Tuesday 21 January 2014

ಗಣರಾಜ್ಯದಂದು ಕಾಡುವ ಘಟನೆಗಳು...


ಜನಪ್ರತಿನಿಧಿಯ 'ಪ್ರದಕ್ಷಿಣೆ'ಯ  ವಾರದ ಬರಹ..... 


ನಮ್ಮ ದೇಶದಲ್ಲಿ ರಾಜಕಾರಣಕ್ಕೂ ಆದರ್ಶಕ್ಕೂ ಸಂಬಂಧವೇ ಇಲ್ಲ ಬಿಡಿ!

ಎರಡು ವಾರದ ಹಿಂದೆ ಇದೇ ಅಂಕಣದಲ್ಲಿ ಕೇಜ್ರಿವಾಲ್ ಬಗ್ಗೆ ಬರೆಯುತ್ತಾ, ಅವರು ಕಾಲ ಕ್ರಮೇಣ 'ಪಕ್ಕಾ'ರಾಜಕಾರಣಿಯಾಗದಿದ್ದರೆ ಸಾಕೆಂದು ಹೇಳಿದ್ದೆ. ಕೇವಲ ಎರಡೇ ವಾರಗಳಲ್ಲಿ 'ಆಮ್ ಆದ್ಮಿ' ಬದಲಾಗುತ್ತಿದೆ. ಕೆಲವರು ಇದನ್ನು ಬಣ್ಣ ಬಯಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಆಮ್ ಆದ್ಮಿಯ ಬಣ್ಣ ಬಯಲಾಗುತ್ತಿರುವುದಲ್ಲ. ಅವರ ಆರಂಭದ ಉದ್ದೇಶದಲ್ಲಿ ಆದರ್ಶ ಇದ್ದುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕಾರಣಕ್ಕೂ ಆದರ್ಶಕ್ಕೂ ಸಂಬಂಧವೇ ಇಲ್ಲ ಎಂಬುದು ನಮ್ಮ ಪ್ರಜಾಪ್ರಭುತ್ವ ಭಾರತದಲ್ಲಿ ಸಾಬೀತಾಗುತ್ತಲೇ ಬಂದಿರುವ ಮಾತು-ಅದು ಇಲ್ಲಿ 'ಆಮ್ ಆದ್ಮಿ'ಯನ್ನು ಬದಲಾಯಿಸಿದೆ- ಅಷ್ಟೇ!

ಇಂದು 'ಆಮ್ ಆದ್ಮಿ'ಯ ರಾಜ್ಯ ಸರಕಾರ ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಸಂಘರ್ಷಕ್ಕಿಳಿದಿದೆ. ರಾಜ್ಯ-ಕೇಂದ್ರ ಸರಕಾರಗಳು ಸಂಘರ್ಷಕ್ಕಿಳಿಯುವುದು ಹೊಸತಲ್ಲ. ಆದರೆ ಅಲ್ಲಿನ ಸಂಘರ್ಷ ಬೀದಿಗಿಳಿದಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ವಿಶೇಷವೆಂಬಂತೆ ರಾಜ್ಯದ ಮುಖ್ಯ ಮಂಂತ್ರಿಯೇ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ವಿಶ್ಲೇಷಣೆಯ ಪ್ರಕಾರ, ಈ ಹೋರಾಟದ ಮೂಲಕ ಕಾರಣಕ್ಕೂ, ತೋರಿಕೆಯ ಕಾರಣಕ್ಕೂ ವ್ಯತ್ಯಾಸವಿದೆ!. ತಮ್ಮ ಸರಕಾರದ ಒಬ್ಬ ಸಚಿವ, ಸಂವಿಧಾನದ ನಿಯಮ ಗಾಳಿಗೆ ತೂರಿ ಓರ್ವ ಮಹಿಳೆಗೆ ಕಿರುಕುಳ ನೀಡಿದರು ಎಂಬ ಆರೋಪದಿಂದ ಹೊರಬರಲು, ಮತ್ತೊಂದೆಡೆ ತಮ್ಮೊಳಗಿನ ಭಿನ್ನಮತದಿಂದ ಮತ್ತೋರ್ವ ನಾಯಕ ಸಿಡಿದೆದ್ದ ಘಟನೆಯ ಗಮನವನ್ನು ಮತ್ತೊಂದೆಡೆ ಸೆಳೆಯಲು ಈ ತಂತ್ರ ಎನ್ನಲಾಗುತ್ತಿದೆ. ಕಾರಣ ಏನೇ ಇದ್ದರೂ, ಫಲಿತಾಂಶ ಮಾತ್ರ ಒಂದೇ-ಅದು ಪ್ರಜಾಪ್ರಭುತ್ವದ ಅಣಕ.


