Saturday 22 February 2014

ಆಮ್ ಆದ್ಮಿ ಮತ್ತು ರಾಜಕಾರಣ......

ಜನಪ್ರತಿನಿಧಿಯ ಪ್ರದಕ್ಷಿಣೆಯ  ಈ ವಾರದ ಬರಹ.... 


ದೆಹಲಿಯಲ್ಲಿ ಆಮ್ ಆದ್ಮಿ ಸರಕಾರ ರಚಿಸಿದಾಗ ಇದೇ ಅಂಕಣದಲ್ಲಿ ಬರೆಯುತ್ತಾ, ಅರವಿಂದ ಕೇಜ್ರಿವಾಲ್ ಪಕ್ಕಾ ರಾಜಕಾರಣಿಯಾಗದಿದ್ದರೆ ಸಾಕು ಎಂದು ಹೇಳಿದ್ದೆ. ಆದರೆ ರಾಜಕಾರಣಿಯಾಗದಿದ್ದರೆ ಇಂದಿನ ರಾಜಕೀಯದಲ್ಲಿ ಆಡಳಿತ ನಡೆಸಲಂತೂ ಆಗದು ಎಂಬುದು ಸಾಬೀತಾಗಿದೆ. ಕೇಜ್ರಿವಾಲ್ ರಾಜೀನಾಮೆ ನೀಡಿದ್ದಾರೆ.

ಬಹುಶ: ಜನ ಸಾಮಾನ್ಯನೊಂದಿಗೆ ತಮ್ಮದು ಅಲ್ಪಾಯುಷಿ ಸರಕಾರ ಎಂಬುದು ಕೇಜ್ರಿವಾಲ್‌ರಿಗೂ ತಿಳಿದಿತ್ತು. ಆಮ್ ಆದ್ಮಿ ಏನೋ ಅವರ ಮಾತುಕೇಳಿ, ಭರವಸೆಗಳಿಗೆ ತನ್ನ ಒಪ್ಪಿಗೆ ಮುದ್ರೆ ನೀಡಿ, ಕೇಜ್ರಿವಾಲ್‌ಗೆ ಅಧಿಕಾರ ನೀಡಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಮತ್ತು ಹಿಂದಿನ ಅಧಿಕಾರಶಾಹಿಗಳು  ಮಾಡಿದ ಪ್ರಮಾದದಿಂದ, ಕೇಜ್ರಿವಾಲ್ ಭರವಸೆಗಳನ್ನು ಈಡೇರಿಸುವುದು ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದಿತ್ತು. ಮುಂದಿರುವ ಬೇಸಿಗೆಯಲ್ಲಿ ನೀರಿನ ಬವಣೆ, ವಿದ್ಯುತ್ ಅಭಾವದ ಭಿಕರತೆಯನ್ನು ಸಂಪೂರ್ಣ ಅರಿತುಕೊಂಡಿದ್ದ ಕೇಜ್ರಿವಾಲ್‌ಗೆ ತನ್ನ ಮಾತೇ ತನಗೆ ತಿರುಗುಬಾಣವಾಗುವ ಬಗ್ಗೆ ತಿಳಿದಿತ್ತು ಎನ್ನಲಾಗುತ್ತಿದೆ. ಪರಿಣಾಮವಾಗಿ ರಾಜೀನಾಮೆ ನೀಡಲು, ಲೋಕಪಾಲ್ ವಿವಾದವನ್ನು ಎತ್ತಿಕೊಂಡು, ಆಡಳಿತದಿಂದ ಎದ್ದು ಹೊರ ಬಂದಿದ್ದಾರೆ.
ಬಹುಶ: ಆಮ್ ಆದ್ಮಿಯ ಹುಟ್ಟಿನಿಂದಲೇ ಈ ರೀತಿಯ ಜಿಜ್ಞಾಸೆ  ನಡೆಯುತ್ತಿತ್ತು. ಅದೆಷ್ಟೋ ರಾಜಕೀಯ ವಿಶ್ಲೇಷಕರಿಂದ ಹಿಡಿದು, ರಾಜಕಾರಣಿಗಳಿಂದ ತೊಡಗಿ, ಜನ ಸಾಮಾನ್ಯನ ತನಕವೂ, ರಾಜಕಾರಣ ನಡೆಲಸು ರಾಜಕಾರಣಿಗಳು ಮಾತ್ರವೇ ಲಾಯಕ್ಕು ಎಂಬ ಮಾತುಗಳು ಆಮ್ ಆದ್ಮಿಯ ವಿಷಯದಲ್ಲಿ ಕೇಳಿ ಬಂದಿದ್ದುವು. ಇದನ್ನು ಬಹುಶ: ಪರೋಕ್ಷವಾಗಿ ಅಣ್ಣಾ ಹಜಾರೆಯವರೂ ಒಪ್ಪಿಕೊಂಡಿದ್ದರೆಂದು ಕಾಣುತ್ತದೆ. ಇದೇ ವಿಚಾರವಾದ ಭಿನ್ನಮತದಿಂದ ಅಣ್ಣಾ ಅಂಗಣದಿಂದ ಕೇಜ್ರಿವಾಲ್ ಎದ್ದು ಹೋಗಿದ್ದು ಎಲ್ಲರಿಗೂ ತಿಳಿದಿದೆ. ಇದು ಒಂದು ರೀತಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ-ಬೋಸ್ ಸಂಬಂಧದಂತೆ ಭಾಸವಾಗುತ್ತದೆ. ಅಲ್ಲಿಗೂ ಇಲ್ಲಿಗೂ ಇರುವ ವ್ಯತ್ಯಾಸವೆಂದರೆ, ಅಂದು ಅದು ಹೋರಾಟದ ಒಂದೇ ಮಜಲಾಗಿದ್ದರೆ, ಇಂದು ಅದು ಹೋರಾಟ ಮತ್ತು ಅಧಿಕಾರದ ಎರಡು ಮಜಲುಗಳು ಅಷ್ಟೆ.

