Friday 16 March 2018

ನಮ್ಮದೇ ನೆರಳಾದ 'ನೆರಳು’


'ವಿಜಯ ಕರ್ನಾಟಕ'ದ ರಂಗ್ ಪುಟದಲ್ಲಿ ಮಾರ್ಚ್ ೧೩, ೨೦೧೮ರಂದು ಪ್ರಕಟಗೊಂಡ ಬರಹ 

ಸುತ್ತಲೂ ತುಂಬಿಕೊಂಡಿರುವ ಸಮಾಜಘಾತುಕ ಶಕ್ತಿಗಳು ಎಷ್ಟೊಂದು ವ್ಯವಸ್ಥಿತವಾಗಿ ಅಸಹಾಯಕತೆಯನ್ನು ತಮ್ಮ ತಮ್ಮ ಮೂಗಿನ ನೇರಕ್ಕೆ ಉಪಯೋಗಿಸಿಕೊಂಡು ಬೇಳೆ ಬೇಯಿಸಿಕೊಳ್ಳಲೆತ್ನಿಸುತ್ತವೆ ಎಂಬುದನ್ನು ವಿವರಿಸಿದ ಏಕವ್ಯಕ್ತಿ ನಾಟಕ ’ನೆರಳು’    ಸುಮನಸಾ ಕೊಡವೂರು-ಉಡುಪಿ ಸಂಸ್ಥೆ ಆಯೋಜಿಸಿದ್ದ ರಂಗಹಬ್ಬದಲ್ಲಿ ಪ್ರಸ್ತುತಗೊಂಡು ನೆರೆದಿದ್ದವರ ಮನದಲ್ಲೊಂದು ಆರ್ದ್ರ ಭಾವಕ್ಕೆ ಕಾರಣವಾಯಿತು.


ರಾಷ್ಟ್ರೀಯ ನಾಟಕಶಾಲೆ(ಬೆಂಗಳೂರು)    ಪದವೀಧರ ಅಕ್ಷತ್ ಈ ಏಕವ್ಯಕ್ತಿ ನಾಟಕದಲ್ಲಿ ಹಾದು ಹೋಗುವ ಪಾತ್ರಗಳಿಗೆ ಜೀವ ತುಂಬಿದ್ದರು. ತಂಗಿಯನ್ನು ಜೀವವೇ ಎಂಬಂತೆ ಪ್ರೀತಿಸುವ  ಅಣ್ಣ ವಿಶ್ವಾಸ್  ತನ್ನ ತಂಗಿ  ಜೀವಿತಾಳ  ಭವ್ಯ ಭವಿಷ್ಯದ ಬದುಕು ಕಟ್ಟುವ ದಾವಂತದಲ್ಲಿದ್ದಾಗ, ಅಕಸ್ಮಾತ್ ಆಗಿ   ತಂಗಿ ಕಾಣೆಯಾಗುತ್ತಾಳೆ. ಪ್ರೀತಿಯ ತಂಗಿಯನ್ನು ಕಳೆದುಕೊಂಡು ಅಕ್ಷರಶ: ಅನಾಥನಂತಾದ ಅಣ್ಣ, ಆಕೆಯನ್ನು ಹುಡುಕುತ್ತಾ ಸಾಗುತ್ತಾನೆ. ಈ ಹುಡುಕಾಟದಲ್ಲಿ ಎದುರಾಗುವ ಘಟನೆಗಳೇ ಈ  ಕಥೆಯ ಮುಖ್ಯ ವಸ್ತು.