ಇನ್ನೊಂದೆಡೆ ದಕ್ಷಿಣ ಕನ್ನಡದ ವಿಷಯ. ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿ ಮತ್ತು ಜನಾರ್ದನ ಪೂಜಾರಿಯವರ ನಡುವೆ ಹಣಾ ಹಣಿ ಏರ್ಪಟ್ಟಿದೆ-ಕಾಂಗ್ರಸ್ ಪಕ್ಷದ ಟಿಕೆಟ್‌ಗಾಗಿ!. ಒಬ್ಬರದ್ದು ಪುತ್ರವ್ಯಾಮೋಹವಾದರೆ ಮತ್ತೊಬ್ಬರದು ಸ್ವ ವ್ಯಾಮೋಹ. ಇಬ್ಬರ ಉದ್ದೇಶವೂ ಒಂದೇ. ವಿಷಯ ಅಷ್ಟೇ ಆದರೆ ಬೇರೆ ಮಾತು. ಇಂದು ಇಡೀ ದಕ್ಷಿಣ ಕನ್ನಡ ಜಿಲ್ಲೆಯ 'ಪ್ರಜ್ಞಾವಂತ' ಜನ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಸಿಡಿದು ನಿಂತಿದ್ದಾರೆ. ಈ ಹಂತದಲ್ಲಿ ವೀರಪ್ಪ ಮೊಯ್ಲಿಯವರು ಮಾತ್ರ, ಕೇವಲ 'ತಮ್ಮ' ಚಿಕ್ಕಬಳ್ಳಾಪುರ  ಕ್ಷೇತ್ರದ ಸಂಸದನಾಗಿ, ಕಾಂಗ್ರೆಸ್ ನಾಯಕನಾಗಿ ಅಥವಾ ಕೇಂದ್ರ ಸರಕಾರದ ದ್ವನಿಯಾಗಿ ಮಾತಾಡುತ್ತಾ, ಈ ಯೋಜನೆಯಿಂದ ದಕ್ಷಿಣ ಕನ್ನಡಿಗನಿಗೆ ಏನೂ ಅನ್ಯಾಯವಾಗದು ಎಂಬ 'ಬಾಲಿಶ'ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡಿಗರು ಮತ್ತು ನೆರೆಯ ಜನರು ಈ ಬಾರಿ ಯೋಚಿಸಿ ಮತ ನೀಡಬೇಕಾದ 'ಅನಿವಾರ್ಯತೆ'ಗೆ ಸಿಲುಕಿದ್ದಾರೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ಬೆಂಬಲಿಸುವ ಯಾವುದೇ ಸಂಸದ, ಶಾಸಕ ನಮಗೆ ಬೇಕಾಗಿಲ್ಲ ಎಂಬ ಸತ್ಯವನ್ನು ಮನಗಂಡು, ಹಾಗೆಯೇ ನಡೆದುಕೊಳ್ಳ ಬೇಕಾಗಿದೆ. ಈ ನಡುವೆ ಇಬ್ಬರು ಹಿರಿಯ ನಾಯಕರು ದೆಹಲಿಯಲ್ಲಿ ಲಾಬಿ ಮಾಡಿ, ಟಿಕೆಟ್‌ಗಾಗಿ ಹೊಡೆದಾಡಿಕೊಳ್ಳುವುದನ್ನು ಬಿಟ್ಟು, ತಮ್ಮ ಕ್ಷೇತ್ರದ ನಿಜವಾದ ಸಮಸ್ಯೆಯ ಬಗ್ಗೆ ಯೋಚಿಸುವುದೊಳಿತು. ಅಷ್ಟಕ್ಕೂ ಪಕ್ಷ ನೀಡುವ ಟಿಕೆಟ್ ಹೇಗೋ ಗಿಟ್ಟಿಸಬಹುದು. ಆದರೆ ಜನತೆ.....??
***
ಈ ಹಂತದಲ್ಲಿ ಕವಿ ಮಿತ್ರ ರವಿಶಂಕರ ಒಡ್ಡಂಬೆಟ್ಟು ಅವರ ಹನಿಕವನದ ಸಾಲೊಂದು ನೆನಪಾಗುತ್ತದೆ...