ಏನೇ ಇರಲಿ, ಇಂದು ಅಧಿಕಾರ ತ್ಯಜಿಸಿದ ಆಮ್ ಆದ್ಮಿ ಲೋಕ ಸಭಾ ಚುನಾವಣೆಯ ಮಾತಾಡುತ್ತಿದೆ. ಅಲ್ಲಿಗೂ ಅದು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದೆ. ಆದರೆ ನಿಜಾರ್ಥದ ಆಮ್ ಆದ್ಮಿ ಇಂದು ಈ ನಾಯಕರ ಮೇಲೆ ಎಷ್ಟು ವಿಶ್ವಾಸ ಇರಿಸ ಬಲ್ಲ ಎಂಬುದು ಇಂದಿನ ಪ್ರಶ್ನೆ. 

ಇನ್ನು  ಲೋಕ ಸಭಾ ಚುನಾವಣೆಯ ಮಾತು. ಮೋದಿ-ರಾಹುಲ್ ನಡುವಿನ ಹಣಾ ಹಣಿ ಎಂದುಕೊಂಡು ಆರಂಭವಾದ ಮಾತು. ಒಮ್ಮೆ ಆಮ್ ಆದ್ಮಿಯತ್ತ ಹೊರಳಿ, ಮತ್ತೆ ಇದು ಮೋದಿ-ಹಣಾಹಣಿಯತ್ತ ಹೊರಳಿದೆಯೇ? ಇಂದಿನ ಆಮ್ ಆದ್ಮಿಯ ನಡೆಯ  ನಂತರ, ಆಮ್ ಆದ್ಮಿಯ ಜಾಗವೇನಿದ್ದರೂ ಹೋರಾಟದ ವೇದಿಕೆಯೇ ಹೊರತು ಅಧಿಕಾರ ಸೂತ್ರ ಅಲ್ಲ ಎಂಬುದನ್ನು ಜನತೆ ಗಮನಿಸಿದ್ದಾರೆ. ಈ ಲೇಖನದ ತಯಾರಿಯ ಹಿನ್ನೆಲೆಯಲ್ಲಿ, ಆಮ್ ಆದ್ಮಿಯ ಬಗ್ಗೆ ವಿಪರೀತ ವಿಶ್ವಾಸ ಇರಿಸಿಕೊಂಡಿದ್ದ ಹಲವರನ್ನು ದೂರವಾಣಿಯ ಮೂಲಕ ವಿಚಾರಿಸಿದೆ...ಇಂದು ಆಮ್ ಆದ್ಮಿಯ ಬಗ್ಗೆ, ಲೋಕ ಸಭಾ ಚುನಾವಣೆಯ ಬಗ್ಗೆ ಏನು ಹೇಳುತ್ತೀರಿ ಎಂಬುದಾಗಿ. ಸ್ಪಷ್ಟ ಉತ್ತರ ನೀಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಮೇಲಾಗಿ ಲೋಕ ಸಭೆಯ ವಿಚಾರದಲ್ಲಿ ಯಾವ ಆಮ್ ಆದ್ಮಿಯ ಸದಸ್ಯನಿಗೂ ಗಟ್ಟಿ ಸ್ವರ ಇರಲಿಲ್ಲ.

ಇನ್ನು ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದಾಗ ವಿಶ್ಲೇಷಿಸಲ್ಪಟ್ಟ ಬಹು ಮುಖ್ಯ ವಿಚಾರಗಳಲ್ಲಿ ಆಮ್ ಆದ್ಮಿ ಈ ರೀತಿ ಜನ ಮಾನಸವನ್ನು ತನ್ನತ್ತ ಹೇಗೆ ಸೆಳೆಯಿತು ಎಂಬುದು. ಮುಖ್ಯವಾಗಿ ಅಲ್ಲಿ ಆಗಿದ್ದು ಎಂದರೆ ಶೀಲಾ ದೀಕ್ಷಿತ್ ಆಳ್ವಿಕೆ ಜನತೆಗೆ ಸಾಕಾಗಿತ್ತು. ಪರ್ಯಾಯವಾಗಿ ಜನತೆ ಭಾಜಪದತ್ತ ಮುಖ ಮಾಡಿ ಕುಳಿತಿದ್ದರು. ಬ್ರಷ್ಟಾಚಾರ ವಿರೋಧಿ ಆಂದೋಳನದ ಮೂಲಕ, ಅಂದು ಜನ ಮನ ಗೆದ್ದಿದ್ದ ಅಣ್ಣಾ ನೇತ್ರತ್ವದಲ್ಲಿ ಪಳಗಿದ ನಾಯಕ ಕೇಜ್ರಿವಾಲ್ ಎಂದು ಜನ ಭಾವಿಸಿಕೊಂಡು, ಈ ಯುವಕ ಏನಾದರೂ ಸಾಧಿಸಬಹುದು ಎಂದು ತುಸು ಭಾಜಪದಿಂದ ವಿಮುಖರಾದರು. ಮತ್ತು ಕೇಜ್ರಿವಾಲ್ ಭರವಸೆಗಳೂ ಹಾಗೇ ಇದ್ದುವು. ಅವುಗಳು ಆಮ್ ಆದ್ಮಿಗೆ ತೀರಾ ಆಪ್ಯಾಯ ವೆನ್ನಿಸುವಂತಿದ್ದುವು ಮತ್ತು ಇಂದಿನ ಜೀವನ ಶೈಲಿಯಲ್ಲಿ, ಎಲ್ಲರನ್ನೂ ಹೈರಾಣಾಗಿಸಿದ ಅಂಶಗಳಲ್ಲಿಯೇ ಸುಧಾರಣೆ ತರುವ ಮಾತುಗಳನ್ನು ಜನ ನಂಬಿದರು. ಇಲ್ಲಿ ಆ ನಂಬುಗೆ ಹೇಗೆ ಬಂದಿತು ಎಂದರೆ, ಅಣ್ಣಾ ಹಜಾರೆಯಂತಹ ಹೋರಾಟಗಾರನನ್ನು ಜನ ಆಧುನಿಕ ಗಾಂಧಯಂತೆ ಕಂಡು ಆದರಿಸಿದ್ದರು. ಅವರ ಗರಡಿಯ ಕೇಜ್ರಿವಾಲ್, ಅವರದ್ದೇ ಉದ್ದೇಶದ ಮತ್ತೊಂದು ಮಗ್ಗುಲು ಎಂಬುದನ್ನು ಜನ ಭಾವಿಸಿದರು. ಅಂತೆಯೇ ಜನರ ಒಲವು ಸಹಜವಾಗಿಯೇ,  ಆಮ್ ಆದ್ಮಿಯತ್ತ ತಿರುಗಿತು. ಫಲಿತಾಂಶ ಎದುರಿಗಿದೆ. ಇದೆಲ್ಲಕ್ಕೂ ಪೂರಕ ಎಂಬಂತೆ, ಆಮ್ ಆದ್ಮಿಯ  ಹೋರಾಟದ ಪ್ರಮುಖ ಕಾರ್ಯ ಕ್ಷೇತ್ರವಾಗಿದ್ದು ದೆಹಲಿ. ಆ ಹಿನ್ನೆಲೆಯಲ್ಲ  ದೆಹಲಿಯಲ್ಲೇ ನಡೆದ ಚುನಾವಣೆಯಲ್ಲಿ ಪರಿಸ್ಥಿತಿ ಆಮ್ ಆದ್ಮಿಗೆ ಅನುಕೂಲವಾಗಿ ಬಂದಿದ್ದೇ ಹೊರತು, ಅದನ್ನೇ ದೇಶದ ಬದಲಾವಣೆಯ ದಿಕ್ಸೂಚಿ ಎಂದು ಪರಿಗಣಿಸಲಾಗದು.