ಇಂದಿನ ಸಮಾಜದಲ್ಲಿ ಎಲ್ಲಾ ವ್ಯವಸ್ಥೆಗಳು ಅಸಹಾಯಕರ  ಪರವಾಗಿ ನಿಂತು ಸಹಾಯ ಹಸ್ತ ನೀಡಲೆಂದೇ ಇದ್ದರೂ, ಸಮಾಜದಲ್ಲಿ ಶೋಷಿತ ವರ್ಗ ಸದಾ ನಿರ್ಲಕ್ಷ್ಯ ಮತ್ತು ಅಪಮಾನಕ್ಕೊಳಗಾಗುತ್ತಲೇ ಇರುತ್ತದೆ. ತಂಗಿಯನ್ನು ಹುಡುಕ ಹೊರಡುವ ಅಣ್ಣನಿಗೆ ಎಲ್ಲಾ ಮುಖ ದರ್ಶನವಾಗುತ್ತದೆ. ಕಂಡ ಕಂಡ ಜನರನ್ನು ತಂಗಿಯ ಕಂಡಿರಾ ಎಂದು ಪ್ರಶ್ನಿಸುತ್ತಾನೆ. ಯಾರೋ ಕೊಟ್ಟ ಸಲಹೆಯ ಮೇರೆಗೆ ಪೋಲೀಸ್ ಸ್ಟೇಶನ್ ಮೆಟ್ಟಿಲು ಹತ್ತುತ್ತಾನೆ.   ದೂರು ಕೊಡ ಹೋದ ಇವನನ್ನೇ  ಕಳ್ಳನಂತೆ ನೋಡುವ ಅವರೂ,  ತಂಗಿಯ ಶೀಲದ ಬಗ್ಗೆಯೇ ಶಂಕಿಸಿ ಚುಚ್ಚಿ ಮಾತಾಡುವುದು ಇವನಿಗೆ ಕಾದ ಸೀಸ ಕಿವಿಗೆರದ ಭಾವ!.  ಮತ್ತಾರೋ ಹೇಳಿದರೆಂದು ರಾಜಕಾರಣಿಯೊಬ್ಬನ ಮನೆ ಬಾಗಿಲು ತಟ್ಟುತ್ತಾನೆ. ಇವನ ಜಾತಿಯಲ್ಲಿ ಮತಗಳು ಹೆಚ್ಚಿಲ್ಲ ಎಂಬುದನ್ನು ತಿಳಿಯುತ್ತಲೇ ರಾಜಕಾರಣಿಯೂ ಮುಖ ತಿರುಗಿಸುತ್ತಾನೆ. ಮತ್ತೊಂದು ಪಕ್ಷ ಸಿಕ್ಕಿದ್ದೇ ಸೀರುಂಡೆ ಎಂಬಂತೆ ಇವನನ್ನು ಬೆಂಬಲಿಸುವ ನಾಟಕವಾಡುತ್ತದೆ.  ಬಣ್ಣ ಬಣ್ಣ್ನದ ಬಾವುಟದ ಯಾವ್ಯಾವುದೋ ಸಂಘಟನೆ ಗಳ, ತಮ್ಮೆಲ್ಲಾ ಸಿದ್ದಾಂತಗಳನ್ನು ಗಾಳಿಗೆ ತೂರಿ,  ಸಿಗಬಹುದಾದ ಲಾಭಕ್ಕೆ ಇದನ್ನೇ ವಿಷಯವನ್ನಾಗಿಸಿ ಮುಷ್ಕರ, ಗಲಾಟೆಗಿಳಿಯುತ್ತಾರೆ. ದೃಶ್ಯ-ಮುದ್ರಣ ಮಾಧ್ಯಮಗಳೂ ಈ ವಿಷಯವನ್ನು ’ಬ್ರೇಕಿಂಗ್ ನ್ಯೂಸ್’ ಭರಾಟೆಯಲ್ಲಿ ನಡೆದಿರುವ ’ಸಾಧ್ಯತೆಗಳನ್ನು’  ತಾವೇ ನಿರ್ಧರಿಸುತ್ತಾ ಘಂಟೆಗಟ್ಟಲೇ, ದಿನಗಟ್ಟಲೇ ಸುದ್ದಿ ಮಾಡುತ್ತವೆ. ಕಾಣೆಯಾದವಳ ಇದ್ದ, ಇಲ್ಲದ ಇತಿಹಾಸ ಜಾಲಾಡುತ್ತಾರೆ, ತಮ್ಮ ತಮ್ಮದೇ ವಿರ್ಶಲೇಷಣೆಯಡಿಯಲ್ಲಿ   ’ಆಕೆಗೂ, ಅಣ್ಣನಿಗೂ’ತಿಳಿಯದ ಅನೇಕ ಸಂಗತಿಗಳನ್ನು ಸೃಷ್ಟಿಸುತ್ತಾರೆ!!.  ಅಯ್ಯಾ, ನನ್ನ ತಂಗಿಯನ್ನು ಹುಡುಕಿಕೊಡಿರೆಂಬ ಅಣ್ಣನ ಮಾತು ಯಾರಿಗೂ ಕೇಳುವುದೇ ಇಲ್ಲ. 


ಇಂತಹ ಪರಿಸ್ಥಿತಿಯನ್ನು ವ್ಯವಸ್ಥೆಗಳು ಹೇಗೆಲ್ಲಾ ಬಳಸಿಕೊಳ್ಳುತ್ತವೆ ಎಂಬುದನ್ನು ನಟ ಅಕ್ಷತ್ ಸಮರ್ಥವಾಗಿ ನಿಭಾಯಿಸಿದ್ದಾರೆ.   ಹಾಡಿಯಲ್ಲಿ ಕಂಡ ಶವ ತಂಗಿಯದೇ ಎಂಬ ಭಾವದಿಂದ ಹತಾಶೆ, ದು:ಖ, ಅಸಹಾಯಕತೆಯಿಂದ ಪಡುವ ವೇದನೆ, ದುಗುಡ ನಟನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ಅವನೊಳಗಿನ ಯಶಸ್ವೀ ನಟನನ್ನು ಹೊರ ತಂದಿದೆ. ರಾಜಕಾರಣಿಯಾಗಿ, ಪೋಲೀಸ್ ಆಗಿ, ಜನಸಾಮಾನ್ಯನಾಗಿ,ನಾಗರೀಕರಾಗಿ...ಹೀಗೆ ಇವನ ಹುಡುಕಾಟದಲ್ಲಿ ಬರುವ ಪ್ರತೀ ಪಾತ್ರಗಳಿಗೂ ಜೀವ ತುಂಬಿ,    ತನ್ನ ಅಭಿನಯದ ಮೂಲಕ ಅಕ್ಷತ್ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಇದು ಅಕ್ಷತ್ ರ ಮೊದಲ ಪ್ರಸ್ತುತಿಯಾದರೂ, ರಾಷ್ಟ್ರೀಯ ನಾಟಕ ಶಾಲೆಯ ತರಬೇತಿ ಮತ್ತು ಸಮರ್ಥ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರ ನಿರ್ದೇಶನದ ಪರಿಣಾಮ,   ಓರ್ವ ಗಟ್ಟಿ ನಟನನ್ನು ಹೊರತರುವಲ್ಲಿ ಯಶಸ್ವಿಯಾಗಿದೆ. 



