದರೂ ದೇಶದಲ್ಲಿ ಈ ರೀತಿಯ ಹೀನಾಯ ಸೋಲನ್ನು ಅಪ್ಪಿಕೊಳ್ಳದೇ, ಸಾಧಾರಣ ಸಾಧನೆಯನ್ನಾದರೂ ಮಾಡಿ, ಕರ್ನಾಟಕದಲ್ಲಿ ಈ ಸಾಧನೆ ಆಗಿದ್ದಿದ್ದರೆ, ಸಿದ್ಧರಾಮಯ್ಯ ಈಗಾಗಲೇ ಪದತ್ಯಾಗ ಮಾಡಿಯಾಗಿರಬೇಕಿತ್ತು. ಅವರ ಅದ್ರಷ್ಟ, ಒಂಭತ್ತಾದರೂ ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದತು. ದೆಹಲಿಗೆ ಓಡಿದ ಸಿದ್ದರಾಮಯ್ಯ ಮಾಡಿದ ಮೊದಲ ಕೆಲಸ, ತನ್ನ ಪಟ್ಟದ ಗಟ್ಟಿತನದ ಖಾತ್ರಿ. ಅದು ಸಿಕ್ಕ ನಂತರವೇ ಅವರು ಮರಳಿ ಬೆಂಗಳೂರಿಗೆ ಬಂದು ನಿರಾಳವಾದರು. ಹೈಕಮಾಂಡ್ ಇರಬೇಕು ನಿಜ. ಆದರೆ ಎಲ್ಲಿಯ ತನದ ಅದು ಸೋನಿಯಾ ಮಯವಾಗಿದೆ ಎಂದರೆ, ಕರ್ನಾಟಕ ಜನತೆ, ತನ್ನದೇ ಸರಕಾರದ ಶಾಸಕ-ಸಚಿವರು, ಬಹುಮತ...ಇತ್ಯಾದಿಗಳೆಲ್ಲವೂ ಸೋನಿಯಾ ತೀರ್ಮಾನದ ನಂತರ ಬರುತ್ತವೆ ಎಂಬುದನ್ನು ಕಾಂಗ್ರೆಸ್ ಇತ್ತೀಚೆಗೆ ಹೆಜ್ಜೆ ಹೆಜ್ಜೆಗೂ ಜನತೆಗೆ 'ಮನವರಿಕೆ'ಮಾಡಿಕೊಟ್ಟಿದೆ!.

ಇಲ್ಲಿ ಒಟ್ಟಾರೆಯಾಗಿ ಪರಿಸ್ಥಿತಿಯನ್ನು ಗಮನಿಸಿದರೆ, ಮೋದಿ ಅಲೆ ಎಷ್ಟು ಕೆಲಸ ಮಾಡಿದೆಯೋ, ಅಷ್ಟೇ ಪೂರಕ ವಾತಾವರಣವನ್ನು ಕಾಂಗ್ರೆಸ್ ಸೋಲಿಗೆ ಒದಗಿಸಿದ್ದು, ಕಾಂಗ್ರೆಸ್ ವಿರೋಧಿ ಅಲೆ!!. ಕಾಂಗ್ರೆಸ್ ಪ್ರತೀ ಹೆಜ್ಜೆಯಲ್ಲೂ ಹೈಕಮಾಂಡ್ ಜಪ ಮಾಡುತ್ತಲೇ ಕೆಲಸ ಮಾಡಿತೇ ಹೊರತು, ಒಮ್ಮೆಯೂ ಅದು ಜನರ ನಡುವೆ ಬೆರೆಯಲೇ ಇಲ್ಲ. ಏರುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸೋಲು, ತನ್ನದೇ ಅಂಗಪಕ್ಷಗಳ ನಾಯಕರ ಭ್ರಷ್ಟಾವಾರವನ್ನೂ ಸಹಿಸಿಕೊಂಡಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ತನ್ನದೇ ತೀರ್ಮಾನಗಳಿಗೆ ಬದ್ಧವಾಗಿ, ಜನರ ನಾಡಿಮಿಡಿತಕ್ಕೆ ಕನಿಷ್ಠ ಆದ್ಯತೆಯನ್ನೂ  ನೀಡದ್ದು...ಹೀಗೆ ಪಟ್ಟಿ ಉದ್ದವಾಗಿದೆ.
ಕಾಂಗ್ರೆಸ್ ಪಾಲಿಗೆ ಮತ್ತೊಂದು ಆಘಾತ ನೀಡಿದ್ದು, ಪಕ್ಷದೊಳಗಿನ ನಾಯಕರ ಭಿನ್ನಮತ. ಉಡುಪಿ ಮತ್ತು ಮಂಡ್ಯ ಕ್ಷೇತ್ರಗಳು ತಕ್ಷಣಕ್ಕೆ ಹೊಳೆಯುವ ಉದಾಹರಣೆಗಳು ಎನ್ನಲಾಗುತ್ತದೆ!. ಎರಡೂ ಕಡೆ ಪಕ್ಷದೊಳಗೇ ಒಂದು ಗೊಂದಲವಿತ್ತು. ಇದು ಒಳಗೊಳಗೇ ಗುಸು ಗುಸು ಆಗಿ, ಕೊನೆಯ ಕ್ಷಣದ ವರೆಗೂ ಗೊಂದಲವಿತ್ತು ಎಂಬ ಹೇಳಿಕೆಯೂ ಕೇಳಿಬರುತ್ತದೆ!. ಇದೆಲ್ಲವೂ ಮೋದಿ ಅಲೆಗೆ ಪೂರಕಾಗಿ ಮತ್ತೆ ಮತ್ತೆ ಶಕ್ತಿ ನೀಡಿದುವು.

ಈ ಎಲ್ಲಾ ಅಂಶಗಳೊಂದಿಗೆ ಕಾಂಗ್ರೆಸ್ ನಾಯಕರು ತಮ್ಮೊಳಗೆ ತಾವೇ ನಮ್ಮನ್ನು ಹಿಡಿದಿಡುವವರು ಯಾರೂ ಇಲ್ಲವೆಂಬಂತೆ ಉದ್ದಟತನವನ್ನು ತೋರಿದ್ದರು. ಉದಾಹರಣೆಗೆ ಮಂಗಳೂರಿನಲ್ಲಿ ಜನಾರ್ದನ ಪೂಜಾರಿಯವರು ಹೋದೆಡೆಯಲ್ಲೆಲ್ಲಾ ನನ್ನ ವಿರೋಧಿ ಮೋದಿ, ನಳಿನ್ ಕುಮಾರ್ ಕಟೀಲ್ ಅಲ್ಲ ಎಂದೇ ಹೇಳುತ್ತಿದ್ದರು. ಆ ಕ್ಷಣಕ್ಕೆ ಅವರ ಮನದಲ್ಲಿದ್ದುದು ಏನೇ ಯೋಜನೆಯಾಗಿದ್ದರೂ, ಬುದ್ದಿವಂತ ಮತದಾರ ಇವರ ಮಾತುಗಳನ್ನು ಕೇಳಿ ಒಳಗೊಳಗೇ ನಕ್ಕಿದ್ದ!. ಮತ್ತು ಮೋದಿ ವಿರೋಧಿ ಅಲೆಯ ಸೃಷ್ಟಿಗೂ ಕಾಂಗ್ರೆಸ್ ಹಿಡಿದ ಮಾರ್ಗ, ಸರ್ವ ಸಮ್ಮತವಾಗಿರಲಿಲ್ಲ. ಅದಕ್ಕೆ ಪೂರಕವೆಂಬಂತೆ ಇವರ ರಣತಂತ್ರ ಸಾಗಿದ್ದು. ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕರು ತಮ್ಮ ಸಾಧನೆಯನ್ನು ಹೇಳಿಕೊಳ್ಳಲು ಎಂದೂ ಧೈರ್ಯ ತೋರಲಿಲ್ಲ. ಕೇವಲ ಮೋದಿ ವಿರೋಧಿ ಹೇಳಿಕೆಗಳಲ್ಲಿಯೇ ಕಾಲ ಕಳೆದರು. ಇದೇ ರೋಗ ಕಾಂಗ್ರೆಸ್ಸಿಗರಿಗೆ ದೇಶ ವ್ಯಾಪಿಯಾಗಿ ಆವರಿಸಕೊಂಡದ್ದು ಎದ್ದು ಕಾಣುತ್ತಿತ್ತು. ಉದಾಹರಣೆಗೆ ಮೋದಿಯವರನ್ನು ಹಳಿಯುವಲ್ಲಿ ನರಹಂತಕ ಎಂಬಂತ ಕೆಳದರ್ಜೆಯ ಪದಪ್ರಯೋಗವನ್ನು ಒಂದು ರಾಜ್ಯದ ಮುಖ್ಯಮಂತ್ರಿಯೇ ಮಾಡಿದ್ದನ್ನು ನಾವೂ ಕೇಳಿದ್ದೇವೆ.

ಹೀಗೆ ಎಲ್ಲಾ ಅಂಶಗಳೂ ಮೋದಿ ಪಡೆಗೆ ನೆರವಾಗುತ್ತಲೇ ಹೋದುವು. ಕಾಂಗ್ರೆಸ್ ಸಾಧನೆಯನ್ನೂ ಸೇರಿ ಎಲ್ಲಾ ರಂಗಗಳಲ್ಲಿಯೂ ಸೋಲೊಪ್ಪಿಕೊಳ್ಳುತ್ತಲೇ, ಅಧೀರತೆಯಿಂದಲೇ ಈ ಚುನಾವಣೆಯನ್ನು ಎದುರಿಸಿದ್ದು ಮೇಲ್ನೋಟಕ್ಕೇ ಕಂಡು ಬರುತ್ತಿತ್ತು. ಪರಿಣಾಮವಾಗಿ ಬುದ್ದಿವಂತ ಮತದಾರ ತನ್ನ ಚಾಣಾಕ್ಷತೆಯನ್ನು ತೋರಿಸಿದ್ದಾನೆ. ಮೋದಿ ಪ್ರಧಾನಿಯಾಗುತ್ತಿದ್ದಾರೆ.

ಇಲ್ಲಿ ಕರ್ನಾಟಕದ ಮಟ್ಟಿಗೆ ಹೇಳಲೇ ಬೇಕಾದ ಮತ್ತೂ ಒಂದು ಅಂಶವಿದೆ. ಕೇವಲ ಒಂದೇ ವರ್ಷದ ಕೆಳಗೆ ಇದ್ದ ಕಾಂಗ್ರಸ್ ಅಲೆಯಲ್ಲಿ ಹೆಚ್ಚೆಂದರೆ ಎಷ್ಟು ಬದಲಾವಣೆ ಬರಬಹುದು ಎಂಬ ಅತೀ ಆತ್ಮವಿಶ್ವಾಸ ಕಾಂಗ್ರೆಸಿಗರನ್ನು ಆಳುತ್ತಿತ್ತು. ಇಂದು ಮತದಾರ ಎಷ್ಟು ಪ್ರಬುದ್ಧನಾಗಿದ್ದಾನೆ ಎಂದರೆ ಕೇವಲ ಒಂದೇ ತಿಂಗಳಲ್ಲಿ ಆತ ತನ್ನ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬಲ್ಲ!!. ಇದೇ ಆತ್ಮವಿಶ್ವಾಸದಿಂದ ಆತ ಪ್ರತೀ ಬಾರಿಯೂ ಯೋಚಿಸಿ ಮತ ನೀಡುತ್ತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬರುತ್ತಿದೆ. ಇದಕ್ಕೂ ಉದಾಹರಣೆ ಎಂದರೆ, ಭಾಜಪಕ್ಕೆ ಹರಿವಾಣದಲ್ಲಿಟ್ಟು ಕೊಟ್ಟ ಅಧಿಕಾರಕ್ಕೆ, ಅವರು ಕರ್ನಾಟಕದ ಜನತೆಗೆ ನೀಡಿದ ದ್ರೋಹಕ್ಕೆ ಪಾಠ ನೀಡಲು ಅವನು ವರ್ಷದ ಕೆಳಗೆ ಕಾಂಗ್ರೆಸ್ ಆಯ್ಕೆ ಮಾಡಿದ್ದ!. ಇದರ ಒಳ ಮರ್ಮ ಅರಿಯದೇ ಕಾಂಗ್ರೆಸ್ ಇನ್ನೂ ಅದೇ ವಿಜಯ ಗುಂಗಿನಲ್ಲಿ ತೇಲಿದ್ದೇ, ಈ ಫಲಿತಾಂಶಕ್ಕೆ ಮತ್ತೂ ಒಂದು ಕಾರಣ.