ಇನ್ನು ಮಹಾ ಮೇಧಾವಿಗಳು ಪಕ್ಷಕ್ಕೆ ಬಂದರು ಎಂಬುದನ್ನು ಪಕ್ಷ ಬಿಂಬಿಸುತ್ತಲೇ ಇರುತ್ತದೆ. ಆದರೆ ಇದೂ ಎಷ್ಟರ ಮಟ್ಟಿಗೆ ರಾಜಕಾರಣದಲ್ಲಿ ಸಹಾಯವಾಗುತ್ತದೆ ಎಂಬುದಕ್ಕೆ ಇತಿಹಾಸದ ಘಟನೆಗಳು ಉತ್ತರಿಸುತ್ತವೆ. ಕ್ಯಾಪ್ಟನ್ ಗೋಪೀನಾಥ್ ಏನು ಎಂಬುದು ಎಲ್ಲರಿಗೂ ಗೊತ್ತು, ಅವರ ಜನ ಪ್ರಿಯತೆ ಬಗ್ಗೆ ಎಲ್ಲೂ ಎರಡು ಮಾತಿರಲಿಲ್ಲ. ಹೋಗಲಿ, ಡಾ.ಶಿವರಾಮ ಕಾರಂತರ ಜನ ಪ್ರಿಯತೆ ಕಡಿಮೆ ಇತ್ತೇ? ಆಗಷ್ಟೇ ಕಣ್ತೆರೆದಿದ್ದ ವಿಜಯ ಸಂಕೇಶ್ವರರ ಪಕ್ಷದಿಂದ ದ್ವಾರಕೀಶ್ ಸೇರಿದಂತೆ ಅನೇಕ ಬುದ್ದಿ ಜೀವಿಗಳು ಸ್ಪರ್ಧಿಸಿದ್ದರು. ಈ ಎಲ್ಲರೂ ಒಂದು ತತ್ವದಡಿ ಸ್ಪರ್ಧಿಸಿದ್ದರೂ ಅವರೆಲ್ಲರೂ ಸೋತಿದ್ದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ಇಲ್ಲೆಲ್ಲೆಡೆಯಲ್ಲಿಯೂ ರಾಜಕಾರಣಿ ಗೆದ್ದಿದ್ದಾನೆ. ಕೇವಲ ತತ್ವ ಸಿದ್ದಾಂತಗಳೋ, ಆದರ್ಶಗಳೋ ಗೆದ್ದಿಲ್ಲ. ಹೀಗೆ ರಾಜಕಾರಣದಲ್ಲಿ ತನ್ನದೇ ಆದ ಚಾಕ ಚಕ್ಯ ನಡೆ ಇರಬೇಕು.ಆಗಷ್ಟೇ ಆ ಗೆಲುವು, ಆಡಳಿತಾತ್ಮಕವಾಗಿ ಉಪಯೋಗಕ್ಕೆ ಬರುತ್ತದೆ. ಇಲ್ಲವಾದರೆ, ಇಂದು ಆಮ್ ಆದ್ಮಿಯ ಗೆಲುವಿನ ಹಾಗೆ, ಗೆಲುವೂ ಅಲ್ಪಾಯುಷಿಯಾಗುತ್ತದೆ!!.

