Friday 23 March 2018

ಗಾರ್ಗಿ ಎನ್ ಶಬರಾಯ ಎಂಬ ಬಹುಮುಖ ಪ್ರತಿಭೆ...

ಗಾರ್ಗಿ ಶಬರಾಯ ಇಂದು ಸಂಗೀತ ಲೋಕದಲ್ಲಿ ಚಿರ ಪರಿಚಿತ ಹೆಸರು. ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ 'ನನ್ನ ಹಾಡು ದಾಸರ ಹಾಡು ' ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ  ಈ ಪ್ರತಿಭೆಯನ್ನು ಎರಡು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ನಾನು ಪರಿಚಯಿಸಿದ್ದ ಲೇಖನವನ್ನು ಇಂದು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಇಂದು ಈ ಪ್ರತಿಭೆಗೆ ಉಡುಪಿಎಯಲ್ಲಿ ರಾಗಾಧಾನ ಉಡುಪಿ ಸನ್ಮಾನಿಸುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನಾ ಪೂರ್ವಕವಾಗಿ ಈ ಲೇಖನ ಮರು ಪ್ರಕಟಣೆ 



ತಂದೆ-ಯಕ್ಷಲೋಕ ಕಂಡ ತೆಂಕು-ಬಡಗು ಶೈಲಿಯ ಖ್ಯಾತ ಭಾಗವತ. ಮಗಳು ಕರ್ನಾಟಕ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತವಾಗಿ ಬೆಳೆಯುತ್ತಿರುವ ಅಸಾಮಾನ್ಯ ಪ್ರತಿಭೆ. ಈಕೆ ಖ್ಯಾತ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಮತ್ತು ರಾಜಶ್ರೀ ದಂಪತಿಗಳ ಪುತ್ರಿ, ಕರ್ನಾಟಕ ಸಂಗೀತದಲ್ಲಿ ಅನೇಕ ಸಾಧನೆ ಹಾಗೂ  ಪ್ರಶಸ್ತಿಗಳಿಗೆ ಭಾಜನರಾದ ಗಾರ್ಗಿ ಶಬರಾಯ.

ಬಾಲ್ಯದಿಂದಲೇ ಈಕೆಗೆ ಸಂಗೀತದ ಸೆಳೆತ. ಅಪ್ಪನ ಎದೆಯ ಮೇಲೆ ಮಲಗಿ, ದೂರದ ಪ್ರಯಾಣ ಅಥವಾ ಮನೆಯ ಹಜಾರ...ಎಲ್ಲಿದ್ದರೂ   ನಾರಾಯಣ ಶಬರಾಯರ ಸಂಗೀತವೇ  ಜೋಗುಳ. ಇದೇ ಬಹುಶ: ಗಾರ್ಗಿಯ ಮನ ಮನದಲ್ಲಿ ಸಂಗೀತದ  ಆಸಕ್ತಿ ಹೆಮ್ಮರವಾಗಿ ಬೆಳೆಯಲು ಪ್ರೇರಣೆ.