ಸಾವು ಹತ್ತಿರವೆಂದು 
ಗೊತ್ತಿದ್ದರೂ
ಗೊನೆ ಹಾಕಿದ ಬಾಳೆಗೆ
ಸಂತಸವೋ ಸಂತಸ|

ಬಾಳೆಗಿಡ-ಇದು ಒಮ್ಮೆ ಗೊನೆ ಹಾಕಿತು ಎಂದರೆ ಅದರ ಬದುಕು ಮುಗಿಯಿತು. ಮತ್ತೆ ಅದು ಗೊನೆ ಹಾಕುವುದೂ ಇಲ್ಲ, ಅದರ ಗೊನೆ ಬೆಳೆಯುತ್ತಲೇ ಬಾಳೆಯನ್ನು ಬುಡಸಮೇತ ಕಿತ್ತು ಹಾಕುವುದು ಪಕೃತಿಯಲ್ಲಿ ನಡೆದುಕೊಂಡು ಬಂದಿರುವ ವಾಡಿಕೆ. ಇದನ್ನೇ ಮನುಷ್ಯ ಜೀವನಕ್ಕೆ ಅಳವಡಿಸಿಕೊಂಡರೆ, ನಮ್ಮದಿದು ನಶ್ವರದ ಬದುಕು ಎಂದು ಹೇಳುತ್ತಲೇ ನಾವು ಪ್ರಪಂಚದ ಎಲ್ಲವೂ ನಮಗೇ ಬೇಕು ಎಂಬ ಹಪ ಹಪಿಯಲ್ಲಿರುತ್ತೇವೆ. ಸಿಕ್ಕಿದಷ್ಟೂ ಬಾಚಿಕೊಳ್ಳುವ, ಬಾಚಿಕೊಂಡದ್ದನ್ನೆಲ್ಲಾ ನನ್ನಲ್ಲೇ ಇರಬೇಕೆನ್ನುವ ಎಂದಿಗೂ ತೀರದ ಚಪಲ ನಮ್ಮ-ನಿಮ್ಮಂತಹ ಸಾಮಾನ್ಯ ಮನುಷ್ಯರದ್ದು. 

ಆದರೆ, ಹೀಗೆ ಗಳಿಸಿದ್ದರಲ್ಲಿ, ಅಷ್ಟಿಷ್ಟನ್ನಾದರೂ ಸಮಾಜಕ್ಕೆ ನೆರವಾಗುವ ಮೂಲಕ, ಬದುಕಿನಲ್ಲಿ ಸಾಮಾಜಿಕ ಕಾಳಜಿ ಯನ್ನು ಅಳವಡಿಸಿಕೊಳ್ಳುವುದರಿಂದ, ಜೀವನ ಸಾರ್ಥಕ್ಯ ಪಡಿಸಿಕೊಳ್ಳುವ ಅವಕಾಶಗಳು ನಮ್ಮೆದುರು ಇದ್ದರೂ ಅದನ್ನು ನಾವು ನಿರ್ಲಕ್ಷಿಸುತ್ತಲೇ ಇರುತ್ತೇವೆ. ಇಂದು ನಾವು ನಮ್ಮ  ಕೈಯಲ್ಲಿರುವ ಅಧಿಕಾರ, ಹುದ್ದೆಯನ್ನೇ ಪರಮೋಚ್ಚ ಎಂದು ಭಾವಿಸಿ, ನಮ್ಮ ಬಳಿ ಆಗುವ ಸಹಾಯ-ಸಹಕಾರವನ್ನೂ ಮಾಡದೇ, ಕೇವಲ ಸ್ವಾರ್ಥದಿಂದ ಬದುಕುತ್ತಿದ್ದೇವೆ.

ಈ ರೀತಿಯ ಸ್ವಾರ್ಥ ಕೇವಲ ರಾಜಕಾರಣದಲ್ಲಿ ಮಾತ್ರವಲ್ಲ, ಪ್ರತೀ ಜೀವಿಯಲ್ಲೂ ಇರುತ್ತದೆ. ಆದರೆ ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಿತಿ ಮೀರಿದೆ. ರಾಜಕಾರಣಿಯಾದವ, ತನ್ನ 'ಗಳಿಕೆ'ಯನ್ನು ಸಮಾಜಕ್ಕೆ ಕೊಡಬೇಕೆಂದು ಯಾರೂ ಬಯಸುವುದಿಲ್ಲ. ಆದರೆ ಸ್ವಲ್ಪ ತನ್ನ ಮೆದುಳಿಗೆ ಕೆಲಸ ಕೊಟ್ಟು, ಸಾಮಾಜಿಕ ಹಿತ-ಅಹಿತಗಳನ್ನು ಯೋಚಿಸಿ, ಯೋಜಿಸಿ ಮುನ್ನಡೆದರೆ ಸಾಕು ಎಂಬುದು ನಮ್ಮ ಪ್ರಜಾಪ್ರಭುತ್ವದ ಆಶಯ ಅಷ್ಟೇ!. ಆದರೆ ದುರಂತೆವೆಂದರೆ ಅದೇ ಆಗುತ್ತಿಲ್ಲ ಎಂಬುದು ಮತ್ತು ಇದರಿಂದ ಜನತೆ ನಿತ್ಯವೂ ಸಂಕಟ ಪಡಬೇಕಾದ ಅನಿವಾರ್ಯತೆಗೆ ಸಿಲುಕಿರುವುದು.