ಇಂದಿನ ಈ ಎಲ್ಲಾ ಬೆಳವಣಿಗೆಗಳನ್ನು ಬಾಜಪದ ಮಟ್ಟಿಗೆ ದಾರಿ ಸರಳವಾಯಿತು ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗಾದರೆ ಕಾಂಗ್ರೆಸ್ ಮಟ್ಟಿಗೆ? ಉತ್ತರ  ಅಸ್ಪಷ್ಟ. ಯಾಕೆಂದರೆ, ಆಮ್ ಆದ್ಮಿಗೆ ದೆಹಲಿಯಲ್ಲಿ ಸಿಕ್ಕ ಬೆಂಬಲದ ಆಧಾರದಲ್ಲಿ ವಿಶ್ಲೇಷಿಸಿದರೆ, ಅದು ಅಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಎಂಬುದು ಸ್ಪಷ್ಟ. ಅದರರ್ಥ ಜನತೆ ಕಾಂಗ್ರೆಸ್ ಬದಲು, ಭಾಜಪ ಅಥವಾ ಆಮ್ ಆದ್ಮಿಯನ್ನು ಬೆಂಬಲಿಸಿದರು ಎಂಬುದು ಮೇಲ್ನೋಟಕ್ಕೆ ತಿಳಿದು ಬರುವ ಅಂಶ. ಅದನ್ನೇ ಇಡೀ ದೇಶದ ಚುನಾವಣೆಯ ಒಂದು ಮುಖ ಎಂದು ಕೊಳ್ಳಲಾಗದು ಎಂದಾದರೂ, ದೆಹಲಿಯಲ್ಲಿ ಕಾಂಗ್ರೆಸ್ ನೇತ್ರತ್ವದ ಯುಪಿಎ ಮಾಡಿದ ಹಗರಣಗಳು, ರಾಹುಲ್ ಗಾಂಧಿಯ ತೀರಾ ಬಾಲಿಷ ಹೇಳಿಕೆಗಳು, ಅದೇ ಹಳೆಯ ಹೈಕಮಾಂಡ್ ರಾಜಕೀಯಕ್ಕೆ ಒಗ್ಗಿ ಹೋಗಿರುವ ಹಿರಿಯ ನಾಯಕರು.....ನಿಜ, ಜನತೆ ಬೇಸತ್ತಿದ್ದಾರೆ. ಹಾಗೆಂದು ಅವರು ಬದಲಾವಣೆ ಬಯಸಿದ್ದಾರೆ-ಎರಡು ಮಾತಿಲ್ಲ. 

