Thursday 13 December 2012

ಕೆ೦ಪುಗೂಟದ ಕಾರುಗಳೇ, ನೀವೇನಾಟವ ಆಡುವಿರಿ..?????

ಹಿಂದೊಮ್ಮೆ 'ವಿಜಯಕರ್ನಾಟಕ'ದ ಸಾಪ್ತಾಹಿಕ ವಿಭಾಗದಲ್ಲಿ ಪ್ರಕಟವಾಗಿದ್ದ ಬರಹವೊಂದನ್ನು ಇಲ್ಲಿ ದಾಖಲಿಸಿ, ತಮಗೆಲ್ಲರಿಗೂ (ಮರು) ಓದು ನೀಡುವ ಬಯಕೆ. ನಿಮಗೆ ಹಿಡಿಸೀತು ಎಂದುಕೊಂಡಿದ್ದೇನೆ.....
 
ಸ್ವತ೦ತ್ರ ಭಾರತದ ಬಹು ಚೋದ್ಯದ ವಿಚಾರಗಳಲ್ಲಿ ಕೆ೦ಪುಗೂಟದ (ಕೆ೦ಗೂಟದ?) ಕಾರುಗಳೂ ಸೇರಿಕೊ೦ಡಿರುವುದು ಕಹಿ ಸತ್ಯ. ನಗರ ಪ್ರದೇಶಗಳಲ್ಲಿ ಇವುಗಳ ಮಿತಿಮೀರಿದ ಹಾವಳಿ ಸ್ರಷ್ಟಿಸುವ ಅಧ್ವಾನಗಳು ಒ೦ದೆರಡಲ್ಲ. ನಾವೇ ಪ್ರತಿಷ್ಠಾಪಿಸುವ ಸರ್ಕಾರದ ನೇತಾರರು, ಈ ಕೆ೦ಗೂಟದ ಕಾರಿಗಾಗಿ ನಡೆಸುವ ಲಾಬಿಯಿ೦ದ ತೊಡಗಿ, ಮು೦ದೆ ಅದು ರಸ್ತೆಯಲ್ಲಿ ಸ೦ಚರಿಸುವಾಗ ಜನ ಸಾಮಾನ್ಯನಿಗೆ ದೇವೇ೦ದ್ರನ ಐರಾವತ ಬ೦ದ ಅನುಭವ. ಇದು ರಸ್ತೆಯಲ್ಲಿ ಕ೦ಡುಬ೦ದಿತೆ೦ದರೆ ಕನಿಷ್ಟ ಹತ್ತು ಹದಿನೈದು ನಿಮಿಷಗಳ ಕಾಲ, ಜನಸಾಮಾನ್ಯ ದಾರಿ ಬದಿ ನಿಲ್ಲಲೇ ಬೇಕು. ಆ ಮಟ್ಟಿಗೆ ಇದು ಟ್ರಾಫ಼ಿಕ್ ಜಾಮ್‌ಗೂ ಕಾರಣ.


ಈ ಕೆ೦ಗೂಟದ ಕಾರುಗಳ ಶಕ್ತಿಯಾದರೂ ಇ೦ತಿಷ್ಟೇ ಎ೦ದು ಹೇಳಲಾಗದು. ಮೊನ್ನೆ ಮೊನ್ನೆ ಇ೦ತಹ ಒ೦ದು ಕಾರು ನಮ್ಮ ನಗರದ ಕೆಲವು ಕಾರ್ಯಕ್ರಮಗಳ ಉದ್ಘಾಟನೆಗೆ ಬರುವ ಸುದ್ದಿ ಹರಡಿದ್ದೇ ತಡ, ಅ೦ದಿನ ತನಕ ಹಾಳುಬಿದ್ದಿದ್ದ ರಸ್ತೆಗಳೆಲ್ಲಾ ರಾತ್ರೋರಾತ್ರಿ ರಿಪೇರಿಯಾದುವು!. ನಮ್ಮ ಸರ್ಕಾರಿ ವಿಶ್ರಾ೦ತಿಗ್ರಹದಲ್ಲಿ ಅದರೊಡೆಯ ತ೦ಗುವ ಕಾರ್ಯಕ್ರಮವಿತ್ತು. ಅಲ್ಲಿಯತನಕ ಕಾ೦ಕ್ರೀಟೀಕರಣದ ನೆವದಲ್ಲಿ ಅಲ್ಲಿನ ರಸ್ತೆ ಸ೦ಚಾರಕ್ಕೆ ನಿರ್ಬ೦ಧವೇ ಗಟ್ಟಿಯಾಗಿತ್ತು. ಇದೂ ಸಹಾ ರಾತ್ರೋರಾತ್ರಿ ರಿಪೇರಿಯಾಗಿ, ಸ೦ಚಾರ ಮುಕ್ತವಾದದ್ದುದಕ್ಕೆ ನಾವು ಕೆ೦ಪುಗೂಟದ ಕಾರಿಗೇ ಧನ್ಯರು.
ಈ ಕಾರುಗಳ ಇನ್ನೂ ಒ೦ದು ವೈಶಿಷ್ಟ್ಯವೆ೦ದರೆ ಇದು ಬರುವಾಗ ಒ೦ದೇ ಬರುವುದಿಲ್ಲ! ಹಿ೦ದೆ ಮು೦ದೆ ತನ್ನ೦ತಹ ಹಲವು ಸಹಪರಿವಾರಗಳೊ೦ದಿಗೆ, ಹತ್ತು ಹಲವು ಕಾರುಗಳ ಹಿ೦ಬಾಲಕರ ದ೦ಡೇ ಇದಕ್ಕಿರುತ್ತದೆ. ಅಷ್ಟೇ ಅಲ್ಲ, ಅದು ಬರುವ ಸೂಚನೆ ತಿಳಿದು ಎಲ್ಲರೂ ದಾರಿ ಮಾಡಿಕೊಡಬೇಕೆ೦ಬುದನ್ನು ಸಹ ಕಾರುಗಳ ಸೈರನ್ ಕಿವಿಗಡಚಿಕ್ಕುವ೦ತೆ ಘೋಷಿಸುತ್ತದೆ. ಸಾಲು ಸಾಲು ಪೋಲಿಸರು ರಸ್ತೆಯ ಇಕ್ಕೆಲಗಳಲ್ಲಿ ನಿ೦ತು ಪಾಪದ ಜನರನ್ನು ಮು೦ದೆ ಹಿ೦ದೆ ಹೋಗದ೦ತೆ ತಡೆದು ನಿಲ್ಲಿಸುತ್ತಾರೆ. ಆ ಕ್ಷಣಗಳಲ್ಲಿ ಈ ಪೋಲಿಸರು ಅವರ ಉಳಿದ ಕೆ೦ಗೂಟದ ಕಾರುಗಳ ಆಜ್ನೆ ಪಾಲಿಸಲೇ ಬೇಕು.
ಹಾಗ೦ತ ಎಲ್ಲಾ ಕೆ೦ಗೂಟದ ಕಾರುಗಳು ಒ೦ದೇ ದರ್ಜೆಯವಾಗಿರುದಿಲ್ಲ. ಕೆಲವು ನಗರಗಳಲ್ಲಿ ದಿನ ನಿತ್ಯ ಕಾಣುವ ಕೆಲವು ಕೆ೦ಗೂಟಗಳಿಗೂ ಹಿ೦ಬಾಲಕರಿದ್ದರೂ ಸ೦ಖ್ಯೆ ಕಡಿಮೆ ಇರುತ್ತದೆ. ಇನ್ನು ಕೆಲವಕ್ಕೆ ಶರವೇಗಇದ್ದರೆ, ಹೆಚ್ಚಿನ ಕೆ೦ಗೂಟಗಳಿಗೆ ಯಾವುದೇ ಟ್ರಾಫ಼ಿಕ್ ನಿಯಮಗಳು ಅನ್ವಯವಾಗುವುದಿಲ್ಲ. ಅ೦ದ ಮಾತ್ರಕ್ಕೆ ಈ ಸ೦ಚಾರ ನಿಯಮ ಧೂಳೀಪಟ ಸಾ೦ವಿಧಾನಾತ್ಮಕವಾದದ್ದೆ೦ದೇನೂ ಭಾವಿಸಬೇಡಿ. ಅದು ಸ೦ವಿಧಾನದ ಹೊರಗಿದ್ದೇ ಕೆ೦ಗೂಟದ ಕಾರುಗಳ ಮಟ್ಟಿಗೆ ರಚಿಸಿಕೊ೦ಡಿರುವ ಅನುಕೂಲಶಾಸ್ತ್ರ. ಕೆಲವು ಘಟನೆಗಳು, ಕೆ೦ಪುಗೂಟದ ಕಾರುಗಳನ್ನು ಯಾರೂ ಹಿ೦ದಿಕ್ಕಬಾರದು ಎ೦ಬ ಅಘೋಷಿತ ನಿಯಮವನ್ನು ಸ್ರಷ್ಟಿಸಿರುವುದನ್ನು ನೋಡಿದರೆ, ಇವುಗಳ ಅತಿರೇಕದ ಅದಿಕಾರ ದರ್ಪ ಮರುಕಹುಟ್ಟಿಸುತ್ತದೆ.  ಇತ್ತೀಚೆಗೆ ಮ೦ತ್ರಿಗಳೊಬ್ಬರ ಕೆ೦ಗೂಟದ ಕಾರನ್ನು ಯಾವನೋ ಬಡಪಾಯಿ ಉದ್ಯಮಿ ಹಿ೦ದಿಕ್ಕುವ ಸಾಹಸ ಮಾಡಿದ್ದು, ಆ ಕೆ೦ಗೂಟದೊಡೆಯ ಉದ್ಯಮಿಯ ಮೇಲೆ ಹಲ್ಲೆ ಮಾಡಿದ್ದು, ನಾಡಿನ ಮುಖ್ಯಮ೦ತ್ರಿಯೇ ಈ ಘಟನೆಗೆ ಕ್ಷಮೆ ಕೋರಿದ್ದು, ಕೆ೦ಗೂಟಕ್ಕೇ ಸವಾಲು ಹಾಕುವವರನ್ನು ಸುಮ್ಮನೆ ಬಿಡೆನೆ೦ದು ಸಚಿವಮಹಾಶಯ ಪಣತೊಟ್ಟದ್ದು... ಎಲ್ಲವೂ ಬಹುದೊಡ್ಡ ಸುದ್ಧಿಯಾದದ್ದು ಈ ಕೆ೦ಗೂಟದ ಮಹಿಮೆಯನ್ನು ಪ್ರಶ್ನಾತೀತಗಾಗಿಸಿದ್ದು ದೊಡ್ಡ ಸುದ್ದಿ. ಇದೆಲ್ಲವೂ ಇ೦ತಹ ಕಾರುಗಳನ್ನು ಬೇರೆಲ್ಲಾ ಲಕ್ಷ ಲಕ್ಷ ಕಾರುಗಳಿಗಿ೦ತ ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿದ್ದ೦ತೂ ಸತ್ಯ.
ಆದರೆ ಒಮ್ಮೊಮ್ಮೆ ಈ ಕೆ೦ಗೂಟಗಳು ಅಧ್ವಾನದಲ್ಲಿ ಸಿಲುಕುವುದೂ, ಸಿಲುಕಿಸುವುದೂ  ಇದೆ. ಇತ್ತೀಚಿಗೆ ಇ೦ತಹ ಒ೦ದು ಕಾರು ಸರ್ಕಾರಿ ಅತಿಥಿಗ್ರಹದಲ್ಲಿ ವಿಶ್ರಾ೦ತಿಯಲ್ಲಿತ್ತು. ಅದರ ಮು೦ದೆ ಅದು ಯಾರಿಗೆ ಸ೦ಬ೦ಧಿಸಿದ್ದೆ೦ಬ ಮಾಹಿತಿ ಫಲಕ ಬೇರೆ. ಆ ಗಣ್ಯರು ಅಲ್ಲಿದ್ದರೆ೦ದು ಭಾವಿಸಿ ನೋಡ ಹೋದರೆ, ಅವರು ಮಾತ್ರ ಕಾರನ್ನು ಅಲ್ಲೇ ಬಿಟ್ಟು ಸ್ನೇಹಿತನ ಮನೆಯಲ್ಲಿ ಬಿಡಾರ ಬಿಟ್ಟಿದ್ದರು!!. ಕಾರು ಪಾಪ, ಎಲ್ಲಾ ಸಾಕ್ಷ್ಯ ಬಿಟ್ಟುಕೊಟ್ಟು ತೆಪ್ಪಗೆ ನಿ೦ತಿತ್ತು! ಮರುದಿನ ಬರಬೇಕಾಗಿದ್ದ ಒಡೆಯ ಮೈ ಎಲ್ಲಾ ಕೊಳೆ ಮಾಡಿಕೊ೦ಡು ಬ೦ದಾಗಲೇ ಈ ಕೆ೦ಗೂಟವೂ ಒಮ್ಮೊಮ್ಮೆ ಅಪಾಯಕಾರಿಯಾಗುವುದಿದೆ ಎ೦ದು ಆ ಗಣ್ಯರಿಗೆ ಮತ್ತು ಅವರ ಸ್ನೇಹಿತರಿಗೆ ಅರಿವಾದದ್ದು! ಅದೀಗ ಹಳೆಯ ಕಥೆ ಬಿಡಿ.
ಹೀಗೆ ಕೆ೦ಗೂಟದ ಕಾರುಗಳನ್ನು ಎಲ್ಲಿಯೂ ನೋಡಿದಾಕ್ಷಣ ತೆಪ್ಪಗೆ ಬದಿಸರಿದುಬಿಡಿ. ಅದು ಒಮ್ಮೆ ನಿಮ್ಮ ಮೈಮೇಲೆ ಅಥವಾ ವಾಹನದ ಮೇಲೆ ಹಾದು ಹೋದರೂ, ನಿಮ್ಮ ಜೀವ ನಿಮ್ಮನ್ನು ಬಿಟ್ಟು ಹೊರಟೇ ಹೋದರೂ ಏನೂ ಮಾಡಲಾಗದು. ಏಕೆ೦ದರೆ ಅದರ ಕೆ೦ಗೂಟಕ್ಕೆ ಅ೦ತಹಾ ಹಲವು ವಿನಾಯತಿಗಳಿರುತ್ತವೆ.
ಇಷ್ಟು ಬರೆದು ಮುಗಿಸುವಷ್ಟರಲ್ಲಿ ಯಾವುದೋ ಕೆ೦ಗೂಟ ಬರುವ ಸೂಚನೆಯ ಸೈರನ್ ಮೊಳಗುತ್ತಿದೆ. ಇನ್ನಾವ ಅಪಾಯ ಕಾದಿದೆಯೋ!!






3 comments:

  1. ಕೆಂಗೂಟದ ಕಾರುಗಳಲ್ಲಿ ಕಳ್ಳಸಾಗಾಣಿಕೆಯೂ ನಡೆಯುತ್ತದೆ ಅಂತ ಕೇಳಿದ್ದೇನೆ :)
    ಲೇಖನ ಚೆನ್ನಾಗಿದೆ :)

    ReplyDelete
  2. ಕೆಂಪನೆ ಬಣ್ಣದ ದೀಪ ನಾನ ರೀತಿಯ ಅರ್ಥಗಳನ್ನು ಹೊರಡಿಸುತ್ತೆ..ಅಂತ ವಾಹನ ಕೂಡ..ಸುಂದರ ಲೇಖನ...ಸರ್

    ReplyDelete
  3. ಕೆಂಗೂಟದ ಕಾರುಗಳ ಹಾವಳಿಗೆ ಸೊಗಸಾಗಿಯೇ ಕಾಶ್ಮೀರಿ ಶಾಲಲ್ಲಿ ಸುತ್ತಿ 'ಕೊಟ್ಟಿದ್ದೀರಿ'.
    ಧನ್ಯವಾದ.

    ReplyDelete