ಒಟ್ಟಾರೆಯಾಗಿ ಕಾಂಗ್ರೆಸ್ ಹೀನಾಯವಾದ ಸೋಲು ಕಂಡಿದೆ. ತನ್ನ ಎಂದಿನ ಪರಂಪರೆಯನ್ನು ಕಾಯ್ದುಕೊಂಡಿರುವ ಅದು ಮತ್ತೆ ರಾಹುಲ್-ಸೋನಿಯಾ ರಕ್ಷಣೆಯೊಂದನ್ನೇ ಅಜೆಂಡಾವಾಗಿರಿಸಿಕೊಂಡು, ಅದೇ ತಪ್ಪನ್ನು ಪುನರಪಿ ಮಾಡುತ್ತಿದೆ. ಯಾಕೆ, ಶತಮಾನದ ಇತಿಹಾಸದ ಕಾಂಗ್ರೆಸ್‌ಗೆ ಈ ಇಬ್ಬರು ವಿಫಲ ನಾಯಕರನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲವೇ???

ಎಲ್ಲಕ್ಕೂ ಪೂರಕವೆಂಬಂತೆ ಮೊಬೈಲ್‌ನಲ್ಲಿ ಬಂದ ಎಸ್‌ಎಂಎಸ್ ಒಂದು ಹೀಗಿದೆ:- ಮನ ಮೋಹನ್ ಸಿಂಗ್ ಅವರ ಪತ್ನಿ, ಚುನಾವಣಾ ಪಲಿತಾಂಶ ಪ್ರಕಟವಾಗುತ್ತಲೇ ಸೋನಿಯಾ ಮನೆಗೆ ಹೋದರಂತೆ! ಯಾಕೆಗೊತ್ತೇ? ಅವರ ಬಳಿ ಇದ್ದ ತಮ್ಮ ರಿಮೋಟ್ ವಾಪಾಸು ಪಡೆಯಲು!!!.


Wednesday 14 May 2014

ಪರೀಕ್ಷಾ ಫಲಿತಾಂಶದ ಸುತ್ತ...

ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. ಜನಪ್ರತಿನಿಧಿಯಲ್ಲಿ ನನ್ನ ಈ ವಾರದ ಲೇಖನ 

ಇದೀಗ ಎಲ್ಲೆಡೆಯಲ್ಲಿಯೂ ಪಲಿತಾಂಶದ ಕಾಲ. ನಾನು ಹೇಳುತ್ತಿರುವುದು ಶೈಕ್ಷಣಿಕ ಫಲಿತಾಂಶಗಳ ಬಗ್ಗೆ. ಮೊನ್ನೆ ಎಸ್ ಎಸ್ ಎಲ್ ಸಿ ಫಲಿತಾಂಶದ ದಿನ ನನ್ನ ತೀರಾ ಹತ್ತಿರದ ಸಂಬಂಧಿ ಹುಡುಗಿಯೋರ್ವಳ ಫಲಿತಾಂಶವನ್ನು ನಾನೇ ನೋಡುತ್ತಿದ್ದೆ. ಅವಳಿಗೆ ಒಟ್ಟೂ 66 ಶೇಕಡಾ ಅಂಕಗಳು ಬಂದಿದ್ದುವು. ಅದನ್ನು ನಾನು ಸಂತಸದಿಂದಲೇ ಆಕೆಗೆ ಹೇಳಿದರೆ, ಅವಳು ತಾನು ಅನುತ್ತೀರ್ಣಳೇ ಆಗಿರುವ ಹಾಗೆ ಗೋಳೋ ಎಂದು ಅಳಲಾರಂಭಿಸಿದಳು. ಇದೇನೂ ಅಚ್ಚರಿಯ ವಿಷಯವಾಗಿರಲಿಲ್ಲ. ಇದಕ್ಕೆ ಕಾರಣ, 'ಕನಿಷ್ಟ' 90 ಕ್ಕಿಂತ ಹೆಚ್ಚು ಅಂಕ ಪಡೆಯಲಾಗದ ಬಗ್ಗೆ ಅವಳಿಗೆ ದು:ಖವಾಗುತ್ತಿತ್ತು. ಅದಕ್ಕೆ ಸರಿಯಾಗಿ ಅಲ್ಲಿ ಸೇರಿದ್ದ ಕೆಲವರೂ, 66.....ಛೇ, ಕಡಿಮೆ ಆಯ್ತಲ್ಲ ಎಂಬ ಒಗ್ಗರಣೆ...

ನೀವೂ ಪತ್ರಿಕೆಗಳಲ್ಲಿ ಓದಿರಬಹುದು. ಓರ್ವ ಹುಡುಗಿ, ತನ್ನ ಸಂಬಂಧಿಯೋರ್ವ ವಿನೋದಕ್ಕಾಗಿ, 'ನೀನು ಫೇಲ್'ಎಂದದ್ದನ್ನು ಕೇಳಿ, ಹಿಂದೆ ಮುಂದೆ ಯೋಚಿಸದೇ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಾಸ್ತವವಾಗಿ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಕೇವಲ ಒಂದು ಕ್ಷಣದ ದೌರ್ಬಲ್ಯಕ್ಕೆ ಬುದ್ದಿ ಕೊಟ್ಟ ಪರಿಣಾಮ ಇದು.

ಇದೆಲ್ಲಾ ಯಾಕೆ?? ಒತ್ತಡ! ವಿದ್ಯಾರ್ಥಿಯ ಮೇಲೆ ಬೀಳುವ ಬಹುಮುಖಿ ಒತ್ತಡ. ಶಿಕ್ಷಣವನ್ನು ಕೇವಲ ಜೀವನದ ಒಂದು ಅವಿಭಾಜ್ಯ ಅಂಗವೇ ಹೊರತು, ಅದರಲ್ಲಿನ ಅಪಯಶದಿಂದ ಜೀವನವೇ ಮುಗಿದು ಹೋಗಲಿಲ್ಲ ಎಂಬುದನ್ನು ಮಕ್ಕಳ ಮನಸ್ಸಿಗೆ ದ್ರಢಪಡಿಸಲು ನಾವು ಇಂದು ಸೋಲುತ್ತಿದ್ದೇವೆ. ಬೇರಯವರೊಡನೆ ಹೋಲಿಕೆ, ಇಂತಿಷ್ಟೇ ಅಂಕ ತೆಗೆಯಬೇಕು ಎಂಬ ಒತ್ತಾಸೆ, ಇದಿಲ್ಲವಾದರೆ ಮತ್ತೆ ಬದುಕೇ ಶೂನ್ಯ ಎಂಬ ಹುಂಬತನ ಇದಕ್ಕೆಲ್ಲಾ ಕಾರಣ. ಒಂದು ರೀತಿಯಲ್ಲಿ ಇದನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಮೊನ್ನೆ ಟಿ೨೦ ಪಂದ್ಯದ ಫೈನಲ್‌ನಲ್ಲಿ ಯುವರಾಜ್ ಸಿಂಗ್‌ರ ಒಂದು ಕೆಟ್ಟ ಆಟ, ಇಡೀ ಕ್ರಿಕೆಟ್ ಜಗತ್ತಿನ ಟೀಕೆಗೆ ಕಾರಣವಾಯಿತು. ಯುವರಾಜ್ ಈ ಹಿಂದೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದನ್ನೂ, ಮುಂದೆಯೂ ಆ ಸಾಧನೆಯ ಸಾಧ್ಯತೆಯನ್ನು ಎಲ್ಲರೂ ಮರೆತರು. ಪರಿಣಾಮವಾಗಿ ಈ ಕ್ರಿಕೆಟಿಗನ ಮನೆಯ ಮೇಲೆ ದಾಳಿ ಆಯಿತು. ಎಲ್ಲಿ ನೋಡಿದರೂ ಯುವರಾಜನನ್ನು ಓರ್ವ ಖಳನಾಯಕನಂತೆ ಚಿತ್ರಿಸಲಾಯಿತು. ಹಿಂದಿನ ಮತ್ತು ಮುಂದಿನ ಅವರ ಎಲ್ಲಾ ಸಾಧನೆಗಳ ಬಗ್ಗೆ ಹೆಮ್ಮೆ ಬಿಡಿ, ಸಾಧಾರಣ ನೆನಪೂ ಇಲ್ಲವಾಯಿತು. ಯುವರಾಜ್ ಎಂಬ ಕ್ರಿಕೆಟಿಗನ ಕ್ರೆಕೆಟ್ ಜೀವನ ಕೇವಲ ಶೂನ್ಯ ಸಂಪಾದನೆ ಎಂಬಂತೆ ಚಿತ್ರಿಸಲಾಯಿತು.

ಈ ಶಿಕ್ಷಣದ ವಿಷಯದಲ್ಲಿಯೂ ಹಾಗೆಯೇ ಆಗುತ್ತಿದೆ. ಮಗು ಶಾಲೆಗೆ ಹೋದಾಗಿನಿಂದ ಅದರ ಮೇಲೆ ಎಲ್ಲಕ್ಕೂ ನಿಯಂತ್ರಣ ಆರಂಭವಾಗುತ್ತದೆ. ಎಲ್ಲಕ್ಕೂ ಬೇರೆ ಮಕ್ಕಳ ಜೊತೆ ಹೋಲಿಕೆ. ಪ್ರತೀ ಬಾರಿ ಈಗಿನ ಂ + ನಿರೀಕ್ಷೆ. ಪರೀಕ್ಷೆ ಬಂತೆಂದರೆ ಅದಕ್ಕೆ ಎಲ್ಲಿಲ್ಲದ ಒತ್ತಡ...ಪರಿಣಾಮ ಪರೀಕ್ಷೆಯ ಭಯ, ಶಿಕ್ಷಕರ ಭಯ, ಪೋಷಕರ ಭಯ, ಸ್ನೇಹಿತರ ಭಯ, ಸಂಬಂಧಿಗಳ ಭಯ, ಅಕ್ಕ ಪಕ್ಕದವರ ಭಯ ಮತ್ತು ಒಟ್ಟಾರೆಯಾಗಿ ಮಗುವಿನ ಬದುಕು ಕೇವಲ ಭಯಾನಕವಾಗಿರುತ್ತದೆ. ಇಂದು ಶಿಕ್ಷಣ ಒಂದು ಮುಗಿದರೆ ಸಾಕಪ್ಪಾ ಎಂದುಕೊಂಡು ಮಗು ನರ್ಸರಿಯಿಂದಲೇ ಭಯ-ಭಯ-ಭಯದಲ್ಲಿ ಬದುಕಲಾರಂಭಿಸುತ್ತದೆ.

ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. 

ಇಲ್ಲಿ ಮುಖ್ಯವಾಗಿ ಕಾರಣರಾಗುವುದು ಖಂಡಿತಕೂ ಪೋಷಕರು ಎಂಬುದು ನನ್ನ ಭಾವನೆ. ಅವರಲ್ಲವಾದರೆ ಪರಿಸರವೂ!. ನಾನು ಮೇಲೆ ಹೇಳಿದ ೬೬ಶೇಕಡಾ ಪಡೆದು ಉತ್ತೀರ್ಣಳಾದ ಹುಡುಗಿಯನ್ನೇ ಉದಾಹರಣೆಯಾಗಿ ಕೊಡಬಹುದು. ಒಂದು ಸಮಾರಂಭದ ನಡುವೆ ಆಕೆಯ ಫಲಿತಾಂಶ ಬಹಿರಂಗವಾದಾಗ, ಎಲ್ಲರೂ ಕೇಳಿದವರು ಅನೇಕ ಪ್ರತಿಕ್ರಿಯೆಗಳನ್ನು ನೀಡಿದರು. ಆ ಹುಡುಗಿಯ ತಾಯಿ ಮತ್ತು ತಂದೆ, ತಮಗಂತೂ ಖೂಷಿಯಾಗಿದೆ, ನೀನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಸಾಕು ಬಿಡು ಎಂದು ಅಳುತ್ತಿರುವ ಮಗಳನ್ನು ಅಪ್ಪಿ ಸಮಾಧಾನಿಸುತ್ತಿದ್ದರು. ಆಗ ನೆರೆದ ಕೆಲವರು, ತಾಯಿಯನ್ನುದ್ದೇಶಿಸಿ, ನೀನೇ ಆಕೆಯನ್ನು ಹಾಳು ಮಾಡಿದ್ದು. ಕೇವಲ ೬೬ಶೇಕಡಾ ಪಡೆದಿದ್ದಾಳೆ, ನಿನ್ನ ಈ ಪ್ರೀತಿ ಬೇರೆ ಎಂದು ಆಕೆಗೇ ಪ್ರತ್ಯಕ್ಷ-ಪರೋಕ್ಷವಾಗಿ ಗದರಿಸುತ್ತಿದ್ದರು!!. ಇಂದು ಮತ್ತೂ ಒಂದು ಗಮನಿಸಬೇಕಾದ ಯೋಚನೆ ಎಂದರೆ, ನಮ್ಮ ಮಕ್ಕಳ ಬಗ್ಗೆ ಬೇರೆಯವರ ಕಾಳಜಿ ಮಿತಿ ಮೀರಿರುತ್ತದೆ!!. ಇದು ದುರಂತದ ಮತ್ತೊಂದು ಹಾದಿ. 

ಕೇವಲ ಶೇಕಡಾವಾರು ಅಂಕ, ಶಿಕ್ಷಣ ಎಂದರೆ ಪಿಯುಸಿಯಲ್ಲಿ ಸೈನ್ಸ್, ಅದು ಮುಗಿಯುತ್ತಲೇ ಸಿಇಟಿ, ಮುಂದುವರಿದು ಇಂಜಿನಿಯರ್ ಅಥವಾ ಮೆಡಿಕಲ್ ಎಂಬ ಹುಚ್ಚು ಪೋಷಕರನ್ನು ಆವರಿಸಿಕೊಂಡಿದೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂಬ ಒಂದು ರೀತಿಯ ಕುರುಡುತನ ಅವರಲ್ಲಿ ಮನೆ ಮಾಡಿದೆ. ಇದನ್ನೇ ಬಾಲ್ಯದಿಂದಲೂ ಮಗುವಿನ ಮೇಲೆ ಹೇರಿ, ಅದನ್ನು ಇನ್ನಿಲ್ಲದಂತೆ ಹೈರಾಣಾಗಿಸುವ ಯತ್ನ ಈ ಎಲ್ಲದಕ್ಕೂ ಮೂಲ ಕಾರಣ. ಒಂದು ರೀತಿಯಲ್ಲಿ ಈ ರೀತಿಯಲ್ಲಿ ಮಾನಸಿಕ ಆಘಾತಕ್ಕೆ ಒಳಗಾಗುವ ಮಕ್ಕಳ ಆತ್ಮಹತ್ಯೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮದೇ ವ್ಯವಸ್ಥೆಯ ವ್ಯವಸ್ಥಿತ ಕೊಲೆ ಎಂಬುದು ನನ್ನ ಭಾವನೆ.

ಇದಲ್ಲದೇ ಉಜ್ವಲವಾದ ಭವಿಷ್ಯ ಬೇರೆಯದೇ ಇದೆ. ನಾವು ಇನ್ನೊಂದು ದ್ರಷ್ಠಿಕೋನದಿಂದಲೂ ನೋಡಬೇಕು. ಎಲ್ಲರೂ ಈ ಪ್ರಪಂಚದಲ್ಲಿ ಒಂದೇ ರಂಗದಲ್ಲಿ ನಿಷ್ಣಾತರಾಗಿರುವುದಿಲ್ಲ. ಪ್ರತಿಯೊಬ್ಬನಿಗೂ ಅವನದ್ದೇ ಆದ ಪ್ರತಿಭೇ ಇರುತ್ತದೆ. ಇಂದು ವೃತ್ತಿಪರ ಕೋರ್ಸ್‌ಗಳೇ ಅಲ್ಲದೇ, ಸಾಂಸ್ಕೃತಿಕವಾಗಿ ಅಥವಾ ಸಮಾಜದ ಇತರ ರಂಗಗಳಲ್ಲಿಯೂ ಬದುಕು ಕೊಡುವ ಅನೇಕ ದಾರಿಗಳಿವೆ. ಒಬ್ಬ ಇಂಜಿನಿಯರ್ ಆಗಿಯೋ, ವೈದ್ಯನಾಗಿಯೋ ದುಡಿದಷ್ಟೇ, ಬೇರೆ ರಂಗಗಳಲ್ಲಿಯೂ ದುಡಿಮೆಗೆ ಅವಕಾಶಗಳಿರುತ್ತವೆ. ಇದನ್ನು ಆರಂಭದಿಂದಲೇ ನಾವು ಮಕ್ಕಳಲ್ಲಿ ಮನನ ಮಾಡುತ್ತಾ ಹೋದರೆ ಅವರೂ ಮಾನಸಿಕವಾಗಿ ಗಟ್ಟಿಯಾಗುತ್ತಾರೆ. ಇಂದಿನ ತುರ್ತು ಅಗತ್ಯಗಳಲ್ಲಿ ಇದು ಮುಖ್ಯ.
ನಮ್ಮ ಶಿಕ್ಷಣ ಕಾಲದಲ್ಲಿ, ಕೇವಲ ಪಾಸಾಗಿದ್ದಕ್ಕೆ ಊರಿಡೀ ಸಿಹಿ ಹಂಚಿದ ಪ್ರಸಂಗ ನೆನಪಾಗುತ್ತದೆ. ಅಂದು ಶಿಕ್ಷಣವೇ ಕಷ್ಟದ ಪರಿಸ್ಥಿತಿ. ಅಂತಾದ್ದರಲ್ಲಿ ಪಾಸಾಗುವುದೂ ಒಂದು ಸಾಧನೆ. ಸೆಕೆಂಡ್ ಕ್ಲಾಸ್ ಬಂದರೆ ಪೋಷಕರಿಗೆ ಮಹದಾನಂದ. ಫಸ್ಟ್ ಕ್ಲಾಸ್ ಬಂದರೆ ಊರಿಡೀ ಹಬ್ಬ.

ಇನ್ನು ಇಲ್ಲಿ ಮಕ್ಕಳ ತಪ್ಪೂ ಇಲ್ಲವೆನ್ನಲಾಗದು. ಇಂದಿನ ಮುಂದುವರಿದ ತಾಂತ್ರಿಕತೆ ಮಕ್ಕಳಲ್ಲೂ ಆ ಪರಿಯ ಬದಲಾವಣೆ ತಂದಿದೆ. ಒಂದು ವಿದ್ಯಾರ್ಥಿ ಹೇಳುತ್ತಿದ್ದ, ಛೆ. ನನಗೆ ಕೇವಲ ೮೦ಶೇಕಡಾ ಅಂಕಗಳು ಮಾತ್ರ ಬಂದಿವೆ. ೯೦ಕ್ಕಿಂತ ಹೆಚ್ಚು ಬಂದಿದ್ದರೆ ಫೇಸ್ ಬುಕ್ ನಲ್ಲಿ ಹಾಕಿ ಎಷ್ಟು ಲೈಕ್ ಬರುತ್ತಿತ್ತು ನೋಡುತ್ತಿದ್ದೆ ಎಂದು!!. ಫೇಸ್ ಬುಕ್ ತೆರೆದು ನೋಡಿದರೆ, ಕೆಲವು ಮಕ್ಕಳು ತಮ್ಮ ಅಂಕ ಪಟ್ಟಿಯನ್ನೇ ಲಗತ್ತಿಸಿ ಹೆಮ್ಮೆ ಪಡುತ್ತಿದ್ದರು. ಓರ್ವ ಹುಡುಗಿಯ ಒಂದು ಪೋಸ್ಟಿಂಗ್ ಹೀಗಿದೆ:- 'ನನ್ನ ತಂದೆ ಹೇಳುತ್ತಿದ್ದರು, ಮಗಳೇ, ನೀನು ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ತೆಗೆದ ಬಗ್ಗೆ ನನಗೆ ಬೇಸರವಿಲ್ಲ. ನಿನ್ನ ಪರೀಕ್ಷೆಯ ಮೊದಲ ದಿನ ನಾನು ಖಾಯಿಲೆ ಬಿದ್ದಾಗ, ನೀನು ತಾಯಿಯಂತೆ ನನ್ನನ್ನು ನೋಡಿಕೊಂಡೆ. ಹಾಗಾಗಿ ಆ ಒಂದು ವಿಷಯದಲ್ಲಿ ನಿನಗೆ ಕಡಿಮೆ ಅಂಕ ಬರಲು ನಾನೂ ಒಂದು ಕಾರಣ. ಅದಕ್ಕೆ ಚಿಂತಿಸಬೇಡ ಎಂದು ತಂದೆ ಹೇಳುತ್ತಿದ್ದರು, ಅಪ್ಪಾ, ಐ ಲವ್ ಯೂ.....ಅಂದ ಹಾಗೆ ನನಗೆ ಕನ್ನಡದಲ್ಲಿ ೧೨೫ರಲದಲಿ ೧೨೪ಅಂಕಗಳು ಬಂದಿದ್ದುವು!....ಇದು ನಮ್ಮ ನಿರೀಕ್ಷೆಯ ಮಟ್ಟವನ್ನು ಸೂಚಿಸುತ್ತದೆ. ಬಹುಶ: ಆ ಮಗುವೇನಾದರೂ ೧೦೦ ಅಂಕಗಳನ್ನು ತೆಗೆದಿದ್ದರೆ ಪರಿಣಾಮ ಎಷ್ಟು ಭೀಕರವೆಂಬುದನ್ನು ನೀವೇ ಯೋಚಿಸಿ. 