ಮತ್ತೊಂದು ಸಣ್ಣ ಉದಾಹರಣೆ ಕೊಡುತ್ತೇನೆ. ಇಂದು ಹೊರದೇಶದಿಂದ ಬರುವ ಮತ್ತು ನಮ್ಮ ನಡುವಿನ ಅತೀ ಚಿಕ್ಕ (ಕೇವಲ ಹೊಟ್ಟೆ ಪಾಡಿನ ಉದ್ದೇಶದ) ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುವ ಉದ್ಯಮಗಳಿಗೆ ನಾವು ಕೆಂಪುಹಾಸಿನ ಸ್ವಾಗತ ನೀಡುತ್ತೇವೆ. ಅದೇ ನೀವು, ನಿಮ್ಮದೇ ಪುಟ್ಟ ಊರಿನಲ್ಲಿ ಒಂದು ಸಣ್ಣ ವ್ಯಾಪಾರಕ್ಕೆ ಬೇಕೆಂದು ಸರಕಾರದ ಅವಶ್ಯಕವಾಗಿರುವ ಅನುಮತಿ ಕೇಳ ಹೋಗಿ. ಸಣ್ಣ ಗ್ರಾಮ ಪಂಚಾಯತಿ/ಕಾರ್ಪೊರೇಶನ್ ಮಟ್ಟದಿಂದ ಪ್ರತೀ ಅಧಿಕಾರಿಯೂ ನಿಮ್ಮಕಿಸೆ ನೋಡುತ್ತಾನೆ. ನಾವೇ ಸರಕಾರಕ್ಕೆ ಪರವಾನಿಗೆಗೆ ಬೇಕಾದ ಹಣ ನೀಡುತ್ತೇವೆ, ನಾವೇ ಸರಕಾರಕ್ಕೆ ಬರುವ ಲಾಭದಿಂದ ತೆರಿಗೆ ನೀಡುತ್ತೇವೆ, ಇನ್‌ಕಂ ಟ್ಯಾಕ್ಸ್, ಮಾರಾಟ ತೆರಿಗೆ, ವ್ಯವಾಹಾರ ಪರವಾನಿಗೆ, ಕ್ಷೇಮನಿಧಿ.....ಹೀಗೆ ಅನೇಕ ರೀತಿಯ ಮೊತ್ತವನ್ನು ಸರಕಾರಕ್ಕೆ ನೀಡುತ್ತಲೇ ಇರುತ್ತೇವೆ. ಸಾಮಾನ್ಯ ವ್ಯಕ್ತಿಯೊಬ್ಬನಿಂದ ಸಂಗ್ರಹವಾಗುವ ಈ ಮೊತ್ತವನ್ನು ನಿಡುವವನೇ ನಿಜವಾಗಿಯೂ ಸರಕಾರದ ಆಧಾರಸ್ತಂಭವೇ ಆಗಿರುತ್ತಾನೆ. ಆದರೆ, ಇಂತಾದ್ದೊಂದು ವ್ಯವಾಹಾರವನ್ನು ತೊಡಗಿಕೊಳ್ಳಲು ಆರಂಭಿಸಲು, ನೀವು ಒಮ್ಮೆ ಸಂಬಂಧಿಸಿದ ಇಲಾಖೆಗೆ ಹೋಗಿ ನೋಡಿ. ಅಲ್ಲಿ ಯಾವೊಬ್ಬ ನೌಕರನೂ, ಇದ್ಯಾವುದನ್ನೂ ಸರಕಾರದ ಪರವಾಗಿ ತಾನು ಮಾಡಿಕೊಡಬೇಕಾದ ಕೆಲಸ ಎಂದುಕೊಂಡು ಮಾಡುವುದೇ ಇಲ್ಲ. ನಿನ್ನೆ ತಾನೇ ಒಂದು ವ್ಯಾಪಾರ ಪರವಾನಿಗಿ ನವೀಕರಣದ ಬಗ್ಗೆ ಕಾರ್ಪೊರೇಶನ್ ಕಛೇರಿಗೆ ಹೋಗಿದ್ದೆ. ಆದರೆ ಅಲ್ಲಿನ ಸಿಬಂದಿ, ನಡೆದುಕೊಂಡ ತೀರಿ ವಾಕರಿಕೆ ತರುವಂತಿತ್ತು. ಒಂದು ಉದಾಹರಣೆ ಎಂದರೆ, ಹಿಂದೆ ಕಾರ್ಪೊರೇಶನ್ ನಲ್ಲಿ ವ್ಯವಹಾರ ಪರವಾನಿಗೆಗೆ ಅರ್ಜಿ ಬರೆದುಕೊಟ್ಟಿದ್ದೆ. ಅದರ ಪರಿಶೀಲನೆಗೆ ಬಂದ ಅಧಿಕಾರಿ, ಹೋಗುತ್ತಲೇ ಏನೇನೋ ನೆಪ ಒಡ್ಡಿ, ಕಛೇರಿಯ ಹುಡುಗನಿಂದ ಕೈಬಿಸಿ ಮಾಡಿಕೊಂಡು ಹೋಗಿದ್ದ. ಹೋದಾತ, ತನ್ನ ವರದಿ ಬರೆಯುವಾಗ, ಕಟ್ಟದ ಸಂಖ್ಯೆಯಲ್ಲಿ ಏನೋ ಸಣ್ಣ ತಪ್ಪು ಮಾಡಿಬಿಟ್ಟ. ನಂತರ ಪರವಾನಿಗೆ ಕೊಡುವ ಮಹಿಳೆ, ಈ ತಪ್ಪಿಗಾಗಿ ಪರವಾನಿಗೆ ಕೊಡಲಾಗದು ಎಂದು ಕುಳಿತರೆ, ನಾವು ಆ ತಪ್ಪಾದುದು ಅವರ ಕಡೆಯವರಿಂದಲೇ ಎಂದು ಹೇಳಿದರೂ ಕೇಳಲು ತಯಾರಿರಲಿಲ್ಲ. ಕೊನೆಗೆ ನೇರವಾಗಿ ಆ ಅಧಿಕಾರಿಯನ್ನು ಕಂಡು 'ಕೈಬಿಸಿ'ಮಾಡಿ ಎಂಬ ಪುಕ್ಕಟೆ ಸಲಹೆ ಬೇರೆ!. ಕೊನೆಗೂ ಕೆಲಸ ಮಾಡಿಸಿಕೊಂಡು ಬರಬೇಕಾದರೆ ನಾವು ಪಟ್ಟ ಪಾಡು ಯಾರಿಗೂ ಬೇಡ.