ನಂತರದ ಆಯ್ಕೆ ಯಾವುದು? ಒಂದೋ ಭಾಜಪ, ಅಥವಾ ಬದಲಾವಣೆಯ 'ಭ್ರಮೆ' ಹೆಚ್ಚಿಸಿದ ಆಮ್ ಆದ್ಮಿ. ಅದಿಲ್ಲವಾದರೆ ತೃತೀಯ ರಂಗ??. ತೃತೀಯ ರಂಗದ್ದೇ ಮತ್ತೊಂದು ದುರಂತ ನಾಯಕತ್ವ. ಇದರ ಪ್ರತೀ ಹುಟ್ಟು ಚುನಾವಣೆಯ ಸಮೀಪ ಮತ್ತು ಸಾವು ಚುನಾವಣೆಯ ನಂತರ. ಹಾಗಾಗಿ ಇದರ ಮೇಲೆ ಯಾರಿಗೂ ಆ ಪರಿಯ ವಿಶ್ವಾಸ ಖಂಡಿತಕ್ಕೂ ಇಲ್ಲ. ಆದರೆ ಸ್ಥಳೀಯ ನಾಯಕರ ಯತ್ನದಿಂದ ತೃತೀಯ ರಂಗ, ಒಳ್ಳೆಯದು ಮಾಡಲಾಗದಿದ್ದರೂ, ಕೆಟ್ಟದು ಮಾಡುವಷ್ಟು ಶಕ್ತವಾಗುವ ಸಾಧ್ಯತೆಯನ್ನು ತೆಗೆದು ಹಾಕುವಂತಿಲ್ಲ. ಇದು ಜನ ಸಾಮಾನ್ಯನಿಗೂ ಗೊತ್ತಿರುವ ಕಾರಣದಿಂದಲೇ, ತೃತೀಯ ರಂಗದ ಮೇಲೆ ಅಷ್ಟೇನೂ ಭರವೆಗಳು ಉಳಿದಿಲ್ಲ.

ಈ ಎಲ್ಲಾ ಸಾಧ್ಯತೆಗಳನ್ನು ಕೂಲಂಕುಷವಾಗಿ ವಿಶ್ಲೇಷಿಸಿದರೆ, ಮೋದಿಯ ನಡೆಗೆ ಇದ್ದ ಅಡೆ ತಡೆಗಳು ನಿವಾರಣೆಯಾದುವು ಎನ್ನ ಬಹುದು. ಆದರೆ ಜನ ಮಾತ್ರ ಯಾವತ್ತೂ ನಿರೀಕ್ಷೆಗಳನ್ನು ಬುಡಮೇಲು ಮಾಡಿದ ಅನೇಕ ಉದಾಹರಣೆಗಳು, ಈ ಚುನಾವಣೆಗಳ ವಿಷಯದಲ್ಲಿ ಆಗಿ ಹೋಗಿವೆ. ಇಲ್ಲೂ ಅದನ್ನೇ ನಾವು ಅನಿರೀಕ್ಷಿತ ಎನ್ನುವಂತಿಲ್ಲ!. ಒಟ್ಟಾರೆಯಾಗಿ ಲೋಕ ಸಭಾ ಚುನಾವಣೆಯ ಕಾವು ಏರುತ್ತಿರುವ ಈ ಹೊತ್ತಿನಲ್ಲಿ, ಕಾವನ್ನು ಇಳಿಸಿಕೊಂಡು ಆಮ್ ಆದ್ಮಿ ಒದ್ದಾಡುತ್ತಿದೆ ಎಂದೇ ವಿಶ್ಲೇಷಿಸಬಹುದು. ಇದನ್ನು ಸ್ಥಳೀಯ ಆಮ್ ಆದ್ಮಿಗಳೂ ಒಪ್ಪುತ್ತಿದ್ದಾರೆ.