ಮತ್ತೊಬ್ಬ ತಂದೆ ಮಗಳ ಪೂರ್ತಿ ಅಂಕ ಪಟ್ಟಿಯನ್ನೇ ಲಗತ್ತಿಸಿ, ಫೇಸ್ ಬುಕ್ ನಲ್ಲಿ ಹಾಕಿದ್ದರು. ನಾನು ಒಂದು ಕೆಲಸದ  ಪ್ರಯುಕ್ತ ಇಡೀ ವರ್ಷ ಬ್ಯುಸಿಯಾಗಿದ್ದೆ. ಆದರೂ ನನ್ನ ಮಗಳು ಪಿಯುಸಿಯಲ್ಲಿ 94ಶೇಕಡಾ ಅಂಕಗಳನ್ನು ಪಡೆದು ನನ್ನನ್ನು ಹೆಮ್ಮೆ ಪಡುವ ಹಾಗೆ ಮಾಡಿದ್ದಳು...ಇಂತಹ ನೂರಾರು ಪೋಸ್ಟಿಂಗ್‌ಗಳನ್ನು ನೀವು ನೋಡಬಹುದು. ಇಂದು ಫೇಸ್ ಬುಕ್ ಇಲ್ಲದ ಫೇಸ್ ಗಳೇ ಇಲ್ಲ. ಇಂತಾದ್ದರಲ್ಲಿ, ತನ್ನ ಅಂಕ ಕಡಿಮೆಯಾದರೆ ಫೇಸ್ ಬುಕ್‌ನಲ್ಲಿ ಹಾಕಲು ಆಗದಲ್ಲ ಎಂಬ ನೋವೂ ಮಕ್ಕಳನ್ನು ಇಂದು ದುರ್ಬಲರಾಗಿಸುತ್ತಿವೆ ಎಂದರೆ ನಿಮಗೆ ಅಚ್ಚರಿ ಆದೀತು. ಇದು ವಿಚಿತ್ರವಾದರೂ ಸತ್ಯ.

ಹೀಗೆ ಮಕ್ಕಳಲ್ಲಿ ಎಲ್ಲಾ ವಿಧದಲ್ಲಿಯೂ ನಾವು ನಾವು ಕೇವಲ ಒತ್ತಡ ಸೃಷ್ಟಿ ಮಾಡುತ್ತಿರುವುದರ ಪರಿಣಾಮ ಇಂದು ಭೀಕರ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೋಷಕರಾದ ನಮ್ಮ ಜವಾಬ್ದಾರಿಯ ಬಗ್ಗೆ ಮೊದಲು ನಾವು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಇದನ್ನು ಅರಿತುಕೊಂಡು ಮಕ್ಕಳ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಮ್ಮ ಕಾಣಿಕೆ ದೊಡ್ಡದಿದೆ ಎಂಬುದು, ಪ್ರಜ್ಞಾವಂತರಾದ ನಮಗೆ ತಿಳಿದಿರಬೇಕು. 


Thursday 8 May 2014

ಶಬರಾಯರೆಂಬ ಸ್ನೇಹದ ಕಣಜ......

ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನುಭವ....ಜನ ಪ್ರತಿನಿಧಿಯ ಪ್ರದಕ್ಷಿಣೆಯ ನನ್ನ ಈ ವಾರದ ಬರಹ..... 


ಸುಮ ಕೃಷ್ಣ ಪ್ರಶಸ್ತಿ ಪ್ರದಾನದ ಹೊತ್ತು.... 
 ಒಂದು ಮಾತಿದೆ. ಯಾವುದೇ ಒಂದು ಪ್ರಶಸ್ತಿ, ಮಾನ-ಸಂಮಾನಕ್ಕೆ ಯೋಗ್ಯ ಬೆಲೆ ಅಥವಾ ಗೌರವ ಸಿಗುವುದು, ಅದನ್ನು ಪಡೆದ ವ್ಯಕ್ತಿಯ ಆತ್ಮೀಯತೆ, ಆಪ್ತತೆ ಮತ್ತು ಸಾರ್ಥಕ್ಯ ಭಾವ ಆ ಪ್ರಶಸ್ತಿಯೆಡೆಗೆ ಇದ್ದಾಗ ಮಾತ್ರ.

ಅಪರೂಪದ ಜೋಡಿ.... 
ಇಂದು ಅಂತಾದ್ದೊಂದು ಸಮಾಧಾನದಿಂದ ಈ ಬರಹ ಬರೆಯಲು ಕುಳಿತಿದ್ದೇನೆ. ಸಾರ್ವಜನಿಕ ರಂಗದಲ್ಲಿ, ಮುಖ್ಯವಾಗಿ ಸಾಹಿತ್ಯರಂಗದಲ್ಲಿ ನಮ್ಮ ಇತಿ ಮಿತಿಯಲ್ಲಿ ಅಷ್ಟಿಷ್ಟು ಕೆಲಸ ಮಾಡಲಾರಂಭಿಸದಾಗಿನಿಂದ, ಸಾಧಕರನ್ನು ಗುರುತಿಸಿ ಗೌರವಿಸುವ ಅಭ್ಯಾಸ ಮಾಡಿಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಅನೇಕ ಅನುಭವಗಳೂ ಆಗಿವೆ. ಅನೇಕ ಸಂದರ್ಭಗಳಲ್ಲಿ ಇಂತಹ ಸಂಮಾನಕ್ಕೆ ವ್ಯಕ್ತಿಗಳನ್ನು 'ಸಾಧಕ'ರು ಎಂದು ಗುರುತಿಸಿ, ಆಯ್ಕೆ ಮಾಡಿಕೊಂಡ ನಂತರ, ನಮ್ಮ ಆಯ್ಕೆ ತಪ್ಪಲಿಲ್ಲವಷ್ಟೇ ಎಂದು ಕೊಂಡದ್ದೂ ಇದೆ. ಆಯ್ಕೆಯ ತನಕದ ಮನೋಭಾವ, ಅನೇಕರಿಗೆ ಆಯ್ಕೆಯ ನಂತರ ಇರುವುದೇ ಇಲ್ಲ ಎಂಬುದನ್ನೂ ಗಮನಿಸಿದ್ದೇನೆ. ಇದು ಎಲ್ಲರಿಗೂ ಅನ್ವಯವಾಗದಾದರೂ, ಕೆಲವು ಸಂದರ್ಭಗಳು ಈ ರೀತಿಯ ಅನಿಸಿಕೆಗೆ ಕಾರಣವಾಗಿದ್ದೂ ಇದೆ.

ಆದರೆ ಇತ್ತೀಚೆಗೆ ನಾವು ಕೊಡ ಮಾಡಿದ ಸುಮಕೃಷ್ಣ ಪ್ರಶಸ್ತಿಯ ಪ್ರದಾನದ ಬಗ್ಗೆ ಒಂದೆರಡು ಮಾತಾಡಲೇ ಬೇಕು. ಅದಕ್ಕೆ ನಾವು ಬಹಳ ಯೊಚಮತ್ತು ಅನೇಕ ಸುತ್ತಿನ ವಿಚಾರ ವಿನಿಮಯದ ನಂತರ ಆಯ್ಕೆ ಮಾಡಿದ ಹೆಸರು ನಾರಾಯಣ ಶಬರಾಯರು. ವಯಕ್ತಿಕವಾಗಿ ನನಗೂ, ಶಬರಾಯರಿಗೂ ಪರಿಚಯವೇ ಇರಲಿಲ್ಲ. ಸ್ನೇಹಿತ ಕರುಣಾಕರ ಬಳ್ಕೂರು ಅವರಿಂದ ಶಬರಾಯರ ಮೊಬೈಲ್ ನಂಬರ್ ತೆಗೆದುಕೊಂಡು ಅವರಿಗೆ ಫೋನಾಯಿಸಿದಾಗಲೇ, ಮೊದಲ ಮಾತಿನಿಂದಲೇ ಅವರ ನಡುವೆ ಯಾವುದೋ ಆತ್ಮೀಯತೆ ಬೆಳೆದಾಗಲೇ, ಈ ಪ್ರಶಸ್ತಿಗೆ ಗೌರವ ಸಂದ ಅನುಭವ

ಅದಿರಲಿ, ಪ್ರಶಸ್ತಿಯ ಬಗ್ಗೆ ಹೇಳಿದಾಗ, ಇನ್ನಿಲ್ಲವಾದ ಮಾವ-ಅತ್ತೆಯ ಬಗ್ಗೆ ಹೇಳಿದಾಗ, ಅವರ ನೆನಪಿನಾಳದ ಮಾತುಗಳನ್ನು ಕೇಳುವುದೇ ಒಂದು ವಿಶಿಷ್ಠ ಅನುಭವ. ಕೊನೆಗೂ ಪ್ರಶಸ್ತಿಯ ವಿಷಯ ಅವರಲ್ಲಿ ಹೇಳಿದಾಗ ಅವರು ಹೇಳಿದ ಮೊದಲ ಮಾತು, ಪ್ರಶಸ್ತಿ ಸ್ವೀಕಾರಕ್ಕೆ ತೊಂದರೆ ಇಲ್ಲ, ಆದರೆ ಪ್ರಶಸ್ತಿಯ ಮೊತ್ತ ಬೇಡ ಬಿಡಿ ಎಂಬ ನೈಜ ಕಾಳಜಿ.

ಸುಮ-ಕೃಷ್ಣರಿಗೆ ನಮನ 
ಇದೆಲ್ಲವೂ ಒಂದು ಹಂತದ ಅನುಭವ. ಅವರಿಗೆ ಅವರ ಒಂದು ಬಯೋಡಾಟಾವನ್ನು ಕಳುಹಿಸಿ ಎಂಬ ವಿನಂತಿ ಮುಂದಿಟ್ಟೆ. ಆಯ್ತು ಬಿಡಿ ಎಂದವರು ನಾಪತ್ತೆ. ಫೇಸ್ ಬುಕ್‌ನಲ್ಲಿ ಅವರ ಮಗಳು ಗಾರ್ಗಿಯೊಂದಿಗಿನ ಚಾಟ್‌ನಲ್ಲಿ ಒಮ್ಮೆ ಇದೇ ವಿನಂತಿ ಮುಂದಿಟ್ಟೆ, ಆಕೆಯೂ ಅಪ್ಪನಿಗೆ ಹೇಳುತ್ತೇನೆ ಎಂದವಳು ಮತ್ತೆ ನಾಪತ್ತೆ. ಕೊನೆಗೆ ಅಭಿನಂದನಾ ಭಾಷಣವನ್ನು ಮಾಡಲು, ಉದಯಕುಮಾರ್ ಶೆಟ್ಟಿಯವರನ್ನು ಕೇಳಿಕೊಂಡಾಗ, ಅವರೂ ಶಬರಾಯರಿಗೆ ಅಭಿನಂದನಾ ಮಾತಾಡುವುದೇ ಒಂದು ವಿಶೆಷ ಅವಕಾಶ ಎಂಬಂತೆ ಒಪ್ಪಿಕೊಂಡ ಹಿನ್ನೆಯಲ್ಲಿ, ಅವರಲ್ಲಿಯೇ ಶಬರಾಯರ ಬಯೋಡಾಟಾ ಕೇಳಿದೆ. ಅವರು ಅದನ್ನು ಒದಗಿಸಿದರು. ಕೊನೆಗೆ ಆಮಂತ್ರಣವನ್ನು ನೀಡಲು ಶಬರಾಯರ ಮನೆಗೆ ಹೋದಾಗ, ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ನಿಜಕ್ಕೆಂದರೆ ಬಯೋಡಾಟವನ್ನು ಅವರು ನನಗೆ ಒದಗಿಸದ ಬಗ್ಗೆ ನನಗೆ ತುಸು ಅಸಮಾಧಾನವೇ ಇತ್ತು!!. ಬಯೋಡಾಟಾದ ವಿಷಯ ಹೇಳುತ್ತಲೇ ಶಬರಾಯರು ಹೇಳಿದ ಮಾತಿನಿಂದ ನಾನು ನಿಜಕ್ಕೂ ಸಮಾಧಾನಗೊಂಡದ್ದು ಮಾತ್ರವಲ್ಲ, ನಮ್ಮ ಪ್ರಶಸ್ತಿಯ ಆಯ್ಕೆಗೆ ಇದು ಸರಿಯಾದ ವ್ಯಕ್ತಿ ಎಂದುಕೊಂಡೆ!!. 'ಸ್ವಾಮೀ, ಅಷ್ಟುದ್ದ ಬರೆದು, ಹೇಳಿಸಿಕೊಂಡು ಸಂಮಾನ ಸ್ವೀಕರಿಸುವ ಬದಲು, ನಿಮಗೆ ಆತ್ಮೀಯವೆನ್ನಿಸುವ ನಿಮ್ಮದೇ ಮಾತಿನಲ್ಲಿ ಪ್ರಶಸ್ತಿ ನೀಡಿ. ಅದನ್ನು ನಿಮ್ಮತ್ತೆ ಹಾಗೂ  ಮಾವ ಮತ್ತು ಯಕ್ಷಗಾನ ರಂಗದ ಮೇಲಿನ ಗೌರವದಿಂದ ನಮ್ರನಾಗಿ ಸ್ವೀಕರಿಸುತ್ತೇನೆ ಎಂಬುದು ಅವರ ಮನದಾಳದ ಮಾತಿನ ಸಾರವಾಗಿತ್ತು. ನಾನು ಸೋತು ಹೋದೆ.

ಇಂತಾದ್ದೇ ಅನೇಕ ಪ್ರಶಸ್ತಿಗಳನ್ನು ನಾವು ಘೋಷಣೆ ಮಾಡಿದ ಬಳಿಕ, ಸಾಮಾನ್ಯವಾಗಿ ಎದುರಿಸುತ್ತಿದ್ದ ಸಮಸ್ಯೆ ಎಂದರೆ ಪ್ರಶಸ್ತಿ ವಿಜೇತರಿಂದ ಅದನ್ನು ಪತ್ರಿಕೆಯಲ್ಲಿ ಬರುವಂತೆ ಮಾಡುವ ಒತ್ತಡ. ಅನೇಕ ಸಂದರ್ಭಗಳಲ್ಲಿ, ಪ್ರಶಸ್ತಿ ವಿಜೇತರು, ಅದನ್ನು ಪತ್ರಿಕೆಯಲ್ಲಿ  ಬರದಿದ್ದರೆ ಅದಕ್ಕೆ ನಾವೇ ಹೊಣೆ ಮತ್ತು ಆ ಪ್ರಶಸ್ತಿ ಸ್ವೀಕಾರಾರ್ಹವೇ ಅಲ್ಲ ಎಂಬಂತೆ ವರ್ತಿಸುವುದನ್ನು ನೋಡಿದ್ದೇನೆ. ಅದಕ್ಕಾಗಿ ಪತ್ರಿಕಾ ಕಾಯಾಲಯಕ್ಕೆ ನಾನು ಎಡತಾಕ ಬೇಕಾದ ಪ್ರಮೇಯವೂ ಇತ್ತು. ಆದರೆ ಇಲ್ಲಿ ನನಗೆ ಹೊಸ ಅನುಭವ. ಶಬರಾಯರ ಪ್ರಶಸ್ತಿಯ ವಿಷಯವನ್ನು ಪ್ರದಾನ ಸಮಾರಂಭಕ್ಕೆ  ಎರಡು ದಿನ ಮೊದಲು, ಎಲ್ಲಾ ಪತ್ರಿಕೆಗಳಿಗೆ ಮೈಲ್ ಮಾಡಿದ್ದೆ. ಆದರೆ ಶಬರಾಯರು ಒಂದು ದಿನವೂ ಆ ಬಗ್ಗೆ ನನ್ನಲ್ಲಿ ಒತ್ತಾಯವನ್ನೋ, 'ತನಿಖೆ'ಯನ್ನೋ ಮಾಡಿದವರಲ್ಲ!!. ಕನಿಷ್ಟ ಕೇಳಿದವರೂ ಅಲ್ಲ. ವಿಶೇಷವೆಂದರೆ ಎಲ್ಲಾ ಪತ್ರಿಕೆಗಳೂ ಈ ವರದಿಯನ್ನು ವಿಶೇಷವಾಗಿ ಪ್ರಕಟಿಸಿದುವು. ಅದು ನನ್ನ ಪಾಲಿಗೆ ನಿಜಕ್ಕೂ ಅಚ್ಚರಿಯೇ!!. ಯಾಕೆಂದರೆ ಪ್ರಚಾರಕ್ಕಾಗಿ ಹಾತೊರೆಯುವವರ ಮಧ್ಯೆ, ಯಾವುದೇ ಒತ್ತಾಯ. ವಿನಂತಿಗೆ ಹೊರತಾಗಿ, ಕೇವಲ ಈ ಮೈಲ್ ನೋಡಿ, ಈ ವರದಿಯನ್ನು ಪತ್ರಿಕೆಗಳು ಪ್ರಕಟಿಸಿದ್ದವೆಂದರೆ, ಅದೂ ಶಬರಾಯರು ಕಾಯ್ದುಕೊಂಡು ಬಂದ ನಿಷ್ಠೆಯ ಫಲವೆಂದೇ ನಾನು ಅಂದುಕೊಂಡಿದ್ದೇನೆ.

ಇನ್ನು ಅವರ ಮನೆಯಲ್ಲಿನ ಆತ್ಮೀಯತೆ. ಕುಳಿತಾಗ ಯಕ್ಷಗಾನ ರಂಗದ ಒಳ-ಹೊರಗನ್ನು  ಸಮಗ್ರವಾಗಿ ತೆರೆದಿಟ್ಟ ಶಬರಾಯರು, ಎಲ್ಲಿಯೂ ತಾನೊಬ್ಬನೇ ಶ್ರೇಷ್ಠ ಎಂಬ ಭಾವ ತೋರಲಿಲ್ಲ. ಸಾಧಿಸಿದ್ದು ಅತ್ಯಲ್ಪ, ಸಾಧಿಸಲು ಬಹಳಷ್ಟಿದೆ ಎಂದೇ ಮಾತು ಆರಂಭಿಸಿದ ಅವರು, ತಾನೊಬ್ಬ ಸಾಮಾನ್ಯ ಕಲಾವಿದ ಎಂಬ ವಿನೀತ ಭಾವವನ್ನು ಎಲ್ಲಿಯೂ ಮರೆಯಲಿಲ್ಲ.

ಓರ್ವ ವಿಜ್ಞಾನ ಪದವೀಧರನಾಗಿ, ಕಾಳಿಂಗ ನಾವುಡರ ಗಾನ ಪಾಂಡಿತ್ಯಕ್ಕೆ ಮನಸೋತು, ಉಪ್ಪೂರರ ಶಿಷ್ಯತ್ವ ಸ್ವೀಕರಿಸಿ, ಯಕ್ಷಗಾನ ರಂಗದಲ್ಲಿ  ತನ್ನದೇ ಒಂದು ವಿಶಿಷ್ಠ ಶಕೆಗೆ ಕಾರಣರಾದ ಶಬರಾಯರು ಹೊಸ ತನದ ಅನ್ವೇಷಕ ಮತ್ತು ವಿನೂತನ ಪ್ರಯೋಗಗಳ ಪ್ರತಿಭಾವಂತ. ಖ್ಯಾತ ಯಕ್ಷಗಾನ ವಿಮರ್ಶಕ ಉದಯ ಕುಮಾರ ಶೆಟ್ಟಿಯವರ ಮಾತಿನಂತೆ ಇವರು ಯಕ್ಷಗಾನ-ಶಾಸ್ತ್ರೀಯ ಸಂಗೀತಗಳ ಸಮನ್ವಯ   ಭಾಗವತ ಎಂದೇ ಗುರುತಿಸಬಹುದು. ಬಡಗು-ತೆಂಕುಗಳೆರಡರಲ್ಲೂ ಸೈ ಅನಿಸಿಕೊಂಡು, ಎರಡೂ ಕಡೆಗಳಲ್ಲಿ ಅಪಾರ ಜನಪ್ರೀತಿಯನ್ನು ಗಳಿಸಿರುವ ಓರ್ವ ವಿಶಿಷ್ಠ ಭಾಗವತನಿದ್ದರೆ ಅದು ಶಬರಾಯರು. ಎಲ್ಲಕ್ಕಿಂತಲೂ ಮುಖ್ಯವಾಗಿ ದೂರದರ್ಶನದ ಮೂಲಕ ಯಕ್ಷಗಾನವನ್ನು ದಶ ದಿಕ್ಕುಗಳಿಗೂ ಪರಿಚಯಿಸುವಲ್ಲಿ ವಿಶೇಷ ಶ್ರಮ ವಹಿಸಿ, ಯಶಸ್ವೀ ಕಲಾರಾಧಕರಾಗಿ ಗುರುತಿಸಿಕೊಂಡ ಶಬರಾಯರು ಎಲ್ಲೂ ಅಹಂ ತೋರದ ಓರ್ವ ನಿಗರ್ವಿ ಮತ್ತು ನೈಜ ಕಲಾವಿದ. ಕಲಾವಿದ ಎಂಬುದಕ್ಕಿಂತಲೂ, ಕಲಾರಾಧಕ ಎಂದೇ ತನ್ನನ್ನು ಪರಿಚಯಿಸಿಕೊಳ್ಳುವಲ್ಲಿ ಅವರಿಗೆ ಹೆಮ್ಮೆಯಂತೆ!!

