Tuesday 7 January 2014

ಮಕ್ಕಳೇ ಆಸ್ತಿಯಾಗಲಿ, ಅವರಿಗೆ ಆಸ್ತಿ ಬೇಡ!

ಈ  ವಾರದ 'ಜನಪ್ರತಿನಿಧಿ'ಯ ಅಂಕಣ, 'ಪ್ರದಕ್ಷಿ ಣೆ 'ಗೆ ನಾನು ಬರೆದ ಲೇ ಖನ..... ಓದಿ ಅಬಿಪ್ರಾಯ ತಿಳಿಸಿ.... 

ಬದುಕಲು ದಾರಿ ತೋರಿಸುವ ಒಂದು ದ್ರಷ್ಟಾಂತವನ್ನು ತಮ್ಮ ಮುಂದಿಡುವ ಮೂಲಕ, ನಮ್ಮನ್ನು ಒಂದು ವಿಶ್ಲೇಷಣೆಗೆ ತೊಡಗಿಸಿಕೊಳ್ಳಬೇಕು ಎನಿಸುತ್ತದೆ.

ಇದು ಬೀಚಿಯವರು ಬಹಳ ಹಿಂದೆಯೇ ಬರೆದಿದ್ದರೂ, ಇಂದಿಗೂ ಮತ್ತು ಮುಂದಿಗೂ ಪ್ರಸ್ತುತ. ನಮ್ಮ ಜೀವನದಲ್ಲಿ, ಈ ಕಥೆ ಓದಿ, ಒಬ್ಬನಾದರೂ ತನ್ನ ನಡೆಯಲ್ಲಿ ಬದಲಾವಣೆ ತಂದುಕೊಂಡರೆ, ಅದು ಸಾರ್ಥಕ.(ಪ್ರಸಂಗವನ್ನು ಅಳವಡಿಸಿಕೊಂಡದ್ದು... ಬೀಚಿಯವರ ಬರಹದ ಮೂಲ ರೂಪವಲ್ಲ)

ಮೂರನೆಯ ತರಗತಿ ಹುಡುಗನೋರ್ವ, ಶಾಲೆಯಲ್ಲಿ ತನ್ನ ಸ್ನೇಹಿತನ ಪೆನ್ಸಿಲ್ ಒಂದನ್ನು ಕದಿಯುತ್ತಾನೆ, ಅದನ್ನು ಶಿಕ್ಷಕಿ ಗಮನಿಸುತ್ತಾರೆ. ಅವರು ಏನೂ ಹೇಳದೇ, ಆ ಮಗುವಿನ ಕೈಯಲ್ಲೇ, ತಾಯಿಗೊಂದು ಚೀಟಿ ಬರೆದು ಕಳುಹಿಸುತ್ತಾರೆ. ಮಗು ಚೀಟಿಯನ್ನು ತಂದು ತಾಯಿಗೆ ಕೊಡುತ್ತದೆ. ಅದರಲ್ಲಿ ಎರಡೇ ಸಾಲುಗಳು:- 'ನಿಮ್ಮ ಮಗ ಇಂದು ಸ್ನೇಹಿತನ ಪೆನ್ಸಿಲ್ ಕದ್ದಿದ್ದಾನೆ. ಅವನಿಗೆ ಬುದ್ದಿ ಹೇಳಿ ಮುಂದೆ ಹೀಗಾಗದಂತೆ ನೋಡಿಕೊಳ್ಳಿ'.

ಚೀಟಿ ಓದಿದ ತಾಯಿಗೆ ಭೂಮಿಯೇ ಬಾಯ್ತೆರೆದು ತನ್ನನ್ನು ನುಂಗಿದ ಅನುಭವ. ಮಗುವಿಗೆ ಏನೂ ಮಾಡದೇ, ಅದನ್ನು ಅಪ್ಪಿ ಹಿಡಿದು, ಗೋಳೋ ಎಂದು ಅಳುತ್ತಾಳೆ. ಕುಳಿತಲ್ಲಿ ಕುಳ್ಳಿರಲಾಗದೇ, ನಿಂತಲ್ಲಿ ನಿಲ್ಲಲಾಗದೇ ಓಡಾಡುತ್ತಾಳೆ. ಕೊನೆಗೆ ಇವನಿಗೆ ಇವನ ಅಪ್ಪ ಕಚೇರಿಯಿಂದ ಬಂದ ನಂತರ ಹೇಳಿ, ಏನೆಂದು ನೋಡಿದರಾಯಿತು ಎಂದು ಕೊಳ್ಳುವಷ್ಟರಲ್ಲಿ ಕಚೇರಿಗೆ ಹೋಗಿದ್ದ ಅಪ್ಪ ಮನೆಗೆ ಬರುತ್ತಾನೆ.

ಹೆಂಡತಿಯ ಅವಸ್ಥೆ ಕಂಡ ಅಪ್ಪ ಕಾರಣ ಕೇಳುತ್ತಾನೆ. ಹೆಂಡತಿ, ಶಿಕ್ಷಕಿ ಕೊಟ್ಟಿದ್ದ ಚೀಟಿಯನ್ನು ಗಂಡನ ಕೈಯಲ್ಲಿಟ್ಟು, ವಿಷಯ ಹೇಳುತ್ತಾಳೆ. ಗಂಡನೋ...ಈಗ ಕೆಂಡಾ ಮಂಡಲವಾಗುತ್ತಾನೆ!. ಸಿಟ್ಟಿನಿಂದ ಕುದಿಯುತ್ತಾನೆ!!. ಮನೆಯಲ್ಲಿದ್ದ ಒಂದು ಬಾರುಕೋಲಿನಿಂದ, ಮಗನಿಗೆ ಸರಿಯಾಗಿ ಬಾರಿಸುತ್ತಾನೆ. ಕೊನೆಗೆ ತಾನೇ ಸುಸ್ತಾಗಿ ಹೇಳುತ್ತಾನೆ, ಮಗನೇ, ಇಂದಿಗೆ ಮುಗಿಯಿತು. ಇನ್ನು ಮುಂದೇನಾದರೂ, ಈ ರೀತಿ ಕದ್ದರೆ, ನಿನ್ನನ್ನು ಹುಟ್ಟಿಲ್ಲ ಅನಿಸಿಬಿಡುತ್ತೇನೆ. ಎನ್ನುತ್ತಾ ಮುಂದುವರಿದು, ಹಾಗೇನಾದರೂ ನಿನಗೆ ಏನಾದರೂ ಬೇಕು ಅನಿಸಿದರೆ, ನನ್ನಲ್ಲಿ ಕೇಳು, ನಾನು ನನ್ನ ಆಫಿಸಿನಿಂದ (ಕದ್ದು)ತಂದುಕೊಡುತ್ತೇನೆ ಎನ್ನುತ್ತಾನೆ!!!!

ಇದು ನಮ್ಮ ಇಂದಿನ ಬದುಕಿನ ಶೈಲಿಯಾಗಿದೆ. ಇದನ್ನೇ ಜೀವನದ ಪ್ರತಿಯೊಂದು ಮಗ್ಗುಲಿಗೂ ಹೊಂದಿಸಿಕೊಳ್ಳುತ್ತಾ ಹೋದರೆ..!! ಇತ್ತೀಚೆಗೆ ರೂಪಾ ಅಯ್ಯರ್ ಅವರು ಅತಿಥಿಯಾಗಿದ್ದ ಭಾಗವಹಿಸಿದ್ದ ಸಭೆಯೊಂದಕ್ಕೆ ಹೋಗಿದ್ದೆ. ಅಲ್ಲಿ ಬಹಳ ವಿಚಾರ ಪ್ರಚೋದಕವಾಗಿ ಮಾತಾಡುತ್ತಾ ಅವರು ಹೇಳಿದರು, ಮಕ್ಕಳಿಗಾಗಿ ಆಸ್ತಿ ಮಾಡಿಸುವ ಪ್ರಯತ್ನ ಮಾಡಬೇಡಿ, ಆದರೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ!!. ಎಂತಹಾ ಅರ್ಥಗರ್ಬಿತ ಮಾತುಗಳು ನೋಡಿ. ಇಂದಿನ ಪ್ರತೀ ತಂದೆ ತಾಯಿಯ ಕನಸು ಒಂದೇ-ಮಕ್ಕಳಿಗೆ ಏನಾದರೂ ಮಾಡಿಡಬೇಕು ಮತ್ತು ಅದು ಲಕ್ಷ ಕೋಟಿ ಲೆಕ್ಕದಲ್ಲಿರುವ ಆಸ್ತಿ ಆಗಿರಬೇಕು. ನಾವ್ಯಾರೂ ಮಕ್ಕಳನ್ನು ಈ ದೇಶದ ಅಥವಾ ಈ ಸಮಾಜದ ಆಸ್ತಿಯಾಗಿಸುವ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಅದೇಕೆ?

ಇಂದು ನಾವೂ ಗಮನಿಸುತ್ತಿದ್ದೇವೆ. ಸಮಾಜದಲ್ಲಿ ಅನೈತಿಕತೆಯ ಮಟ್ಟ ಪರಾಕಾಷ್ಟೆ ಮುಟ್ಟಿದೆ. ಆರು ತಿಂಗಳ ಮಗುವಿನಿಂದ ಹಿಡಿದು ಎಂಭತ್ತು-ತೊಭತ್ತರ ಮುದುಕಿಯರ ಮೇಲೂ ಅತ್ಯಾಚಾರ ಆಗುತ್ತದೆ...ಕೊಲೆಯೂ ಆಗುತ್ತದೆ. ಇದು ಒಂದೆಡೆ ಆತಂಕ ಸೃಷ್ಟಿಸುವ ವಿಷಯ. ಅದೇ ಇನ್ನೊಂದು ಮಗ್ಗುಲನ್ನೂ ನೋಡಿ. ನಿನ್ನೆಯಷ್ಟೇ ಒಂದು ಕಡೆ ಓದಿದೆ. ೧೩ರ ಹರೆಯದ ಹುಡುಗನೋರ್ವ, ತನ್ನ ಸಹಪಾಠಿ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ!!. ಇದು ಏನನ್ನು ಸೂಚಿಸುತ್ತದೆ? ನಮ್ಮ ಮಕ್ಕಳ ಮನ:ಸ್ತಿತಿ ಸಾಗಿದ ದಾರಿಗೆ ಬೇರೆ ನಿದರ್ಶನ ಬೇಕೆ..??
ಇದೇಕೆ ಎಂದು ನಾವು ಪ್ರಶ್ನಿಸ ಹೊರಟರೆ, ಉತ್ತರ ಅಷ್ಟು ಸರಳವಲ್ಲ. ಇದೇ ಮನ:ಸ್ತಿತಿಯ ಮಗು ಬೆಳೆಯುತ್ತದೆ, ದೊಡ್ಡದಾಗುತ್ತದೆ. ಅದು ಮುಂದೆ ಈ ಸಮಾಜಕ್ಕೆ ಏನು ಕೊಡುಗೆ ತಾನೇ ಕೊಡಬಲ್ಲುದು? ಆರಂಭದಲ್ಲಿ ಹೇಳಿದ ಪೆನ್ಸಿಲ್ ಕದ್ದ ಮಗುವೇ ದೊಡ್ಡದಾಗುವಾಗ, ತನ್ನ ತಂದೆಯಂತೇ ಆಫೀಸಿನಿಂದ ಮತ್ತೇನನ್ನೋ ಕದ್ದು ತರಬಲ್ಲುದಲ್ಲದೇ ಬೇರೇನು ಮಾಡೀತು..??
ಅಂದರೆ ಬಾಲ್ಯದಲ್ಲಿ ನಾವು ಮಗುವಿನಗೆ ನೀಡುವ ಸಂಸ್ಕಾರದ ಕೊರತೆಯೇ ಇದಕ್ಕೆ ಕಾರಣವೆಂದು ಷರಾ ಬರೆದು ಬಿಡಬಹುದೇ? ಅದೂ ಸಾಧ್ಯವಿಲ್ಲ. ಮಗುವಿಗೆ ಬಾಲ್ಯದಲ್ಲಿ ತಂದೆ-ತಾಯಿ ಆದರ್ಶರಾಗುತ್ತಾರೆ. ಬೆಳೆದಂತೆ ಸುತ್ತಲಿನ ಪರಿಸರದ ಸ್ನೇಹಿತರು, ಸಂಗಾತಿಗಳು ಆದರ್ಶರಾಗುತ್ತಾರೆ. ಬಾಲ್ಯದಲ್ಲಿಯೇ ತನ್ನ ತಂದೆ ತಾಯಿ ನಡೆದ ದಾರಿಯನ್ನು ಗಮನಿಸುತ್ತಿರುವ ಮಗು, ದೊಡ್ಡದಾಗುತ್ತಲೇ ಪರಿಸರದಲ್ಲೂ ಅದೇ ವಾತಾವರಣವನ್ನು ಗಮನಿಸಿದಾಗ, ಅದೇ ಬದುಕು ಎಂಬಂತೆ ಭಾವಿಸುತ್ತದೆ. ಯಾಕೆಂದರೆ, ಉತ್ತಮ ಸಂಸ್ಕಾರ ಹಾಗೂ ಆದರ್ಶಗಳು ಎಲ್ಲರಲ್ಲೂ ಕಾಣ ಸಿಗುವುದಿಲ್ಲ...ಅದೇ ಹಿತವಲ್ಲದ ಜೀವನ ಶೈಲಿ ಎಲ್ಲೆಂದರಲ್ಲಿ ಸಿಗುತ್ತದೆ. ಹೀಗೆ   ಬಾಲ್ಯದಿಂದಲೂ ಇದನ್ನೇ ಗಮನಿಸಿದ ಮಗು, ಸಹಜವಾಗಿ ಅದನ್ನೇ ಒಪ್ಪಿಕೊಳ್ಳುತ್ತದೆ...ಅದನ್ನೇ ಅನುಕರಿಸುವ ಯತ್ನ ಮಾಡುತ್ತದೆ.