ಐದನೆಯ ವಯಸ್ಸಿನಲ್ಲಿ ಸಂಗೀತ ಅಭ್ಯಾಸ  ಆರಂಭಿಸಿದವಳು ಗಾರ್ಗಿ.   ಉಡುಪಿಯ  ವಿದುಷಿ ಶ್ರೀಮತಿ ವಸಂತಲಕ್ಷ್ಮಿ  ಎ ಹೆಬ್ಬಾರ್ ಅವರಲ್ಲಿ ಸರಿಗಮಪದ ತೊದಲ್ನುಡಿಗಳನ್ನಾರಂಭಿಸಿ,  ಪ್ರೊ.ಅರವಿಂದ ಹೆಬ್ಬಾರ್ ಹಾಗೂ ವಿದುಷಿ ರಂಜನಿ ಹೆಬ್ಬಾರ್ ಅವರಲ್ಲಿ ಅಭ್ಯಾಸವನ್ನು ಮುಂದುವರಿಸುತ್ತಾ, ಪರಿಪಕ್ವತೆಯ ಹಾದಿಯಲ್ಲಿ ಬೆಳೆಯುತ್ತಾ ಸಾಗಿದವಳು.  ಇವಳ ಸಂಗೀತಾಸಕ್ತಿ ಮತ್ತು ಇವರೊಳಗಿನ ಪ್ರತಿಭೆ ಬೆಳೆಯಲು ಈ ಗುರುಗಳ ಮಾರ್ಗದರ್ಶನ ಪ್ರಮುಖವ ಕಾರಣವಾದರೆ, ಸಂಗೀತಾಭ್ಯಾಸಕ್ಕೆ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಕಲಾ ಅಧ್ಯಯನ ಮತ್ತು ತರಬೇತಿ  ಕೇಂದ್ರ ಮತ್ತು ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಂದ ವಿದ್ಯಾರ್ಥಿವೇತನದ ಪ್ರೋತ್ಸಾಹ. ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಉನ್ನತ ದರ್ಜೆಯೊಂದಿಗೆ ಮುಗಿಸಿದ್ದಾಳೆ. ಕಳೆದ ಮೂರು ವರ್ಷಗಳಿಂದ ತನ್ನ ಗುರುಗಳ ಮನೆಯಲ್ಲೇ ಉಳಿದುಕೊಂಡು, ಗುರುಕುಲದ ಮಾದರಿಯಲ್ಲಿ ಜೀವನ ಪಾಠವನ್ನು ಕಲಿತ ನಮೃತೆ ಈಕೆಯದ್ದಾದರೆ, ಸಂಗೀತ, ವಿಜ್ಞಾನ, ಆಧ್ಯಾತ್ಮ, ಧರ್ಮ, ಯೋಗ, ಜೀವನ ಕ್ರಮ ಮತ್ತು ಶಿಸ್ತು ಎಲ್ಲವನ್ನೂ ಗುರು ಅರವಿಂದ ಹೆಬ್ಬಾರರಲ್ಲಿ ಕಲಿತೆನೆನ್ನುವ ವಿಧೇಯತೆ.  ತನ್ನೆಲ್ಲಾ ಸಾಧನೆಯ ಹಿಂದಿನ ಶಕ್ತಿ ತಾಯಿ ಮತ್ತು ತಂದೆ ಎನ್ನುವುದನ್ನು ಮರೆಯುವುದಿಲ್ಲ. ಅಕಾಲಿಕವಾಗಿ ನಿಧನರಾದ ಗುರು ರಂಜನಿ ಹೆಬ್ಬಾರ್ ಭೌತಿಕವಾಗಿ ಇನ್ನಿಲ್ಲ ಎಂಬ ಕೊರಗಿದ್ದರೂ, ಇಲ್ಲೇ ಎಲ್ಲೋ ಜೊತೆಗಿದ್ದು ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಭಾವುಕಳಾಗುವ ಗಾರ್ಗಿ ಓರ್ವ ನಿಜಾರ್ಥದ ಶಿಷ್ಯೆಯಾಗಿಯೇ  ಕಾಣುತ್ತಾಳೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳನ್ನೂ ಈ ಸಂಗೀತ ಪ್ರತಿಭೆಯನ್ನರಸಿ ಬಂದಿವೆ.  ಗದಗದ ’ಗಂಗೂಬಾಯಿ ಹಾನಗಲ್ ಕನ್ನಡ ಮಕ್ಕಳ ಮನೆ’ಯಿಂದ ಕೊಡ ಮಾಡುವ ’ಕಲಾ ಕಣ್ಮಣಿ-೨೦೦೭’ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಭಾರತೀಯ ವಿದ್ಯಾಭವನದಿಂದ ನೀಡಿರುವ ೨೦೧೧ರ ಸಾಲಿನ ಯುವ ಕಲಾವಿದ ಪ್ರಶಸ್ತಿ ಮುಖ್ಯವಾಶದುವುಗಳು 