ನಮ್ಮ ಸಂಸಾರದ ಜೊತೆಗೊಂದು ಆತ್ಮೀಯ ಕ್ಷಣ 
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದಯ ಕುಮಾರ ಶೆಟ್ಟಿಯವರು ಹೇಳಿದಂತೆ, ಶಬರಾಯರು ಓರ್ವ ಕಲಾವಿದರಾಗಿಯಷ್ಟೇ ಅಲ್ಲದೇ ಆತ್ಮೀಯ ಸ್ನೇಹಿತನೂ ಆಗಿ, ಜನರೊಂದಿಗೆ ಬೆರೆಯುತ್ತಾರೆ. ನಮ್ಮೊಳಗೆ ಅವರು ಎಷ್ಟು ಆತ್ಮೀಯತೆಯಿಂದ ಬೆರೆತರು ಎಂದರೆ, ಕಳೆದ ನಾಲ್ಕು ದಶಕಗಳಿಂದಲೂ ಅವರನ್ನು ತಿಳಿಯದಿದ್ದ ನಾನು ಮತ್ತು ನನ್ನ ಕುಟುಂಬ ಇಂದು ಅವರ ಜೀವನ ಪರ್ಯಂತ ಬಂಧುಗಳೋ ಎಂಬಂತೆ ಸನಿಹಕ್ಕೆ ಬಂದಿದ್ದೇವೆ. ಅದಕ್ಕೆ ಕಾರಣ ಅವರ ಸರಳತೆ. ಇನ್ನು ಈ ರೀತಿಯ ಸರಳತೆ ಯಾವತ್ತೂ ಒಂದು ಇಡೀ ಕುಟುಂಬದಲ್ಲಿದ್ದರೆ ಅದು ಸುಖೀ ಸಂಸಾರ. ಇದಕ್ಕೆ ನಿದರ್ಶನವೂ ಶಬರಾಯ ಕುಟುಂಬ. ಮೊದಲ ದಿನ ಅವರ ಮನೆಗೆ ಹೋಗಿ, ಕಾಲಿಂಗ್ ಬೆಲ್ ಒತ್ತಿದಾಕ್ಷಣ ಹೊರ ಬಂದವರು ಶಬರಾಯರ ಶ್ರೀಮತಿ ರಾಜಶ್ರೀ ಅವರು. ಕಂಡಾಕ್ಷಣವೇ ಅದೆಷ್ಟೋ ವರ್ಷಗಳ ಆತ್ಮೀಯತೆ ನಗುವಿನೊಂದಿಗೆ ಸ್ವಾಗತಿಸಿದಾಗ ಅಚ್ಚರಿ, ನಾನಾರು ತಿಳಿಯಿತೇ ಎಂದಾಗ, ಓಹೋ ಗೊತ್ತು ಎಂಬ ಉತ್ತರ...ಇದು ಫೇಸ್ ಬುಕ್ ಪ್ರಭಾವ. ಕೇವಲ ಫೇಸ್ ಬುಕ್ ಪರಿಚಯದಿಂದಲೇ ನನ್ನ ಮುಖ ಪರಿಚಯ ಮಾಡಿಕೊಂಡವರು. ಮತ್ತೆ ಅಲ್ಲಿ ನಮ್ಮನ್ನೆಲ್ಲಾ ಆಳಿದ್ದು ಆತ್ಮೀಯತೆ ಮಾತ್ರ! ರಾಜಶ್ರೀ ಮೇಡಂ ರಾಜಶ್ರೀ ಅಕ್ಕ ಆಗಿದ್ದು ಹೀಗೆ. ಅವರ ಕೈ ರುಚಿಯ ಬಿಸಿ ಬಿಸಿ ಚಹಾ ಸೇವಿಸಿ, ಅವರೂ ನಮ್ಮ ಜೊತೆ ಕುಳಿತು, ಯಕ್ಷಗಾನ ರಂಗದ ಬಗ್ಗೆ, ಮನೆಯ ಕುಟುಂಬದ ಬಗ್ಗೆ ಹರಟಿದ್ದು ಬರೋಬ್ಬರಿ ಒಂದು ಘಂಟೆ. ಅಷ್ಟರಲ್ಲಿ ಅವರ ಮಗಳು ಗಾರ್ಗಿಯನ್ನು ಕರೆದ ಶಬರಾಯರು ನಮ್ಮನ್ನು ತೋರಿಸಿ ಇವರಾರು ಗೊತ್ತೇ ಎಂದಾಗ,ಆಗಲೂ ಅಚ್ಚರಿ. ಓಹೋ, ಅರೆಹೊಳೆ ಅಂಕಲ್ ಅಲ್ವಾ ಎಂಬ ಗಾರ್ಗಿಯ ನಗು...ಇದು ಒಂದು ಸಂಸಾರದ ಸುಸಂಸ್ಕಾರವನ್ನು ತೋರಿಸುತ್ತದೆ. ನಿಜಕ್ಕೂ ನಮ್ಮ ಪ್ರಶಸ್ತಿಗೆ ಹೆಮ್ಮೆ ಬಂದುದೇ ಆಗ.

ಇನ್ನೊಂದು ವಿಷಯವನ್ನಿಲ್ಲಿ ಹೇಳಲೇ ಬೇಕು. ನಾನಿಲ್ಲಿಯ ತನಕ ಯಾವುದೇ ಪ್ರಶಸ್ತಿ ಪ್ರದಾನ ಮಾಡಿದ್ದರೂ, ಮಾಡಿಸಿದ್ದರೂ, ಕೇವಲ ಪ್ರಶಸ್ತಿಗೆ ಆಯ್ಕೆಯಾದವರನ್ನು ಗೌರವಿಸಿದ್ದೇನೆ. ಇಲ್ಲಿ ಆ ಪರಂಪರೆಗೆ ನಾನು ತಿಲಾಂಜಲಿ ಇತ್ತೆ. ಪ್ರಶಸ್ತಿ ಪ್ರದಾನಕ್ಕೆ ವೇದಿಕೆಗೆ ರಾಜಶ್ರೀ ಅಕ್ಕ ಹಾಗೂ ಗಾರ್ಗಿಗೂ ಕರೆವ ಯೋಚನೆ ಮಾಡಿದೆ. ಗಾರ್ಗಿ ಬರದೇ ತಪ್ಪಿಸಕೊಂಡಳು!. ರಾಜಶ್ರೀಯವರಿಗೆ ತಪ್ಪಿಸಿಕೊಳ್ಳುವ ಸಂಭವ ಸಿಗಲಿಲ್ಲ. ಇಬ್ಬರನ್ನೂ ಕುರಿಸಿ, 'ಸುಮಕೃಷ್ಣ'ಪ್ರಶಸ್ತಿ ಪ್ರದಾನಿಸಿದಾಗ, ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಅತ್ತೆ ಮಾವ, ಸುಮತಿ-ಕೃಷ್ಣಮೂರ್ತಿಯವರ ಎಲ್ಲಾ ಮಕ್ಕಳಿಗೆ ಹಾಗೂ ಬಹುಶ: ಅತ್ತೆ ಮಾವನವರಿಗೂ ಸಂತೃಪ್ತಿಯ ಭಾವ

ಅತ್ತೆ-ಮಾವರ ಮಕ್ಕಳೊಂದಿಗೆ 
ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನಭವ. ಬೆಂಗಳೂರಿನ ಓರ್ವ ವ್ಯಕ್ತಿಗೆ ನಾನೂ ಒಂದು ಸಂಸ್ಥೆಯ ಮುಖಾಂತರ ಪ್ರಶಸ್ತಿಯನ್ನು ಕೊಡಿಸಿದ್ದೆ. ಅವರು ಇಲ್ಲಿಗೆ ಬಂದಾಗ ಅವರ ವಸತಿಯಿಂದ ಹಿಡಿದು ಪ್ರತಿಯೊಂದನ್ನೂ  ನಾನೇ ನೋಡಿಕೊಂಡಿದ್ದೆ. ಕೊನೆಗೆ ಪ್ರಶಸ್ತಿ ಪ್ರದಾನದ ನಂತರ ಅವರನ್ನು ಬೆಂಗಳೂರಿನ ಬಸ್ಸು ಹತ್ತಿಸಿ ಬಂದಿದ್ದೆ. ಅದರ ನಂತರ ಇಂದಿನ ತನಕವೂ ನನ್ನ ಒಂದು ಫೋನ್ ಕರೆಗೂ ಆ ವ್ಯಕ್ತಿ ಉತ್ತರಿಸಲಿಲ್ಲ!!. ಬದಲಿಗೆ ಪ್ರಶಸ್ತಿ ಸ್ವೀಕರಿಸಿದಾಗ, ಅದು ತನ್ನ ಆರ್ಹತೆಗೆ ಸಂದ ಗೌರವವೇ ಹೊರತು, ಅದರಲ್ಲಿ ಅಂತಹ ವಿಶೇಷವೇನೇನೂ ಇಲ್ಲ ಎಂಬ ಅನಿಸಿಕೆಯನ್ನು ಅವರು ಹೊರ ಹಾಕಿದಾಗ, ಎಲ್ಲರೂ ಮುಖ ಮುಖ ನೋಡಿಕೊಂಡದ್ದನ್ನು ನಾನಿನ್ನೂ ಮರೆತಿಲ್ಲ. ಅಂತಹ ಕಹಿ ಅನುಭವಗಳ ಮಧ್ಯೆ, ಇಂತಹ ಅನುಭವಗಳು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಶಬರಾಯ ಕುಟುಂಬವೇ ಇಂತಾದ್ದೊಂದು ಸಾರ್ಥಕ ಭಾವನೆಯನ್ನು ನನಗೆ ಮತ್ತು ಕುಟುಂಬಕ್ಕೆ ತಂದು ಕೊಟ್ಟಿದೆ. ಯಕ್ಷಗಾನ ರಂಗಕ್ಕೂ ಈ ಅನುಭವವಾಗಿದ್ದರೆ ಅಚ್ಚರಿ ಇಲ್ಲ.

ಮುಖ್ಯವಾಗಿ ನನ್ನತ್ತೆ-ಮಾವನ ಹೆಸರಿನ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿಗೆ ಇದರಿಂದ ಮೌಲ್ಯ ಹೆಚ್ಚಿದೆ ಎಂಬುದು ನನ್ನ ತೃಪ್ತಿ.


Thursday 1 May 2014

ಪಾಠ...

ನಾನೇನೂ ಕವಿಯಲ್ಲ.... ಆ ಕ್ಷಣಕ್ಕೆ ಹೊಳೆದದ್ದನ್ನು ಗೀಚಿ ಬಿಡುವುದು ನನ್ನ ಅಭ್ಯಾಸ... ಅಂತಹ ಒಂದು ಕವನ ಇಂದು ಹುಟ್ಟಿ ಕೊಂಡಿತು.... ಸಂಗ್ರಹಕ್ಕೂ, ತಮ್ಮ ಗಮನಕ್ಕೂ ಇರಲಿ ಎಂದು ಈ ಬ್ಲಾಗ್  ನಲ್ಲಿ ಅಡಗಿಸಿ ಬಿಟ್ಟೆ.... ಪ್ರತಿಕ್ರಿಯೆಗೆ ಕಾಯುವುದು ಸಹಜ...ಬರೆಯುತ್ತೀರಾ????


                                                      ನಾನೂ ಸೋತಿದ್ದೇನೆ ಅನೇಕ ಬಾರಿ
                                                      ಅದಕೆ ಒಂದಲ್ಲ,  ಹತ್ತು ಹಲವು ದಾರಿ
ಪ್ರತಿಬಾರಿಯೂ ಅದರ ಪ್ರತಿಫಲನ ಒಂದೇ
ಸಾಗುತಿರು  ನೀ ಮತ್ತೆ ಮತ್ತೆ ಮುಂದೆ!!      


ಅಷ್ಟಕ್ಕೂ ಏನಿದೆ ಇಲ್ಲಿ ಬಿಟ್ಟರೆ ಮಣ್ಣು..?
ಎಂಬವರ ಮನಸೊಳಗೆ ತೆರೆಯದೇ ಕಣ್ಣು??
ಮಣ್ಣಲ್ಲವೇ ಹೊನ್ನ ಮೊಗೆದು ಕೊಡುವ ಜೀವ
ಸೇರುವುದು ಬಿಟ್ಟು ಎಲ್ಲರೊಳಗಣ ಭಾವ??