ಈ ಎಲ್ಲದರ ಜಪತೆಗೆ ಸ್ಥಳೀಯವಾಗಿ ಒಮ್ಮೆ ಗಮನಿಸಿದರೆ....ಮೊನ್ನೆ ಜನವರಿ ೨೬ರಂದು ಬೆಳಿಗ್ಗೆ ನಾವು ಲಯನ್ಸ್ ಕ್ಲಬ್‌ನ ಸದಸ್ಯರು, ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಗಣ ರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣಕ್ಕೆ ಅಣಿಯಾಗುತ್ತಿದ್ದೆವು. ಆಗ ಅಲ್ಲಿಯೇ ಸಮೀಪದ ಸರ್ಕಿಟ್ ಹೌಸ್ ನಲ್ಲಿ ತಂಗಿದ್ದ ಯಡ್ಯೂರಪ್ಪನವರು ವಾಕಿಂಗ್  ಹೊರಟಿದ್ದರು. ಅದನ್ನು ಗಮನಿಸಿದ ನಮ್ಮಲ್ಲಿ ಕೆಲವರು, ಅವರನ್ನು ರಾಷ್ಟ್ರ ದ್ವಜಾರೋಹಣಕ್ಕೆ ವಿನಂತಿಸಿಕೊಂಡಾಗ ಮರು ಮಾತಿಲ್ಲದೇ ಬಂದು ಧ್ವಜಾರೋಹಣ ಮಾಡಿದರು. ನಂತರ ಮಾತಾಡುತ್ತಾ, ಜನತೆಯನ್ನುದ್ದೇಶಿಸಿ, ಇಂದು ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಅನುಭವಿಸಿದ್ದ ಅನಿಶ್ಚಿತತೆಗೆ ಮತ್ತೆ ಮರಳಿದೆ. ಜಾಗೃತ ಮತದಾರ, ಆಲೋಚಿಸಿ, ಯೋಗ್ಯ ಅಭ್ಯರ್ಥಿಗೆ ಮತ ನೀಡಿ, ದೇಶವನ್ನುಳಿಸಬೇಕೆಂದು ಹೇಳಿದರು. ಸಹಜವಾಗಿಯೇ ಚಪ್ಪಾಳೆ ಬಿತ್ತು

ಅಲ್ಲಿಂದ ಹೊರ ಬಂದವರನ್ನು ಓರ್ವ ಪತ್ರಕರ್ತ ಕೇಳಿದರು, ತಾವು ಈ ಸಲ ಲೋಕ ಸಭೆಗೆ ಸ್ಪಧಿಸುತ್ತೀರಾ ಎಂದು. ಅಂದು ಇದೇ ಭಾಷಣದ ಭರಾಟೆಯಲ್ಲಿ ಯಡ್ಯೂರಪ್ಪ, ಖಂಡಿತಕ್ಕೂ ಇಲ್ಲ, ನಾನಾಗಲೀ ನನಗನ ಮಗನಾಗಲೀ ಸ್ಪರ್ಧಿಸುವುದೇ ಇಲ್ಲ. ಅಂತಹ ಯಾವುದೇ ಇರಾದೆ, ಮಾತುಕತೆ, ಶರತ್ತು ನನ್ನ ಭಾಜಪದ ಮರು ಪ್ರವೇಶದಲ್ಲಿರಲಿಲ್ಲ ಎಂದರು, ಸುತ್ತಲೂ ವಾಕಿಂಗ್‌ಗೆಂದು ಬಂದ ಜನತೆ ಮತ್ತೆ ಕರತಾಡನ ಮಾಡಿದರು.

ಇಂದು ಬೆಳವಣಿಗೆ ತಮಗೆ ಗೊತ್ತಾಗಿದೆ. ಯಡ್ಯೂರಪ್ಪ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನು ರಾಜಕಾರಣ ಎನ್ನುತ್ತಾರೆ. ಅವರ ಮೇಲಿನ ಎರಡೂ ಮಾತುಗಳನ್ನು ನಾವೂ ಕೇಳಿದ್ದೇವೆ.....ನಾವು ಒಪ್ಪಿಕೊಂಡಿದ್ದೇವೆ(!?). ಎಲ್ಲರಿಗೂ ಒಳಿತಾಗಲಿ.

No comments:

Post a Comment