ಶ್ರೀ ಶಂಕರ ಟಿವಿಯವರು ಆಯೋಜಿಸಿದ್ದ ಶಾಸ್ತ್ರೀಯ ಸಂಗೀತದಲ್ಲಿ  ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಹೊಮ್ಮಿದ ಈ ಸಹಜ ಪ್ರತಿಭೆಯನ್ನು ಸಂಗೀತ ಜಗತ್ತು ಒಮ್ಮೆ ಕಣ್ಣರಳಿಸಿ ನೋಡಿದ್ದು ಮತ್ತು ರಾಜ್ಯದ ಕರ್ನಾಟಕ ಸಂಗೀತ ಕ್ಷೇತ್ರದ ಉದಯೋನ್ಮುಖ ಪ್ರತಿಭೆಯ ಸಾಲಿನಲ್ಲಿ ಗಾರ್ಗಿಯ ಹೆಸರು ಮಿಂಚಿದ್ದು ವಿಶೇಷ ಸಾಧನೆ. ಮಂಗಳೂರಿನ ಸಂಗೀತ ಪರಿಷತ್, ಶಿವಮೊಗ್ಗದ  ಹೊಸ ಹಳ್ಳಿಯ ಸಂಕೇತಿ ಸಭಾಗಳಲ್ಲಿ  ಹಾಗೂ ಇನ್ನಿತರೆಡೆಗಳಲ್ಲಿ ನಡೆದ ರಾಷ್ಟ್ರ-ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತದ   ಅನೇಕ ಪ್ರಶಸ್ತಿ ಬಹುಮಾನಗಳನ್ನು ಗಿಟ್ಟಿಸಿಕೊಂಡ ಪ್ರತಿಭಾವಂತೆ ಗಾರ್ಗಿ. ರಾಜ್ಯಾದ್ಯಂತ ಈಗಾಗಲೇ ಅನೇಕ ಸಂಗೀತ ಕಛೇರಿಗಳಲ್ಲಿಯೂ ಕಾರ್ಯಕ್ರಮ ನೀಡುವ  ಮೂಲಕ, ಸಂಗೀತ ಪ್ರಿಯರಲ್ಲಿ ಈ ಬೆಳೆಯುವ ಪ್ರತಿಭೆ ಭರವಸೆಗಳನ್ನು ಹುಟ್ಟಿಸಿದ್ದೇ ಅಲ್ಲದೇ, ನಾಡಿನ ಖ್ಯಾತ   ಕಲಾವಿದೆಯರ ಸಾಲಿನಲ್ಲಿ ತನ್ನ ಇರವನ್ನು ಖಚಿತಪಡಿಸಿಕೊಂಡಿದ್ದಾರೆ. 

ಸಂಗೀತ ನಿರಂತರ ಅಭ್ಯಾಸ ಹಾಗೂ ಕಲಿಕೆಯನ್ನು ಬಯಸುತ್ತದೆ ಮತ್ತು ಅದು ಮಾತ್ರವೇ  ತನ್ನೊಳಗಿನ ಕಲಾವಿದೆಯನ್ನು ಪಕ್ವತೆಯೊಂದಿಗೆ ಬೆಳೆಸುತ್ತದೆ ಎಂದು ಭಾವಿಸಿರುವಾಕೆ ಗಾರ್ಗಿ. ಈ ಹಿನ್ನೆಲೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಅನೇಕ ರಾಷ್ಟ್ರೀಯ ಹಾಗೂ ಸ್ಥಳೀಯ ಮಟ್ಟದ ಕಾರ್ಯಾಗಾರಗಳಲ್ಲಿ ನಿರಂತರ ಭಾಗವಹಿಸುತ್ತಿರುವಾಕೆ.  