ಒಂದಕ್ಕೊಂದು ಎಷ್ಟು ಪೂರಕ ಎಂಬುದು ಬೇರೆ ಮಾತು. ಇಲ್ಲೊಂದು ಉದಾಹರಣೆ ನೆನಪಾಗುತ್ತದೆ. ಮೊನ್ನೆ ಒಂದು ರಾಜಕೀಯ ಪಕ್ಷದ ಓರ್ವ ನಾಯಕ, ತನ್ನ ನಾಯಕನ ಯಾವುದೋ ತೀರ್ಮಾನವೊಂದನ್ನು ಒಪ್ಪುವುದಿಲ್ಲ. ತಾನು ಭಿನ್ನನಾಗಿಯೇ ಉಳಿಯುತ್ತೇನೆ ಎಂದು ಮನೆಯಲ್ಲಿಯೇ ಕುಳಿತು ಬಿಡುತ್ತಾನೆ. ಆಗ ಉಳಿದೆಲ್ಲಾ ನಾಯಕರ ದಂಡು ಆ ಭಿನ್ನನ ಮನೆಗೆ ಹೋಗುತ್ತದೆ. ಅವನನ್ನು ತಮ್ಮ ಧೋರಣೆ ಒಪ್ಪಿಕೊಳ್ಳುವ ವಿನಂತಿ ಮಾಡುತ್ತದೆ. ಅದಕ್ಕೆ ಆ ಭಿನ್ನ ಹೇಳಿದ ಶರತ್ತು ಒಂದೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಮಗನಿಗೆ ಟಿಕೇಟ್ ನೀಡಬೇಕು!!. ಇದಕ್ಕೆ ಎಲ್ಲರೂ ಒಪ್ಪುತ್ತಾರೆ, ಪರಿಸ್ಥಿತಿ ತಿಳಿಯಾಗುತ್ತದೆ!
ಇಂತಹ ಅನೇಕ ದ್ರಷ್ಟಾಂತಗಳು ಕಣ್ಣೆದುರಿಗಿವೆ. ಪುತ್ರ ವ್ಯಾಮೋಹ ಸಹಜ. ಆದರೆ ಇಲ್ಲಿ, ನಮ್ಮ ಮಕ್ಕಳನ್ನು ಆಸ್ತಿಯಾಗಿಸುವ ಬದಲು, ಅವರಿಗೇ ಆಸ್ತಿ ಮಾಡಿ, ಕಷ್ಟದ ಬದುಕಿನ ಪರಿಚಯವೇ ಇಲ್ಲದಂತೆ ಬೆಳೆಸಿದ ಅನಾಹುತಕಾರಿ ಫಲಿತಾಂಶದ ಭೀಕರತೆ ಗಮನಿಸಬೇಕು. ಬದುಕು ಎಂದರೆ, ಸುಖದ ಸುಪ್ಪತ್ತಿಗೆ ಎಂದೇ ಭಾವಿಸುವ ಮೇಲೆ ಹೇಳಿದ ನಾಯಕ, ಅದೇನು ಜನಸೇವೆ ಮಾಡಿಯಾನು ಮತ್ತು ಅವನಿಗೆ ಜನರ ನಾಡಿಮಿಡಿತ ತಿಳಿದೀತಾದರೂ ಹೇಗೆ.?