ಇದು ನಿತ್ಯವೂ ನಡೆಯುತ್ತಿರುವ ಘಟನೆಗಳು. ಪ್ರತಿಯೊಬ್ಬನೂ ಈ ರೀತಿಯ ತುಳಿತಕ್ಕೆ ಒಳಗಾಗುತ್ತಲೇ ಇರುತ್ತಾನೆ. ಇದು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಸಡ್ಡುಹೊಡೆದು ನಿಂತಿದೆ. ಜನವರಿ ೨೬ಬಂತೆಂದರೆ ನಾವು ಪ್ರಭುಗಳಾಗುತ್ತೇವೆ. ೨೭ರ ಬೆಳಗ್ಗಿನಿಂದ ಮತ್ತೆ ಕುರಿಗಳಾಗುತ್ತೇವೆ. ಈ ವ್ಯವಸ್ಥೆಗೆ ಸಡ್ಡು ಹೊಡೆದು ನಿಲ್ಲಬಲ್ಲ ಬೆರಳೆಣಿಕೆಯ ನಾಯಕರು, ಪ್ರಜೆಗಳು ವ್ಯವಸ್ಥೆಯ ಗಟ್ಟಿತನದೊಳಗೆ ಸಿಲುಕಿ, ಬಳಲಿ ಬೆಂಡಾಗಿ ಹೋಗುತ್ತಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಇನ್ನು ನಮ್ಮ ಸರಕಾರಗಳು, ನಿಜಾರ್ಥದ ಜನಸೇವೆಯ ಅಧಿಕಾರಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದು. ಅದಕ್ಕೆ ಇತ್ತೀಚೆಗೆ ಬಲಿಯಾದ ಬಂಡೆಯಂತ ನಿಷ್ಠಾವಂತ ಅಧಿಕಾರಿಯ ಉದಾಹರಣೆ ಇದೆ. ಬಂಡೆಯ ಬಲಿದಾನ, ಅದರ ನಂತರ ಸರಕಾರ ನಡೆದುಕೊಂಡ ರೀತಿ, ಚಿಕಿತ್ಸೆಯಿಂದ ಹಿಡಿದು, ಪರಿಹಾರ ಘೋಷಣೆಯ ತನಕ ಅದು 'ಚೌಕಾಸಿ'ಗೆ ಕುಳಿತದ್ದು.....ಪ್ರಜಾಪ್ರಭುತ್ವಕ್ಕೇ ಹೇಸಿಗೆ ತರುವಂತಿದ್ದುವು.

ನಮ್ಮ ದುರಂತವೆಂದರೆ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ದಿನದ ವೇಳೆಯಲ್ಲಿ ನಾವೀ ಬಗ್ಗೆ ಮಾತಾಡುತ್ತೇವೆ. ಮತ್ತೆ ಮರೆತು ಬಿಡುತ್ತೇವೆ. ಅಥವಾ ಯಾವುದೇ ಘಟನೆ ನಡೆದ ನಂತರ ಒಮ್ಮೆ ಕೂಗಾಡಿ ಮತ್ತೆ ಮರೆತು ಬಿಡುತ್ತೇವೆ. ಸಾರ್ವಜನಿಕ ನೆನಪು ತಾತ್ಕಾಲಿಕ ಎಂಬ ಮಾತನ್ನು ಈ ರಾಜಕಾರಣಿಗಳು, ಆಡಳಿತಗಾರರು ಮರೆಯುವುದೇ ಇಲ್ಲ. ಹಾಗಾಗಿ ಬಚಾವಾಗುತ್ತಲೇ ಹೋಗುತ್ತಾರೆ. 

ಇಷ್ಟರಲ್ಲೇ ನಮ್ಮ ರಾಜಕಾರಣದ ನಿರ್ಲಕ್ಷ್ಯದಿಂದ ಘನಘೋರ ಅಪರಾಧವೆಸಗಿ, ಗಲ್ಲು ಶಿಕ್ಷೆಗೆ ಗುರಿಯಾದ ಹಲವರು ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಈ ತೀರ್ಪಿಗೆ ಕಾರಣರಾದ ರಾಷ್ಟ್ರಪತಿಗಳು, ಇಷ್ಟು ವರ್ಷಕಾಲ ಮಾಡಿದ್ದೇನೆಂಬುದನ್ನು ಗಮನಿಸಿದರೆ, ಅವರಿಗೆ ಯಾವ ಶಿಕ್ಷೆ..??

ಹೌದು, ಗಣರಾಜ್ಯ ದಿನದ ಈ ವೇಳೆಯಲ್ಲಿ ಇದೆಲ್ಲವೂ ಮತ್ತೆ ಮತ್ತೆ ಕಾಡುತ್ತಿದೆ. 

No comments:

Post a Comment