ಗೆದ್ದಿಲ್ಲವೆಂದಲ್ಲ,ಲೆಕ್ಕವಿಟ್ಟಿಲ್ಲ ಅಷ್ಟೇ!
ಅದು ನನ್ನ ಸಾಧನೆ, ಮತ್ತೆ ಅಷ್ಟಕ್ಕಷ್ಟೇ!!
ನನ್ನ ನೋವು ಮಾತ್ರ ಕಂಡವರ ಹಣೆಗೆ
ನಲಿವೆಲ್ಲಾ ನನ್ನದೇ, ಇದು ನನ್ನ ಬಗೆ!!

ನಿನ್ನ  ಗೆಲುವಿಗೆ ಎಲ್ಲರೂ  ವಾರೀಸುದಾರ
ಸೋಲಿಗೆ ನಿನ್ನ ಹಣೆಬರಹವೇ ಗುರಿಕಾರ
ಮರೆತು ಬಿಡು ಜಗ ಇರುವುದೇ ಹೀಗೆ
ನಡೆದು ಬಿಡು, ನಿನ್ನ ದಾರಿ ಇರುವುದೇ ಹಾಗೆ!!












ಫೇಸ್ ಬುಕ್, ಐಪಿಎಲ್.....ಅಯ್ಯೋ!!.

ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ...ಕಳೆದ ವಾರದ ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಬರಹ. 


ಇತ್ತೀಚೆಗೆ ಓದಿದ ಒಂದು ಕಿರು ಕಥೆ ಇಲ್ಲೆ ನೆನಪಾಗುತ್ತದೆ. ಅದರ ರೂಪಾಂತರ ಇಲ್ಲಿ ನೀಡುತ್ತಿದ್ದೇನೆ.

 ಒಂದು ಮನೆ. ಅಲ್ಲಿ ನೀರವ ಮೌನ ಆವರಿಸಿರುತ್ತದೆ. ಮನೆಯಲ್ಲಿನ ಸದಸ್ಯರೆಲ್ಲರೂ ಏನೋ ಅನಾಹುತ ಆದ ಹಾಗೆ ಒದ್ದಾಡುತ್ತಿದ್ದಾರೆ. ಎಲ್ಲರ ದೃಷ್ಟಿಯೂ ಒಂದೇ ಕಡೆ. ಕೊನೆಗೂ ಅಲ್ಲಿ ಲೈಟ್ ಹತ್ತಿಕೊಳ್ಳುತ್ತದೆ. ಓಹ್! ಬಂತು ಎಂದು ಒಬ್ಬ ಸದಸ್ಯ ಕೂಗುವುದಕ್ಕೂ, ಮನೆಯ ಎಲ್ಲಾ ಸದಸ್ಯರೂ ಓಡಿ ಬಂದು ಅದರ ಮುಂದೆ ಕುಳಿತುಕೊಳ್ಳುತ್ತಾರೆ. ಹೌದು, ಇಂಟರ್ ನೆಟ್ ಕನೆಕ್ಟ್ ಆಗಿತ್ತು!!.

ಇಂದು ಇಂಟರ್ ನೆಟ್ ಕನೆಕ್ಷನ್ ಸ್ವಲ್ಪ ಹೊತ್ತು ಹೋದರೆ ನಮ್ಮೊಳಗೆ ಏನೋ ಹೇಳ ತೀರದ ಕಸಿವಿಸಿ. ಅದೇ ರೀತಿ ಟಿ ವಿ ಚ್ಯಾನೆಲ್ ಸಹಾ ಅಷ್ಟೇ. ಕರೆಂಟ್ ಇಲ್ಲದೇ ಅಥವಾ ಯಾವುದಾದರೂ ತಾಂತ್ರಿಕ ಕಾರಣದಿಂದ ಟಿವಿ ಸಂಪರ್ಕ ಕಡಿತಗೊಂಡರೂ ಇದೇ ಅವಸ್ಥೆ.

ಒಮ್ಮೆ ಮನೆಗೆ ಬಂಧು ಒಬ್ಬರು ಬಂದಿದ್ದರು. ಟಿವಿಯಲ್ಲಿ ಯಾವುದೋ ಸುದ್ದಿ ನೋಡುತ್ತಿದ್ದೆ. ಅವರ ಮುಖದಲ್ಲಿ ಅದೇನೋ ಅಸಹನೆ. ನಾನು ಗಮನಿಸುತ್ತಲೇ ಇದ್ದೆ. ಕೊನೆಗೂ ತಡೆಯಲಾರದೇ ಅವರು ಕೇಳಿಯೇ ಬಿಟ್ಟರು. ಲಾವಣ್ಯಗೇನಾಯ್ತು ನೋಡಬೇಕು, ಸ್ವಲ್ಪ ಈಟಿವಿ ಹಾಕ್ತೀರಾ ಎಂದು. ನನಗೋ ಅಚ್ಚರಿ. ಯಾವ ಲಾವಣ್ಯ ಮತ್ತು ಏನಾಗಿತ್ತು ಎಂದರೆ ಅವರು ಈಟಿವಿಯ 'ಬದುಕು'ಧಾರಾವಾಹಿಯ ಬಗ್ಗೆ ಹೇಳಲು ಕುಳಿತರು. ನಾವೆಲ್ಲರೂ ಈ ಧಾರಾವಾಹಿಯ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತೇವೆ. ಅನೇಕ ವರ್ಷಗಳಿಂದ ಬರುತ್ತಿರುವ ಧಾರಾವಾಹಿ ಮುಗಿಯುವುದೇ ಇಲ್ಲವೇನೋ ಎಂದು ಮುಖ ಸಿಂಡರಿಸುತ್ತೇವೆ. ಆದರೆ ಅದಕ್ಕಾಗಿಯೇ ಕಾಯುತ್ತಿರುವ ಮತ್ತು ಆ ಪಾತ್ರಗಳ ಬಗ್ಗೆ ಅನುಕಂಪ ತೋರುವ ಅದೆಷ್ಟೋ ಜನ ನಮ್ಮ ನಡುವೆ ಇರುತ್ತಾರೆ. ಹೀಗೆಯೇ ಲೋಕಾಭಿರಾಮವಾಗಿ ಮಾತಾಡುವಾಗ ಅವರೆಂದರು. ಅವರು ದಿನಾಲೂ ಮೂಡುಬಿದಿರೆಯಿಂದ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಾರೆ. ಮರಳಿ ಸಂಜೆ ಮನೆಗೆ ಹೋಗುವಾಗ ಅವರ ಖಾಯಂ ಬಸ್ ಒಂದಿದೆ. ಅದು ಸಿಕ್ಕದೇ ಇದ್ದರೇ ಆ ದಿನ ಅವರ ಮೂಡ್ ಹಾಳಾಗಿರುತ್ತದೆ. ಬಸ್ ಇಳಿಯುತ್ತಲೇ, ಮನೆಗೆ ಓಡಿಯೇ ಹೋಗಿ, ಬಾಗಿಲು ತೆರೆದು ಒಳಗ ಹೊಕ್ಕು, ಮೊದಲು ಟಿವಿಯ ಸ್ವಿಚ್ ಆನ್ ಮಾಡಿ, ಮನೆಯೊಂದು ಮೂರು ಬಾಗಿಲು (ಆಗ) ಹಾಕಿದ ನಂತರವೇ ಅವರು ನಿರಾಳ!!. ಇದನ್ನು ಕೇಳಿದಾಗ ನಿಜಕ್ಕೂ ಅಚ್ಚರಿ ಅನಿಸಿತು. ನಾನೂ ಕೇಳಿದೆ. ಈ ಟಿವಿ ಮಾಧ್ಯಮ ಇಷ್ಟು ಹತ್ತಿರವಾಗುವ ಮೊದಲೂ ನೀವು ಇದ್ದಿರಿ. ಆಗೇನು ಮಾಡುತ್ತಿದ್ದಿರಿ ಎಂದು. ಅದಕ್ಕವರು ಆಗ ಪುಸ್ತಕ ಓದುತ್ತಿದ್ದೆ ಎಂದರು. ಈಗ...?? ಪುಸ್ತಕ ಓದದೇ ಯಾವ ಕಾಲವಾಯಿತೋ!!

ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ. ನಮ್ಮ ಪಕ್ಕದ ಮನೆಯಲ್ಲಿದ್ದ ಅನಂತ ಪದ್ಮನಾಭ ನಾಯರಿ ದಂಪತಿಗಳು ನನಗೆ ಇದನ್ನು ಒದಗಿಸುತ್ತಿದ್ದರು. ಊರಿನಲ್ಲಿ ತರಂಗ, ಸುಧಾ, ಪ್ರಜಾಮತಗಳು ನಿಯಮಿತವಾಗಿ ಬರುತ್ತಿದ್ದುದು ಅವರ ಮನೆಯಲ್ಲಿ ಮಾತ್ರ. ತಪ್ಪದೇ ಆವುಗಳನ್ನು ಕಡ ತಂದು ಓದದಿದ್ದರೆ ಊಟ ಮಾಡಿದ್ದು ಜೀರ್ಣವಾಗದ ಪರಿಸ್ಥಿತಿ. ಆದರೆ ಈಗ..? ನಾನೇ ಮನೆಗೆ ತರಂಗ, ಸುಧಾಗಳನ್ನು ತರಿಸುತ್ತಿದ್ದರೂ, ಓದುವುದು ನಿಯಮಿತವಾಗಿದೆ ಎಂಬುದು ಪ್ರಾಮಾಣಿಕ ಅನಿಸಿಕೆ. ಯಾಕೆಂದುಕೊಂಡರೆ ಸಮಯ ಸಿಗದು ಎಂಬುದು ಪಿಳ್ಳೆ ನೆವ ಅಷ್ಟೇ. ಸಿಗುವ ಸಮಯವನ್ನು ಟಿವಿ, ಕಂಪ್ಯೂಟರ್‌ಗೆ ಕೊಟ್ಟು ಬಿಟ್ಟರೆ ಮತ್ತೆ ಸಮಯ ಸಿಗಬೇಕು ಎಲ್ಲಿಂದ?