ಇದು ಎಲ್ಲಾ ರಂಗಕ್ಕೂ ಅನ್ವಯಿಸುತ್ತದೆ. ಇಂದು ಮಾಧ್ಯಮಗಳು ಬಹಳ ಮುಂದುವರಿದು, ನಮ್ಮ ಮನೆಯ ಹಾಲ್‌ನಲ್ಲಿಯೇ ಇಡೀ ಪ್ರಪಂಚದ ಐಷಾರಾಮಿ, ಆಡಂಬರದ ಬದುಕನ್ನು ತೋರಿಸುತ್ತವೆ. ಟಿವಿ, ಕಂಪ್ಯೂಟರ್‌ಗಳು ಇಂದು ಹಳೆಯ ಮಾತಾಗಿವೆ. ಸ್ಮಾರ್ಟ್ ಫೋನ್, ಟ್ಯಾಬ್‌ಗಳು, ಐಷಾರಾಮಿ ಕಾರುಗಳು ಇಂದಿನ ಮಕ್ಕಳ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿವೆ. ಶಾಲೆಗೆ ಹೋಗುವ ಮಕ್ಕಳ ನಡುವಿನ ಒಂದು ಸಂಭಾಷಣೆಯ ತುಣುಕನ್ನು ಗಮನಿಸಿ:-
ಏಯ್, ನಿನ್ನ ಅಪ್ಪನ ಹತ್ತಿರ ಯಾವ ಕಾರಿದೆ -ಕೇಳುತ್ತದೆ ಒಂದು ಮಗು
ಇಲ್ಲ, ನಮ್ಮನೆಯಲ್ಲಿ ಟೂ ವೀಲರ್ ಇದೆ ಸಪ್ಪೆ ಮೋರೆಯ ಮತ್ತೊಂದು ಮಗು ಹೇಳುತ್ತದೆ.
ಓಹ್, ಹೌದಾ, ಡಬ್ಬ ಸ್ಕೂಟರ್ ಮೊದಲ ಮಗು ಗೇಲಿ  ಮಾಡುತ್ತದೆ.
ಮತ್ತೊಂದು ಮಗು ತಟ್ಟನೆ ಪ್ರಶ್ನಿಸುತ್ತದೆ, ನಿಮ್ಮ ಮನೆಯಲ್ಲಿ ಯಾವ ಕಾರಿದೆ?.
ಅದಕ್ಕೆ ಮೊದಲ ಮಗು ಉತ್ತರಿಸುತ್ತದೆ, ಮಾರುತಿ ರಿಟ್ಜ್.
ಮೂರನೆಯ ಮಗು ಗಹಗಹಿಸಿ ನಕ್ಕು ಹೇಳುತ್ತದೆ, ಅಯ್ಯೋ, ಆ ಡಬ್ಬಾ ಕಾರಾ? ನಮ್ಮನೆಯಲ್ಲಿ ಹೊಂಡಾ ಸಿಟಿ ಇದೆ. ನನ್ನಪ್ಪನೇ ಸೂಪರ್...!!!!.