ಕೊನೆಗೂ ತಂಗಿ   ಹೆಣವಾಗಿ ಸಿಗುತ್ತಾಳೆ. ಇಡೀ ಸಮಾಜ ತನ್ನ ತಂಗಿಯ ಹುಡುಕುವಿಕೆಗಿಂತ ಅದನ್ನೊಂದು ಸ್ವಲಾಭದ ವಿಷಯವಾಗಿ ಹೇಗೆ ಬಳಸಿಕೊಳ್ಳುವಲ್ಲಿ ಉತ್ಸುಕವಾಗಿತ್ತು ಎಂಬುದನ್ನು ತೋರಿಸುವ ಮೂಲಕ, ವರ್ತಮಾನದ ಸಮಾಜದ ತಲ್ಲಣಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟ ’ನೆರಳು’ವಿನಲ್ಲಿ ಕಂಡ ಒಂದೇ ಋಣಾತ್ಮಕ ಅಂಶವೆಂದರೆ, ಮೊದಲು ಹಾಡಿಯಲ್ಲಿ ಕಂಡ ಶವ ತಂಗಿಯದಲ್ಲವೆಂದ ನಂತರವೂ ಕೊನೆಯಲ್ಲಿ ಆಕೆಯ ಅಂತ್ಯವೇ ಎದುರಾಗುವುದು ನಿರಾಶೆಯ ಮೇಲೆ ಮತ್ತೆ ’ಕಾರ್ಮೋಡ ಕವಿದಂತೆ’ ಭಾಸವಾಯ್ತು.  ಕೊನೆಗೂ ನಮ್ಮೊಂದಿಗೆ ಇರುವುದು ನಮ್ಮದೇ ’ನೆರಳು’ ಮಾತ್ರ ಎಂಬಂತೆ,   ಇಂದಿನ ಸಮಾಜದಲ್ಲಿ ಇಂತಹ ಪ್ರಕರಣಗಳಲ್ಲಿ ಸಾಮಾನ್ಯ ಪ್ರಜೆ ಕೇವಲ ಸಮಯಸಾಧಕರ ಪಾಲಿಗೆ ’ವರ’ವಾಗುತ್ತಾ, ತಾನು ಮಾತ್ರ ಬಲಿಪಶುವಾಗುತ್ತಾನೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. 


ನಟನಾಗಿ ಅಕ್ಷತ್  ಹೊಸ ಭರವಸೆ ಮೂಡಿಸದ್ದಾರೆ. ಎಂದಿನಂತೆ ಯುವ ನಿರ್ದೇಶಕ ವಿದ್ದು ಉಚಿಲ್ ಮತ್ತೊಂದು   ’ನೆರಳು’ವಿನ ನಿರ್ದೇಶನದೊಂದಿಗೆ ವಿನೂತನ ಪರಿಕಲ್ಪನೆಯನ್ನೂ ಮಾಡಿ    ಹೊಸ ಸಾಧ್ಯತೆಯ ನಿರಂತರ ಪ್ರಯೋಗದ ಮೂಲಕ    ಮೆಚ್ಚುಗೆಯ  ಕೆಲಸ ಮಾಡಿದ್ದರೆ, ವಿನೂತನ ಸಾಧ್ಯತೆಯೊಂದನ್ನು ಇಲ್ಲಿಗೂ ವಿಸ್ತರಿಸಿದ ಹೆಗ್ಗಳಿಕೆ ಅವರದ್ದು. ಸುಮನಸಾ ಕೊಡವೂರು ಪೃಸ್ತುತಿಯ ಈ ಏಕವ್ಯಕ್ತಿ ನಾಟಕಕ್ಕೆ, ಪ್ರವೀಣ್ ಕೊಡವೂರು ಬೆಳಕು ಹಾಗೂ ದಿವಾಕರ್ ಕಟೀಲ್ ಸಾಂಗತ್ಯ ದೊಂದಿಗೆ ಎಲ್ಲರೂ ಯಶಸ್ಸಿನ ಪಾಲುದಾರರು.




1 comment:

  1. Shiva Prasad K B18 March 2018 at 23:00

    Viddu u are amazing...let this drama bring u more success and happiness in your life.... all the best..

    ReplyDelete