ನಾನು ಹೇಳ ಹೊರಟದ್ದು ಇಂದಿನ ಇಂತಹ ಗಜಿಬಿಜಿ ಬದುಕಿನ ಬಗ್ಗೆ. ಈಗ ನಮ್ಮ ಮಕ್ಕಳಿಗಂತೂ ಓದು ಬಲು ದೂರವಾಗಿಬಿಟ್ಟಿದೆ. ಕನ್ನಡ ಬರಹಗಾರರ ಬಗ್ಗೆ ಒಂದಾದರೂ ಪ್ರಶ್ನೆಗೆ ಅವರು ಉತ್ತರಿಸಿದರೆ, ಅದೇ ಬಹು ದೊಡ್ಡ ಸಮಾಧಾನ ಎಂಬಂತಾಗಿದೆ. ಟಿವಿ ಒಂದು ರೀತಿಯಲ್ಲಿ ನಿಯಮಿತವಾಗಿ ನಮ್ಮೊಳಗಿನ ಬದಲಾವಣೆಗೆ ಕಾರಣವಾಗಿದ್ದರೆ, ಇಂದು ಕಂಪ್ಯೂಟರ್ ಮತ್ತು ಆ ಮೂಲಕವಾಗಿ ಇಂಟರ್ ನೆಟ್, ಮತ್ತೂ ಮುಂದೆ ಯೋಚಿಸಿದರೆ ಫೇಸ್ ಬುಕ್ ಗಳು ಇನ್ನಿಲ್ಲದಂತೆ ನಮ್ಮ ಬದುಕಿನ ಅಮೂಲ್ಯ ಸಮಯವನ್ನು ತಿನ್ನುತ್ತಿವೆ. ನೀವು ಫೇಸ್ ಬುಕ್‌ನಲ್ಲಿರುವ ಹೆಚ್ಚಿನ ಸ್ನೇಹಿತರನ್ನು ಕಛೇರಿಯಲ್ಲಿ ಗಮನಿಸಿದರೆ, ಅವರ ಕಂಪ್ಯೂಟರ್ ನಲ್ಲಿ ಫೇಸ್ ಬುಕ್ ಯಾವಾಗಲೂ ತೆರೆದುಕೊಂಡಿರುತ್ತದೆ. ಒಮ್ಮೊಮ್ಮೆ ನೀವು ಫೆಸ್ ಬುಕ್ ತೆರೆದಿರಿ ಎಂದರೆ, ನಿಮಗಿಷ್ಟ ಇದ್ದೋ, ಇಲ್ಲದೆಯೋ ಚಾಟ್ ಆರಂಭವಾದರೆ ಅದು ಘಂಟೆಗಟ್ಟಲೇ ಮುಂದುವರಿಯುವ ಅಪಾಯವಿರುತ್ತದೆ. ಇಷ್ಟಕ್ಕೇ ಸೀಮಿತವಾಗದೇ, ಇದು ಅನೇಕ ಸಲ, ಸಂಬಂಧದ ದಿಕ್ಕನ್ನೇ ಬದಲಾಯಿಸಿ ಬಿಡುವ ದುರಂತವಿರುತ್ತದೆ. ಇತ್ತೀಚೆಗೆ ಓದಿದ ಘಟನೆ ಈ ಕ್ಷಣದಲ್ಲಿ ನೆನಾಪಾಗುತ್ತದೆ. ಓರ್ವ ಯುವಕ ಫೇಸ್ ಬುಕ್‌ನಲ್ಲಿ ಯುವತಿಯೋರ್ವಳೊಂದಿಗೆ ಸ್ನೇಹ ಗಳಿಸುತ್ತಾನೆ. ಅವರ ಚಾಟ್ ಇಬ್ಬರನ್ನೂ ಪ್ರೇಮಿಸುವ ತನಕ ಒಯ್ಯುತ್ತದೆ. ಫೆಸ್ ಬುಕ್‌ನ ಯುವತಿಯ ಫೋಟೋ ನೋಡಿದ ಯುವಕ ಆಕೆಯನ್ನೇ ಕಲ್ಪಿಸಿಕೊಂಡಡು, ಕೊನೆಗೂ ಒಂದು ದಿನ ಇಬ್ಬರೂ ಬೇಟಿಯ ತೀರ್ಮಾನ ಮಾಡುತ್ತಾರೆ. ಅಂತೆಯೇ ಒಬ್ಬರನ್ನೊಬ್ಬರು ಸಂಧಿಸಿದಾಗ ಯುವಕನಿಗೆ ಅಚ್ಚರಿ. ಆಕೆ ಫೇಸ್‌ಬುಕ್ ನಲ್ಲಿ ಹಾಕಿದ ಫೋಟೋ ಬೇರೆಯದೇ ಆಗಿದ್ದು, ನೋಡಲು ಅಷ್ಟೇನೂ ಸುಂದರಿ ಅಲ್ಲ ಎಂದು ತಿಳಿದ ಆತ ಆಕೆಯನ್ನು ಇರಿದು ಕೊಲ್ಲುತ್ತಾನೆ ಮತ್ತು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ...! ಬೇಕಾ ಈ ದುರಂತ??

ಫೇಸ್ ಬುಕ್ ಕಮೆಂಟ್ ಗಳದ್ದೇ ಮತ್ತೊಂದು ಕಥೆ. ಸದ್ಯಕ್ಕೆ ಇಲ್ಲಿ ಯಾವುದೇ ನೀತಿ ಸಂಹಿತೆ ಇಲ್ಲ. ಯಾರು ಯಾರನ್ನು ಹೇಗೆ ಬೇಕಾದರೂ ಬಯ್ಯಬಹುದು ಎಂಬುದು ಅಘೋಷಿತ ನಿಯಮ.  ಈಗ ಚುನಾವಣೆಯ ಪರ್ವ. ಅನೇಕ 'ಬುದ್ದಿಜೀವಿ'ಗಳು ಈ ಮಾಧ್ಯಮದ ಮೂಲಕ, ಅನೇಕ ನಾಯಕರಿಗೆ ಬಾಯಿಗೆ ಬಂದಂತೆ ಬಯ್ದು ಚಪಲ ತೀರಿಸಕೊಳ್ಳುತ್ತಿದ್ದಾರೆ. ತನ್ನ ಕಾಲ ಕೆಳಗಿನ ಹೇಸಿಗೆ ಇವರಿಗೆ ಕಾಣಿಸದೇ, ಬೇರೆಯರ ಹುಳುಕನ್ನು ಅದಕ್ಕೆ ಕೈಕಾಲು ಸೇರಿಸಿ ವರ್ಣಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಒಂದು ಮನೆಯೊಳಗೆ ಕಾಲಿಟ್ಟರೆ, ಅಲ್ಲಿ ಈಗಷ್ಟೇ ಅ ಆ ಕಲಿಯುವ ಮಗುವಿನಿಂದ ಹಿಡಿದು ಅತೀ ಹಿರಿಯನ ತನಕೂ, ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಮುಂದೆ ಕೀಲಿಸಿಕೊಂಡಿರುತ್ತಾರೆ. ಎಲ್ಲರದ್ದೂ ಫೇಸ್ ಬುಕ್ ಪ್ರಪಂಚ. ಅದೊಂದು ಇಂದಿನ ವರ್ಣ ಮಯ ಬದುಕೇ ಆಗಿಬಿಟ್ಟಿದೆ. 

ಹಾಗೆಂದು ಇದು ಹೀಗೆಯೇ ಕೆಟ್ಟದ್ದು ಎಂಬುದು ಖಂಡಿತ ನನ್ನ ವಾದವಲ್ಲ. ಇದೇ ಫೇಸ್ ಬುಕ್ ಮೂಲಕ ಅದೆಷ್ಟೋ ಒಳ್ಳೆಯ ಕೆಲಸಗಳಾಗಿದ್ದು ನಾನೂ ಗಮನಿಸಿದ್ದೇನೆ. ಅನೇಕ ಸಮಾನ ಮನಸ್ಕರು ಒಂದಾಗಿ, ಸಾಮಾಜಿಕ ಕಾಳಜಿ ಮೆರೆದ ಉದಾರಹರಣೆಗಳಿವೆ. ಅನೇಕ ಸೋಶಲ್ ನೆಟ್ ವರ್ಕ್ ತಂಡಗಳು ಸಮಾಜದ ಒಳಿತಿಗಾಗಿ, (ಉದಾ:- ಏಡ್ಸ್ ಜಾಗೃತಿ, ಅನಾಥ ಮಕ್ಕಳ ಕಲ್ಯಾಣ, ಸಾಹಿತ್ಯಿಕವಾಗಿ ಗುಂಪು ರಚನೆ) ಶ್ರಮಿಸಲೂ ಇದೇ ಫೇಸ್ ಬುಕ್ ಕಾರಣವಾಗಿದೆ. ಆದರೆ ಇಲ್ಲಿ ಒಳಿತು ಕೆಡುಕುಗಳ ವಿಮರ್ಶೆಗೊಳಗಾಗದೇ,ಅದನ್ನೇ ಒಂದು ಗೀಳಾಗಿ ಹಚ್ಚಿಕೊಂಡು ಹಾಳಾಗುವ ವರ್ಗ ದೊಡ್ಡದಿದೆ. ಅದು ಖೇದಕರ ಅಷ್ಟೇ.

ಇನ್ನು ಇತ್ತೀಚೆಗೆ ಮನೆಯೊಳ ಹೊಕ್ಕರೆ ರಾತ್ರಿ ೧೧ರ ತನಕ ಊಟ-ನೀರಿಲ್ಲದಂತೆ ಮಾಡುತ್ತಿರುವುದು ಐಪಿಎಲ್. ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ಒಂದು ರಂಗ ಪ್ರವೇಶ ಇತ್ತು. ಅದಕ್ಕೆ ಬರುವಂತೆ ನಾನು ಓರ್ವ ಸ್ನೇಹಿತರಲ್ಲಿ ವಿನಂತಿ ಮಾಡಿದೆ. ಎಷ್ಟು ಘಂಟೆಗೆ ಅಂದರು. ಸಂಜೆ ೫.೩೦ಕ್ಕೆ ಅಂದೆ. ತಕ್ಷಣ ಅವರೆಂದರು, ಇಲ್ಲ ಬರಲಾಗದು, ಐಪಿಎಲ್ ಮ್ಯಾಚ್ ನೋಡಬೇಕು ಎಂದರು. ಇದು ಐಪಿಎಲ್ ಮಾಡಿದ ಪ್ರಭಾವ. ನಮ್ಮೊಳಗಿನ ಹುಚ್ಚನ್ನು ಇದು ಎಷ್ಟರ ಮಟ್ಟಿಗೆ ಮೂರ್ಖರನ್ನಾಗಿಸಿದೆ ಎಂದರೆ, ಮನೆಯೊಳಗೆ ಸಹಜವಾಗಿ ಆಗಬೇಕಾಗುವ ಊಟ-ತಿಂಡಿಗಳ ಸಮಯವನ್ನೂ ಇದು ತಿಂದು ಹಾಕುತ್ತಿದೆ. ಅಥವಾ ಮನೆಯೊಳಗೆ ಯಾವುದಾದರೂ ಬಂಧು ಬರಬೇಕೆಂದಿದ್ದರೆ ಮ್ಯಾಚ್ ಆರಂಭಕ್ಕಿಂತಲೂ ಮುಂಚೆ ಬಂದು ಹೋದರೆ ಸಾಕೆಂಬ ಮನ ಸ್ಥಿತಿಗೂ ನಮ್ಮನ್ನು ತಳ್ಳಿಬಿಟ್ಟಿದೆ. 

ಇಂದು ನೀವು ಯಾರಲ್ಲೇ ಕೇಳಿ. ಅಯ್ಯೋ ಪುರುಸೊತ್ತೇ ಇಲ್ಲ ಎಂಬ ಉದ್ಘಾರ ಸಾಮಾನ್ಯವಾಗಿರುತ್ತದೆ. ದುರಂತವೆಂದರೆ ಇವರ ಹೆಚ್ಚಿನ ಸಮಯವನ್ನು ತಿನ್ನುವುದು ಫೆಸ್ ಬುಕ್, ವಾಟ್ಸ್ ಆಪ್, ಟಿವಿಯಂತಹ 'ಜೀವನ'ಗಳು!! ಈ ಮೂಲಕ ನಾವಿಂದು ಸ್ನೇಹಿತರನ್ನು, ಬಂಧುಗಳನ್ನು, ನೆರೆಹೊರೆಯವರನ್ನು......ಮನೆಯವರನ್ನೂ ಕಳೆದುಕೊಳ್ಳುತ್ತೇವೆ.

ನಾವು ಯೋಚಿಸಿ ಎಲ್ಲಕ್ಕೂ ಒಂದು ಮಿತಿ ಹಾಕಿಕೊಳ್ಳಬೇಡವೇ..??