ಇದು ಇಂದು ನಿಜಕ್ಕೂ ಮಕ್ಕಳ ನಡುವೆ ನಡೆಯುವ ಸಂಭಾಷಣೆ. ಇದೇ ಮಾತುಕತೆ, ಮನೆಯಲ್ಲಿರುವ ಎಲ್ಲಾ ವಸ್ತುಗಳಿಗೂ ಅನ್ವಯಿಸುತ್ತದೆ. ಇಲ್ಲಿ ಮಕ್ಕಳ ಈ ಸಂಭಾಷಣೆಯ ತಪ್ಪಿಗಿಂತಲೂ ಇರುವ ಭೀಕರ ದುರಂತ ಎಂದರೆ, ಎಷ್ಟೋ ತಂದೆ ತಾಯಿತರು, ಇಂತಹ ಸಂಭಾಷಣೆಗಳನ್ನು ಕೇಳಿದಾಗ, ಹೆಮ್ಮೆ ಪಟ್ಟುಕೊಳ್ಳುತ್ತಾರೆಯೇ ಹೊರತು, ತಮ್ಮ ಮಗುವಿನ ಮನ:ಸ್ತಿತಿಯನ್ನು ಬದಲಾಯಿಸುವ ಗೋಜಿಗೇ ಹೋಗುವುದಿಲ್ಲ!!. ಇದುವೇ ಮಕ್ಕಳ ಈ ಮನೋಸ್ತಿತಿ ಮತ್ತೂ ಬೆಳೆಯಲು ಕಾರಣ.

ಪರಿಚಿತ ಸ್ನೇಹಿತರೋರ್ವರು, ಆರ್ಥಿಕವಾಗಿ ಬಹಳ ನಷ್ಟದಲ್ಲಿದ್ದರು. ಅವರ ಬಳಿ ಸಾಧಾರಣ ವಾದ ಒಂದು ಮೊಬೈಲ್ ಇತ್ತು. ಒಮ್ಮೆ ಸಿಕ್ಕಿದವರು,  ಏನಾದರೂ ಆಗಲಿ, ಬೇಗ ಒಂದು ಸ್ಮಾರ್ಟ್ ಫೋನ್ ಖರೀದಿಸಬೇಕು ಎಂಬ ಇಂಗಿತ ವ್ಯಕ್ತ ಪಡಿಸಿದಾಗ, ಈಗಿರುವ ಫೋನ್‌ಗೇನಾಗಿದೆ ಎಂದರೆ, ಇಲ್ಲ, ಮನೆಯಲ್ಲಿ ಶಾಲೆಗೆ ಹೋಗುವ ಮಗನದ್ದು ಒಂದೇ ಕಂಪ್ಲೇಂಟ್, ಈ ಡಬ್ಬಾ ಫೋನ್ ಬಿಸಾಡಿ ಬೇರೆ ತಗೋ, ಸ್ನೇಹಿತರು ತಮಾಷೆ ಮಾಡುತ್ತಾರೆ ಮತ್ತು ನನಗೂ ಗೇಮ್ಸ್, ಇಂಟರ್ ನೆಟ್ ಎಲ್ಲಾ ನೋಡಲು ಬೇಕಾಗುತ್ತದೆ.  ಈಗ ಹೇಳಿ, ಆ ಮಗುವಿಗೆ ನಾವು ಬೇಕಾದ ಸಂಸ್ಕಾರ ಕಲಿಸಬೇಕೆ, ಸಾಲ ಸೋಲ ಮಾಡಿಯಾದರೂ ಅದರ ಐಷಾರಾಮಿ ಕನಸುಗಳಿಗೆ ಭವಿಷ್ಯವನ್ನು ಬಲಿ ಕೊಡಬೇಕೆ?

ಇಂತಹ ಅನೇಕ ಉದಾಹರಣೆಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತದೆ. ಇಂದು ತಿನ್ನುವ ಚಾಕಲೇಟಿನಿಂದ ಹಿಡಿದು, ಓಡಾಡುವ ವಾಹನಗಳಿಂದ ತೊಡಗಿ, ವಾಸಿಸುವ ಮನೆಯ ತನಕ, ಇನ್ನೂ ಶಾಲೆಗೆ ಹೋಗುವ ಮಗು, ತೀರ್ಮಾನಿಸುವ, ತನ್ನ ಬದುಕಿನ ಐಷಾರಾಮಿತನಕ್ಕೆ ಬಲಿಯಾಗುವ ಸನ್ನಿವೇಶ ಬಂದಿದ್ದರೆ, ಅದಕ್ಕೆ ಮಗು ಕಾರಣವಲ್ಲ, ಹೆತ್ತವರು ಎಂಬುದು ಸತ್ಯ.

ಈ ಎಲ್ಲಾ ಉದಾಹರಣೆಗಳನ್ನು ಗಮನಿಸಿದರೆ, ಮಕ್ಕಳಿಗೆ ಆಸ್ತಿ ಮಾಡುವುದಕ್ಕೂ, ಮಕ್ಕಳನ್ನೇ ಆಸ್ತಿಯಾಗಿ ಮಾಡುವುದಕ್ಕೂ ಇರುವ ವ್ಯತ್ಯಾಸ ತಿಳಿಯುತ್ತದೆ. ಬೀದಿ ದೀಪದಲ್ಲಿ ಓದಿ, ಮೈಲುಗಟ್ಟಲೇ ದಾರಿಯನ್ನು ನಡೆದೇ ಹೋಗಿ, ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಂಡು, ಕಷ್ಟಪಟ್ಟು ಓದಿ ಬೆಳೆದ ಮಕ್ಕಳು ಮಹಾನ್ ನಾಯಕರಾದ ಕಥೆಯೂ ನಮ್ಮ ಮುಂದಿದೆ. ನಾವು ಮತ್ತೆ ಅಷ್ಟು ಹಿಂದೆ ಹೋಗಬೇಕೇ ಎಂಬುದು ಇಲ್ಲಿ ಪ್ರಶ್ನೆಯಲ್ಲ. ನಮ್ಮ ಸುತ್ತಲಿನ ಪ್ರಪಂಚದ ಜೊತೆಗೇ ಮುಂದುವರಿಯುತ್ತಾ, ಬದುಕಿನಲ್ಲಿ 'ಸಂಸ್ಕಾರ'ದ ಪರಿಚಯವನ್ನು ಮಗುವಿಗೆ ಮಾಡಿ ಕೊಡುತ್ತಾ ಅದನ್ನು ಬೆಳೆಸಿದರೆ, ಹೌದು, ಮಕ್ಕಳೇ ಆಸ್ತಿಯಾಗುತ್ತಾರೆ.

ಮಕ್ಕಳನ್ನು ಆಸ್ತಿಯಾಗಿಸೋಣ...








No comments:

Post a Comment