ಗಾರ್ಗಿಯ ಮತ್ತೊಂದು ವಿಶೇಷತೆ ಎಂದರೆ ಈಕೆ ಓರ್ವ ಅಪ್ರತಿಮ ಚಿತ್ರಕಲಾವಿದೆಯಾಗಿಯೂ ಬೆಳೆಯುತ್ತಿದ್ದಾಳೆ. ಸ್ವ ಪರಿಶ್ರಮದೊಂದಿಗೆ ’ಏಕಲವ್ಯ’ನಂತೆ ತಾನೇ ತನ್ನನ್ನು ಈ ಕಲೆಯಲ್ಲಿ ಪರಿಣತಿಗೊಳಿಸಿಕೊಳ್ಳುತ್ತಿರುವ ಈಕೆ, ಯಾವುದೇ ಚಿತ್ರಕಲಾ ತರಗತಿಗಳಿಗೆ ಹೋಗದೇ, ಅತ್ಯುತ್ತಮ ಚಿತ್ರಗಳನ್ನು ಬಿಡಿಸುವ ಪ್ರತಿಭಾನ್ವಿತೆ.  ಆಕೆಯ ಚಿತ್ರಗಳಲ್ಲಿ ವಿಶೇಷವಾಗಿ ಡೂಡಲ್ ಕಲೆ, ಕಲಾಂಕಾರಿ, ಮಧುಬನಿ ಮತ್ತು ಮೆಹಂದಿ ಕಲೆಗಳ ಮಿಶ್ರಣವಿದೆ. ಈ ಕಲೆ ಯಾವ ಪ್ರಕಾರದ್ದು ಎಂದರೆ, ನಿರ್ದಿಷ್ಟವಾಗಿ ಇದೇ ಪ್ರಕಾರವೆನ್ನಲು ತುಸು ಅಸಾಧ್ಯವೆನಿಸಿದ ಕಾರಣ, ಎಲ್ಲಾ ಕಲೆಗಳ ಸಂಕಲನದೊಂದಿಗೆ ಇವರ ಕೈಯಲ್ಲಿ ಅರಳುವ ಕಲೆಗೆ ಸದ್ಯಕ್ಕೆ ’ಗಾರ್ಗಿಕಲೆ’ ಎನ್ನುವುದೇ ಸೂಕ್ತವೇನೋ ಎಂಬಂತಿವೆ ಅವಳ ರಚನೆಗಳು!. ವಿಶೇಷವೆಂದರೆ ಕುಳಿತಲ್ಲಿ, ನಿಂತಲ್ಲಿ ಮತ್ತು ಯಾವುದೇ ತಿದ್ದುವಿಕೆಯ ಅವಶ್ಯಕತೆ ಇಲ್ಲದ ಕಲಾ ರಚನೆ ಇವಳೀಗೆ ಸಿದ್ದಿಸಿದೆ. 
ಕಲಾ ಸಾಧನೆಗೆ ಹೊರತಾಗಿ, ಗಾರ್ಗಿಯ ಶೈಕ್ಷಣಿಕ ಯಾತ್ರೆಯೂ ಹಲವು ದಾಖಲೆಗಳಿಗೆ ಕಾರಣವಾಗಿದೆ. ಪ್ರಸ್ತುತ ಮೈಸೂರಿನ  ಮಾನಸಗಂಗೋತ್ರಿಯಲ್ಲಿ ಸಸ್ಯಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್ಸಿಯನ್ನು ಮುಗಿಸಿ ದ್ವಿತೀಯ ವರ್ಷದ ವ್ಯಾಸಂಗ ಮುಂದುವರಿಸಿರುವ ಗಾರ್ಗಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಅಗ್ರಳಾಗಿ   ಡಾ.ಟಿಎಂಎ ಪೈ ಚಿನ್ನದ ಪದಕ ಗಳಿಸಿದ್ದಾಳೆ. ನಾಡಿನಾದ್ಯಂತ ಅನೇಕ ಸಂಘ ಸಂಸ್ಥೆಗಳು ಈಕೆಯನ್ನು ಈಗಾಗಲೇ ಸನ್ಮಾನಿಸಿವೆ. ತಂದೆ ನಾರಾಯಣ ಶಬರಾಯರ ’ಯಕ್ಷಗಾಯನ’ದ ಪ್ರಭಾವ, ತಾಯಿ ರಾಜಶ್ರೀಯವರ  ಸದಾ ಕಾಲದ ಬೆಂಬಲ ಮತ್ತು ಉತ್ತೇಜನ,  ಗುರುಗಳ ಸಮರ್ಥ ಮಾರ್ಗದರ್ಶನ ತನ್ನನ್ನು ಈ ಎತ್ತರಕ್ಕೇರಿಸಿದೆ ಎನ್ನುವ ಗಾರ್ಗಿಯ ಕಣ್ಣುಗಳಲ್ಲಿ ಸಾಧಿಸಿದ್ದು ಅತ್ಯಲ್ಪ ಮತ್ತು ಸಾಧಿಸಬೇಕಾದ್ದು ಬೆಟ್ಟದಷ್ಟಿದೆ ಎಂಬ ವಿನಯವಿದೆ. ಎಂಎಸ್ಸಿ ವ್ಯಾಸಂಗದ ಬಳಿಕ ಮತ್ತೆ ತನ್ನ ಸಂಗೀತ-ಚಿತ್ರಕಲೆಯಲ್ಲಿ ಅಭ್ಯಾಸ-ಸಾಧನೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದಿರುವ ಗಾರ್ಗಿ, ಎರಡೂ ಕ್ಷೇತ್ರಗಳ ಮಟ್ಟಿಗೆ ಒಂದು ವಿಶಿಷ್ಠ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ. 



1 comment: